ಅಕ್ಕಿ ವಿಚಾರದಲ್ಲಿ ರಾಜಕೀಯ ಬೇಡ. ಇದು ಬಡ ಜನರ ಹಸಿವಿನ ಪ್ರಶ್ನೆ-ದಿನೇಶ್ ಗುಂಡೂರಾವ್
ಬೆಂಗಳೂರು, ಜೂನ್ 15: ಬಿಜೆಪಿಗೆ ಕರ್ನಾಟಕದ ಜನರ ಮೇಲೆ ಕಾಳಜಿ ಇದ್ದರೆ ರಾಜ್ಯಕ್ಕೆ ಅಕ್ಕಿ ಮಾರಾಟ ಸ್ಥಗಿತಗೊಳಿಸಿರುವುದನ್ನು ವಾಪಸ್ ಪಡೆಯಲಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಕುರಿತಂತೆ ಬೆಂಗಳೂರಿನಲ್ಲಿ ಇಂದು ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರ ಫುಲ್ ಕಾರ್ಪೋರೇಷನ್ ಅಕ್ಕಿ ಮಾರಾಟ ಸ್ಥಿಗಿತಗೊಳಿಸಿದ್ದು ಏಕೆ ಎಂದು ಪ್ರಶ್ನಿಸಿದರು.

ಸಿ.ಟಿ ರವಿಯವರು ಕಾಂಗ್ರೆಸ್ ಮೇಲೆ ಗೂಬೆ ಕುರಿಸೋದನ್ನು ಬಿಟ್ಟು ಅವರ ಕೇಂದ್ರ ನಾಯಕರ ಜೊತೆ ಮಾತಾಡುವ ಧೈರ್ಯ ತೋರಿಸಲಿ. 10 ಕೆ.ಜಿ ಅಕ್ಕಿ ಬಡವರಿಗೆ ಕೊಡಲು ಕಾಂಗ್ರೆಸ್ ಬದ್ಧವಾಗಿದೆ. ಆದರೆ, ನಮಗೆ ಅಕ್ಕಿ ಸಿಗುತ್ತಿಲ್ಲ ಎಂದು ಬಿಜೆಪಿ ನಾಯಕರು ಖುಷಿಯಾಗಿದ್ದಾರೆ. ಇದು ಕಾಂಗ್ರೆಸ್ ಸರ್ಕಾರದ ಪ್ರಶ್ನೆಯಲ್ಲ. ಬಡವರ ಹಸಿವನ್ನು ನೀಗಿಸುವ ಪ್ರಶ್ನೆ. ಬಿಜೆಪಿಗೆ ಮತ ಹಾಕಿದ ಶೇ 35 ರಷ್ಟು ಜನರಲ್ಲಿ ಬಿಪಿಎಲ್ ಕಾರ್ಡ್ ಹೊಂದಿದವರಿಗೂ ನಾವು ಅಕ್ಕಿ ಕೊಡ್ತೇವೆ. ಇದನ್ನು ಅರಿತುಕೊಂಡು ಸಿ.ಟಿ ರವಿ ಮಾತಾಡಬೇಕು ಎಂದು ತಿರುಗೇಟು ನೀಡಿದ್ದಾರೆ.
ಕೇಂದ್ರ ಸರ್ಕಾರದಿಂದ 5 ಕೆ.ಜಿ ಅಕ್ಕಿ ದೊರೆಯುತ್ತಿರುವುದು ಮೋದಿ ಅವರಿಂದಲ್ಲ. ಯು.ಪಿ.ಎ - 2 ಸರ್ಕಾರವಿದ್ದಾಗ ಆಹಾರ ಭದ್ರತೆ ಬಿಲ್ ತಂದಿದ್ದರಿಂದ ಇಂದು ಬಡವರಿಗೆ ಅಕ್ಕಿ ದೊರೆಯುತ್ತಿದೆ. ಸಿ.ಟಿ ರವಿ ಅವರಿಗೆ ರಾಜ್ಯದ ಜನರ ಮೇಲೆ ಕಾಳಜಿ ಇದ್ದಿದ್ದರೆ ಕೇಂದ್ರ ನಾಯಕರ ಜೊತೆ ಮಾತಾಡಲಿ. ಕರ್ನಾಟಕದ 25 ಸಂಸದರು ಏನು ಮಾಡ್ತಿದ್ದಾರೆ. ಮೋದಿ ಅವರು ಒಪ್ಪುತ್ತಾರೋ ಇಲ್ವೋ, ಆದರೆ ರಾಜ್ಯದ ಪರ ಒಂದು ಪ್ರಯತ್ನವನ್ನಾದ್ರೂ ಬಿಜೆಪಿ ನಾಯಕರು ಮಾಡಬೇಕಲ್ಲವೇ ಎಂದು ಪ್ರಶ್ನಿಸಿದರು.
ಅಗತ್ಯ ಅಕ್ಕಿ ಖರೀದಿಗೆ ಕಾಂಗ್ರೆಸ್ ಸರ್ಕಾರ ತನ್ನ ಶಕ್ತ ಮೀರಿ ಪ್ರಯತ್ನಿಸಲಿದೆ. ಖಾಸಗಿ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಸುವುದು ಅಷ್ಟು ಸುಲಭವಲ್ಲ. ಕ್ಯಾಬಿನೆಟ್ ಸಭೆಯಲ್ಲಿ ಈ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆದಿದೆ. ಬಡವರ ಪರವಾಗಿ ನ್ಯಾಯ ದೊರಕಿಸಲು ನಮ್ಮ ಪ್ರಯತ್ನ ಮುಂದುವರಿಸಲು ನಿರ್ಧರಿಸಲಾಗಿದೆ. ಬೇರೆ ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿಗೆ ಚರ್ಚೆ ನಡೆದಿದೆ. ಛತ್ತಿಸ್ಗಡ, ತೆಲಂಗಾಣ, ಆಂಧ್ರ ಪ್ರದೇಶದ ಜೊತೆ ಚರ್ಚೆ ನಡೆಸಲಿದ್ದೇವೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.












Click it and Unblock the Notifications