ಸಿಎಂ ಸ್ಪರ್ಧೆ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ: ಅಸಲಿಯೊ, ನಕಲಿಯೊ
Recommended Video
ಸಾಮಾಜಿಕ ಜಲತಾಣದಲ್ಲಿ ಗುಪ್ತಚರ ಇಲಾಖೆಯ ವರದಿಯ ಪ್ರತಿಯೊಂದು ಹರಿದಾಡುತ್ತಿದ್ದ ವರದಿಯಂತೆ ಸಿದ್ದರಾಮಯ್ಯ ಅವರು ಸ್ಪರ್ಧಿಸಲು ಇಚ್ಛಿಸಿರುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲುವು ಸಾಧಿಸುವುದು ಕಷ್ಟ ಎನ್ನಲಾಗಿದೆ.
ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸುವೆ: ಸಿದ್ದರಾಮಯ್ಯ
ರಾಜ್ಯ ಗುಪ್ತಚರ ಇಲಾಖೆಯದ್ದು ಎನ್ನಲಾಗಿರುವ ಪತ್ರವೊಂದು ವೈರಲ್ ಆಗಿದ್ದು, ಚಾಮುಂಡೇಶ್ವರಿ ಕ್ಷೇತ್ರವು ಸಿದ್ದರಾಮಯ್ಯ ಅವರು ಚುನಾವಣೆಗೆ ನಿಲ್ಲಲು ಉತ್ತಮ ಆಯ್ಕೆಯಲ್ಲ, ಅಲ್ಲಿ ಜಾತೀವಾರು ಲೆಕ್ಕಾಚಾರ ಹೆಚ್ಚಿಗಿದ್ದು, ಒಕ್ಕಲಿಗ ಮತದಾರರು ತಮ್ಮ ಸಮುದಾಯದ ಅಭ್ಯರ್ಥಿ ಜೆಡಿಎಸ್ನ ಜಿಟಿ ದೇವೇಗೌಡ ಅವರ ಪರ ವಾಲಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಸಿದ್ದುವನ್ನು ಸೋಲಿಸಲು ಜೆಡಿಎಸ್ ಬಳಿಯಿದೆ ರೇವಣಾಸ್ತ್ರ!
ಚಾಮುಂಡೇಶ್ವರಿಯಿಂದಲೇ ಚುನಾವಣೆಗೆ ಸಿಲ್ಲುವುದಾಗಿ ಈಗಾಗಲೇ ಬಹಿರಂಗವಾಗಿ ಘೋಷಣೆ ಮಾಡಿ, ಕ್ಷೇತ್ರದಲ್ಲಿ ಕಳೆದ ಒಂದು ವಾರದಿಂದಲೂ ಪ್ರಚಾರದಲ್ಲಿ ತೊಡಗಿರುವ ಸಿದ್ದರಾಮಯ್ಯ ಅವರಿಗೆ ಈ ವರದಿ ಗೊಂದಲ ಉಂಟುಮಾಡುವುದಂತೂ ಸತ್ಯ.
ಚಾಮುಂಡೇಶ್ವರಿ ಚಕ್ರವ್ಯೂಹ: ಮಹತ್ವದ ಕ್ಷೇತ್ರದ ಹಿನ್ನೋಟ
ಈ ಪತ್ರವು ತಮ್ಮದೇ ಅಥವಾ ಇಲ್ಲವೇ ಎಂದು ಗುಪ್ತಚರ ಇಲಾಖೆ ಇನ್ನೂ ಧೃಡಪಡಿಸಿಲ್ಲ, ಅಲ್ಲದೆ ಕೆಲವರು ಈ ವರದಿ ನಕಲಿ ಎನ್ನುತ್ತದ್ದರೆ ಇನ್ನು ಕೆಲವರು ಇದರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎನ್ನುತ್ತಿದ್ದಾರೆ.
ಇಲಾಖೆ ಸೂಚಿಸಿರುವ ಕ್ಷೇತ್ರಗಳು ಯಾವುವು?
ಚಾಮುಂಡೇಶ್ವರಿಯಲ್ಲಿ ಮುಖ್ಯಮಂತ್ರಿಗಳು ಗೆಲ್ಲವುದು ಕಷ್ಟ ಎಂದಿರುವ ಗುಪ್ತಚರ ಇಲಾಖೆ, ಮುಖ್ಯಮಂತ್ರಿಗಳಿಗೆ ವರುಣ, ಬೀದರ್ನ ಬಸವಕಲ್ಯಾಣ, ಕೊಪ್ಪಳದ ಗಂಗಾವತಿ, ಬೆಂಗಳೂರಿನ ಶಾಂತಿನಗರ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸಲಹೆ ನೀಡಿದೆ.
ಜಿ.ಟಿ.ದೇವೇಗೌಡ ಪರ ಒಕ್ಕಲಿಗರು
ಒಕ್ಕಲಿಗ ಸಮುದಾಯದ ಅಭ್ಯರ್ಥಿ ಜೆ.ಡಿಎಸ್ನ ಜಿ.ಟಿ.ದೇವೇಗೌಡ ಅವರ ಪರ ಒಕ್ಕಲಿಗ ಮತದಾರರು ಒಲವು ತೋರಿಸಿರುವುದು ಸಿದ್ದರಾಮಯ್ಯ ಅವರ ಗೆಲುವಿಗೆ ಮುಳುವಾಗಬಹುದು ಎಂದು ವರದಿಯಲ್ಲಿ ಹೇಳಲಾಗಿದೆ. ಇತ್ತೀಚೆಗೆ ಸಿದ್ದರಾಮಯ್ಯ ಅವರ ಕ್ಷೇತ್ರ ಭೇಟಿಯ ಸಂದರ್ಭದಲ್ಲಿಯೂ ಸಹ ಹಲವು ಕಡೆ ಜನರು ನೇರವಾಗಿ 'ಒಕ್ಕಲಿಗ ಸಮುದಾಯಕ್ಕೆ ನಿಮ್ಮ ಕೊಡುಗೆ ಏನು?' ಎಂದು ತರಾಟೆಗೆ ತೆಗೆದುಕೊಂಡಿದ್ದು ವರದಿಯಾಗಿತ್ತು.
ಬಿಜೆಪಿ ಜೆಡಿಎಸ್ ಒಳ ಒಪ್ಪಂದ?
ಮುಖ್ಯಮಂತ್ರಿಗಳನ್ನು ಸೋಲಿಸಲು ಕಾಂಗ್ರೆಸ್ನಿಂದ ಬಿಜೆಪಿಗೆ ಬಂದಿರುವ ಶ್ರೀನಿವಾಸ ಪ್ರಸಾದ್, ಜೆಡಿಎಸ್ ಸೇರಿರುವ ಎಚ್.ವಿಶ್ವನಾಥ್ ಅವರುಗಳು ತುದಿಗಾಲಲ್ಲಿ ನಿಂತಿದ್ದಾರೆ. ಸಿದ್ದರಾಮಯ್ಯ ಅವರ ವಿರುದ್ಧ ಜೆಡಿಎಸ್ ಮತ್ತು ಬಿಜೆಪಿ ಒಂದಾಗುವ ಸಾಧ್ಯತೆಯ ಬಗ್ಗೆ ಕೆಲವು ದಿನಗಳ ಹಿಂದೆಯಷ್ಟೆ ಶ್ರೀನಿವಾಸ ಪ್ರಸಾದ್ ಸುಳಿವು ನೀಡಿದ್ದರು.
ಮುಖ್ಯಮಂತ್ರಿ ಎಲ್ಲಿ ಸ್ಪರ್ಧಿಸುತ್ತಾರೆ?
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲುವು ಕಷ್ಟ ಎಂದಾದಲ್ಲಿ ಸಿದ್ದರಾಮಯ್ಯ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಕುತೂಹಲ ಹುಟ್ಟಿದೆ. ಗುಪ್ತಚರ ಇಲಾಖೆಯೇ ಸುಲಭವಾಗಿ ಗೆಲ್ಲಬಹುದಾದ ನಾಲ್ಕು ಕ್ಷೇತ್ರಗಳನ್ನು ಸೂಚಿಸಿದ್ದು, ಸಿದ್ದರಾಮಯ್ಯ ಅವರು ಕಳೆದ ಬಾರಿ ಗೆದ್ದಿದ್ದ ವರುಣಾ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.
ವರುಣಾ ಬಿಟ್ಟು ಮತ್ತೆಲ್ಲಿ
ವರುಣಾ ಕ್ಷೇತ್ರವನ್ನು ತಮ್ಮ ಪುತ್ರ ಯತೀಂದ್ರ ಅವರಿಗೇ ಬಿಟ್ಟುಕೊಟ್ಟಲ್ಲಿ ಮುಖ್ಯಮಂತ್ರಿಗಳು ಬಸವಕಲ್ಯಾಣ ಕ್ಷೇತ್ರದಿಂದ ಸ್ಪರ್ಧಿಸುವ ಸಾದ್ಯತೆ ಹೆಚ್ಚಿದೆ. ಅದನ್ನು ಹೊರತುಪಡಿಸಿದರೆ ಶಾಂತಿನಗರ ಕ್ಷೇತ್ರವೂ ಅವರ ಆಯ್ಕೆ ಆಗಬಹದು. ಎನ್.ಎ.ಹ್ಯಾರಿಸ್ ಅವರಿಗೆ ಲೋಕಸಭೆ ಟಿಕೆಟ್ ನೀಡಿ ಸಿದ್ದರಾಮಯ್ಯ ಅವರು ಈ ಬಾರಿ ಚುನಾವಣೆಗೆ ನಿಲ್ಲುವ ಸಾಧ್ಯತೆಯೂ ಇದೆ. ಸಿದ್ದರಾಮಯ್ಯ ಅವರು ಗಂಗಾವತಿಯಿಂದ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹಗಳೂ ಹರಿದಾಡುತ್ತಿದ್ದು ಆ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.
ಯತೀಂದ್ರ ಟಿಕೆಟ್ ಖೋತಾ?
ಸಿದ್ದರಾಮಯ್ಯ ಅವರು ವರುಣಾದಿಂದ ಸ್ಪರ್ಧಿಸಿದರೆ ಅವರ ಪುತ್ರ ಯತೀಂದ್ರ ಅವರ ಟಿಕೆಟ್ಗೆ ಖೋತಾ ಆಗಲಿದೆ. ಯತೀಂದ್ರ ಅವರನ್ನು ಲೋಕಸಭೆ ಚುನಾವಣೆಗೆ ಟಿಕೆಟ್ ನೀಡುವ ಅಥವಾ ಎಂಎಲ್ಸಿಗೆ ಆಯ್ಕೆ ಮಾಡುವ ಸಾದ್ಯತೆಯೂ ಇದೆ. ರಾಜಕಾರಣಿಗಳ ಮಕ್ಕಳಿಗೆ ಟಿಕೆಟ್ ನೀಡುವ ಬಗ್ಗೆ ಈಗಾಗಲೇ ಪಕ್ಷದಲ್ಲೇ ಹಾಗೂ ಸಾರ್ವಜನಿಕವಾಗಿ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿಯೂ ಸಹ ಈ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಗುಪ್ತಚರ ಇಲಾಖೆ ಬಳಸಿದ್ದಕ್ಕೆ ಆಕ್ಷೇಪ
ರಾಜ್ಯ ಗುಪ್ತಚರ ಇಲಾಖೆಯನ್ನು ರಾಜಕೀಯಕ್ಕೆ ಬಳಸಿಕೊಂಡಿರುವ ಸಿದ್ದರಾಮಯ್ಯ ಅವರ ಕ್ರಮಕ್ಕೆ ವಿರೋಧ ವ್ಯಕ್ತವಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿ ಆದ ನಂತರ ಈ ವರದಿ ಬಿಡುಗಡೆ ಆಗಿದ್ದು (04/04/2018) ನೀತಿ ಸಂಹಿತೆಯ ಉಲ್ಲಂಘನೆಯೂ ಆಗಿದೆ. ಬಿಜೆಪಿ ಮತ್ತು ಇತರ ಪಕ್ಷಗಳು ಸಿದ್ದರಾಮಯ್ಯ ವಿರುದ್ಧ ದೂರು ದಾಖಲಿಸುವ ಸಂಭವ ಕೂಡಾ ಇಲ್ಲದಿಲ್ಲ.