ಎತ್ತಿನ ಹೊಳೆ ಶಂಕುಸ್ಥಾಪನೆ ಗಿಮಿಕ್ : ದೇವೇಗೌಡ
ಹಾಸನ, ಮಾ.3: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎತ್ತಿನಹೊಳೆ ಯೋಜನೆ ಶಂಕುಸ್ಥಾಪನೆಗೆ ಮುಂದಾಗಿರುವುದು ಚುನಾವಣೆ ಸಮಯದಲ್ಲಿ ಮಾಡುತ್ತಿರುವ ರಾಜಕೀಯ ಗಿಮಿಕ್ ಅಷ್ಟೇ ಇದರಲ್ಲಿ ಯಾವ ಜನಪರ ಕಾಳಜಿಯೂ ಕಾಣುತ್ತಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಅಭಿಪ್ರಾಯಪಟ್ಟಿದ್ದಾರೆ.
ಅಲ್ಲಿನ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚು ಇದ್ದು, ನೀರಿನ ಬಗ್ಗೆ ಮುಖ್ಯಮಂತ್ರಿಯವರಿಗೆ ಮಾಹಿತಿ ಇಲ್ಲದೆ ಇಂತಹ ಯೋಜನೆಗೆ ಕೈಹಾಕಿದ್ದಾರೆ ಎಂದು ದೂರಿದರು. ಆತುರದ ನಿರ್ಧಾರದ ಮೂಲಕ ಯೋಜನೆಗೆ ಶಿಲಾನ್ಯಾಸ ಮಾಡುವುದು ಬೇಡ. ಟಿಕ್ನಿಕಲ್ ಮೂಲಕ ಸರ್ವೇ ಸಮರ್ಪಕವಾಗಿ ನಡೆದಿಲ್ಲ. ಇಂತಹ ಕಾಮಗಾರಿಯ ಸರ್ವೇಯನ್ನು ನೀರಾವರಿ ತಂತ್ರಜ್ಞರಿಂದ ಮಾಡಿಸುವುದು ಅವಶ್ಯಕವಾಗಿದೆ. ಈ ವಿಚಾರವಾಗಿ ಮೊದಲು ಸಭೆ ಕರೆಯಲಿ ಚರ್ಚೆ ಮಾಡುವುದು ಉತ್ತಮ ಎಂದು ಸಲಹೆ ನೀಡಿದರು. [ನೇತ್ರಾವತಿ ನದಿ ತಿರುವು ವಿರೋಧಿಸಿ ದ.ಕ ಬಂದ್]
48 ದಿನದೊಳಗೆ ಚಿಕ್ಕಬಳ್ಳಾಪುರಕ್ಕೆ ನೇತ್ರಾವತಿ ನದಿ ನೀರು ಹರಿಸುತ್ತೇನೆ ಎಂದಿದ್ದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಕೂಡಾ ಸರ್ಕಾರದ ನಿರ್ಧಾರ ಸರಿಯಿದ್ದರೂ ಈಗ ಶಂಕುಸ್ಥಾಪನೆ ಮಾಡುತ್ತಿರುವುದು ಬರೀ ಗಿಮಿಕ್, ಪ್ರಚಾರ ತಂತ್ರ, ಯೋಜನೆ ನೆನಗುದಿ ಬೀಳಲಿದೆ. ತಜ್ಞರಾದ ಪರಮೇಶ್ವರ ವರದಿ ಅನುಷ್ಠಾನ ಸಾಧ್ಯವಿಲ್ಲ ಎಂದಿದ್ದಾರೆ.

'ನಾನೇನಾದ್ರೂ ಸಿಎಂ ಆದ್ರೆ 48 ಗಂಟೆಗಳಲ್ಲಿ ನೇತ್ರಾವತಿ ಮನೆ ನಿಮ್ಮ ಮನೆ ಬಾಗಿಲಿಗೆ ಹರಿಸುತ್ತೇನೆ. ಕುಡಿಯುವ ನೀರಿನ ಸಮಸ್ಯೆ ಎಂಬುದು ರಾಜ್ಯದಲ್ಲಿ ಸಂಪೂರ್ಣವಾಗಿ ಮಾಯವಾಗಲಿದೆ' ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಹೇಳಿದ್ದರು.
ಕುಮಾರಸ್ವಾಮಿ ಅವರು ನೇತ್ರಾವತಿ ನದಿ ನೀರನ್ನು ಕೋಲಾರ ಜಿಲ್ಲೆ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದೊಡ್ಡಬಳ್ಳಾಪುರ, ತುಮಕೂರು ಹಾಗೂ ರಾಮನಗರದ ತನಕ ಹರಿಸುವ ಯೋಜನೆ ಜೆಡಿಎಸ್ ಬಳಿ ಇದೆ ಎಂದು ಹೇಳಿಕೊಂಡಿದ್ದರು.
ಪಶ್ಚಿಮ ಘಟ್ಟ ಚಿಕ್ಕಮಗಳೂರಿನ ಪರ್ವತ ಶ್ರೇಣಿಯಲ್ಲಿ ಹುಟ್ಟಿ ಧರ್ಮಸ್ಥಳದ ಮೂಲಕ ಹರಿದು ಮಂಗಳೂರಿನ ಕಡಲು ಸೇರುವ ನೇತ್ರಾವತಿ ನದಿಯನ್ನು ತಿರುಗಿಸುವ ಯಾವುದೇ ಪ್ರಸ್ತಾಪ ಸರ್ಕಾರ ಮುಂದೆ ಇಲ್ಲ ಎಂದು ಬಿಜೆಪಿ ಸರ್ಕಾರ ಯೋಜನೆಯನ್ನು ಮುಂದೂಡುತ್ತಾ ಬಂದಿತ್ತು.
ಮಳೆಗಾಲದಲ್ಲಿ ಈ ನದಿಯ ನೀರನ್ನು ಸಂಗ್ರಹಿಸುವುದು ಅಗತ್ಯ. ಅದಕ್ಕಾಗಿ ಸಣ್ಣ ಸಣ್ಣ ಅಣೆಕಟ್ಟು ಗಳನ್ನು ಕಟ್ಟಿ ಮಳೆ ನೀರನ್ನು ಸಂಗ್ರಹಿಸಿ ಅದನ್ನು ಬೇಸಿಗೆಯಲ್ಲಿ ಉಪಯೋಗಿಸಲು ವ್ಯವಸ್ಥೆ ಮಾಡಬೇಕು. ಇದಕ್ಕೆಲ್ಲ ಪರಿಹಾರ ಅಣೆಕಟ್ಟು ಮಾತ್ರ. ದೊಡ್ಡ ಅಣೆಕಟ್ಟುಗಳಿಗಿಂತ ಕಿರು-ಕಿಂಡಿ ಅಣೆಕಟ್ಟುಗಳೇ ಹೆಚ್ಚು ಸೂಕ್ತವಾಗಬಲ್ಲುದು ಮತ್ತು ಇವು ಕಡಿಮೆ ಖರ್ಚುದಾಯಕವೂ ಹೌದು ನೇತ್ರಾವತಿ ತಿರುವು ಯೋಜನೆಯಿಂದ ಜಲಕ್ಷಾಮ ಎದುರಿಸಬೇಕಾಗುತ್ತದೆ.
ಅಪಾರ ಪ್ರಮಾಣದಲ್ಲಿ ಜಲಚರಗಳು ನಾಶವಾಗುತ್ತದೆ, ಜನ ಜೀವನ ಅಸ್ತವ್ಯಸ್ತಗೊಳ್ಳುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಸಲಹೆ ನೀಡಿದ್ದರು. ಈಗ ವಿವಾದಿತ ನೇತ್ರಾವತಿ ತಿರುವು ಯೋಜನೆಯನ್ನು ಎತ್ತಿನಹೊಳೆ ಯೋಜನೆಯಾಗಿ ಕಾಂಗ್ರೆಸ್ ಸರ್ಕಾರ ಅನುಷ್ಠಾನಗೊಳಿಸಲು ಮುಂದಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂದ್ ವಿವರಗಳನ್ನು ಮುಂದೆ ನಿರೀಕ್ಷಿಸಿ












Click it and Unblock the Notifications