ಎಚ್ಡಿಕೆ - ಡಿಕೆಶಿ ಈಗ ಕುಚುಕು ಕುಚುಕು: ಹಳೇ ದುಷ್ಮನಿ ರಿವೈಂಡ್ ಮಾಡಿದಾಗ..
Recommended Video
ಇಡಿ ಬಲೆಯಲ್ಲಿರುವ ಡಿ.ಕೆ.ಶಿವಕುಮಾರ್ ಅವರಿಗೆ ಈಗ 'ಟ್ರಬಲ್ ಶೂಟರ್' ಮತ್ತು 'ಕನಕಪುರದ ಬಂಡೆ' ಎನ್ನುವ ಬಿರುದು. ಅದಕ್ಕಿಂತ ಹಿಂದೆ. 'ಸಾತನೂರಿನ ಗಂಡು' ಎಂದು ಕಾರ್ಯಕರ್ತರಿಂದ ಉಘೇಉಘೇ ಎಂದು ಅನಿಸಿಕೊಳ್ಳುತ್ತಿದ್ದ ಕಾಲವದು.
ದೇವೇಗೌಡ್ರ ಕುಟುಂಬ ಮತ್ತು ಡಿಕೆಶಿ ನಡುವೆ ಯಾವ ಮಟ್ಟಿಗೆ 'ಕನಕಪುರದ' ದುಷ್ಮನಿ ಇತ್ತು ಎಂದರೆ, ಯಪ್ಪಾ.. ಒಂದು ದಿನ, ತನ್ನ ತಾಯಿಗೆ ಕುಮಾರಣ್ಣ ಏನೋ ಹೇಳಿದರು ಅಂತಾ, ಡಿಕೆಶಿ, ವೇದಿಕೆಗೇ ತಮ್ಮ ತಾಯಿಯನ್ನು ಕರೆದುಕೊಂಡು ಬರುವುದೇ.
ಇರಲಿ, ರಾಜಕೀಯ ನಿಂತ ನೀರಲ್ಲ.. ದೋಸೆ ಮಗುಚಿ ಹಾಕಿದಂತೆ, ಶತ್ರುಗಳೂ ಇಲ್ಲ, ಮಿತ್ರರೂ ಇಲ್ಲ ಎಂದು ಡಿಕೆಶಿ ಬಹಳಷ್ಟು ಬಾರಿ ಹೇಳಿಯಾಗಿದೆ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ, ಡಿಕೆಶಿ ಮತ್ತು ಎಚ್ಡಿಕೆ ಇಬ್ಬರೂ ಶಸ್ತ್ರತ್ಯಾಗ ಮಾಡಿ ಈಗ ಒಂದಾಗಿದ್ದಾರೆ.
ಈಗ, ಅದ್ಯಾವ ಮಟ್ಟಿಗೆ ದೋಸ್ತಿ ಬೆಳೆದಿದೆ ಅಂದರೆ, ಕುಮಾರಸ್ವಾಮಿಯ ಹದಿನಾಲ್ಕು ತಿಂಗಳು ಸಿಎಂ ಆಗಿದ್ದಾಗ, ಅವರ ಬೆನ್ನಿಗೆ ಬೆನ್ನಾಗಿ ಡಿಕೆಶಿ ನಿಂತಿದ್ದರು. ಅವರ ಆಪ್ತವಲಯದ ಪ್ರಕಾರ, ಡಿಕೆಶಿ ಕಮಿಟ್ಮೆಂಟ್ ಅಂದರೆ ಕಮಿಟ್ಮೆಂಟ್. ಗೌಡ್ರ ಕುಟುಂಬದ ಬಗ್ಗೆ ಡಿಕೆಶಿ ಮಾತನಾಡಿದ್ದ, ವಿಡಿಯೋ ಡಿಬೇಟಿನ ಸಾರಾಂಶವೊಂದನ್ನು, ರಿವೈಂಡ್ ಮಾಡಿದಾಗ..

ಅಕ್ರಮ ಹಣವರ್ಗಾವಣೆ ವಿಚಾರದಲ್ಲಿ ಡಿ.ಕೆ.ಶಿವಕುಮಾರ್ ಈಗ ಜೈಲು ಪಾಲು
ಅಕ್ರಮ ಹಣವರ್ಗಾವಣೆ ವಿಚಾರದಲ್ಲಿ ಡಿ.ಕೆ.ಶಿವಕುಮಾರ್ ಈಗ ಜೈಲು ಪಾಲಾಗಿದ್ದಾರೆ. ಅವರ, ಬೇಲ್ ಅರ್ಜಿಯ ವಿಚಾರಣೆ, ಇಂದು (ಸೆ 17) ಕೋರ್ಟ್ ಮುಂದೆ ಬರಲಿದೆ. ಡಿಕೆಶಿ ಬಂಧನದ ವಿಚಾರದಲ್ಲಿ, ಜೆಡಿಎಸ್ಸಿನ ಮಾಜಿ ಶಾಸಕರೊಬ್ಬರು ಹೆಳಿಕೆಯೊಂದನ್ನು ನೀಡಿದ್ದರು. 'ಡಿಕೆಶಿ ಜೈಲಿಗೆ ಹೋಗಲು, ಗೌಡ್ರೇ ಕಾರಣ' ಎನ್ನುವ ಹೇಳಿಕೆಯನ್ನು ಕೆ ಆರ್ ಪೇಟೆಯ ಅತೃಪ್ತ ಜೆಡಿಎಸ್ ಶಾಸಕ ನಾರಾಯಣ ಗೌಡ್ರು ನೀಡಿದ್ದರು. ಆಮಂತ್ರಣವಿಲ್ಲ ಎಂದು, ಡಿಕೆಶಿ ಬಂಧನದ ವಿರುದ್ದ ಒಕ್ಕಲಿಗರ ಪ್ರತಿಭಟನೆಯಿಂದಲೂ ಕುಮಾರಸ್ವಾಮಿ ದೂರವಿದ್ದರು. ಇದು, ಹಲವು ಚರ್ಚೆ ಮತ್ತು ಸಂಶಯಕ್ಕೆ ಕಾರಣವಾಗಿತ್ತು.

ಸಾಮಾಜಿಕ ಕಾರ್ಯಕರ್ತ ಎಸ್ ಆರ್ ಹಿರೇಮಠ್
ಅದೇನೋ, ಕಾಕತಾಳೀಯ ಎನ್ನುವಂತೆ, ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ್, ಜೊತೆ, ಖಾಸಗಿ ವಾಹಿನಿಯ ಡಿಬೇಟ್ ನಲ್ಲಿ ಡಿಕೆಶಿ ಆಡಿದ ಮಾತು ಈಗ ವೈರಲ್ ಆಗುತ್ತಿದೆ. ಡಿಕೆಶಿ ಅಂದು ಆಡಿದ ಮಾತುಗಳು ಹೀಗಿದ್ದವು, " ಬಹಳ ಸಣ್ಣ ವಯಸ್ಸಿನಲ್ಲೇ ರಾಜಕೀಯದಲ್ಲಿ ಮೇಲೆ ಬರಬೇಕೆಂದು ಬೆಂಗಳೂರಿಗೆ ಬಂದವನು ನಾನು. ಬಹಳಷ್ಟು ಘಟಾನುಗಟಿಗಳನ್ನು ಎದುರಿಸಿದ್ದೇನೆ. ಶಿಲೆ, ವಿಗ್ರಹವಾಗಲು ಎಷ್ಟು ಏಟನ್ನು ತಿಂದಿರುತ್ತೋ, ಹಾಗೇ ನನ್ನ ರಾಜಕೀಯ ಜೀವನ ಕೂಡಾ".

ರಾಜ್ಯದ ಅತಿ ಭ್ರಷ್ಟ ರಾಜಕಾರಣಿಗಳೆಲ್ಲಿ ಡಿಕೆಶಿ ಒಬ್ಬರು
" ರಾಜ್ಯದ ಅತಿ ಭ್ರಷ್ಟ ರಾಜಕಾರಣಿಗಳೆಲ್ಲಿ ಡಿಕೆಶಿ ಒಬ್ಬರು" ಎಂದು ಹಿರೇಮಠ್ ಕಾರ್ಯಕ್ರಮದಲ್ಲಿ ಆರೋಪಿಸಿದ್ದರು. ಇದಕ್ಕೆ ಉತ್ತರ ನೀಡಿದ ಡಿಕೆಶಿ, " ಹಿರೇಮಠ್ ಸಾಹೇಬ್ರು ಮಾತನಾಡುವ ಯಾವ ಮಾತೂ ಅವರದಲ್ಲ. ಅದೆಲ್ಲಾ, ದೇವೇಗೌಡ್ರ ಕುಟುಂಬದ್ದು. ಅವರ ಕೈಯಲ್ಲಿ ಏನೇನು ದಾಖಲೆಗಳಿವೆಯೋ ಅದನ್ನೆಲ್ಲಾ, ಅವರಿಗೆ ಒದಗಿಸಿದ್ದು, ಗೌಡ್ರು ಮತ್ತು ಅವರ ಕುಟುಂಬ ಎನ್ನುವುದನ್ನು ನಾನು ಬಲ್ಲೆ" ಎಂದು ತಿರುಗೇಟು ನೀಡಿದರು.

30 ವರ್ಷದಿಂದ ಒಂದು ಕುಟುಂಬ ನನ್ನನ್ನು ರಾಜಕೀಯವಾಗಿ ಮುಗಿಸಲು ನೋಡಿತು
" ಮೂವತ್ತು ವರ್ಷದಿಂದ ಒಂದು ಕುಟುಂಬ ನನ್ನನ್ನು ರಾಜಕೀಯವಾಗಿ ಮುಗಿಸಲು ನೋಡಿತು. ಅದು ಆಗಲಿಲ್ಲ. ಇವತ್ತು ಏನು ಹಿರೇಮಠ್ ಆರೋಪ ಮಾಡುತ್ತಿದ್ದಾರೋ, ಅದೆಲ್ಲಾ ಗೌಡ್ರು, ಮತ್ತು ಕುಮಾರಸ್ವಾಮಿಯವರ ಚಿತಾವಣಿಯಿಂದ ನಡೆಯುತ್ತಿರುವಂತದ್ದು. ಜೆಡಿಎಸ್ಸಿನ ತಾಲೂ ಪಂಚಾಯತಿ ಸದಸ್ಯನ ಮೂಲಕ, ಹಿರೇಮಠ್ ಮತ್ತು ಅವರ ಸ್ನೇಹಿತರು ನನ್ನ ಮೇಲೆ (ಬೆನ್ನಿಗಾನಹಳ್ಳಿ ಡಿನೋಟಿಫಿಕೇಶನ್) ಕೇಸ್ ಹಾಕಿದರು".

ಹಿರೇಮಠ್ ಅವರು ಗೌಡ್ರ ಗಿಳಿ. ಅವರ ಮುಖಾಂತರ ಈ ವಿಚಾರವನ್ನು ಪ್ರಸ್ತಾವನೆ
" ಹಿರೇಮಠ್ ಅವರು ಗೌಡ್ರ ಗಿಳಿ. ಅವರ ಮುಖಾಂತರ ಈ ವಿಚಾರವನ್ನು ಪ್ರಸ್ತಾವನೆ ಮಾಡುತ್ತಿದ್ದಾರೆ. ಗೌಡ್ರ ಶಿಷ್ಯರೇ ದಾಖಲೆಗಳನ್ನು ಹಿರೇಮಠ್ ಅವರಿಗೆ ಕೊಟ್ಟಿದ್ದಾರೆ. ಕುಮಾರಸ್ವಾಮಿ ಶಿಷ್ಯ ವೀರಭದ್ರ ಎನ್ನುವವನೊಬ್ಬ ಇದ್ದ. ಕುಮಾರಸ್ವಾಮಿಗೆ ಹೇಗಾದರೂ ಮಾಡಿ ನನ್ನನ್ನು ಟೈಟ್ ಮಾಡಬೇಕು ಎನ್ನುವ ಆಸೆ. ಅವನು ಏನೇನೋ ಕಿತಾಪತಿ ಮಾಡಿದ. ಆದರೂ ನನ್ನನ್ನು ಏನೂ ಮಾಡೋಕೆ ಆಗಿಲ್ಲ. ಸಾಮಾಜಿಕ ನ್ಯಾಯಕ್ಕೆ ನಾನು ಬಲಿಯಾದೆ" ಎಂದು ಡಿಕೆಶಿ ಕಾರ್ಯಕ್ರಮದಲ್ಲಿ ಹೇಳಿದರು.

ಎರಡು ಪ್ರಮುಖ ರಾಜಕೀಯ ಕುಟುಂಬದ ನಡುವಿನ ಸ್ನೇಹ, ಹೀಗೇ ಮುಂದುವರಿಯಲಿ
ಇದು ಹಲವು ವರ್ಷಗಳ ಹಿಂದೆ, ಎಸ್.ಆರ್. ಹಿರೇಮಠ್ ಮತ್ತು ಡಿ.ಕೆ.ಶಿವಕುಮಾರ್ ನಡುವೆ ನಡೆದ ಡಿಬೇಟ್ ನಲ್ಲಿ ಡಿಕೆಶಿ ಆಡಿದ್ದ ಮಾತುಗಳು. ಬದಲಾದ ಪರಿಸ್ಥಿತಿಯಲ್ಲಿ, ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬರಲು ಡಿಕೆಶಿ ಶ್ರಮಪಟ್ಟಿದ್ದು, ಗೌಡ್ರು ಮತ್ತು ಡಿಕೆಶಿ ಕುಟುಂಬದ ನಡುವೆ ಸ್ನೇಹ ಬೆಳೆದಿದೆ. ರಾಜ್ಯದ, ಎರಡು ಪ್ರಮುಖ ರಾಜಕೀಯ ಕುಟುಂಬದ ನಡುವಿನ ಸ್ನೇಹ, ಹೀಗೇ ಮುಂದುವರಿಯಲಿ.












Click it and Unblock the Notifications