ಕರ್ನಾಟಕದಲ್ಲಿ ಮತ್ತೊಂದು ಹೊಸ ಜಿಲ್ಲೆ ಉದಯ: ಸುಧಾಕರ್
ಬೆಂಗಳೂರು ಆಗಸ್ಟ್ 15: ಇನ್ನೊಂದು ತಿಂಗಳೊಳಗೆ ದೇವನಹಳ್ಳಿಯನ್ನು ಜಿಲ್ಲಾ ಕೇಂದ್ರವಾಗಿ ಮಾಡಿ ಆದೇಶ ಹೊರಡಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್ ಭರವಸೆ ನೀಡಿದರು.
ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಜಿಲ್ಲೆಯ ದೇವನಹಳ್ಳಿಯು ನಾಡಪ್ರಭು ಕೆಂಪೇಗೌಡರು ಆಡಳಿತ ನಡೆಸಿದ ಪ್ರದೇಶವಾಗಿದೆ. 54 ಪೇಟೆಗಳು, 340 ಕ್ಕೂ ಅಧಿಕ ಕೆರೆಗಳ ನಿರ್ಮಾಣಗೊಂಡಿವೆ. ಪರಿಸರ ಸಂರಕ್ಷಣೆ ಮೊದಲಾದ ಮಹತ್ವದ ಕ್ರಮಗಳನ್ನು ಅವರು ಜಾರಿ ಮಾಡಿದ್ದರು.
Top Points: 75ರ ಸ್ವಾತಂತ್ರ್ಯ ಸಂಭ್ರಮ ಹಾಗೂ ಕೆಂಪುಕೋಟೆಯಲ್ಲಿ ಮೋದಿ ಮಾತು
ಕೇಂಪೇಗೌಡರ ಆಡಳಿತದ ನಾಡಿನಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯುತ್ತಿರುವುದು ಹೆಮ್ಮೆ ತಂದಿದ್ದು, ಇಂತಹ ದೇವನಹಳ್ಳಿ ಪ್ರದೇಶವನ್ನು ಜಿಲ್ಲಾ ಕೇಂದ್ರವಾಗಿಸಲು ಒಂದು ತಿಂಗಳೊಳಗೆ ಆದೇಶ ಹೊರಡಿಸಲಾಗುವುದು ಎಂದು ಅವರು ಹೇಳಿದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ನಾವೆಲ್ಲರೂ ರಾಷ್ಟ್ರಧ್ವಜವನ್ನು ಮನೆಯ ಮೇಲೆ ಹಾರಿಸಿದ್ದೇವೆ. ಈಮೂಲಕ ನಾವು ರಾಷ್ಟ್ರಧಜ್ವಕ್ಕೆ ತೋರುವ ಗೌರವ ಒಂದು ದಿನಕ್ಕೆ ಸಿಮೀತವಾಗದೇ ಇಡೀ ವರ್ಷ ಧ್ವಜಕ್ಕೆ ಗೌರವ ನೀಡಬೇಕು. ರಾಷ್ಟ್ರವನ್ನು ಪೀತಿಸಬೇಕು ಎಂದರು.
ಪ್ರಧಾನಿ ನರೇಂದ್ರ ಮೋದಿ ಸುವರ್ಣ ಯುಗ ಸೃಷ್ಟಿ ಮಾಡಿದ್ದಾರೆ. 10 ಕೋಟಿ ಶೌಚಾಲಯ ನಿರ್ಮಾಣ, ಆಯುಷ್ಮಾನ್ ಭಾರತ್ನಿಂದ 5 ಲಕ್ಷ ರೂ. ವಿಮೆ, ಕಿಸಾನ್ ಸಮ್ಮಾನ್ ಮೊದಲಾದ ಯೋಜನೆ ಮೂಲಕ ಪ್ರಗತಿಯಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರೈತರ ಮಕ್ಕಳಿಗಾಗಿ 'ವಿದ್ಯಾನಿಧಿ' ಯೋಜನೆ ನೀಡಿದ್ದಾರೆ ಎಂದು ಅಭಿವೃದ್ಧಿ ಕುರಿತು ವಿವರಿಸಿದರು.
ಜಿಲ್ಲಾಸ್ಪತ್ರೆ, ತಾಯಿ-ಶಿಶು ಆಸ್ಪತ್ರೆ ನಿರ್ಮಾಣ
ದೊಡ್ಡಬಳ್ಳಾಪುರದಲ್ಲಿ ಜಿಲ್ಲಾಸ್ಪತ್ರೆ ನಿರ್ಮಾಣವಾಗಲಿದ್ದು, ಎರಡು ತಿಂಗಳಲ್ಲಿ ಭೂಮಿ ಪೂಜೆ ನಡೆಯಲಿದೆ. ಹೊಸಕೋಟೆಯಲ್ಲಿ ತಾಯಿ ಮತ್ತು ಶಿಶು ಆಸ್ಪತ್ರೆಯ ಕಾಮಗಾರಿ ಶೀಘ್ರವೇ ಆರಂಭವಾಗಲಿದ್ದು, ನೆಲಮಂಗಲದಲ್ಲೂ ಸಹ ಆಸ್ಪತ್ರೆಯೊಂದು ನಿರ್ಮಾಣ ಮಾಡಲಿದ್ದೇವೆ. ಈ ಅಭಿವೃದ್ಧಿ ಕಾರ್ಯಗಳಿಗೆ ವಿರೋಧ ಕೇಳಿಬಂದರೆ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುವುದಿಲ್ಲ ಎಂದ ಅವರು, ಎತ್ತಿನಹೊಳೆ ಯೋಜನೆಯಡಿ ಒಂದು ವರ್ಷದೊಳಗೆ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರದ ಕೆರೆಗಳನ್ನು ತುಂಬಿಸಲಾಗುವುದು ಎಂದು ಭರವಸೆ ನೀಡಿದರು.
ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದರೂ ದೇಶ ಈಗಲೂ ಚಾಲ್ತಿಯಲ್ಲಿರುವ ಬಡತನ, ಅನಕ್ಷರತೆ, ಮೂಲಭೂತವಾದ, ಭಯೋತ್ಪಾದನೆ, ನಕ್ಸಲಿಸಂ ಮೊದಲಾದ ಸವಾಲುಗಳನ್ನು ಎದುರಿಸುತ್ತಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಟಗಾರರು ರಕ್ತ ಹರಿಸಿದ್ದರು. ಆದರೆ ನಾವು ಸುಭದ್ರ ದೇಶ ನಿರ್ಮಾಣಕ್ಕಾಗಿ, ಈ ಸವಾಲು, ಸಮಸ್ಯೆಗಳನ್ನು ಕಿತ್ತೊಗೆಯಲು ಬೆವರು ಹರಿಸಿ ಶ್ರಮಿಸಬೇಕಿದೆ ಎಂದು ಕರೆ ನೀಡಿದರು.
ಹೋರಾಟಗಾರರ ತತ್ವಾದರ್ಶ ಪಾಲಿಸಬೇಕು
ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಸುಮಾರು 200 ವರ್ಷಗಳ ಸುದೀರ್ಘ ಹೋರಾಟದಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕ್, ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ವೀರ ಸಾವರ್ಕರ್ ಸೇರಿದಂತೆ ಅನೇಕಹೋರಾಟಗಾರರು ವಿಶೇಷ ಕೊಡುಗೆ ನೀಡಿದ್ದಾರೆ. ಅಹಿಂಸೆಯ ಮೂಲಕವೂ ಸ್ವಾತಂತ್ರ್ಯ ತಂದುಕೊಡಲು ಸಾಧ್ಯ ಎಂಬುದನ್ನು ಮಹಾತ್ಮ ಗಾಂಧೀಜಿ ತೋರಿಸಿಕೊಟ್ಟರು. ದೇಶದ ಪುನರ್ನಿರ್ಮಾಣ ಗುಡಿಸಲಿನಿಂದಲೇ ಆರಂಭವಾಗಬೇಕು ಎಂದು ಸ್ವಾಮಿ ವಿವೇಕಾನಂದರು ಕರೆ ನೀಡಿದ್ದಾರೆ. ಸ್ವಾತಂತ್ರ್ಯದ ಆಶಯ ಈಡೇರಲು ಸಾಮಾಜಿಕ ನ್ಯಾಯ, ಆರ್ಥಿಕ ಸಮಾನತೆ, ಸಾಂಸ್ಕೃತಿಕ ಸಮಾನತೆ ತರಬೇಕು ಎಂದು ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದರು. ಅದೇ ರೀತಿ ಕಿತ್ತೂರು ರಾಣಿ ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಹೋರಾಟ ತ್ಯಾಗ, ಬಲಿದಾನ ಸ್ಮರಿಸಿ ಗೌರವಿಸುವ ಜತೆಗೆ ಅವರ ತತ್ವಾದರ್ಶಗಳನ್ನು ಪಾಲಿಸಬೇಕು ಎಂದರು.
ಖೇಲೋ ಇಂಡಿಯಾದಿಂದ ಕ್ರೀಡೆಯಲ್ಲಿ ಸಾಧನೆ
ಭಾರತದ ಯುವಜನರು ಸಾಧನೆಗಳಿಂದಲೇ ಇಂದು ಉನ್ನತ ಸ್ಥಾನದಲ್ಲಿದ್ದಾರೆ. ಗೂಗಲ್, ಮೈಕ್ರೋಸಾಫ್ಟ್ ಸೇರಿದಂತೆ ಹಲವಾರು ಕಂಪನಿಗಳ ಮುಖ್ಯಸ್ಥರ ಸ್ಥಾನವನ್ನು ಭಾರತೀಯರು ತುಂಬಿದ್ದಾರೆ. ಇತ್ತೀಚೆಗೆ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಒಟ್ಟು 61 ಪದಕಗಳನ್ನು ಯುವಸಮೂಹ ತಮ್ಮದಾಗಿಸಿಕೊಂಡಿದೆ. ಆದ್ದರಿಂದ ಗ್ರಾಮೀಣ ಪ್ರದೇಶಗಳ ಪ್ರತಿಭೆಗಳನ್ನು ಗುರುತಿಸಲು ಕ್ರಮ ವಹಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಖೇಲೋ ಇಂಡಿಯಾದಿಂದಾಗಿ ಕ್ರೀಡೆಯಲ್ಲಿ ಈ ಸಾಧನೆ ಸೃಷ್ಟಿಯಾಗಿದೆ ಎಂದು ತಿಳಿಸಿದರು.
ಕೋವಿಡ್ ವಿರುದ್ಧ ಹೋರಾಡಿದ ಭಾರತ
ಕೋವಿಡ್ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಲಾಕ್ಡೌನ್ ಮಾಡಿದಾಗ ಜನರು ಉತ್ತಮವಾಗಿ ಸ್ಪಂದಿಸಿದರು. ಪ್ರತಿ ವೈದ್ಯರು, ಸಿಬ್ಬಂದಿ ಹಗಲಿರುಳು ದುಡಿದು ಕೋವಿಡ್ ಮಣಿಸಿದರು. ಎರಡು ಲಸಿಕೆ ಡೋಸ್ ಜೊತೆಗೆ ಮೂರನೇ ಡೋಸ್ ಕೂಡ ಉಚಿತವಾಗಿ ನೀಡಲಾಗಿದೆ. ಕೋವಿಡ್ ಲಸಿಕೆ ನಮ್ಮ ದೇಶದಲ್ಲೇ ತಯಾರಾಗಿದೆ. ಇದೇ ಹೊಸ ಭಾರತ. ಪ್ರತಿ ಗ್ರಾಮದಲ್ಲಿ ಸ್ತ್ರೀ ಶಕ್ತಿ ಸಂಘಕ್ಕೆ ಒಂದೂವರೆ ಲಕ್ಷ ರೂ. ನೀಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ. ಎಸ್ಸಿ, ಎಸ್ಟಿ ವರ್ಗದವರಿಗೆ ಉಚಿತವಾಗಿ ವಿದ್ಯುತ್ ನೀಡುವ ಕಾರ್ಯಕ್ರಮ ಐತಿಹಾಸಿಕವಾಗಿದೆ ಎಂದು ಸರ್ಕಾರ ಕಾರ್ಯ ಕುರಿತು ವಿವರಿಸಿದರು.
Recommended Video