ಕೆ.ಆರ್.ಪುರಂನಿಂದ ಕಣಕ್ಕಿಳಿಯಲಿದ್ದಾರೆ ಅರಸು ಮೊಮ್ಮಗ ಲಿಂಗರಾಜ್ ಅರಸ್
ಬೆಂಗಳೂರು, ಮಾರ್ಚ್ 21: ಕರ್ನಾಟಕ ಕಂಡ ಧೀಮಂತ ಮುಖ್ಯಮಂತ್ರಿ, ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು ಅವರ ಮೊಮ್ಮಗ ಲಿಂಗರಾಜ ಅರಸು ಚುನಾವಣಾ ಕಣಕ್ಕಿಳಿಯಲಿದ್ದಾರೆ. ಬೆಂಗಳೂರಿನ ಕೆ.ಆರ್.ಪುರಂ ಕ್ಷೇತ್ರದಿಂದ ಎಎಪಿ ಅಭ್ಯರ್ಥಿಯಾಗಿ ಅವರು ಸ್ಪರ್ಧಿಸುತ್ತಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಐಟಿ ಕಂಪನಿ ಸ್ಥಾಪಕ
ಲಿಂಗರಾಜ ಅರಸ್ ಉದ್ಯಮಿಯಾಗಿದ್ದು ಸಾಫ್ಟ್ ವೇರ್ ಕಂಪನಿಯೊಂದರ ಸ್ಥಾಪಕರೂ ಆಗಿದ್ದಾರೆ. ಜೆನಿಸಿಸ್ ಎಂಬುದು ಇವರು ಸಹ ಸಂಸ್ಥಾಪಕರಾಗಿರುವ ಕಂಪನಿಯಾಗಿದ್ದು, ಇದು ಹಲವು ದೇಶಗಳಲ್ಲಿ ಕಾರ್ಯಚರಿಸುತ್ತದೆ. ಕಳೆದ ಎರಡು ದಶಕಗಳಿಂದ ಈ ಕಂಪನಿಯನ್ನು ಅವರು ಮುನ್ನಡೆಸುತ್ತಿದ್ದು 10,000 ಕ್ಕೂ ಹೆಚ್ಚು ಕುಟುಂಬಗಳಿಗೆ ಉದ್ಯೋಗ ನೀಡಿದ್ದಾರೆ.
ತಳಮಟ್ಟದಿಂದ ಮೇಲೆದ್ದು ಬಂದ ನಾಯಕ
ಹೆಸರಿಗೆ ದೇವರಾಜ ಅರಸರ ಮೊಮ್ಮಗನಾದರೂ ತಳಮಟ್ಟದಿಂದ ಬೆಳೆದು ಬಂದವರು ಲಿಂಗರಾಜ್ ಅರಸ್. ಟ್ರೇನಿ ಮ್ಯಾನೇಜರ್ ಆಗಿ, ಹಾರ್ಡ್ ವೇರ್ ಸೇಲ್ಸ್ ಮ್ಯಾನ್, ಆಪರೇಷನ್ ಮ್ಯಾನೇಜರ್.. ಹೀಗೆ ಒಂದೊಂದೇ ಹುದ್ದೆಗಳನ್ನು ನಿಭಾಯಿಸಿಕೊಂಡು ಬಂದ ಅವರು ಕೊನೆಗೆ ಬಹುರಾಷ್ಟ್ರೀಯ ಕಂಪನಿಯೊಂದನ್ನು ಸ್ಥಾಪಿಸಿದ್ದರು.

ಅವರ ರಾಜಕೀಯ ಹಿನ್ನೆಲೆಯೂ ಇದಕ್ಕಿಂತ ಭಿನ್ನವಾಗೇನೂ ಇಲ್ಲ. 2015ರಲ್ಲಿ ಕನ್ನಮಂಗಲದಲ್ಲಿ ಪಂಚಾಯತ್ ಚುನಾವಣೆಗೂ ಅವರು ಸ್ಪರ್ಧಿಸಿದ್ದರು. ಮಾದರಿ ಶಿಕ್ಷಣ, ಪರಿಸರ, ಆರೋಗ್ಯ ಮತ್ತು ಮೂಲ ಸೌಕರ್ಯ ಅವರ ಆಸಕ್ತಿಯ ಕೇತ್ರಗಳಾಗಿವೆ.
ತಮ್ಮ ಕ್ಷೇತ್ರದಲ್ಲಿ ಈಗಾಗಲೇ ಮಾದರಿ ಕಸ ವಿಲೇವಾರಿ ವ್ಯವಸ್ಥೆಯನ್ನು ಅವರು ಸ್ಥಾಪಿಸಿದ್ದಾರೆ. ಆರೋಗ್ಯ ಮತ್ತು ಪರಿಸರಕ್ಕೆ ಸಂಬಂಧಿಸಿದ ಹಲವು ಅಭಿಯಾನಗಳನ್ನೂ ನಡೆಸಿದ್ದಾರೆ.
ಗ್ರೇಟರ್ ವೈಟ್ ಫೀಲ್ಡ್ ನಿವಾಸಿಗಳ ಕಲ್ಯಾಣ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿಯೂ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇರದಲ್ಲಿ 30,000 ಸದಸ್ಯರಿದ್ದಾರೆ.
ಹೀಗೆ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿರುವ ಲಿಂಗರಾಜ ಅರಸ್ ರಿಗೆ ಆಮ್ ಆದ್ಮಿ ಪಕ್ಷ ಕೆ.ಆರ್.ಪುರಂ ನ ಟಿಕೆಟ್ ನೀಡಿ ಅವರನ್ನು ಚುನಾವಣಾ ಅಖಾಡಕ್ಕೆ ಇಳಿಸುತ್ತಿದೆ.
ಈ ಹಿಂದೆ ದೇವರಾಜ ಅರಸು ಪುತ್ರಿಯರಾದ ಚಂದ್ರಪ್ರಭಾ ಅರಸ್ ಸಚಿವರೂ ಆಗಿದ್ದರು. ಭಾರತೀ ಅರಸ್ ಕೂಡ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ಅರಸು ಅವರ ಮೂರನೇ ತಲೆಮಾರಿನ ಕುಡಿ ಲಿಂಗರಾಜ ಅರಸು ರಾಜಕೀಯಕ್ಕೆ ವಿಧಾನಸಭೆ ಚುನಾವಣೆಗೆ ಕಣಕ್ಕಿಳಿಯುತ್ತಿದ್ದಾರೆ.












Click it and Unblock the Notifications