ಈ ಎಲ್ಲಾ ರಾಜಕೀಯ ಬೆಳವಣಿಗೆಗಳ ಹಿಂದಿದೆ ದೇವೇಗೌಡರ ತಂತ್ರ!

ಮೈಸೂರು, ಅಕ್ಟೋಬರ್.23: ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ, ಮಿತ್ರರೂ ಅಲ್ಲ. ಜತೆಗೆ ಏನೂ ಬೇಕಾದರೂ ಆಗಬಹುದು ಎಂಬ ಈ ಮಾತುಗಳು ಎಲ್ಲ ಕಾಲಕ್ಕೂ ಅನ್ವಯ ಮತ್ತು ಅದಕ್ಕೆ ಪೂರಕವಾದ ಬೇಕಾದಷ್ಟು ನಿದರ್ಶನಗಳನ್ನು ನಾವು ನೋಡಿದ್ದೇವೆ. ನೋಡುತ್ತಲೇ ಇದ್ದೇವೆ.

ಇದೀಗ ನಮ್ಮ ಕಣ್ಣಮುಂದೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಒಂದಾಗಿರುವುದೇ ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ ಮಿತ್ರರೂ ಅಲ್ಲ. ಜತೆಗೆ ಏನೂ ಬೇಕಾದರೂ ಆಗಬಹುದು ಎಂಬುದಕ್ಕೆ ಪುಷ್ಠಿ ನೀಡಿದಂತಾಗಿದೆ.

ರಾಜಕೀಯದೊಂದಿಗೆ ವೈಯಕ್ತಿಕ ಲಾಭಗಳಾಗುತ್ತದೆ ಎಂಬ ಸೂಕ್ಷ್ಮತೆ ಗೊತ್ತಾಗಿ ಬಿಟ್ಟರೆ ನಮ್ಮ ನಾಯಕರು ಏನೂ ಬೇಕಾದರೂ ಮಾಡುತ್ತಾರೆ ಮತ್ತು ಶತ್ರು ಕೂಡ ಮಿತ್ರನಾಗುತ್ತಾನೆ ಎಂದರೆ ತಪ್ಪಾಗಲಾರದು.

ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯ ಮುನ್ನ ಇದ್ದ ಪರಿಸ್ಥಿತಿಗೂ ಚುನಾವಣೆ ನಂತರ ನಡೆದ ಬೆಳವಣಿಗೆ ಎಲ್ಲವನ್ನೂ ನಾವು ಗಮನಿಸಿದ್ದೇ ಆದರೆ ಯಾರು ಏನು ಆಗೋದಿಲ್ಲ ಎಂದು ಯೋಚಿಸಿದ್ದರೋ ಅದೆಲ್ಲವೂ ಆಗಿರುವುದು ಗೋಚರಿಸುತ್ತಿದೆ.

ಚುನಾವಣಾ ಅಖಾಡದಲ್ಲಿ ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ರಣಕಹಳೆ ಊದುತ್ತಾ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಾಗಿದ್ದ ಬಿ.ಎಸ್.ಯಡಿಯೂರಪ್ಪ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರಪ್ಪನಾಣೆಗೂ ಸಿಎಂ ಆಗಲ್ಲ ಎಂದು ಸಿದ್ದರಾಮಯ್ಯ ಅವರು ಗುಡುಗಿದ್ದರು.

ಆದರೆ ಚುನಾವಣೆ ನಡೆದು ಫಲಿತಾಂಶ ಬಂದ ಬಳಿಕ ಇಬ್ಬರೂ ಮುಖ್ಯಮಂತ್ರಿ ಆದರು. ಬಹುಶಃ ಇದೊಂದು ಇತಿಹಾಸ. ಯಡಿಯೂರಪ್ಪ ಅವರು ಏಕ್ ದಿನ್‌ಕಾ ಸುಲ್ತಾನ್ ಆದರೂ ಏನು ಆಗಲ್ಲ ಎಂದಿದ್ದರೋ ಆ ಮಾತನ್ನು ಸುಳ್ಳು ಮಾಡಿದ್ದಂತು ನಿಜ.

ಇದರ ನಡುವೆ ಮೊದಲಿನಿಂದಲೂ ದೇವೇಗೌಡರ ಕುಟುಂಬವನ್ನು ದ್ವೇಷಿಸುತ್ತಾ ಬಂದಿದ್ದ ಸಿದ್ದರಾಮಯ್ಯ ಅವರು ಕೊನೆಗಳಿಗೆಯಲ್ಲಿ ಅವರನ್ನೇ ಕರೆದು ಮುಖ್ಯಮಂತ್ರಿ ಮಾಡಬೇಕಾಗಿ ಬಂದಿದ್ದು ರಾಜಕೀಯದಲ್ಲಿ ಏನೂ ಬೇಕಾದರೂ ಆಗಬಹುದು ಎಂಬುದಕ್ಕೆ ಸಾಕ್ಷಿ.

 ಎಲ್ಲವೂ ಅಚ್ಚರಿ ಮೂಡಿಸುತ್ತಿವೆ

ಎಲ್ಲವೂ ಅಚ್ಚರಿ ಮೂಡಿಸುತ್ತಿವೆ

ಹಾಗೆ ನೋಡಿದರೆ ಬಿಜೆಪಿಯಲ್ಲಿ ಹುಲಿಯಂತೆ ಘರ್ಜಿಸುತ್ತಿರುವ ಬಿ.ಎಸ್.ಯಡಿಯೂರಪ್ಪ, ಶ್ರೀರಾಮಲು, ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ನಾಯಕರು ಬಿಜೆಪಿಯನ್ನು ಕಟ್ಟಿ ಬೆಳೆಸಿ ಅಸಮಾಧಾನವಾದಾಗ ಅದರಾಚೆಗೆ ಹೋಗಿ ಬೇರೆ ಪಕ್ಷವನ್ನು ಕಟ್ಟಿ ಬಿಜೆಪಿಗೆ ಕೊಡಲಿ ಏಟು ನೀಡಿದ್ದರು.

ಆದರೆ ಮತ್ತೆ ಯಡಿಯೂರಪ್ಪ ಬಿಜೆಪಿಗೆ ಬಂದಿದ್ದು ಮತ್ತೊಮ್ಮೆ ಬಿಜೆಪಿ ರಾಜ್ಯಾಧ್ಯಕ್ಷರಾಗುವ ಮೂಲಕ ಸಿಎಂ ಆಗುವ ಕನಸು ಹೊತ್ತುಕೊಂಡಿರುವುದು ಎಲ್ಲವೂ ಅಚ್ಚರಿ ಮೂಡಿಸುತ್ತಿದೆ.

ಈ ಹಿಂದಿನಿಂದಲೂ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಬದ್ಧ ವೈರಿಗಳಂತೆ ಕಳೆದೊಂದು ದಶಕದಿಂದ ಬಿಂಬಿತವಾಗುತ್ತಲೇ ಬಂದಿವೆ. ಜೆಡಿಎಸ್ ನ ಸಖ್ಯ ತೊರೆದು ಸಿದ್ದರಾಮಯ್ಯ ಅವರು ಕಾಂಗ್ರೆಸ್ ಸೇರಿದ ಮೇಲಂತೂ ರಾಜಕೀಯ ವೈರತ್ವ ಹೆಚ್ಚಾಗುತ್ತಲೇ ಹೋಗಿತ್ತು. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ಐದು ವರ್ಷಗಳ ಕಾಲದಲ್ಲಿ ಅದು ಗಂಭೀರ ಸ್ವರೂಪ ತಾಳಿತ್ತು.

ದೇವೇಗೌಡರ ಕುಟುಂಬ ರಾಜಕೀಯವನ್ನು ಸಿದ್ದರಾಮಯ್ಯ ಅವರು ವಿರೋಧಿಸುತ್ತಲೇ ಬಂದಿದ್ದರು. ಹೈಕಮಾಂಡ್ ತನ್ನ ಪರ ಇದೆ ಜತೆಗೆ ತಾನು ನೀಡಿರುವ ಯೋಜನೆಗಳು ಜನಪರವಾಗಿದ್ದು ಅವು ಕೈ ಹಿಡಿಯುತ್ತವೆ. ಜತೆಗೆ ಲಿಂಗಾಯಿತ ಧರ್ಮದ ಕಿಡಿ ಬಿಜೆಪಿಯ ಯಡಿಯೂರಪ್ಪ ಅವರಿಗೆ ಹಿನ್ನಡೆಯಾಗಿ ತನಗೆ ಲಾಭವಾಗುತ್ತದೆ ಎಂದು ಅವರು ನಂಬಿದ್ದರು.

 ದೇವೇಗೌಡರ ರಾಜಕೀಯ ತಂತ್ರ

ದೇವೇಗೌಡರ ರಾಜಕೀಯ ತಂತ್ರ

ಕಳೆದ ವಿಧಾನಸಭಾ ಚುನಾವಣಾ ವೇಳೆ ಕಾಂಗ್ರೆಸ್ ಬಗ್ಗೆ ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆ ಬರತೊಡಗಿತ್ತು. ಸಿದ್ದರಾಮಯ್ಯ ಅವರ ಸಮಾವೇಶಗಳಿಗೆ ಜನ ಹೆಚ್ಚಿನ ಸಂಖ್ಯೆಯಲ್ಲಿ ಬರತೊಡಗಿದ್ದರು. ಇದನ್ನು ನೋಡಿದ ಅವರು ಮುಂದೆಯೂ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂಬ ಆತ್ಮವಿಶ್ವಾಸವನ್ನು ಬೆಳೆಸಿಕೊಂಡಿದ್ದರು.

ಯಾವಾಗ ಸಿದ್ದರಾಮಯ್ಯ ಅವರ ಅಬ್ಬರ ಹೆಚ್ಚಾಯಿತೋ ಆಗಲೇ ದೇವೇಗೌಡರು ತಮ್ಮ ಬಳಿ ಅಸ್ತ್ರವೊಂದನ್ನು ತಯಾರಿಸಿಟ್ಟಿದ್ದರು. ಅದೇ ಎಚ್.ವಿಶ್ವನಾಥ್. ಆ ವೇಳೆಗಾಗಲೇ ಎಚ್.ವಿಶ್ವನಾಥ್ ಅವರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಸೋತು ಹೋಗಿದ್ದರು. ರಾಜ್ಯ ರಾಜಕೀಯದಲ್ಲಿ ಬೆಳೆಯೋಣ ಎಂದರೆ ಅದಾಗಲೇ ಸಿದ್ದರಾಮಯ್ಯ ಅವರನ್ನು ದೂರವಿಟ್ಟಿದ್ದರು.

ತಾನೊಬ್ಬ ಪ್ರಭಾವಿ ರಾಜಕಾರಣಿಯಾದರೂ ನನ್ನನ್ನು ರಾಜ್ಯ ಕಾಂಗ್ರೆಸ್ ನಾಯಕರು ದೂರ ಮಾಡಿದ್ದಾರಲ್ಲ ಎಂಬ ನೋವು, ಆಕ್ರೋಶ ಎಲ್ಲವೂ ವಿಶ್ವನಾಥ್ ಅವರಲ್ಲಿತ್ತು. ಅದಕ್ಕಿಂತ ಹೆಚ್ಚಾಗಿ ಸಿದ್ದರಾಮಯ್ಯ ಮತ್ತು ಎಚ್.ವಿಶ್ವನಾಥ್ ಅವರ ಸಂಬಂಧ ಅದಾಗಲೇ ಹಳಸಿ ಹೋಗಿತ್ತು.

ಇನ್ನು ಕಾಂಗ್ರೆಸ್‌ನಲ್ಲಿದ್ದರೆ ನನ್ನ ರಾಜಕೀಯ ಬದುಕು ಮುಗಿದು ಹೋಗುತ್ತದೆ ಎಂಬುದು ಸ್ವತಃ ವಿಶ್ವನಾಥ್ ಅವರಿಗೆ ಗೊತ್ತಾಗಿ ಹೋಗಿತ್ತು. ಮತ್ತೆ ರಾಜಕೀಯ ಪುನರ್ಜನ್ಮ ಅವರಿಗೆ ಅನಿವಾರ್ಯವಾಗಿತ್ತು. ಅದಕ್ಕಾಗಿ ವೇದಿಕೆಯೊಂದನ್ನು ಕಾಯುತ್ತಿರುವಾಗಲೇ ಅವರನ್ನು ಜೆಡಿಎಸ್ ಗೆ ಸೆಳೆದು ಅವರ ಮೂಲಕವೇ ಸಿದ್ದರಾಮಯ್ಯ ಆಟ ಮುಗಿಸಲು ದೇವೇಗೌಡರು ರಾಜಕೀಯ ತಂತ್ರವನ್ನು ಬಳಸಿಯೇ ಬಿಟ್ಟಿದ್ದರು.

 ದೇವೇಗೌಡರ ತಂತ್ರ ಫಲಿಸಿತು

ದೇವೇಗೌಡರ ತಂತ್ರ ಫಲಿಸಿತು

ಇಲ್ಲೊಂದು ವಿಚಾರವನ್ನು ಹೇಳಲೇ ಬೇಕು. ಅವತ್ತು ದಯನೀಯ ಪರಿಸ್ಥಿತಿ ಎಚ್.ವಿಶ್ವನಾಥ್ ಅವರಿಗೆ ಬರಲು ಪರೋಕ್ಷವಾಗಿ ದೇವೇಗೌಡರು ಕಾರಣ ಎಂಬುದನ್ನು ಇಲ್ಲಿ ಒಪ್ಪಿಕೊಳ್ಳಲೇಬೇಕು. ಅದು ಹೇಗೆ ಎಂಬುದನ್ನು ನೋಡಬೇಕಾದರೆ 2014ರ ಲೋಕಸಭಾ ಚುನಾವಣೆಯ ಹಿಂದಿನ ದಿನಗಳಿಗೆ ಹೋಗಬೇಕಾಗುತ್ತದೆ. ಆಗ ಕೇಂದ್ರದಲ್ಲಿ ಯುಪಿಎ ಸರ್ಕಾರವಿತ್ತು.

ರಾಜ್ಯದಲ್ಲಿ ಅದಾಗಲೇ ಕಾಂಗ್ರೆಸ್ ಸರ್ಕಾರ(2013) ಅಸ್ಥಿತ್ವಕ್ಕೆ ಬಂದಿತ್ತು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದರು. ಎಚ್.ವಿಶ್ವನಾಥ್ ಅವರು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾಗಿದ್ದರು. ಅವರು ಸದಾ ಚುರುಕಾಗಿದ್ದರು. ಸಮಯ ಸಿಕ್ಕಾಗಲೆಲ್ಲ ದೇವೇಗೌಡರನ್ನು ಟೀಕಿಸುತ್ತಾ ಬರುತ್ತಿದ್ದರು.

ಅವರ ಪ್ರತಿ ಮಾತುಗಳು ಮಾಧ್ಯಮಗಳ ಮೂಲಕ ಭಾರೀ ಸದ್ದು ಮಾಡುತ್ತಿತ್ತು. ಹೀಗಿರುವಾಗ 2014 ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಕಾಂಗ್ರೆಸ್‌ನಿಂದ ಎಚ್.ವಿಶ್ವನಾಥ್ ಕಣಕ್ಕಿಳಿದಿದ್ದರು. ಅವರಿಗೆ ಪ್ರತಿಸ್ಪರ್ಧಿಯಾಗಿ ಬಿಜೆಪಿಯಿಂದ ಪ್ರತಾಪ್ ಸಿಂಹ ಕಣಕ್ಕಿಳಿದಿದ್ದರು.

ಆ ವೇಳೆಗೆ ವಿಶ್ವನಾಥ್ ಅವರಿಗೆ ಟಾಂಗ್ ಕೊಟ್ಟು ಮೂಲೆಗುಂಪು ಮಾಡಲು ದೇವೇಗೌಡರು ರಾಜಕೀಯ ತಂತ್ರ ಮಾಡಿಬಿಟ್ಟರು. ಅದೇನೆಂದರೆ ತಮ್ಮ ಪಕ್ಷದಿಂದ ದುರ್ಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಪ್ರತಾಪ್ ಸಿಂಹ ಅವರಿಗೆ ಪರೋಕ್ಷವಾಗಿ ಸಾಥ್ ನೀಡುವ ಮೂಲಕ ಎಚ್.ವಿಶ್ವನಾಥ್ ಸೋಲು ಕಾಣುವಂತೆ ನೋಡಿಕೊಂಡರು. ದೇವೇಗೌಡರ ತಂತ್ರ ಫಲಿಸಿತು. ವಿಶ್ವನಾಥ್ ಸೋತು ಮನೆ ಸೇರಬೇಕಾಯಿತು.

 ಯಾರೂ ಶತ್ರುಗಳಲ್ಲ, ಮಿತ್ರರೂ ಅಲ್ಲ

ಯಾರೂ ಶತ್ರುಗಳಲ್ಲ, ಮಿತ್ರರೂ ಅಲ್ಲ

ಅದಾದ ನಂತರ ಎಚ್.ವಿಶ್ವನಾಥ್ ಒಂದು ಹಂತದಲ್ಲಿ ಮೂಲೆ ಗುಂಪಾದರು. ಈ ವೇಳೆ ಸಿದ್ದರಾಮಯ್ಯ ಅವರನ್ನು ಬಗ್ಗು ಬಡಿಯಬೇಕಾಗಿತ್ತು. ಅದಕ್ಕಾಗಿ ಕುರುಬ ಸಮುದಾಯದ ನಾಯಕರೊಬ್ಬರ ಅಗತ್ಯತೆ ಇತ್ತು. ಜತೆಗೆ ಅದಾಗಲೇ ಸಿದ್ದರಾಮಯ್ಯ ಮತ್ತು ವಿಶ್ವನಾಥ್ ಹಾವು ಮುಂಗುಸಿಯಂತೆ ಕಿತ್ತಾಡತೊಡಗಿದ್ದರು.

ಇದರ ಲಾಭ ಪಡೆದ ದೇವೇಗೌಡರು ವಿಶ್ವನಾಥ್ ಅವರನ್ನು ಸೆಳೆದು ಹುಣಸೂರಿನಿಂದ ಟಿಕೆಟ್ ನೀಡಿದರು. ಗೆಲುವು ಪಡೆದ ವಿಶ್ವನಾಥ್ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷರನ್ನು ಮಾಡಿ ಉತ್ಸವ ಮೂರ್ತಿಯಂತೆ ಕೂರಿಸಿಬಿಟ್ಟರು.

ಈಗ ರಾಜ್ಯದಲ್ಲಿ ಪುತ್ರ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ. ಅವರು ಮುಂದುವರೆಯಬೇಕಾದರೆ ಕಾಂಗ್ರೆಸ್‌ನ ಸಹಕಾರ ಬೇಕು. ಹೀಗಾಗಿ ಪ್ರಭಾವಿ ನಾಯಕ ಸಿದ್ದರಾಮಯ್ಯ ಅವರ ಅಗತ್ಯತೆಯಿದೆ. ಜತೆಗೆ ಉಪಚುನಾವಣೆ ಗೆಲುವು ಅನಿವಾರ್ಯವಾಗಿರುವುದರಿಂದ ಶತ್ರುತ್ವ ಮರೆತು ಒಂದಾಗಿದ್ದಾರೆ.

ಗುರುಶಿಷ್ಯ ಒಂದಾದ ಬಳಿಕ ಇನ್ನೇನು ಬೇಕು. ಹೀಗಾಗಿಯೇ ಎಚ್.ವಿಶ್ವನಾಥ್ ಅವರನ್ನು ದೂರವಿಡಲಾಗಿದೆ. ಅವರ ಆರೋಗ್ಯ ವಿಚಾರಿಸುವಷ್ಟು ಸೌಜನ್ಯವೂ ಇಲ್ಲವಾಗಿದೆ. ಇದೆಲ್ಲವನ್ನು ಗಮನಿಸಿದರೆ ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ ಮಿತ್ರರೂ ಅಲ್ಲ. ಜತೆಗೆ ಏನೂ ಬೇಕಾದರೂ ಆಗಬಹುದು ಎಂಬ ಈ ಮಾತುಗಳನ್ನು ಪುನರುಚ್ಚರಿಸಲೇ ಬೇಕಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+