ರಾಹುಲ್ ಗಾಂಧಿಗೆ ರಾಜಕೀಯ ಅನುಭವವಿಲ್ಲ: ದೇವೇಗೌಡ
ಬೆಂಗಳೂರು, ಮಾರ್ಚ್ 26: 'ಜೆಡಿಎಸ್ ಪಕ್ಷವು ಬಿಜೆಪಿಯ ಬಿ ಟೀಮ್ನಂತೆ ಕೆಲಸ ಮಾಡುತ್ತಿದೆ' ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಅವರು ಕೆಂಡಾಮಂಡಲ ಆಗಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 'ರಾಹುಲ್ ಗಾಂಧಿಗೆ ರಾಜಕೀಯ ಪ್ರಜ್ಞೆ ಇಲ್ಲ, ಅವರು ತಮ್ಮ ಮಾತಿನ ಮೇಲೆ ಹಿಡಿತವಿಟ್ಟು ಮಾತನಾಡಬೇಕು, ಪಕ್ಷತ ಘನತೆಗೆ ಕುಂದು ತರುವ ಕಾರ್ಯ ಅವರು ಮಾಡಬಾರದು' ಎಂದು ಬುದ್ಧಿವಾದ ಹೇಳಿದ್ದಾರೆ.
ಇತ್ತೀಚೆಗೆ ಹಾಸನದಲ್ಲಿ ಆಯೋಜಿತವಾಗಿದ್ದ ಜನಾಶೀರ್ವಾದ ಯಾತ್ರೆ ಸಮಯ ರಾಹುಲ್ ಗಾಂಧಿ ಅವರು 'ಜೆಡಿಎಸ್ ಪಕ್ಷವು ಬಿಜೆಪಿಗೆ ಹಿಂಬಾಗಿಲಿನಿಂದ ಸಹಾಯ ಮಾಡುತ್ತಿದೆ' ಎಂಬ ಆರೋಪ ಮಾಡಿದ್ದರು. ಇದು ಕುಮಾರಸ್ವಾಮಿ ಹಾಗೂ ದೇವೇಗೌಡ ಅವರನ್ನು ಕೆರಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಹಳೆಯ ದಿನಗಳನ್ನು ನೆನಪು ಮಾಡಿಕೊಂಡ ದೇವೇಗೌಡ ಅವರು, ಕಾಂಗ್ರೆಸ್ ಪಕ್ಷವು ತಮ್ಮ ಸಹಾಯ ಕೇಳಿಕೊಂಡು ಬಂದಿತ್ತು, ಸೊನಿಯಾ ಗಾಂಧಿ ಅವರು ಮೀರಾಕುಮಾರಿ ಅವರನ್ನು ಕಳುಹಿಸಿ ಸಹಾಯಕ್ಕೆ ಅಂಗಲಾಚಿದ್ದರು ಎಂಬುದಾಗಿ ಹೇಳಿದ ಅವರು 'ಅದರ ವಿವರಣೆ ಈಗ ಕೊಡಲು ಹೋಗುವುದಿಲ್ಲ' ಎಂದು ಅಡ್ಡ ಗೋಡೆ ಮೇಲೆ ದೀಪ ಇಟ್ಟರು.
'ರಾಹುಲ್ ಗಾಂಧಿ ಇನ್ನೂ ಮಾಗಬೇಕು' ಎಂದ ಅವರು ಕರ್ನಾಟಕದ ರಾಜಕೀಯ ಇತಿಹಾಸ ಹಾಗೂ ನಮ್ಮ ಪಕ್ಷದ ಬಗ್ಗೆ ಮಾಹಿತಿಯೇ ತಿಳಿದುಕೊಳ್ಳದೆ ಮೈಕು ಸಿಕ್ಕಿದೆಯೆಂದು ರಾಹುಲ್ ಅವರು ಬೇಕಾಬಿಟ್ಟಿ ಆರೋಪಗಳನ್ನು ಮಾಡಿದ್ದಾರೆ ಎಂದು ಅವರು ಹೇಳಿದರು.
ಎರಡೂ ರಾಷ್ಟ್ರೀಯ ಪಕ್ಷಗಳು ಸಮಾನ ಭ್ರಷ್ಟವಾಗಿದ್ದು ಇಬ್ಬರ ದುರಾಡಳಿತಗಳನ್ನು ರಾಜ್ಯದ ಈಗಾಗಲೇ ನೋಡಿರುವ ಕಾರಣ ಈ ಬಾರಿ ಜನ ಪ್ರಾದೇಶಿಕ ಪಕ್ಷಕ್ಕೆ ಮಣೆ ಹಾಕುವ ವಿಶ್ವಾಸವಿದೆ ಎಂದ ಅವರು ಈ ಚುನಾವಣೆಯಲ್ಲಿ ಜೆಡಿಎಸ್ ಗೆಲ್ಲುವ ಸಂಭವ ಹೆಚ್ಚಿದೆ ಎಂದು ಭರವಸೆ ವ್ಯಕ್ತಪಡಿಸಿದರು.












Click it and Unblock the Notifications