DK Shivakumar: ಮಗನನ್ನು ವಕೀಲನನ್ನಾಗಿ ಮಾಡಿದ್ದು ಯಾಕೆ ? ಕಾರಣ ಬಿಚ್ಚಿಟ್ಟ ಡಿಕೆ ಶಿವಕುಮಾರ್
ಬೆಂಗಳೂರು, ಆಗಸ್ಟ್ 15: ನಾನು ವಿದ್ಯಾರ್ಥಿಯಾಗಿದ್ದಾಗ ವಕೀಲನಾಗಬೇಕು ಎಂಬ ಆಸೆ ಇತ್ತು. ಆದರೆ ಪದವಿ ಓದುತ್ತಿರುವಾಗಲೇ ನನಗೆ ಪಕ್ಷದ ಟಿಕೆಟ್ ನೀಡಲಾಯಿತು. ಹೀಗಾಗಿ ನಾನು ನನ್ನ ಮಗನನ್ನು ಕಾನೂನು ಓದಿಸುತ್ತಿದ್ದೇನೆ. ನನಗೆ ದಿನ ಬೆಳಗಾದರೆ ನ್ಯಾಯಾಲಯದ ನೋಟೀಸ್ ಬರುತ್ತಿರುತ್ತದೆ. ನೀನಾದರೂ ವಕೀಲನಾಗು ಎಂದು ಆತನಿಗೆ ಹೇಳಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ಕನಕಪುರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ನ್ಯಾಯಾಲಯಗಳ ಸಂಕೀರ್ಣವನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಉದ್ಘಾಟಿಸಿ ಮಾತನಾಡಿ, ಕನಕಪುರ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಯ ವಕೀಲರಿಗೆ ಏನೇ ಸಮಸ್ಯೆ ಬಂದರೂ ಅವರ ಸಹೋದರನಂತೆ ನಿಂತು ಬಗೆಹರಿಸುತ್ತೇನೆ. ಇದು ನನ್ನ ಕರ್ತವ್ಯ ಎಂದು ತಿಳಿಸಿದರು.

ಕನಕಪುರದಲ್ಲಿರುವ 240 ವಕೀಲರಿಗೆ ನಾನು ಕೃತಜ್ಞತೆ ಅರ್ಪಿಸುತ್ತೇನೆ. ಎಲ್ಲರೂ ಬೆಂಗಳೂರಿನಲ್ಲಿ ಬದುಕಬೇಕು ಎಂದು ಬಯಸುತ್ತಾರೆ. ಆದರೆ ನೀವು ನಮ್ಮ ತಾಲೂಕು ಜನರಿಗಾಗಿ ಸೇವೆ ಮಾಡುತ್ತಿರುವುದು ಸಂತೋಷದ ವಿಚಾರ. ಗ್ರಾಮೀಣ ಭಾಗದ ಜನರ ಪರ ವಕಾಲತು ವಹಿಸಲು ಮುಂದಾಗಿದ್ದೀರಿ. ನಿಮ್ಮ ಸಮಸ್ಯೆ ಏನೇ ಇದ್ದರೂ ಚಿಂತಿಸಬೇಡಿ. ನಾನು ನಿಮ್ಮ ಸಹೋದರನಂತೆ ಇದ್ದೇನೆ. ನನಗೆ ನ್ಯಾಯಾಂಗ ವ್ಯವಸ್ಥೆ ಮೇಲೆ ಅಪಾರ ನಂಬಿಕೆ ಇದೆ. ಜನ ದೇವಾಲಯಕ್ಕೆ ಹೋಗಿ ಪ್ರಾರ್ಥನೆ ಮಾಡಿದಂತೆ ನ್ಯಾಯಾಲಯದಲ್ಲಿ ನ್ಯಾಯ ಸಿಗುತ್ತದೆ ಎಂಬ ನಂಬಿಕೆಯಿಂದ ಬರುತ್ತಾರೆ. ಅಂತಹವರಿಗೆ ನೀವು ನ್ಯಾಯ ಒದಗಿಸಿಕೊಡುವ ವಿಶ್ವಾಸ ನನಗಿದೆ ಎಂದು ತಿಳಿಸಿದರು.
ನಾನು ಕಳೆದ 35 ವರ್ಷಗಳಿಂದ ಇಲ್ಲಿನ ಜನಪ್ರತಿನಿಧಿಯಾಗಿದ್ದೇನೆ. ಈ ಜಿಲ್ಲೆಯಲ್ಲಿ ಕೆಲಸ ಮಾಡಿದ ನ್ಯಾಯಾಧೀಶರ ಬಗ್ಗೆ ನನಗೆ ಹೆಮ್ಮೆ ಇದೆ. ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರದ ವಕೀಲರು ಬಹಳ ಶಿಸ್ತಿನಿಂದ ಕೆಲಸ ಮಾಡುತ್ತಿದ್ದಾರೆ. ಇವರ ಬಗ್ಗೆ ನನಗೆ ಯಾರೊಬ್ಬರು ಒಂದು ದಿನ ದೂರು ನೀಡಿಲ್ಲ. ಜನಪ್ರತಿನಿಧಿಯಾಗಿ ಈ ಕಟ್ಟಡ ನಿರ್ಮಾಣ ನನ್ನ ಕರ್ತವ್ಯ. ರಾಮನಗರದಲ್ಲೂ ನ್ಯಾಯಾಲಯ ಕಟ್ಟಡ ನಿರ್ಮಾಣ ನಿರ್ಮಾಣ ಮಾಡಬೇಕಿದೆ. ಈ ಬಗ್ಗೆ ನಾವು ಪ್ರಸ್ತಾವನೆ ಸಲ್ಲಿಸುತ್ತೇವೆ ಎಂದು ಹೇಳಿದರು.
ನಾವು ನಮ್ಮ ಮೂಲವನ್ನು ಮರೆತರೆ ಯಶಸ್ಸು ಸಾಧಿಸುವುದಿಲ್ಲ ಎಂಬುದನ್ನು ನಾನು ನಂಬಿದ್ದೇನೆ. ನ್ಯಾಯಮೂರ್ತಿ ನಾಗರತ್ನ ಅವರಿಲ್ಲದಿದ್ದರೆ ಇಂದು ಈ ನ್ಯಾಯಾಲಯದ ಕಟ್ಟಡ ನಿರ್ಮಾಣವಾಗುತ್ತಿರಲಿಲ್ಲ. ಇದೇ ತಾಲೂಕಿನವರಾದ ಅವರು ಜಿಲ್ಲಾ ಮುಖ್ಯ ನ್ಯಾಯಾಧೀಶರಾಗಿದ್ದರು. ಅವರ ತಂದೆ ವೆಂಕಟರಮಣಯ್ಯ ಅವರು ನಮ್ಮ ಊರಿನ ಅಳಿಯ. ಅವರು ಮುಖ್ಯ ನ್ಯಾಯಾಧೀಶರಾಗಿದ್ದರು. ನಾಗರತ್ನ ಅವರು ಈ ಜಾಗಕ್ಕೆ ಬಂದು, ಇಲ್ಲಿನ ಸಮಸ್ಯೆ ಅರಿತು ಅದನ್ನು ಬಗೆಹರಿಸಿ ಆದೇಶ ಹೊರಡಿಸಿದರು. ಅವರಿಗೆ ನಾನು ಇಲ್ಲಿಂದಲೇ ನಮಿಸುತ್ತೇನೆ ಎಂದರು.
ನಾನು ರಾಜ್ಯದ ಡಿಸಿಎಂ ಆದರೂ ಕನಕಪುರಕ್ಕೆ ಬಂದರೆ ಸಾಮಾನ್ಯ ಸೇವಕ. ಈ ಜನರು ನನಗೆ ಪ್ರೀತಿ, ಶಕ್ತಿ ನೀಡಿ, ನನ್ನನ್ನು ಅವರ ಮನೆ ಮಗನಂತೆ ಬೆಳೆಸಿದ್ದಾರೆ. ಸತತ 8 ಬಾರಿ ವಿಧಾನಸಭೆಗೆ ಆರಿಸಿದ್ದಾರೆ. ಸಾರ್ವಜನಿಕ ಸೇವಕನಾಗಿ ನಾನು ನನ್ನ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಈ ತಾಲೂಕು ಹಾಲು ಹಾಗೂ ರೇಷ್ಮೆ ಉತ್ಪಾದನೆಗೆ ಹೆಸರುವಾಸಿ. ಅತ್ಯಂತ ಶ್ರೇಷ್ಠವಾದ ರೇಷ್ಮೆ ಬೆಳೆಯಲಾಗುತ್ತದೆ. ಇಲ್ಲಿ ಅತ್ಯಂತ ದೊಡ್ಡ ಡೈರಿ ಇದೆ. ಗುಜರಾತ್ ನಂತರ ಅತ್ಯಂತ ದೊಡ್ಡ ಡೈರಿ ಇದಾಗಿದೆ. ಇದು ರಾಜ್ಯದ ಗಡಿ ಭಾಗವಾಗಿದ್ದು, ಬೆಂಗಳೂರಿಗೆ ಕುಡಿಯಲು ಕಾವೇರಿ ನೀರನ್ನು ಈ ಭಾಗದ ಮೂಲಕ ನೀಡಲಾಗುತ್ತದೆ ಎಂದರು.
ಕನಕಪುರ ಪಟ್ಟಣ ಈ ಹಿಂದೆ ಹೇಗಿತ್ತು, ಈಗ ಹೇಗಾಗಿದೆ, ಇನ್ನು ಯಾವ ರೀತಿ ಆಗಲು ಸಾಧ್ಯ? ಎಂದು ನೀವೇ ನೋಡಬೇಕು. ಪ್ರತಿ ಹಳ್ಳಿಯಲ್ಲೂ ಬೆಂಗಳೂರಿನಲ್ಲಿರುವಂತೆ ಮೂಲಭೂತ ಸೌಕರ್ಯ ಒದಗಿಸಲಾಗಿದೆ. ದೇವರು ವರ ಹಾಗೂ ಶಾಪ ನೀಡುವುದಿಲ್ಲ. ಕೇವಲ ಅವಕಾಶ ಮಾತ್ರ ನೀಡುತ್ತಾನೆ. ನಮಗೆ ಸಿಕ್ಕ ಅವಕಾಶದಲ್ಲಿ ನಾವು ಯಾವ ರೀತಿ ಸಹಾಯ ಮಾಡುತ್ತೇವೆ ಎಂಬುದು ಮುಖ್ಯ ಎಂದರು.












Click it and Unblock the Notifications