ಜೆಡಿಎಸ್ ಪಕ್ಷದ ನೂತನ ಕಚೇರಿಗೆ ಗೌಡರಿಂದ ಶಂಕುಸ್ಥಾಪನೆ
ಬೆಂಗಳೂರು, ಮಾ.2 : ಜೆಡಿಎಸ್ ಪಕ್ಷದ ನೂತನ ಕಚೇರಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಬೆಂಗಳೂರಿನಲ್ಲಿ ಸೋಮವಾರ ಶಂಕುಸ್ಥಾಪನೆ ನೆರವೇರಿಸಿದರು. ಬಿಬಿಎಂಪಿ ಶೇಷಾದ್ರಿಪುರಂನಲ್ಲಿ 2 ಎಕರೆ ಜಾಗವನ್ನು ಪಕ್ಷದ ಕಚೇರಿಗಾಗಿ ನೀಡಿದೆ.
ಸೋಮವಾರ ಬೆಳಗ್ಗೆ ಎಚ್.ಡಿ.ದೇವೇಗೌಡ ಅವರು, ಶೇಷಾದ್ರಿಪುರಂನಲ್ಲಿರುವ ಕೊಳಚೆ ನಿರ್ಮೂಲನಾ ಮಂಡಳಿ ಮುಂಭಾಗದಲ್ಲಿರುವ ಜಾಗದಲ್ಲಿ ಪಕ್ಷದ ಕಚೇರಿ ನಿರ್ಮಾಣ ಮಾಡಲು ಶಂಕುಸ್ಥಾಪನೆ ನೆರವೇರಿಸಿದರು. ಹಲವಾರು ಜೆಡಿಎಸ್ ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. [ಜೆಡಿಎಸ್ ಕಚೇರಿಗೆ ಕೊನೆಗೂ ಜಾಗ ಸಿಕ್ಕಿತ್ತು]

ಬೆಂಗಳೂರು ಕೇಂದ್ರ ರೈಲ್ವೆ ನಿಲ್ದಾಣದಿಂದ ಮಲ್ಲೇಶ್ವರಂ ಸಂಪಿಗೆ ರಸ್ತೆಗೆ ಹೋಗುವ ಮಾರ್ಗದಲ್ಲಿದ್ದ ಕೃಷ್ಣ ಪ್ಲೋರ್ಮಿಲ್ ಇದ್ದ ಜಾಗದಲ್ಲಿ ನೂತನ ಕಚೇರಿ ತಲೆಎತ್ತಲಿದೆ. ಈ ಜಾಗವನ್ನು ಬಿಬಿಎಂಪಿ 5 ವರ್ಷಗಳ ಅವಧಿಗೆ ಪಕ್ಷಕ್ಕಾಗಿ ಗುತ್ತಿಗೆ ನೀಡಿದೆ. [ಬೆಂಗಳೂರಿನ ಜೆಡಿಎಸ್ ಕಚೇರಿ ವಿವಾದವೇನು?]
ಸುಪ್ರೀಂಕೋರ್ಟ್ ರೇಸ್ಕೋರ್ಸ್ ರಸ್ತೆಯಲ್ಲಿದ್ದ ಜೆಡಿಎಸ್ ಕಚೇರಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದು ಎಂದು ಆದೇಶ ನೀಡಿತ್ತು, ಕಚೇರಿಯನ್ನು ಖಾಲಿ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಡಬೇಕು ಎಂದು ಸೂಚನೆ ನೀಡಿತ್ತು. ಕೋರ್ಟ್ ಆದೇಶದಂತೆ ಕಚೇರಿ ಬಿಟ್ಟುಕೊಟ್ಟ ಜೆಡಿಎಸ್ ಹೊಸ ಕಚೇರಿ ನಿರ್ಮಾಣಕ್ಕೆ ಜಾಗ ಹುಡುಕಲು ಆರಂಭಿಸಿತ್ತು. [ಕಾಂಗ್ರೆಸ್ ಪಕ್ಷಕ್ಕೆ ಕಚೇರಿ ಬೀಗ ನೀಡಿದ ದೇವೆಗೌಡರು]

ತಡೆಯಾಜ್ಞೆ ನೀಡಲಾಗಿದೆ : ಹಿಂದೆ ಬಿಬಿಎಂಪಿ ವೈಯಾಲಿಕಾವಲ್ ಸರ್ವೆ ಸಂಖ್ಯೆ 1 ಹಾಗೂ 4 ರಲ್ಲಿರುವ 1.1 ಎಕರೆ ಜಮೀನನ್ನು ಜೆಡಿಎಸ್ ಕಚೇರಿಗೆ 30 ವರ್ಷಗಳ ಅವಧಿಗೆ ಮಂಜೂರು ಮಾಡುವ ನಿರ್ಣಯವನ್ನು ಕೈಗೊಂಡಿತ್ತು. ಆದರೆ, ಉದ್ದೇಶಿತ ಜಾಗದ ವಾರಸುದಾರ ಎನ್ನಲಾದ ಕೆ.ಜಿ.ಚಂದ್ರಶೇಖರ್ ಭಟ್ ಅವರು ಹೈಕೋರ್ಟ್ ತಕರಾರು ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ ಉದ್ದೇಶಿತ ಜಾಗದಲ್ಲಿ ಯಾವುದೇ ಕಟ್ಟಡ ನಿರ್ಮಾಣ ಮಾಡದಂತೆ ತಡೆಯಾಜ್ಞೆ ನೀಡಿತ್ತು. ಈ ಕುರಿತು ವಿಚಾರಣೆ ಇನ್ನೂ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಆದ್ದರಿಂದ, ಪಾಲಿಕೆ ಜೆಡಿಎಸ್ ಕಚೇರಿಗೆ ಬೇರೆ ಜಾಗವನ್ನು ನೀಡಿತ್ತು.

ಜೆಡಿಎಸ್ ಕಚೇರಿಯನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಟ್ಟ ನಂತರ ಎಚ್.ಡಿ.ದೇವೇಗೌಡ ಅವರು ಜಾಗ ದೊರೆಯದಿದ್ದರೆ ಶೆಡ್ಹಾಕಿಕೊಂಡು ಕಚೇರಿ ನಡೆಸುವುದಾಗಿ ಹೇಳಿದ್ದರು. ಸದ್ಯ, ಬಿಬಿಎಂಪಿ ನೀಡಿದ ಜಾಗದಲ್ಲಿ ಕಚೇರಿ ನಿರ್ಮಾಣ ಮಾಡಲು ಶಂಕುಸ್ಥಾಪನೆ ನೆರವೇರಿಸಲಾಗಿದೆ.












Click it and Unblock the Notifications