ದೆಹಲಿ ಚುನಾವಣೆ ಫಲಿತಾಂಶ: ಚಾರಿತ್ರಿಕ ಜಯ ಎಂದು ಸಂಭ್ರಮಿಸಿದ ವಿಜಯೇಂದ್ರ
ಬೆಂಗಳೂರು, ಫೆಬ್ರವರಿ 08: ದೆಹಲಿ ಚುನಾವಣೆ ಫಲಿತಾಂಶ ಬಹುತೇಕ ಅಂತಿಮವಾಗಿದ್ದು, ಬಿಜೆಪಿ ಇಪ್ಪತ್ತೇಳು ವರ್ಷಗಳ ಬಳಿಕ ಐತಿಹಾಸಿಕ ಗೆಲುವು ಸಾಧಿಸಿದೆ. ದೆಹಲಿಯಲ್ಲಿ ಬಿಜೆಪಿಯ ಪರವಾಗಿ ತೀರ್ಪು ಬಂದಿರುವುದನ್ನು ದೇಶದಾದ್ಯಂತ ಬಿಜೆಪಿ ಮುಖಂಡರು ಸಂಭ್ರಮಿಸುತ್ತಿದ್ದು, ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸಂತಸ ವ್ಯಕ್ತಪಡಿಸಿದ್ದಾರೆ.
ಭಾರತವನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ಶಕ್ತಿ ತುಂಬುವ ಸಂದೇಶವನ್ನು ದೆಹಲಿಯ ಜನತೆ ಬಿಜೆಪಿ ಗೆಲ್ಲಿಸುವ ಮೂಲಕ ಪಸರಿಸಿದ್ದಾರೆ. ಬಿಜೆಪಿಗೆ ದಾಖಲೆಯ ದಿಗ್ವಿಜಯ ದೊರಕಿಸಿಕೊಟ್ಟ ದೆಹಲಿಯ ಮತದಾರರಿಗೆ ಕೃತಜ್ಞತೆ ಸಲ್ಲಿಸಿ, ಮಾನ್ಯ ಮೋದಿಜೀ ಅವರನ್ನು ಕರ್ನಾಟಕದ ಜನತೆಯ ಪರವಾಗಿ ಅಭಿನಂದಿಸುವೆ.

ವಿಕಸಿತ ಭಾರತದ ಸಂಕಲ್ಪ ತೊಟ್ಟು ದೇಶವನ್ನು ಜಾಗತಿಕ ಮಟ್ಟದಲ್ಲಿ ಬಲಿಷ್ಟಗೊಳಿಸಲು ಯೋಜನೆ ರೂಪಿಸುತ್ತಿರುವ ಪ್ರಧಾನಿಯವರಿಗೆ ದೇಶದ ರಾಜಧಾನಿಯ ಗೆಲುವು ಭೀಮ ಬಲವನ್ನು ತಂದು ಕೊಟ್ಟಿದೆ. ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ ನಡ್ಡಾ ಹಾಗೂ ಗೃಹ ಸಚಿವರಾದ ಅಮಿತ್ ಶಾ ಅವರ ನೇತೃತ್ವದಲ್ಲಿ ಭಾರತೀಯ ಜನತಾ ಪಾರ್ಟಿ ಹೆಗ್ಗಳಿಕೆಯ ವಿಜಯ ಸಾಧಿಸಿದೆ.
ಭಾರತೀಯ ಜನತಾ ಪಾರ್ಟಿ ದೇಶಭಕ್ತಿ ಹಾಗೂ ರಾಷ್ಟ್ರ ಕಟ್ಟುವ ಲಕ್ಷಾಂತರ ಕಾರ್ಯಕರ್ತರನ್ನೊಳಗೊಂಡ ವಿಶ್ವ ದಾಖಲೆ ನಿರ್ಮಿಸಿರುವ ರಾಜಕೀಯ ಪಕ್ಷವಾಗಿದೆ. ಬಿಜೆಪಿಯ ವಿರುದ್ಧ ಸುಳ್ಳು ಅಪಪ್ರಚಾರಗಳನ್ನು ನಡೆಸಿ ತಾತ್ಕಾಲಿಕ ಗೆಲುವು ಸಾಧಿಸಬಹುದೇ ಹೊರತು ಪಕ್ಷ ಸಿದ್ಧಾಂತದೊಂದಿಗೆ ಸೆಣಸಿ ಬಿಜೆಪಿ ಮಣಿಸಲು ಸಾಧ್ಯವಿಲ್ಲ ಎನ್ನುವುದನ್ನು ದೆಹಲಿಯ ಫಲಿತಾಂಶ ತೋರಿಸಿಕೊಟ್ಟಿದೆ. ಭವಿಷ್ಯತ್ತಿನಲ್ಲಿ ಇದು ಕರ್ನಾಟಕದಲ್ಲೂ ಪ್ರತಿಫಲಿಸಲಿದೆ.
ದೆಹಲಿಯ ಆಡಳಿತದ ಚುಕ್ಕಾಣಿಯನ್ನು ಬಿಜೆಪಿ ಮಡಿಲಿಗೆ ಸಮರ್ಪಿಸಿರುವ ದೆಹಲಿಯ ಜನತೆಯ ಆಶೋತ್ತರಗಳನ್ನು ಈಡೇರಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ನೂತನ ಸರಕಾರ ಕಟಿಬದ್ಧವಾಗಿ ಕೆಲಸ ಮಾಡಲಿದೆ ಎನ್ನುವುದು ದೆಹಲಿ ಚುನಾವಣೆಗಾಗಿ ಶ್ರಮಿಸಿದ ಪ್ರತಿಯೊಬ್ಬ ಪಕ್ಷ ಪ್ರಮುಖರು ಹಾಗೂ ಕಾರ್ಯಕರ್ತರ ಅಭಯವಾಗಿದೆ. ಈ ಚುನಾವಣೆ ಬಿಜೆಪಿಯ ಕಾರ್ಯಕರ್ತರು ಹಾಗೂ ದೆಹಲಿಯ ಜನತೆಯ ಚಾರಿತ್ರಿಕ ಜಯವಾಗಿದೆ ಎಂದು ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸಂಭ್ರಮಿಸಿದ್ದಾರೆ.












Click it and Unblock the Notifications