ವಿಧಾನಸಭಾ ಚುನಾವಣೆಗೂ ಮಹಿಳಾ ಮೀಸಲಾತಿ: ಭರ್ಜರಿ ಗುಡ್ನ್ಯೂಸ್ ಕೊಟ್ಟ ಡಿ ಕೆ ಶಿವಕುಮಾರ್
ಬೆಂಗಳೂರು, ನವೆಂಬರ್ 13: ಭವಿಷ್ಯದಲ್ಲಿ ಮಹಿಳಾ ಮೀಸಲಾತಿಯನ್ನು ಯಾರೂ ಸಹ ತಪ್ಪಿಸಲು ಆಗುವುದಿಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಶೇ. 33 ರಷ್ಟು ಮಹಿಳಾ ಮೀಸಲಾತಿಗೆ ಎರಡು ಮೂರು ಪಕ್ಷಗಳು ಅಂಕಿತ ಹಾಕಿವೆ. ಮಹಿಳಾ ನಾಯಕರ ಅವಶ್ಯಕತೆಯಿದೆ. ಈಗಾಗಲೇ ಸ್ಥಳೀಯ ಸಂಸ್ಥೆಗಳಲ್ಲಿ ಶೇ.50 ರಷ್ಟು ಮೀಸಲಾತಿಯಿದೆ. ಮುಂದಿನ ಚುನಾವಣೆ ಹೊತ್ತಿಗೆ ವಿಧಾನಸಭಾ ಚುನಾವಣೆಗೂ ಮಹಿಳಾ ಮೀಸಲಾತಿ ಬರಬಹುದು. ನಾವು ಸಹ ಇದರ ಬಗ್ಗೆ ತಯಾರಿ ನಡೆಸಿಕೊಳ್ಳುತ್ತಿದ್ದೇವೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.
ಬುಧವಾರ ನಡೆದ ಅಂತರರಾಷ್ಟ್ರೀಯ ಮಹಿಳಾ ಉದ್ಯಮಿಗಳ ಸಂಘಗಳ ಪ್ರತಿನಿಧಿಗಳ ಸಮಾವೇಶದಲ್ಲಿ ಭಾಗವಹಿಸಿ ಸಾಧಕಿಯರಿಗೆ 'ಉಬುಂತು' ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದ ಡಿ ಕೆ ಶಿವಕುಮಾರ್ ಅವರು, ತನ್ನ ಸ್ವಂತ ಶಕ್ತಿಯಿಂದ ನಾಯಕಿಯರು ಬೆಳೆಯುತ್ತಿಲ್ಲ. ಹೀಗೆ ಬೆಳೆದವರಿಗೆ ಹೆಚ್ಚು ಶಕ್ತಿ ನೀಡುವ ಕೆಲಸ ಮಾಡಬೇಕಿದೆ. ಉದಾಹರಣೆಗೆ ಡಿ.ಕೆ.ಶಿವಕುಮಾರ್ ಮಗಳು, ತಾಯಿ, ಹೆಂಡತಿ ಹೀಗೆ ಪ್ರಭಾವ ಇರುವವರೇ ಬರುವಂತಾಗಿದೆ. ಹೊಸ ನಾಯಕಿಯರನ್ನು ಗುರುತಿಸಿ ಬೆಳೆಸಬೇಕಿದೆ ಎಂದರು.

ಗ್ರಾಮೀಣ ಭಾಗದಲ್ಲಿ ತಕ್ಕಮಟ್ಟಿಗೆ ಮಹಿಳೆಯರು ಒಂದಷ್ಟು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ನಗರ ಭಾಗದಲ್ಲಿಯೂ ಮಹಿಳೆಯರ ಪಾತ್ರ ಹಿರಿದಿದೆ. ಕುಟುಂಬದಲ್ಲಿ ಮಹಿಳೆಯರ ಪಾತ್ರವೇ ಮುಖ್ಯವಾದುದು. ಯಾವುದೇ ಆಹ್ವಾನ ಪತ್ರಿಕೆ ನೀಡುವಾಗ ಡಿ.ಕೆ.ಶಿವಕುಮಾರ್ ಹೆಸರು ಬರೆಯುವ ಮುಂಚಿತವಾಗಿ ಶ್ರೀಮತಿಯ ಹೆಸರು ಬರೆಯುತ್ತಾರೆ. ಶಿವ ಪಾರ್ವತಿ, ಲಕ್ಷ್ಮಿ ವೆಂಕಟೇಶ್ವರ ಎಂದು ಕರೆಯುತ್ತಾ ಎಂದರು.
ಕೊರೋನಾ ಸಂದರ್ಭದಲ್ಲಿ ಸದನದಲ್ಲಿ ಮಾತನಾಡುವಾಗ ಹಲವರು ಕಾರ್ಮಿಕರಿಗೆ ಪರಿಹಾರ ನೀಡಬೇಕು ಎಂದು ಹೇಳುತ್ತಿದ್ದರು. ಆಗ ನಾನು ಉದ್ಯೋಗ ಸೃಷ್ಟಿ ಮಾಡಿರುವ ಉದ್ಯೋಗದಾತರಿಗೂ ಪರಿಹಾರ ನೀಡಬೇಕು ಎಂದು ವಾದಿಸಿದ್ದೆ. ಕೇಂದ್ರ ಸರ್ಕಾರ 20 ಲಕ್ಷ ಕೋಟಿ ನೀಡುತ್ತೇನೆ ಎಂದರು ಎಲ್ಲಿಯೂ ಇದು ಕಾಣಲಿಲ್ಲ ಎಂದು ಡಿ ಕೆ ಶಿವಕುಮಾರ್ ಅವರು ಹೇಳಿದರು.
ಯಶಸ್ವಿ ಪುರುಷನ ಹಿಂದೆ ಮಹಿಳೆಯ ಪಾತ್ರ ಇದ್ದೇ ಇರುತ್ತದೆ ಎನ್ನುವುದು ನನ್ನ ನಂಬಿಕೆ. ಹೆಣ್ಣು ಕುಟುಂಬದ ಕಣ್ಣು. ಮಹಿಳೆಯರು ರಾಜಕೀಯ ನಾಯಕತ್ವದ ಜೊತೆಯಲ್ಲಿ ಉದ್ದಿಮೆ ಹಾಗೂ ಇತರೇ ಕ್ಷೇತ್ರಗಳಲ್ಲೂ ನಾಯಕತ್ವ ಬೆಳೆಸಿಕೊಳ್ಳಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ಮಹಿಳೆಯರು ಸಾಕಷ್ಟು ಸವಾಲುಗಳನ್ನು ಎದುರಿಸಿ ಬೆಳೆಯುವ ಪರಿಸ್ಥಿತಿಯಿದೆ. ನನಗೂ ಇದರ ಬಗ್ಗೆ ಅರಿವಿದೆ. ಯಾವುದೇ ವ್ಯವಹಾರ ತೆಗೆದುಕೊಂಡರು ಮಹಿಳೆಯರು ಎಂದು ಇತರರು ರಿಯಾಯಿತಿ ನೀಡುವುದಿಲ್ಲ. ಕಾರ್ಪೋರೇಟ್ ವಲಯದಲ್ಲಿಯೂ ಈಗ ಹೆಚ್ಚು ಮುಂದೆ ಬರುತ್ತಿದ್ದಾರೆ. ನಿಮ್ಮ ಖಾತೆಯಲ್ಲಿ ಹೆಚ್ಚು ಹಣವಿದ್ದರೆ ಮಾತ್ರ ಬ್ಯಾಂಕ್ ಗಳು ಸಹ ಹೆಚ್ಚು ಸಹಾಯ ಮಾಡಲು ಮುಂದೆ ಬರುತ್ತವೆ" ಎಂದರು.
ರಾತ್ರಿ ಹೊತ್ತು ಹೋಟೆಲ್ ಸೇರಿದಂತೆ ಇತರೇ ಉದ್ದಿಮೆಗಳನ್ನು ನಡೆಸಲು ಪರವಾನಗಿ ನೀಡಬೇಕು ಎನ್ನುವ ಬೇಡಿಕೆಯಿದೆ. ಆಗ ಮಹಿಳಾ ಸುರಕ್ಷತೆಯೂ ಮುಖ್ಯವಾಗುತ್ತದೆ. ಈಗ ಎಐ ತಂತ್ರಜ್ಞಾನ ಸೇರಿದಂತೆ ಇತರೇ ತಂತ್ರಜ್ಞಾನ ಮಹಿಳಾ ರಕ್ಷಣೆಗೆ ನೆರವಾಗಿದೆ. ಮಹಿಳೆಯರು ಒಟ್ಟಾಗಿ ಬೆಳೆಯಬೇಕು. ಜೊತೆಗೂಡುವುದು ಆರಂಭ, ಜೊತೆಗೂಡಿ ಚರ್ಚೆ ನಡೆಸುವುದು ಪ್ರಗತಿ, ಜೊತೆಗೂಡಿ ಕೆಲಸ ಮಾಡುವುದು ಯಶಸ್ಸು. ಮಹಿಳೆಯರು ತಾವು ಕಂಡ ಕನಸನ್ನು ನನಸು ಮಾಡಿಕೊಳ್ಳಲು ಶ್ರಮ, ಬದ್ಧತೆ, ಶಿಸ್ತು ಹಾಗೂ ತೊಡಗಿಸಿಕೊಳ್ಳುವಿಕೆ ಮುಖ್ಯ. ನನ್ನ ಕುಟುಂಬದಲ್ಲಿಯೂ ಸಹ ನನ್ನ ಪತ್ನಿ, ಮಕ್ಕಳ ಹಾಗೂ ಇಡೀ ಸಂಸಾರದ ಜವಾಬ್ದಾರಿಯನ್ನು ಹೊತ್ತು ಮುನ್ನಡೆಸಿದ್ದಾರೆ ಎಂದರು.












Click it and Unblock the Notifications