ಪಕ್ಷ ಸಂಘಟನೆಗೆ ಗೌಡ್ರು, ಕುಮಾರಸ್ವಾಮಿ ಇಟ್ಟ ಕುತೂಹಲಕಾರಿ ಹೆಜ್ಜೆ
ದಳಪತಿಗಳ ರಾಜಕೀಯ ಹೀಗೇ ಎಂದು ಹೇಳಲು ಬರುವುದಿಲ್ಲ, ಜೊತೆಗೆ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ್ರ ಮುಂದಿನ ದಾಳ ಹೀಗೇ ಉರುಳುತ್ತದೆ ಎಂದು ಬಲ್ಲವರೂ ಇಲ್ಲ. ಸಮಯಕ್ಕೆ ತಕ್ಕಂತೆ ರಾಜಕೀಯ ನಡೆ ಇಡುವ ಗೌಡ್ರು, ಮುಂದಿನ ಚುನಾವಣೆಗೆ ಎಲ್ಲರಿಗಿಂತ ಮೊದಲೇ ಸಜ್ಜಾಗಿದ್ದಾರೆ.
ಎರಡು ಅಸೆಂಬ್ಲಿ ಉಪಚುನಾವಣೆಗೆ (ಹಾನಗಲ್, ಸಿಂಧಗಿ) ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಈಗಾಗಲೇ ಘೋಷಿಸಿದೆ, ಎರಡೂ ಕ್ಷೇತ್ರಕ್ಕೆ ಅಲ್ಪಸಂಖ್ಯಾತ ಸಮುದಾಯದವರನ್ನು ಆರಿಸಿರುವುದು ಗಮನಿಸಬೇಕಾದ ವಿಚಾರ. ಹಾಗಂತ, ಈ ಕ್ಷೇತ್ರಗಳಲ್ಲಿ ಮುಸ್ಲಿಮರ ಮತವೇ ನಿರ್ಣಾಯಕ ಎಂದು ಹೇಳಲು ಬರುವುದಿಲ್ಲ.
ಇನ್ನು, 2023ರ ಏಪ್ರಿಲ್, ಮೇ ಆಸುಪಾಸಿನಲ್ಲಿ ನಡೆಯಬೇಕಾಗಿರುವ ಅಸೆಂಬ್ಲಿ ಚುನಾವಣೆಗೆ ಭದ್ರಾವತಿ ಕ್ಷೇತ್ರಕ್ಕೆ ಜೆಡಿಎಸ್ ಈಗಾಗಲೇ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿದೆ. ಕಳೆದ ಕೆಲವು ದಿನಗಳಿಂದ, ಜೆಡಿಎಸ್ ತಮ್ಮ ಕಾರ್ಯಕರ್ತರು ಮತ್ತು ಮುಖಂಡರಿಗಾಗಿ ಕಾರ್ಯಾಗಾರವನ್ನು ಆಯೋಜಿಸಿದೆ. ಪಕ್ಷದ ಪ್ರಮುಖ ಮುಖಂಡರು ಇದರಲ್ಲಿ ಭಾಗವಹಿಸುತ್ತಿದ್ದಾರೆ ಮತ್ತು ತಮ್ಮತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಿದ್ದಾರೆ.
ಬಿಡದಿಯ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ತೋಟದ ಮನೆಯಲ್ಲಿ ಜನತಾ ಪರ್ವ, ಮಿಷನ್ 123 ಕಾರ್ಯಾಗಾರ ನಡೆಯುತ್ತಿದೆ. ಎರಡು ರಾಷ್ಟ್ರೀಯ ಪಕ್ಷಗಳನ್ನು ಸಮನಾಗಿ ತರಾಟೆಗೆ ತೆಗೆದುಕೊಳ್ಳುತ್ತಿರುವ ಕುಮಾರಸ್ವಾಮಿ, ಪ್ರಮುಖವಾದ ಹೆಜ್ಜೆಯನ್ನು ಇಟ್ಟಿದ್ದಾರೆ. ಇದು, ಕಾರ್ಯಕರ್ತರು ಬಯಸುತ್ತಿದ್ದ ನಡೆಯೂ ಹೌದು ಎಂದರೆ ತಪ್ಪಾಗಲಾರದು. ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಇದು ಉಪಯೋಗವಾಗಲಿದೆ ಎನ್ನುವ ವಿಶ್ವಾಸದಲ್ಲಿ ಕಾರ್ಯಕರ್ತರು ಇದ್ದಾರೆ.

ದೇವೇಗೌಡ್ರ ಕುಟುಂಬದ ಎರಡನೇ ತಲೆಮಾರಿನ ಪ್ರಜ್ವಲ್ ರೇವಣ್ಣ ಮತ್ತು ನಿಖಿಲ್
ದೇವೇಗೌಡ್ರ ಕುಟುಂಬದ ಎರಡನೇ ತಲೆಮಾರಿನ ಪ್ರಜ್ವಲ್ ರೇವಣ್ಣ ಮತ್ತು ನಿಖಿಲ್ ಕುಮಾರಸ್ವಾಮಿಯವರು ರಾಜಕೀಯದಲ್ಲಿ ಇದ್ದರೂ, ಪಕ್ಷ ಸಂಘಟನೆಯ ವಿಚಾರದಲ್ಲಿ ಇಬ್ಬರೂ ಅಷ್ಟಾಗಿ ಮುನ್ನಲೆಯಲ್ಲಿ ಇರಲಿಲ್ಲ. ಪ್ರಜ್ವಲ್ ಅವರು ಹಾಸನಕ್ಕೆ ಸೀಮಿತವಾಗಿದ್ದರೆ, ನಿಖಿಲ್ ರಾಮನಗರದ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದೇ ಹೆಚ್ಚು. ಈಗ, ಇವರಿಬ್ಬರನ್ನು ಪಕ್ಷ ಬಲವರ್ಧನೆಗೆ ಎಚ್ಡಿಕೆ ಮುಂದಕ್ಕೆ ತಂದಿದ್ದಾರೆ.

ಜೊತೆಗೆ ಅವರಿಬ್ಬರಿಗೂ ತರಬೇತಿ ಕೂಡಾ ಅಷ್ಟೇ ಮುಖ್ಯ - ಎಚ್ಡಿಕೆ
ಕೆಲವು ದಿನಗಳ ಹಿಂದೆ ಯುವಕರಾದ ಪ್ರಜ್ವಲ್, ನಿಖಿಲ್ ಅವರು ಯಾಕೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತಿಲ್ಲ ಎನ್ನುವ ಪ್ರಶ್ನೆಯನ್ನು ಕುಮಾರಸ್ವಾಮಿಯವರ ಬಳಿ ಮಾಧ್ಯಮದವರು ಕೇಳಿದ್ದರು. "ಇಬ್ಬರೂ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತಾರೆ, ಎಲ್ಲದಕ್ಕೂ ಸಮಯ ಸಂದರ್ಭ ಬರಬೇಕು, ಜೊತೆಗೆ ಅವರಿಬ್ಬರಿಗೂ ತರಬೇತಿ ಕೂಡಾ ಅಷ್ಟೇ ಮುಖ್ಯ"ಎಂದು ಎಚ್ಡಿಕೆ ಹೇಳಿದ್ದರು. ಈಗ ಇವರಿಬ್ಬರು, ಪಕ್ಷದ ಕಾರ್ಯಾಗಾರದಲ್ಲಿ ಬ್ಯೂಸಿಯಾಗಿದ್ದಾರೆ.

ಹಲವು ಸಮದಾಯದ/ಜಾತಿಯ ಪ್ರತ್ಯೇಕ ಸಭೆಯನ್ನು ದಳಪತಿಗಳು ಆಯೋಜಿಸಿದ್ದರು
ಜೆಡಿಎಸ್ ಕಾರ್ಯಗಾರದಲ್ಲಿ ಹಲವು ಸಮದಾಯದ/ಜಾತಿಯ ಪ್ರತ್ಯೇಕ ಸಭೆಯನ್ನು ದಳಪತಿಗಳು ಆಯೋಜಿಸಿದ್ದರು. ಅದಕ್ಕಿಂತ ಪ್ರಮುಖವಾಗಿ, ಯುವ ಸಮುದಾಯದವರ ಸಭೆ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಪೂರಕ ವಾತಾವರಣ ಸೃಷ್ಟಿಯಾಗಲಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. "ಪಕ್ಷದಲ್ಲಿದ್ದು ಸಂಘಟನೆಯಲ್ಲಿ ತೊಡಗಿಸಿಕೊಳ್ಳದ ನಾಯಕರನ್ನು ನಿರ್ದಾಕ್ಷಿಣ್ಯವಾಗಿ ಮೂಲೆಗುಂಪು ಮಾಡಲಾಗುವುದು, ಉತ್ಸಾಹೀ ಯುವಕರಿಗೆ ಪಕ್ಷ ಸಂಘಟನೆಯ ಜವಾಬ್ದಾರಿಯನ್ನು ನೀಡಲಾಗುವುದು"ಎಂದು ಕುಮಾರಸ್ವಾಮಿ ಹೇಳಿದ್ದರು. ಅದರಂತೆ, ಎಚ್ಡಿಕೆ ಹೆಜ್ಜೆಯನ್ನು ಇಟ್ಟಿದ್ದಾರೆ.

ಪ್ರಜ್ವಲ್ ಮತ್ತು ನಿಖಿಲ್ ಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಜವಾಬ್ದಾರಿ
ಚುನಾವಣೆಗೆ ಇನ್ನೂ 18/19 ತಿಂಗಳು ಇರುವುದರಿಂದ ಕುಮಾರಸ್ವಾಮಿಯವರ ಯುವಕರಿಗೆ ಪ್ರಾತಿನಿಧ್ಯತೆಯ ವಿಚಾರ, ಪಕ್ಷದಲ್ಲಿ ಹೊಸ ಸಂಚಲನ ಮೂಡಿಸಿದೆ. ಪ್ರಜ್ವಲ್ ರೇವಣ್ಣ ಮತ್ತು ನಿಖಿಲ್ ಕುಮಾರಸ್ವಾಮಿಯವರಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಜವಾಬ್ದಾರಿ ಸಿಗುವುದು ಖಚಿತವಾಗಿರುವುದರಿಂದ, ಸಂಘಟನೆಯ ವಿಚಾರದಲ್ಲಿ ಚುರುಕುಗೊಂಡಿರುವುದು ಮತ್ತು ಯುವ ಕಾರ್ಯಕರ್ತರು ಉತ್ಸಾಹದಿಂದಿರುವುದು ಪಕ್ಷಕ್ಕೆ ಲಾಭವಾಗುವ ಸಾಧ್ಯತೆಯಿಲ್ಲದಿಲ್ಲ.












Click it and Unblock the Notifications