ದುಡ್ಡು, ಅಧಿಕಾರಕ್ಕಾಗಿ ಬಿಜೆಪಿಗೆ ಬಾಂಬೇ ಟೀಂ ಮಾರಾಟವಾದರು: ದಿನೇಶ್ ಗುಂಡೂರಾವ್ ಕಿಡಿ
ಬೆಂಗಳೂರು, ಜನವರಿ18: ಅಧಿಕಾರ ಬೇಕು, ದುಡ್ಡು ಬೇಕು ಎಂಬ ಕಾರಣಕ್ಕಾಗಿ ಬಾಂಬೆ ಟೀಂ ವಲಸೆ ಹೋಗಿರುವುದು. ಅವರು ಮಾರಾಟ ಆದ ವಸ್ತುಗಳು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.
ಈ ಕುರಿತು ನಗರದಲ್ಲಿ ಬುಧವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮೈ ಮಾರಿಕೊಳ್ಳುವ ಮಹಿಳೆಯನ್ನು ವೇಶ್ಯೆ ಎಂದು ಕರೆಯುತ್ತಾರೆ. ಆದರೆ ತಮ್ಮ ಸ್ವಾಭಿಮಾನ ಸೇರಿದಂತೆ ಎಲ್ಲವನ್ನು ಮಾರಟ ಮಾಡಿರುವ ಶಾಸಕರನ್ನು ನೀವು ಏನೆಂದು ಕರೆಯುತ್ತೀರಿ? ಎಂದು ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಹೇಳಿಕೆಯನ್ನ ಸಮರ್ಥಿಸಿದರು.
ಜನ ಆಶೀರ್ವಾದ ಮಾಡಿದಾಗ ಕಾಂಗ್ರೆಸ್ ನಿಂದ ಗೆದ್ದು ಬಂದರು. ಈಗ ಅಲ್ಲಿಗೆ ಹೋಗಿ ಏನೇನೋ ನೆಪಗಳನ್ನು ಹೇಳುತ್ತಿದ್ದಾರೆ. ಬಿ.ಕೆ. ಹರಿಪ್ರಸಾದ್ ಅವರು ವಲಸಿಗರು ಯಾವ ರೀತಿ ಮಾರಾಟ ಆಗಿದ್ದಾರೆ ಎಂದು ಹೋಲಿಕೆ ಮಾಡಿ ಹೇಳಿಕೆ ಕೊಟ್ಟಿದ್ದಾರೆ ಎಂದು ಹೇಳಿದರು.

ಇನ್ನೂ ರಾಜ್ಯ ಸರ್ಕಾರದ ಬಜೆಟ್ ಕುರಿತಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಯ ಬಜೆಟ್ ಗೆ ಯಾವ ಬೆಲೆ ಇರುತ್ತದೆ. ಈ ಬಜೆಟ್ ಗೆ ಏನೂ ಕಿಮ್ಮತ್ತಿಲ್ಲ. ಲೇಖಾನುದಾನ ಮಾಡ್ಕೊಂಡು ಹೋಗಬೇಕಷ್ಟೆ. ಯಾವ ಭರವಸೆಗಳನ್ನು ಬಿಜೆಪಿ ಈಡೇರಿಸುವುದಿಲ್ಲ. 200 ಭರವಸೆ ಕೊಟ್ಡಿದ್ರಲ್ಲ ಅದರಲ್ಲಿ 10% ಕೂಡ ಈಡೇರಿಸಿಲ್ಲ. ಹೀಗಿದ್ದಾಗ ಬಿಜೆಪಿಯವರ ಬಜೆಟ್ ಗೆ ಏನು ಮಹತ್ವಇರುತ್ತೆ ? ಎಂದು ಪ್ರಶ್ನಿಸಿದರು. ಅಲ್ಲದೇ ಈ ಸರ್ಕಾರ ಮಾನ ಮರ್ಯಾದೆ ಕಳೆದುಕೊಂಡಿದೆ. ಯಾವುದೇ ಗೌರವವಿಲ್ಲದ ರೀತಿಯಲ್ಲಿ ಆಡಳಿತ ನಡೆಸುತ್ತಿದ್ದಾರೆ. ಮರ್ಯಾದೆಯಿಂದ ಆಡಳಿತ ನಡೆಯುತ್ತಿಲ್ಲ. ಇಷ್ಟು ಕೆಳಮಟ್ಟಕ್ಕೆ ಹೋದ ಸರ್ಕಾರ ನಾನಂತೂ ನೋಡಿರಲಿಲ್ಲ. ನಿರ್ಭೀತವಾಗಿ ಯಾವುದೇ ಮಾನದಂಡ ಇಲ್ಲದೆ ಲೂಟಿಯೇ ಮುಖ್ಯ ಉದ್ದೇಶ ಈ ಸರ್ಕಾರದ್ದಾಗಿದೆ. ಯಾವ ಅಧೋಗತಿಗೆ ಹೋಗಿದೆ ಎನ್ನುವುದಕ್ಕೆ ಗುತ್ತಿಗೆದಾರರ ಹೋರಾಟವೇ ಸಾಕ್ಷಿ ಎಂದು ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದರು.
ಈ ಸರ್ಕಾರದ 40% ಕಮಿಷನ್ ನಿಂದಾಗಿ 20% ಕೆಲಸವೂ ಕೂಡ ಆಗ್ತಿಲ್ಲ. ತಿಪ್ಪಾರೆಡ್ಡಿ, ಈಶ್ವರಪ್ಪ ಯಾರೇ ಇರಬಹುದು. ಮಾನ ಮರ್ಯಾದೆ ಇಲ್ಲದೆ ಎಲ್ಲವನ್ನೂ ಬಿಟ್ಟು ನಿಂತಿದ್ದಾರೆ ಎಂದು ವಾಗ್ದಾಳಿ ನಡೆಸಿದದರು.
ಬಿ.ಕೆ ಹರಿಪ್ರಸಾದ್ ಹೇಳಿದ್ದೇನು.?
ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನದಲ್ಲಿ ನೀವು ಐದು ವರ್ಷಗಳಲ್ಲಿ ತಮಗೆ ಬೇಕಾದ ಸರ್ಕಾರವನ್ನು ಆರಿಸಿ ಕಳುಹಿಸಬಹುದು. ಹಿಂದೆ ಬಹುಮತ ಬಾರದೆ ಬಿಜೆಪಿಯನ್ನು ನೀವು ತಿರಸ್ಕರಿಸಿದ್ದಾಗ ನಾವು ಸಮ್ಮಿಶ್ರ ಸರ್ಕಾರವನ್ನು ಮಾಡಿದ್ದೆವು. ಆದರೆ ಮೈ ಮಾರಿಕೊಳ್ಳುವ ಮಹಿಳೆಯನ್ನು ವೇಶ್ಯೆ ಎಂದು ಕರೆಯುತ್ತಾರೆ. ಆದರೆ ತಮ್ಮ ಸ್ವಾಭಿಮಾನ ಸೇರಿದಂತೆ ಎಲ್ಲವನ್ನು ಮಾರಟ ಮಾಡಿರುವ ಶಾಸಕರನ್ನು ನೀವು ಏನೆಂದು ಕರೆಯುತ್ತೀರಿ? ಈ ಶಾಸಕರಿಗೆ ನೀವು ಬರುವ ಚುನಾವಣೆಯಲ್ಲಿ ಬುದ್ಧಿ ಕಲಿಸಬೇಕು. ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬಂದರೆ, ಜನರ ಆರೋಗ್ಯ, ಶಿಕ್ಷಣ, ಉದ್ಯೋಗದ ಬಗ್ಗೆ ನಾವು ಮಾತನಾಡುತ್ತೇವೆ. ಜಾತಿ, ಮತ, ಧರ್ಮ, ಭಾಷೆ ವಿಚಾರವಾಗಿ ಮಾತನಾಡುವುದಿಲ್ಲ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯದ ದುರಂತದಂತೆ ಜಾತಿ, ಧರ್ಮ, ಭಾಷೆ ವಿಚಾರ ಪ್ರಮುಖವಾಗಿ ಚರ್ಚೆಯಾಗಿದೆ. ಮುಂದಿನ ದಿನಗಳಲ್ಲಿ ಕರ್ನಾಟಕ ಅಭಿವೃದ್ಧಿಶೀಲ ರಾಜ್ಯ ಎಂದು ಪಡೆದಿದ್ದ ಕೀರ್ತಿಯನ್ನು ಮತ್ತೆ ಪುನಸ್ಥಾಪಿಸಲು ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಭಾರಿ ಬಹುಮತದಿಂದ ಆರಿಸಿ ಕಳುಹಿಸಬೇಕು ಎಂದು ಹೇಳಿದ್ದಾರೆ.












Click it and Unblock the Notifications