ಯಡಿಯೂರಪ್ಪ ಭೇಟಿ ಮಾಡಿದ ಧನಂಜಯ್ ಕುಮಾರ್!
ಬೆಂಗಳೂರು, ಮೇ 04 : 'ಯಡಿಯೂರಪ್ಪ ಅವರು ರಾಜ್ಯ ಪ್ರವಾಸ ಮುಗಿಸಿದ ಬಳಿಕ, ದಿನಾಂಕ ನಿಗದಿ ಮಾಡಿಕೊಂಡು ಬಿಜೆಪಿಗೆ ಸೇರ್ಪಡೆಯಾಗುತ್ತೇನೆ' ಎಂದು ಮಾಜಿ ಕೇಂದ್ರ ಸಚಿವ ವಿ.ಧನಂಜಯ್ ಕುಮಾರ್ ಹೇಳಿದರು.
ಬುಧವಾರ ಧನಂಜಯ್ ಕುಮಾರ್ ಅವರು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ಭೇಟಿ ಮಾಡಿದರು. ಯಡಿಯೂರಪ್ಪ ಭೇಟಿ ಬಳಿಕ ಮಾತನಾಡಿದ ಧನಂಜಯ್ ಕುಮಾರ್ ಅವರು, 'ಬಿಜೆಪಿಗೆ ಮರಳುತ್ತೇನೆ' ಎಂದು ಘೋಷಿಸಿದರು. [ಬ್ರೇಕಿಂಗ್ ನ್ಯೂಸ್ ಕೊಟ್ಟ ಧನಂಜಯ್ ಕುಮಾರ್]

ಬಿ.ಎಸ್.ಯಡಿಯೂರಪ್ಪ ಅವರು ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಅವರನ್ನು ಭೇಟಿ ಮಾಡಿದ್ದ ಧನಂಜಯ್ ಕುಮಾರ್ ಅವರು ಅಭಿನಂದನೆ ಸಲ್ಲಿಸಿದ್ದರು. ಅರಮನೆ ಮೈದಾನದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿಯೂ ಅವರು ಕಾಣಿಸಿಕೊಂಡಿದ್ದರು. ಅವರು ಪುನಃ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. [ಯಡಿಯೂರಪ್ಪಗೆ ಹೈಕಮಾಂಡ್ ನಾಯಕರು ಕೊಟ್ಟ ಸಂದೇಶ ಏನು?]
ಧನಂಜಯ್ ಕುಮಾರ್ ಹೇಳಿದ್ದೇನು? : ಯಡಿಯೂರಪ್ಪ ಭೇಟಿ ಬಳಿಕ ಮಾತನಾಡಿದ ಧನಂಜಯ್ ಕುಮಾರ್ ಅವರು, 'ನಾನು ಪುನಃ ಬಿಜೆಪಿಗೆ ಸೇರುತ್ತೇನೆ. ಯಡಿಯೂರಪ್ಪ ಅವರು ರಾಜ್ಯ ಪ್ರವಾಸ ಮುಗಿಸಿಕೊಂಡು ಬಂದ ಬಳಿಕ, ದಿನಾಂಕ ನಿಗದಿ ಮಾಡಿಕೊಂಡು ಪಕ್ಷ ಸೇರುತ್ತೇನೆ' ಎಂದು ಹೇಳಿದರು. [ಧನಂಜಯ್ ಕುಮಾರ್ ಸಂದರ್ಶನ ಓದಿ]
'ಬಿಜೆಪಿ ಪಕ್ಷಕ್ಕೆ ನಾನು ಸೇರ್ಪಡೆಗೊಳ್ಳುವುದಕ್ಕೆ ಯಾವ ನಾಯಕರೂ ವಿರೋಧ ವ್ಯಕ್ತಪಡಿಸುವುದಿಲ್ಲ. ಹಿಂದಿನದನ್ನು ನಾನು ಮರೆತಿದ್ದೇನೆ. ಅವರು ಮರೆತಿರುತ್ತಾರೆ ಎಂಬ ನಂಬಿಕೆ ಇದೆ. ಪಕ್ಷ ಸಂಘಟನೆ ದೃಷ್ಟಿಯಿಂದ ಯಾವ ನಾಯಕರು ನಾನು ಪಕ್ಷಕ್ಕೆ ಮರಳುವುದನ್ನು ವಿರೋಧಿಸುವುದಿಲ್ಲ ಎಂಬ ವಿಶ್ವಾಸವಿದೆ' ಎಂದರು.
ಧನಂಜಯ್ ಕುಮಾರ್ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು, 'ಧನಂಜಯ್ ಕುಮಾರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಕುರಿತು ಹಿರಿಯ ನಾಯಕರ ಜೊತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತದೆ' ಎಂದು ತಿಳಿಸಿದರು.
ಲೋಕಸಭೆ ಚುನಾವಣೆಯಲ್ಲಿ ಸೋತಿದ್ದರು : ಧನಂಜಯ್ ಕುಮಾರ್ ಅವರು ಹಿಂದೆ ಯಡಿಯೂರಪ್ಪ ಅವರ ಜೊತೆಗೆ ಬಿಜೆಪಿ ಪಕ್ಷ ತೊರೆದು ಕೆಜೆಪಿ ಸೇರಿದ್ದರು. ಯಡಿಯೂರಪ್ಪ ಅವರು ಪಕ್ಷಕ್ಕೆ ಮರು ಸೇರ್ಪಡೆಯಾದರೂ ಧನಂಜಯ್ ಕುಮಾರ್ ಬಿಜೆಪಿ ಸೇರಿರಲಿಲ್ಲ.
2014ರ ಲೋಕಸಭೆ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಧನಂಜಯ್ ಕುಮಾರ್ ಅವರು, ಬಿಜೆಪಿಯ ಶೋಭಾ ಕರಂದ್ಲಾಜೆ ಅವರ ವಿರುದ್ಧ ಸೋಲು ಅನುಭವಿಸಿದ್ದರು. ಈಗ ಪುನಃ ಬಿಜೆಪಿಗೆ ಮರಳುವಾಗಿ ಘೋಷಣೆ ಮಾಡಿದ್ದಾರೆ.












Click it and Unblock the Notifications