ದೀಪಾವಳಿ: ಖಾಸಗಿ ಬಸ್ ಮಾಲೀಕರಿಂದ ದುಪ್ಪಟ್ಟು ಹಣ ವಸೂಲಿ: ಸಾರಿಗೆ ಇಲಾಖೆ ಶಾಮೀಲು ಶಂಕೆ
ಬೆಂಗಳೂರು, ಅಕ್ಟೋಬರ್ 23: ದೀಪಾವಳಿ ಹಬ್ಬ ಹಿನ್ನೆಲೆ ಎರಡ್ಮೂರು ದಿನದಿಂದ ಸಾಕಷ್ಟು ಜನ ಬೆಂಗಳೂರಿನಿಂದ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಖಾಸಗಿ ಬಸ್ ಮಾಲೀಕರಿಂದ ದುಪ್ಪಟ್ಟು ಹಣ ವಸೂಲಿ ದಂಧೆ ಮುಂದುವರಿದಿದೆ. ಸಾರಿಗೆ ಸಚಿವ ಶ್ರೀರಾಮುಲು ಕಾನೂನು ಕ್ರಮ, ಪರ್ಮಿಟ್ ರದ್ದು ಎಚ್ಚರಿಕೆಯು ಹೇಳಿಕೆಗೆ ಮಾತ್ರ ಸೀಮಿತವಾಗಿದೆ.
ಪ್ರತಿ ಸಲ ಹಬ್ಬಗಳಲ್ಲೂ ಸರ್ಕಾರಿ ಬಸ್ಗಳು ಸಿಗದೇ ಜನರು ವಿಮಾನ ಪ್ರಯಾಣದ ದರದಷ್ಟು ಹಣ ನೀಡಿ ಖಾಸಗಿ ಬಸ್ಗಳಲ್ಲಿ ತೆರಳುತ್ತಿದ್ದಾರೆ. ಆದರೆ ಈವರೆಗೆ ಸರ್ಕಾರ ಯಾವುದೇ ಕ್ರಮ ಜರುಗಿಸದೇ ಹಿನ್ನೆಲೆ ಸಾರಿಗೆ ಇಲಾಖೆ ಅಧಿಕಾರಿಗಳು ಈ ವಸೂಲಿ ದಂಧೆಯಲ್ಲಿ ಶಾಮಿಲಾಗಿದ್ದಾರೆಯೇ?. ವಸೂಲಿ ಹಣದಲ್ಲಿ ಸರ್ಕಾರಕ್ಕೂ ಒಂದಿಷ್ಟು ಪಾಲು ಹೋಗುತ್ತದೆ. ಅದಕ್ಕಾಗಿಯೇ ಯಾವ ಕ್ರಮ ಜರುಗಿಸುತ್ತಿಲ್ಲ ಎಂಬ ಅನುಮಾನಗಳು ವ್ಯಕ್ತವಾಗಿವೆ.
4 ನಿಗಮಗಳ ಬಸ್ ಸಿಸಿ ಚಾಲಕರಿಗೆ ಮೂಲಸೌಕರ್ಯ ನೀಡಿ: ಈ ಬಗ್ಗೆ ಆದೇಶಿಸುವಂತೆ ಸಿಎಸ್ಗೆ ಪತ್ರ
ದೀಪಾವಳಿ ಪ್ರಯುಕ್ತ ಸಾಲು ಸಾಲು ರಜೆಗಳು ಇವೆ. ಈಗಾಗಲೇ ಸಾರಿಗೆ ಇಲಾಖೆ ಬಿಟ್ಟು ಹೆಚ್ಚುವರಿ ಬಸ್ಗಳು ಒಂದೇ ದಿನದಲ್ಲಿ ಬುಕ್ ಆಗಿವೆ. ಇಲಾಖೆಯಿಂದ ಹೆಚ್ಚುವರಿ ಬಸ್ಗಳ ಅಗತ್ಯತೆ ಇತ್ತಾದರೂ ಸರ್ಕಾರ ಆ ಬಗ್ಗೆ ಚಿಂತಿಸಿಲ್ಲ. ಜೊತೆಗೆ ಖಾಸಗಿ ಬಸ್ ಮಾಲೀಕರು ಪ್ರಯಾಣಿಕರಿಗೆ ಹೆಚ್ಚುವರಿ ಹಣ ವಸೂಲಿಗೆ ವಿರುದ್ಧ ಕ್ರಮಕ್ಕೂ ಸರ್ಕಾರ ಮುಂದಾಗಿಲ್ಲ. ಸಾರಿಗೆ ಸಚಿವರು ಕಣ್ಣೊರೆಸುವಂತೆ ಕೇವಲ ಪರ್ಮಿಟ್ ರದ್ದು, ಅಧಿಕಾರಿಗಳು ಖುದ್ದು ಭೇಟಿ ನೀಡಿ ಪರಿಶೀಲಿಸಿ ಕ್ರಮ ವಹಿಸಲಿದ್ದಾರೆ ಎಂದೆಲ್ಲ ಹೇಳುತ್ತಿದ್ದಾರೆ.
ಸಚಿವರ ಎಚ್ಚರಿಕೆ ಹೇಳಿಕೆಗೆ ಮಾತ್ರವೇ ಸೀಮಿತ
ಭಾನುವಾರವೂ ಸಹ ಸಾರಿಗೆ ಸಚಿವ ಶ್ರೀರಾಮುಲು ಅವರು ಬಳ್ಳಾರಿಯಲ್ಲಿ ನಿಗದಿತ ಪ್ರಯಾಣ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡಿದರೆ ಖಾಸಗಿ ಬಸ್ಗಳ ಪರ್ಮಿಟ್ ರದ್ದು ಮಾಡಿ, ಮಾಲೀಕರ ವಿರುದ್ಧ ಪ್ರಕರಣ ದಾಖಲಿಸುತ್ತೇವೆ. ಪರಿಶೀಲನೆಗೆಂದೇ ಇಲಾಖೆಯಿಂದ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಆ ತಂಡದ ಅಧಿಕಾರಿಗಳು ಪ್ರಯಾಣಿಕರಿಂದ ಮಾಹಿತಿ ಪಡೆದು, ಕಾನೂನು ಕ್ರಮ ಜರುಗಿಸಲಿದ್ದಾರೆ ಎಂದಿದ್ದಾರೆ.
ಕಳೆದ ಗಣೇಶ ಹಬ್ಬ, ಇತ್ತೀಚಿನ ವಿಜಯದಶಮಿ ವೇಳೆಯಲ್ಲೂ ಸಚಿವರು ಹೀಗೆಯೇ ಖಡಕ್ಕಾಗಿ ಎಚ್ಚರಿಕೆ ನೀಡಿದ್ದು ಹೇಳಿಕೆಗೆ ಮಾತ್ರ ಸೀಮಿತವಾಗಿತ್ತು. ಬಹುಶಃ ಈ ಬಾರಿಯ ಎಚ್ಚರಿಕೆಯಿಂದಲೂ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದು ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ.
ಕ್ರಮ ಕೈಗೊಂಡಿದ್ದರೆ ಅದರ ಮಾಹಿತಿ ನೀಡಿ
ಸರ್ಕಾರ ಕ್ರಮ ಕೈಗೊಂಡಿದ್ದೆ ಆದಲ್ಲಿ ಈ ಹಿಂದಿನ ಹಬ್ಬಗಳಲ್ಲಿ ಎಷ್ಟು ಪ್ರಕರಣ ದಾಖಲಾಗಿವೆ. ಎಷ್ಟು ಖಾಸಗಿ ಬಸ್ಗಳ ಪರ್ಮಿಟ್ ರದ್ದಾಗಿದೆ. ಎಲ್ಲೆಲ್ಲಿ ಹಣ ವಸೂಲಿ ದಂಧೆ ಬೆಳಕಿಗೆ ಬಂದಿದೆ ಎಂಬುದನ್ನು ಸಚಿವರು ಸಾರ್ವಜನಿಕರ ಮುಂದಿಡಲಿ ಎಂದು ಪ್ರಯಾಣಿಕರು ಪ್ರಶ್ನಿಸಿದ್ದಾರೆ. ಇನ್ನೂ ವಿಮಾನ ಪ್ರಯಾಣದಷ್ಟು ಖಾಸಗಿ ಬಸ್ಗಳ ಟಿಕೆಟ್ ದರ ಏರಿಸಲಾಗಿದ್ದು, ಅವುಗಳ ಮಾಹಿತಿ ಹೀಗಿದೆ.
ವಿಮಾನ ಪ್ರಯಾಣದಷ್ಟು ಖಾಸಗಿ ಬಸ್ ಟಿಕೆಟ್ ದರ
ಬೆಂಗಳೂರು-ಹಾಸನ ಸಾಮಾನ್ಯ ದಿನಗಳಲ್ಲಿ 550ರೂ. ಇತ್ತು, ಇದೀಗ 2,000ರೂ.ವರೆಗೆ ಹೆಚ್ಚಿಸಲಾಗಿದೆ. ಬೆಂಗಳೂರು-ಬೆಳಗಾವಿ 750ರೂ. ಇದ್ದ ಪ್ರಯಾಣ ದರಕ್ಕೆ ಬದಲಾಗಿ ಸದ್ಯ 4,000-5000 ರೂ.ವರೆಗೆ ವಸೂಲಿ ಮಾಡುತ್ತಿದ್ದಾರೆ. ಬೆಂಗಳೂರು- ಉಡುಪಿಗೆ 750ರೂ. ಬದಲಿಗೆ 2,000ರೂ.ನಿಂದ 3000ರೂ. ವರೆಗೆ ಖಾಸಗಿ ಬಸ್ ಮಾಲೀಕರು ಪ್ರಯಾಣಿಕರಿಂದ ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದಾರೆ.
ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಸಾಮಾನ್ಯ ದಿನಗಳಲ್ಲಿ 500ರೂ. ಇತ್ತು, ಇದೀಗ ದೀಪಾವಳಿಗೆ ರೂ.1,000 ನಿಂದ 2,000ರೂ.ವರೆಗೆ ವಸೂಲಿ. ಬೆಂಗಳೂರು- ಕುಕ್ಕೆ ಸುಬ್ರಹ್ಮಣ್ಯಕ್ಕೆ ಮೊದಲು ರೂ.523 ಇತ್ತು, ಈಗ ರೂ.1,000 ನಿಂದ 2,000ರೂ.ಗೆ ಹೆಚ್ಚಿಸಲಾಗಿದೆ. ಬೆಂಗಳೂರು-ಮಡಿಕೇರಿ ಮೊದಲು ರೂ. 600 ಇದ್ದದ್ದು, ದೀಪಾವಳಿಗೆ 2,000 ರಿಂದ 3,000ರೂ. ಆಗಿದೆ. ಬೆಂಗಳೂರು- ಕಾರವಾರ 700ರೂ.ನಿಂದ 2,000ರೂ.ನಿಂದ 3,000ರೂ.ವರೆಗೆ ನಿಗದಿ ಮಾಡಲಾಗಿದೆ. ಬೆಂಗಳೂರು- ವಿಜಯಪುರಕ್ಕೆ 650ರೂ.ನಲ್ಲಿ ಹೋಗುತ್ತಿದ್ದ ಪ್ರಯಾಣಿಕ ದೀಪಾವಳಿಗೆ 1000ರೂ.ನಿಂದ 2,000ರೂ. ನೀಡಬೇಕಾಗಿದೆ.
ಬೆಂಗಳೂರು-ಬೆಳಗಾವಿಗೆ 10,000ರೂ. ಟಿಕೆಟ್ ದರ!
ಬೆಂಗಳೂರಿನಿಂದ ಬೆಳಗಾವಿ ಕೆಎಸ್ಆರ್ಟಿ ಐರಾವತಿ ಮಲ್ಟಿ ಎಕ್ಸೆಲ್ನಲ್ಲಿ 7000ರೂ. ಇದ್ದರೆ, ಖಾಸಗಿ ಬಸ್ನವರು 10,000 ವಸೂಲಿ ಮಾಡುತ್ತಿದ್ದಾರೆ ಎಂದು ಮೆಜೆಸ್ಟಿಕ್ನಲ್ಲಿ ಪ್ರಯಾಣಿಕರೊಬ್ಬರು ಅಳಲು ತೋಡಿಕೊಂಡರು. ನಾಳೆ ಸೋಮವಾರದಿಂದ ದೀಪಾವಳಿ ಹಬ್ಬ, ಭಾನುವಾರ ಊರಿನತ್ತ ಹೋಗುವ ಪ್ರಯಾಣಿಕರಿಂದ ಮನ ಬಂದ ದರ ನಿಗದಿಪಡಿಸಿ ಖಾಸಗಿ ಬಸ್ನವರು ಹಣ ವಸೂಲಿ ಮಾಡುತ್ತಿದ್ದಾರೆ.
ಮುಂದಿನ ಯುಗಾದಿವರೆಗೆ ಯಾವ ಹಬ್ಬಗಳ ಇಲ್ಲ. ಹೀಗಾಗಿ ಇದೇ ಈ ವರ್ಷದ ಕಡೆಯ ಹಬ್ಬವಾಗಿದ್ದರಿಂದ ವಿಮಾನದ ದರದಲ್ಲಿ ಟಿಕೆಟ್ ದರ ನಿಗದಿ ಮಾಡಿರುವುದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ನುಡಿದಂತೆ ನಡೆಯಬೇಕಿದೆ. ಸಾರಿಗೆ ಇಲಾಖೆಯಿಂದ ಅಗತ್ಯದಷ್ಟು ಬಸ್ ನಿಯೋಜಿಸಬೇಕು. ಜೊತೆಗೆ ಖಾಸಗಿ ಮಾಲೀಕರ ವಿರುದ್ಧ ಹೇಳಿದಂತೆ ಕ್ರಮ ಜರುಗಿಸಬೇಕಿದೆ.