ಕರ್ನಾಟಕದ ಪಠ್ಯದಿಂದ ಭಗತ್ ಸಿಂಗ್ ಗದ್ಯ ತೆಗೆದಿದ್ದಕ್ಕೆ ಆಪ್ ಕೆಂಡಾಮಂಡಲ
ಬೆಂಗಳೂರು, ಮೇ 18: ಕರ್ನಾಟಕದ ಶಾಲಾ ಪಠ್ಯದಿಂದ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಪಠ್ಯವನ್ನು ತೆಗೆಯುವ ಸರ್ಕಾರದ ನಿರ್ಧಾರವನ್ನು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಶಹೀದ್ ಭಗತ್ ಸಿಂಗ್ ಅವರನ್ನು ಬಿಜೆಪಿಯು ಇಷ್ಟೊಂದು ದ್ವೇಷಿಸುವುದಕ್ಕೆ ಕಾರಣವೇನು? ಪಠ್ಯಪುಸ್ತಕದಿಂದ ಅವರ ಪಠ್ಯವನ್ನು ತೆಗೆಯುವ ನಿರ್ಧಾರವು ಅವರಿಗೆ ಮಾಡುವ ಅವಮಾನವಾಗಿದೆ. ದೇಶವು ಇದನ್ನು ಸಹಿಸುವುದಿಲ್ಲ. ಬಿಜೆಪಿ ಸರ್ಕಾರವು ತನ್ನ ನಿರ್ಧಾರವನ್ನು ಹಿಂಪಡೆಯಲೇಬೇಕು" ಎಂದು ಆಗ್ರಹಿಸಿದ್ದಾರೆ.
ಭಗತ್ ಸಿಂಗ್ ಕುರಿತ ಪಠ್ಯ; ಶಿಕ್ಷಣ ಸಚಿವರ ಸ್ಪಷ್ಟನೆ
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕೂಡ ಕರ್ನಾಟಕ ಸರ್ಕಾರ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದು, "ಭಗತ್ ಸಿಂಗ್ ವಿರುದ್ಧದ ಬಿಜೆಪಿಯ ದ್ವೇಷ ಹೆಚ್ಚಾಗುತ್ತಿದೆ. ಕಡಿಮೆ ವಯಸ್ಸಿನಲ್ಲೇ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕ್ರಾಂತಿಕಾರಿ ಹೋರಾಟಗಾರ ಭಗತ್ ಸಿಂಗ್ ವಿಚಾರಗಳು ಯುವಕರಲ್ಲಿ ದೇಶಭಕ್ತಿ ಹೆಚ್ಚಿಸುತ್ತದೆ. ಜನರಲ್ಲಿ ದೇಶಭಕ್ತಿ ಜಾಗೃತಗೊಳ್ಳುವುದರಿಂದ ಭಯಗೊಂಡು ಬಿಜೆಪಿ ಈ ರೀತಿ ಮಾಡುತ್ತಿದೆ" ಎಂದು ಟ್ವೀಟ್ ಮಾಡಿದ್ದಾರೆ.
ದೆಹಲಿಯಲ್ಲಿ ದೇಶಭಕ್ತಿ ಪಠ್ಯಕ್ರಮ; ನವದೆಹಲಿಯಲ್ಲಿ ವಿಶೇಷವಾಗಿ ಭಗತ್ ಸಿಂಗ್ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಲು ʻದೇಶಭಕ್ತಿ ಪಠ್ಯಕ್ರಮʼ ಎಂಬ ವಿನೂತನ ಪಠ್ಯಕ್ರಮವನ್ನು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸರ್ಕಾರವು ಅಲ್ಲಿನ ಸರ್ಕಾರಿ ಶಾಲೆಗಳಲ್ಲಿ ಜಾರಿಗೆ ತಂದಿದೆ.
ದೆಹಲಿಯ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಭಗತ್ ಸಿಂಗ್ ಫೋಟೋವನ್ನು ಕಡ್ಡಾಯಗೊಳಿಸಲಾಗಿದೆ. ಮಾರ್ಚ್ನಲ್ಲಿ ಪಂಜಾಬ್ನ ಮುಖ್ಯಮಂತ್ರಿ ಹುದ್ದೆಗೇರಿದ ಭಗವಂತ್ ಮಾನ್ರವರು ಭಗತ್ ಸಿಂಗ್ ತವರೂರಾದ ಖಟ್ಕರ್ ಕಲಾನ್ ಗ್ರಾಮದಲ್ಲಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಭಗತ್ ಸಿಂಗ್ರಿಗೆ ಗೌರವ ಸಲ್ಲಿಸಿದ್ದಾರೆ.
ಕರ್ನಾಟಕ ಶಿಕ್ಷಣ ಇಲಾಖೆ ಸ್ಪಷ್ಟನೆ: ಸಮಾಜ ವಿಜ್ಞಾನ ಹಾಗೂ ಭಾಷಾ ಪಠ್ಯ ಪುಸ್ತಕಗಳಲ್ಲಿದ್ದ ಸೂಕ್ಷ್ಮ ವಿಚಾರಗಳನ್ನು ಪರಿಶೀಲಿಸಲು ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ನೇಮಕ ಮಾಡಲಾಗಿತ್ತು. ಈ ಸಮಿತಿಯು 6 ರಿಂದ 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕಗಳು ಹಾಗೂ 1 ರಿಂದ 10ನೇ ತರಗತಿ ಕನ್ನಡ ಭಾಷಾ ಪಠ್ಯಪುಸ್ತಕ ಪರಿಷ್ಕರಿಸಿರುತ್ತಾರೆ ಎಂದು ಶಿಕ್ಷಣ ಇಲಾಖೆ ಹೇಳಿದೆ.
10ನೇ ತರಗತಿ ಕನ್ನಡ ಪಠ್ಯ ಪುಸ್ತಕದಲ್ಲಿದ್ದ 'ಭಗತ್ಸಿಂಗ್' ಗದ್ಯವನ್ನು ಕೈಬಿಟ್ಟು 'ಹೆಡ್ಗೆವಾರ್'ರವರ ಬಗ್ಗೆ ಗದ್ಯ ಸೇರಿಸಲಾಗಿದೆ ಎನ್ನುವ ಸುದ್ದಿ ಸತ್ಯಕ್ಕೆ ದೂರವಾದುದು. ವಾಸ್ತವವಾಗಿ 'ಭಗತ್ಸಿಂಗ್' ಗದ್ಯವನ್ನು ಪಠ್ಯದಿಂದ ಕೈಬಿಟ್ಟಿಲ್ಲ. ಪರಿಷ್ಕರಿಸಿರುವ 10ನೇ ತರಗತಿ ಪ್ರಥಮ ಭಾಷಾ ಕನ್ನಡ ಪಠ್ಯಪುಸ್ತಕ ಇನ್ನೂ ಮುದ್ರಣ ಹಂತದಲ್ಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.