ನ. 14 ದೀಪಾವಳಿ ರಜೆ, ಶಾಲೆಯಲ್ಲಿ ಮಕ್ಕಳ ದಿನಾಚರಣೆ ಹೇಗೆ?, ಸುತ್ತೋಲೆ
ಬೆಂಗಳೂರು, ನವೆಂಬರ್ 10; ಶಾಲೆಗಳಲ್ಲಿ ನವೆಂಬರ್ 14ರಂದು ಮಕ್ಕಳ ದಿನಾಚರಣೆ ಆಚರಿಸಬೇಕು. ಆದರೆ ಈ ಬಾರಿ ದೀಪಾವಳಿ ಹಬ್ಬದ ಕಾರಣ ಶಾಲೆಗಳಿಗೆ ರಜೆ ಇರುತ್ತದೆ. ಆದ್ದರಿಂದ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಆಚರಣೆ ಮಾಡುವ ಕುರಿತು ಸುತ್ತೋಲೆ ಹೊರಡಿಸಲಾಗಿದೆ.
ಡಿ. ಎಸ್. ಇ. ಆರ್. ಟಿ. ಬೆಂಗಳೂರು ನಿರ್ದೇಶಕರ ಪರವಾಗಿ ಈ ಸುತ್ತೋಲೆ ಹೊರಡಿಸಲಾಗಿದೆ. ಸುತ್ತೋಲೆಯು ರಾಜ್ಯದ ಶಾಲೆಗಳಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸುವ ಬಗ್ಗೆ ಎಂಬ ವಿಷಯ ಒಳಗೊಂಡಿದೆ ಮತ್ತು ಮಾನ್ಯ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ ಬೆಂಗಳೂರು ಇವರ ಕಛೇರಿಯ
ಟಿಪ್ಪಣಿ ದಿನಾಂಕ 8/11/2023 ಒಳಗೊಂಡಿದೆ.

ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯದ ಎಲ್ಲಾ ಶಾಲೆಗಳಲ್ಲಿ ರಾಷ್ಟ್ರೀಯ ಹಬ್ಬಗಳನ್ನು ಹಾಗೂ ಇನ್ನಿತರ ಪ್ರಮುಖ ಜಯಂತಿಗಳನ್ನು ಕಡ್ಡಾಯವಾಗಿ ಆಯಾ ದಿನಗಳಂದು ಗೌರವ ಪೂರ್ವಕವಾಗಿ ಆಚರಿಸತಕ್ಕದ್ದೆಂದು, ಮಾನ್ಯ ಆಯಕ್ತರ ಕಛೇರಿಯ ದಿನಾಂಕ 30/03/2023ರ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಸುತ್ತೋಲೆಯ ವಿವರ; ಪ್ರತಿ ವರ್ಷ ನವೆಂಬರ್ 14 ರಂದು ಭಾರತದ ಪಥಮ ಪ್ರಧಾನ ಮಂತ್ರಿಗಳಾದ ಪಂಡಿತ ಜವಾಹರ್ ಲಾಲ್ ನೆಹರುರವರ ಜಯಂತಿಯ ನಿಮಿತ್ತ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ಬಾರಿ ನವಂಬರ್ 14, ಮಂಗಳವಾರ ಆಚರಿಸಬೇಕಾದ ಮಕ್ಕಳ ದಿನಾಚರಣೆಯ ದಿನದಂದು ಬಲಿಪಾಡ್ಯಮಿ ದೀಪಾವಳಿಯ ಪ್ರಯುಕ್ತ ಸಾರ್ವತ್ರಿಕ ರಜೆ ಇರುತ್ತದೆ.
ಈ ಹಿನ್ನೆಲೆಯಲ್ಲಿ ಈ ಸಾಲಿನ ಮಕ್ಕಳ ದಿನಾಚರಣೆಯನ್ನು ನಂತರದ ಶಾಲಾ ದಿನದಂದು ರಾಜ್ಯದ ಎಲ್ಲಾ ಶಾಲೆಗಳಲ್ಲಿ ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸುವುದು ಅತ್ಯಗತ್ಯವಾಗಿರುತ್ತದೆ. ಮಕ್ಕಳ ದಿನಾಚರಣೆಯು ಕೇವಲ ಸಾಂಕೇತಿಕ ಆಚರಣೆಯಲ್ಲ, ಇದು ದೇಶದ ಭವಿಷ್ಯತ್ತನ್ನು ರೂಪಿಸುವಲ್ಲಿ ಅತ್ಯಂತ ಮಹತ್ತರವಾದ ಆಚರಣೆಯಾಗಿದೆ.
ಹಾಗಾಗಿ ನವೆಂಬರ್ 14ರ ನಂತರದ ಶಾಲಾ ಕರ್ತವ್ಯದ ದಿನದಂದು, ಶಾಲಾ ಪ್ರಾರ್ಥನಾ ವೇಳೆಯಲ್ಲಿ ವಿದ್ಯಾರ್ಥಿಗಳಿಗೆ ಮಕ್ಕಳ ದಿನಾಚರಣೆಯ ಮಹತ್ವದ ಬಗ್ಗೆ ಅರಿವು ಮೂಡಿಸಲು ರಾಜ್ಯದ ಎಲ್ಲಾ ಶಾಲಾ ಮುಖ್ಯ ಶಿಕ್ಷಕರು ಕ್ರಮವಹಿಸತಕ್ಕದ್ದು ಎಂದು ಸೂಚನೆ ನೀಡಲಾಗಿದೆ.
ಶಾಲೆಗಳಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗೆ ಆಟೋಟಗಳು, ಪ್ರಬಂಧ ಬರವಣಿಗೆ, ಭಾಷಣ, ಚಿತ್ರಕಲೆ, ಕೋಲ್ಯಾಜ್ ಮೇಕಿಂಗ್, ಪಾತ್ರಾಭಿನಯ, ಸ್ವರಚಿತ ಕವನ, ಪತ್ರ ಲೇಖನ, ಛದ್ಮ ವೇಷ, ಆಶು ಭಾಷಣ, ಸಮೂಹ ಗಾಯನ, ಚರ್ಚಾ ಸ್ಪರ್ಧೆ, ಘೋಷಣಾ ವಾಕ್ಯ ಬರೆಯುವುದು, ಮುಂತಾದ ಚಟುವಟಿಕೆಗಳನ್ನು, ಶಾಲಾ ಪಾಠ ಪ್ರವಚನಗಳಿಗೆ ತೊಂದರೆ ಉಂಟಾಗದಂತೆ ನಿರ್ವಹಿಸುವುದು.
ಈ ಚಟುವಟಿಕೆಗಳು ಶಾಲೆಗಳಲ್ಲಿ ನಿರ್ವಹಿಸಬಹುದಾದ ಸಲಹಾತ್ಮಕ ಚಟುವಟಿಕೆಗಳಾಗಿರುತ್ತವೆ. ಶಾಲೆಯ ಸ್ಥಳೀಯ ಪರಿಸರ ಹಾಗೂ ಅಗತ್ಯಗಳಿಗನುಗುಣವಾಗಿ, ಶಾಲಾ ವೇಳಾಪಟ್ಟಿಯಲ್ಲಿ ಸಮಯ ಹೊಂದಾಣಿಕೆ ಮಾಡಿಕೊಂಡು, ಚಟುವಟಿಕೆಗಳನ್ನು ಆಯೋಜಿಸುವುದು ಎಂದು ಹೇಳಿದೆ. ವಿದ್ಯಾರ್ಥಿಗಳ ವಯಸ್ಸಿಗನುಗುಣವಾಗಿ, ಇನ್ನಿತರ ಕ್ರಿಯಾತ್ಮಕ ಮತ್ತು ಕಲಿಕಾ ಪೂರಕ ಸಹಪಠ್ಯ ಚಟುವಟಿಕೆಗಳನ್ನು ರೂಪಿಸಲು ಶಾಲೆಗಳಿಗೆ ಅವಕಾಶವಿರುತ್ತದೆ.
ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಶಾಲಾ ಮುಖ್ಯ ಶಿಕ್ಷಕರು ಶಾಲಾ ಎಸ್.ಡಿ.ಎಂ.ಸಿ, ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ, ಮಕ್ಕಳ ದಿನಾಚರಣೆಯನ್ನು ಅರ್ಥಪೂರ್ಣವಾಗಿ, ಹಬ್ಬದ ರೀತಿಯಲ್ಲಿ ಆಚರಣೆ ಮಾಡುವುದು. ಈ ಬಗ್ಗೆ ರಾಜ್ಯದ ಎಲ್ಲಾ ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಜಿಲ್ಲಾ ಉಪನಿರ್ದೇಶಕರು (ಆಡಳಿತ) ಹಾಗೂ ಉಪನಿರ್ದೇಶಕರು (ಅಭಿವೃದ್ಧಿ) ಹಾಗೂ ಡಯಟ್ ಪ್ರಾಂಶುಪಾಲರು ತಮ್ಮ ವ್ಯಾಪ್ತಿಯ ಎಲ್ಲಾ ಪ್ರಾಥಮಿಕ/ ಪ್ರೌಢಶಾಲೆಗಳಲ್ಲಿ ಕಡ್ಡಾಯವಾಗಿ ಮಕ್ಕಳ ದಿನಾಚರಣೆಯನ್ನು ಆಚರಿಸುವಂತೆ ಕ್ರಮವಹಿಸಲು ತಿಳಿಸಿದೆ ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ.












Click it and Unblock the Notifications