ಧರ್ಮಸ್ಥಳ ಪ್ರಕರಣ: ನಟ, ಬಿಗ್ಬಾಸ್ ಸ್ಪರ್ಧಿ ರಜತ್ಗೆ ಜೀವ ಬೆದರಿಕೆ: ಮಂಡ್ಯ Vs ಕರಾವಳಿ ಚರ್ಚೆ!
ರಾಜ್ಯದಲ್ಲಿ ಧರ್ಮಸ್ಥಳ ಗ್ರಾಮ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದಿದೆ ಎನ್ನಲಾದ ಕೃತ್ಯ ಪ್ರಕರಣ ವಿಚಾರ ಹಾಗೂ ಶವಗಳನ್ನು ಹೂಳಲಾಗಿದೆ ಎನ್ನುವ ವಿಚಾರವು ಗಂಭೀರವಾಗಿ ಚರ್ಚೆಯಾಗುತ್ತಿರುವ ಸಂದರ್ಭದಲ್ಲಿಯೇ ಮತ್ತೊಂದು ವಿವಾದ ಶುರುವಾಗಿದೆ. ಇದರಲ್ಲಿ ಕರಾವಳಿ vs ಮಂಡ್ಯ ಎನ್ನುವ ವಿಷಯವು ಭಾರೀ ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ನಟ ಹಾಗೂ ಬಿಗ್ಬಾಸ್ ಸ್ಪರ್ಧಿ ರಜತ್ ಅವರಿಗೆ ಜೀವ ಬೆದರಿಕೆ ಹಾಕಲಾಗಿದ್ದು ಈ ವಿಷಯ ಸೋಷಿಯಲ್ ಮೀಡಿಯಾದಲ್ಲಿ ಪರ - ವಿರೋಧ ಚರ್ಚೆಗೆ ಕಾರಣವಾಗಿದೆ. ಇಷ್ಟಕ್ಕೂ ರಜತ್ ವಿಚಾರವಾಗಿ ಏನು ಚರ್ಚೆ ನಡೆದಿದೆ ಎನ್ನುವ ವಿವರ ಇಲ್ಲಿದೆ.
ನಟ ರಜತ್ ಅವರು ಈಚೆಗೆ ಬೇರೊಂದು ವಿಷಯವನ್ನು ಮಾತನಾಡುತ್ತಾ ಸೌಜನ್ಯ ಅವರ ಪ್ರಕರಣವನ್ನು ಪ್ರಸ್ತಾಪಿಸಿದ್ದರು. ಇದು ಭಾರೀ ವಿರೋಧಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ರಜತ್ ಅವರು ಸೌಜನ್ಯ ಅವರ ಮನೆಗೆ ಭೇಟಿ ನೀಡಿ, ಅವರ ಕುಟುಂಬದವರೊಂದಿಗೆ ಮಾತನಾಡಿದ್ದರು. ಇದರ ನಡುವೆ ರಜತ್ ಅವರು ಕರಾವಳಿಗೆ ಭೇಟಿ ನೀಡಿದ್ದರ ಹಿನ್ನೆಲೆಯಲ್ಲಿ ಯೂಟ್ಯೂಬರ್ಗಳು ಸಂದರ್ಶನ ಮಾಡುವುದಕ್ಕೆ ಮುಂದಾಗಿದ್ದರು. ಅದೇ ಸಂದರ್ಭದಲ್ಲಿ ಕೆಲವೊಂದು ಯೂಟ್ಯೂಬರ್ಗಳ ಮೇಲೆ ಹಲ್ಲೆ ಮಾಡಲಾಗಿದೆ. ಇದು ಸಹ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಈ ನಡುವೆ ಮಹಿಳೆಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ರಜತ್ ಅವರಿಗೆ ಬೆದರಿಕೆ ಹಾಕುವಂತೆ ಮಾತನಾಡಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. Sharada Bhatt ಎನ್ನುವವರು ಸೋಷಿಯಲ್ ಮೀಡಿಯಾ ಫೇಸ್ಬುಕ್ನಲ್ಲಿ ಬರೆದುಕೊಂಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಇದಾದ ನಂತರ ಈ ವಿಚಾರವಾಗಿ ಅವರು ಸ್ಪಷ್ಟನೆಯನ್ನೂ ನೀಡಿದ್ದಾರೆ.
"ಬಿಗ್ ಬಾಸ್ ರಜತ್ ಅವರ ಪತ್ನಿ ಹೆಸರು ಅಕ್ಷತಾ. ಇವರು ರಜತ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಇಬ್ಬರಿಗೂ ಇಬ್ಬರು ಮಕ್ಕಳಿದ್ದಾರೆ. ಒಂದು ಗಂಡು ಮತ್ತು ಒಂದು ಹೆಣ್ಣು. ಗಂಡ ಬೇಕು ಅಂದ್ರೆ ರಿಟರ್ನ್ ಕರೆಯಿಸಿಕೊಳ್ಳಿ ಅಕ್ಷತಾ ಅವರೇ...ಇದು ಮಂಡ್ಯ ಅಲ್ಲ ಕರಾವಳಿ." ಎಂದು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಅಲ್ಲದೇ ಈ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವಿರೋಧ ವ್ಯಕ್ತವಾದ ಮೇಲೆ, ಇಂದು ಈ ವಿಚಾರವಾಗಿ ಮತ್ತೊಂದು ಪೋಸ್ಟ್ ಮಾಡಿರುವ ಅವರು "ಮಂಡ್ಯದ ಜನರ ಬಗ್ಗೆ ನನಗೆ ಆಕ್ಷೇಪವೇ ಇಲ್ಲ. ಗಂಡುಮೆಟ್ಟಿದ ಊರು ಅದು. ಅದರ ಮಣ್ಣಿಗಿರುವ ಶಕ್ತಿ ಬೇರೆ. ಆದರೆ, ಕರಾವಳಿಯ ಜನರಿಗಿರುವ ಭಾವನೆಗಳೇ ಬೇರೆ.

ಆದ್ದರಿಂದ ಮಂಡ್ಯ vs ಕರಾವಳಿ ಹೇಳಿಲ್ಲ ನಾನು.. ಹೀಗಾಗಿಯೂ ಮಂಡ್ಯದ ಜನರ ಭಾವನೆಗಳಿಗೆ ನೋವಾಗಿದ್ದಲ್ಲಿ ಕ್ಷಮೆ ಇರಲಿ. ಧನ್ಯವಾದಗಳು
ಓಂ ಮಂಜುನಾಥಾಯತೇ ನಮಃ 🚩" ಎಂದು ಪೋಸ್ಟ್ ಮಾಡಿದ್ದಾರೆ.












Click it and Unblock the Notifications