Priyank Kharge: 'ಸಚಿವ ಪ್ರಿಯಾಂಕ ಖರ್ಗೆ ಬಂಧನಕ್ಕೆ ಒತ್ತಾಯ'
ಬೆಂಗಳೂರು, ಡಿಸೆಂಬರ್ 28: ಕಲ್ಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆಯವರ ಅಟ್ಟಹಾಸ ಬಹಳ ನಡೆಯುತ್ತಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದರು.
ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಕಲ್ಬುರ್ಗಿಗೆ ತೆರಳಿದ್ದೆ. ಆದರೆ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಇದ್ದುದರಿಂದ ನಾನು ಕಲ್ಬುರ್ಗಿಯಿಂದ ವಾಪಸ್ ಬರಬೇಕಾಯಿತು ಎಂದು ವಿವರಿಸಿದರು. ಕಲ್ಬುರ್ಗಿಯಲ್ಲಿ ಆಡಳಿತ ಸಂಪೂರ್ಣವಾಗಿ ಕುಸಿದಿದೆ ಎಂದು ಟೀಕಿಸಿದರು. ಎಲ್ಲದರಲ್ಲೂ ತಮಗೆ ಬೇಕಾದವರನ್ನು ಸಹಚರರನ್ನಾಗಿ ಜೋಡಿಸಿಕೊಂಡು ಎಲ್ಲ ರೀತಿಯ ದಂಧೆಗಳಲ್ಲಿ ತೊಡಗಿದ್ದಾರೆ ಎಂದು ದೂರಿದರು.

ಮರಳು ದಂಧೆ ಇದೆ. ಟೈಲ್ಸ್, ಸಿಮೆಂಟ್ ಫ್ಯಾಕ್ಟರಿಗಳ ದಂಧೆ ಇದೆ. ಎಲ್ಲ ರೀತಿಯ ದಂಧೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಂಟ್ರಾಕ್ಟ್ ವಿಚಾರಕ್ಕೂ ಬೇಕಾದವರ ನೇಮಕ ಆಗಿದೆ. ಇದೇ ಕಾರಣಕ್ಕೂ ಸಚಿನ್ ಅವರ ಆತ್ಮಹತ್ಯೆ ಆಗಿದೆ ಎಂದು ಆರೋಪಿಸಿದರು. ಇದರ ಉನ್ನತ ತನಿಖೆ ಆಗಲೇಬೇಕು ಎಂದು ಆಗ್ರಹಿಸಿದರು.
ಪ್ರಿಯಾಂಕ ಖರ್ಗೆ ಅವರನ್ನು ಸಚಿವ ಸ್ಥಾನದಿಂದ ಕೈಬಿಡಿ. ಅಲ್ಲದೆ ತಕ್ಷಣ ಅವರನ್ನು ಬಂಧಿಸಬೇಕು. ಅವರು ಸಂಪೂರ್ಣವಾಗಿ ತನಿಖೆಗೆ ಸಹಕರಿಸುವಂತೆ ಸರಕಾರ ಮಾಡಬೇಕು ಎಂದು ಆಗ್ರಹಿಸಿದರು. ಇಲ್ಲವಾದರೆ ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿ ಅಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮೃತ ಸಚಿನ್ ಅವರು 7 ಪುಟಗಳ ಡೆತ್ ನೋಟ್ ಬರೆದು ಸಾಮಾಜಿಕ ಜಾಲತಾಣದಲ್ಲೂ ಹಾಕಿದ್ದಾರೆ. ಅದರಲ್ಲಿ ಆಂದೋಲ ಸ್ವಾಮೀಜಿ, ಚಂದು ಪಾಟೀಲ, ಬಸವರಾಜ ಮತ್ತಿಮೂಡ ಅವರನ್ನು ಸುಪಾರಿ ಕೊಟ್ಟು ಸಾಯಿಸುವ ವಿಚಾರವೂ ಪ್ರಸ್ತಾಪವಾಗಿದೆ ಎಂದು ವಿವರ ನೀಡಿದರು.
ಅದು ರಿಪಬ್ಲಿಕ್ ಆಫ್ ಗುಲ್ಬರ್ಗ ಆಗಿದೆ. ಕರ್ನಾಟಕದ ವ್ಯವಸ್ಥೆಯೇ ಬೇರೆ; ಗುಲ್ಬರ್ಗದ ವ್ಯವಸ್ಥೆಯೇ ಬೇರೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಪೊಲೀಸರು ಕೂಡ ಅಲ್ಲಿ ಪ್ರಿಯಾಂಕ ಖರ್ಗೆಯವರು ಹೇಳಿದ್ದೇ ಆಡಳಿತ ಎಂಬಂತೆ ನಡೆದುಕೊಳ್ಳುತ್ತಾರೆ ಎಂದು ಆಕ್ಷೇಪಿಸಿದರು.
ಅಲ್ಲಿ ಖರ್ಗೆ ಮನೆತನದ ದೊಡ್ಡ ಪಾರುಪತ್ಯ ನಡೆದಿದೆ. ಬೇರೆ ಯಾರಿಗೂ ಮಾತನಾಡಲು ಅವಕಾಶ ಇಲ್ಲ. ವಿಶೇಷವಾಗಿ ದಲಿತ ಸಮುದಾಯಗಳು ಅವರ ವಿರುದ್ಧ ಮಾತನಾಡಿದರೆ, ಶಿಕ್ಷೆ ಅನುಭವಿಸಬೇಕಾಗುತ್ತದೆ. ಯಾರಾದರೂ ಅವರ ವಿರುದ್ಧ ಮಾತನಾಡಿದರೆ, ಪೊಲೀಸಿನವರು ಅಂಥವರ ಮನೆ ಮುಂದೆ ಇರುತ್ತಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಹೇಳಿದರು.












Click it and Unblock the Notifications