ರಾಜಕೀಯ ಚರ್ಚೆಯ ಮಗ್ಗಲು ಬದಲಿಸಲು ಡಿಕೆಶಿ ಮಾಡಿದ್ರಾ ‘ಆ’ ತಂತ್ರ?
ಬೆಂಗಳೂರು, ಮಾರ್ಚ್ 05: ಇತ್ತೀಚೆಗೆ ರಾಜಕೀಯವಾಗಿ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಇದೀಗ ಸ್ಯಾಂಡಲ್ ವುಡ್ ನವರ ನಟ್ಟು ಬೋಲ್ಟು ಟೈಟ್ ಮಾಡುವ ಎಚ್ಚರಿಕೆ ನೀಡುವ ಮೂಲಕ ಹೊಸದೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರೆ. ಆದರೆ ಅವರು ಹೀಗೆ ಮಾಡಿರುವುದು ತಮ್ಮ ಸುತ್ತ ಸುತ್ತಿಕೊಂಡಿದ್ದ ರಾಜಕೀಯದ ಊಹಾಪೋಹದ ಚರ್ಚೆಯ ಮಗ್ಗಲು ಬದಲಿಸುವ ತಂತ್ರನಾ? ಹೀಗೊಂದು ಅನುಮಾನ ಸಾರ್ವಜನಿಕ ವಲಯದಲ್ಲಿ ಹುಟ್ಟಿಕೊಂಡಿದೆ.
ಕುಂಭಮೇಳವನ್ನು ವಿರೋಧಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಾತಿಗೆ ಸೊಪ್ಪು ಹಾಕದೆ ಪ್ರಯಾಗ್ ರಾಜ್ ನ ಕುಂಭಮೇಳದಲ್ಲಿ ಸ್ನಾನ ಮಾಡಿ ಬಂದ ನಂತರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಷ್ಟ್ರಮಟ್ಟದ ಸುದ್ದಿಯಾಗಿದ್ದರು. ಇದಾದ ನಂತರ ಕೊಯಮತ್ತೂರಿನ ಈಶಾ ಪೌಂಡೇಶನ್ ನ ಸದ್ಗುರು ಜಗ್ಗಿ ವಾಸುದೇವ್ ಅವರು ಆಯೋಜಿಸಿದ್ದ ಶಿವರಾತ್ರಿ ಕಾರ್ಯಕ್ರಮದಲ್ಲಿ ಕೇಂದ್ರ ಗೃಹಮಂತ್ರಿ ಅಮಿತ್ ಶಾ ಅವರೊಂದಿಗೆ ವೇದಿಕೆ ಹಂಚಿಕೊಂಡು ಇನ್ನಷ್ಟು ಸುದ್ದಿಗೆ ಗ್ರಾಸರಾಗಿದ್ದರು. ಇದೀಗ ಅದೆಲ್ಲವನ್ನು ಬದಿಗೆ ಸರಿಸಿ ಸಿನಿಮಾದವರ ನಟ್ಟು ಬೋಲ್ಟು ಟೈಟ್ ಮಾಡುವ ಎಚ್ಚರಿಕೆ ನೀಡಿ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಳ್ಳುವುದರೊಂದಿಗೆ ಹೊಸದೊಂದು ಚರ್ಚೆಗೆ ದಾರಿ ಮಾಡಿಕೊಟ್ಟಿದ್ದಾರೆ.

ಕಳೆದ ಕೆಲವು ತಿಂಗಳಿನಿಂದೀಚೆಗೆ ಡಿ.ಕೆ.ಶಿವಕುಮಾರ್ ಒಂದಲ್ಲ ಒಂದು ರೀತಿಯಲ್ಲಿ ಸದಾ ಸುದ್ದಿಯಲ್ಲಿರುವುದು ಕಂಡು ಬರುತ್ತಿದೆ. ಆ ಮೂಲಕ ಅವರು ಕೇವಲ ರಾಜ್ಯ ಮಾತ್ರವಲ್ಲದೆ, ರಾಜ್ಯದ ಆಚೆಗೂ ಅವರತ್ತ ನೋಡುವಂತೆ ಮಾಡುತ್ತಿದ್ದಾರೆ. ಇಷ್ಟಕ್ಕೂ ಅವರಿಗೆ ಸುದ್ದಿಯಲ್ಲಿರುವುದು ಖುಷಿ ಕೊಡುವ ವಿಚಾರವೇನಲ್ಲ. ಆದರೆ ಕೆಲವೊಂದು ಸನ್ನಿವೇಶಗಳು ಅವರನ್ನು ಮುನ್ನಲೆಗೆ ಎಳೆದುಕೊಂಡು ಬರುತ್ತಿದ್ದು, ಚರ್ಚೆಗೂ ವೇದಿಕೆ ಮಾಡಿಕೊಡುತ್ತಿದೆ. ಕೋವಿಡ್ ನಂತರದ ದಿನಗಳಿಂದ ಇಲ್ಲಿವರೆಗೆ ಡಿ.ಕೆ.ಶಿವಕುಮಾರ್ ತೆಪ್ಪಗೆ ಕುಳಿತದ್ದೇ ಕಡಿಮೆ. ಏನಾದರೊಂದು ವಿಚಾರ ಅವರನ್ನು ಮುನ್ನಲೆಗೆ ತರುತ್ತಿದೆ.
ಅದು ರಾಜಕೀಯ ಪ್ರೇರಿತ ಹೋರಾಟವೇ
ಈ ಹಿಂದೆ ವಿರೋಧ ಪಕ್ಷದಲ್ಲಿ ಕುಳಿತಿದ್ದಾಗ ಹೇಗಾದರೂ ಮಾಡಿ ಬಿಜೆಪಿಯನ್ನು ಮಣಿಸಿ ರಾಜ್ಯದಲ್ಲಿ ಕಾಂಗ್ರೆಸ್ ನ್ನು ಅಧಿಕಾರಕ್ಕೆ ತರಬೇಕೆಂದು ಪಣ ತೊಟ್ಟಿದ್ದರು. ಅದರಂತೆ ರಾಮನಗರ ಜಿಲ್ಲೆಯಿಂದ ಬೆಂಗಳೂರಿನ ತನಕ ಪಾದಯಾತ್ರೆ ಮಾಡಿದ್ದರು. ಇದು ಅಷ್ಟು ಸುಲಭದ್ದಾಗಿರಲಿಲ್ಲ. ಆದರೆ ನಮ್ಮ ನೀರು ನಮ್ಮ ಹಕ್ಕು ಎಂಬ ಘೋಷಣೆಯೊಂದಿಗೆ ಆರಂಭವಾದ ಪಾದಯಾತ್ರೆಗೆ ಹಲವು ವಿಘ್ನಗಳು ಬಂದಿತ್ತಾದರೂ ಅದೆಲ್ಲವನ್ನು ಎದುರಿಸಿ ಪಾದಯಾತ್ರೆ ಯಶಸ್ವಿಗೊಳಿಸುವಲ್ಲಿ ಅವರು ಸಫಲರಾದರು ಎನ್ನುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ನಮ್ಮ ನೀರು ನಮ್ಮ ಹಕ್ಕು ಪಾದಯಾತ್ರೆ ನಾಡಿನ ಹಿತದೃಷ್ಟಿಯಿಂದ ನಡೆಸಿದ್ದಾಗಿ ಡಿ.ಕೆ.ಶಿವಕುಮಾರ್ ಹೇಳಿಕೊಂಡರೂ ಅದನ್ನು ಒಪ್ಪಿಕೊಳ್ಳುವುದು ಕಷ್ಟವೇ.

ಏಕೆಂದರೆ ಅಲ್ಲಿ ತನಕ ಕಾಂಗ್ರೆಸ್ ನಾಯಕರು ಸಂಪೂರ್ಣ ಮಲಗಿಯೇ ಬಿಟ್ಟಿದ್ದರು. ಏಕೆಂದರೆ ಐದು ವರ್ಷಗಳ ಕಾಲ ಆಡಳಿತ ಮಾಡಿದ್ದರೂ 2018ರ ಚುನಾವಣೆಯಲ್ಲಿ ಸೋತಿದ್ದರು. ಜೆಡಿಎಸ್ ನಾಯಕರ ಕಾಲು ಹಿಡಿದು ಸಮ್ಮಿಶ್ರ ಸರ್ಕಾರವನ್ನು ಆಡಳಿತಕ್ಕೆ ತಂದಿದ್ದರೂ ಬಿಜೆಪಿಯ ಆಪರೇಷನ್ ಕಮಲದ ಹೊಡೆತಕ್ಕೆ ಮತ್ತೆ ಅಧಿಕಾರ ಕಳೆದುಕೊಂಡು ಮನೆ ಸೇರಿದ್ದರು. ಇದರ ಜತೆಗೆ ಕೋವಿಡ್ ಬಂದಿದ್ದರಿಂದ ಸಾರ್ವಜನಿಕ ಕಾರ್ಯಕ್ರಮಗಳು ನಡೆಯುತ್ತಿರಲಿಲ್ಲ.
ಪಕ್ಷದ ನಾಯಕರು ಒಂದೆಡೆ ಸೇರುವಂತೆಯೂ ಇರಲಿಲ್ಲ. ಇಂತಹ ಸಂದರ್ಭದಲ್ಲಿ ಎಲ್ಲ ನಾಯಕರನ್ನು ಒಂದೆಡೆ ಸೇರಿಸುವ ಮತ್ತು ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವ, ಜೊತೆಗೆ ಆಡಳಿತದಲ್ಲಿದ್ದ ಬಿಜೆಪಿ ಸರ್ಕಾರದ ಮುಂದೆ ಶಕ್ತಿ ಪ್ರದರ್ಶನ ಮಾಡುವ ಅನಿವಾರ್ಯತೆ ಇದ್ದ ಕಾರಣದಿಂದಾಗಿ ಅವತ್ತು ರಾಜಕೀಯ ಲಾಭಕ್ಕಾಗಿ ಡಿ.ಕೆ.ಶಿವಕುಮಾರ್ ಮೇಕೆದಾಟು ಪಾದಯಾತ್ರೆಯನ್ನು ಆರಂಭಿಸಿದ್ದರು. ಅದನ್ನು ಅವತ್ತು ಯಾರೂ ಕೂಡ ರಾಜಕೀಯೇತರ ಹೋರಾಟ ಎಂದು ಒಪ್ಪಿಕೊಳ್ಳಲು ಸಾಧ್ಯವೇ ಇರಲಿಲ್ಲ. ಆ ಪಾದಯಾತ್ರೆ ಮತ್ತು ಹೋರಾಟ ಕಾಂಗ್ರೆಸ್ ಬ್ಯಾನರ್ ಅಡಿಯಲ್ಲೇ ಆಯೋಜನೆಯಾಗಿತ್ತು.

ಅವತ್ತಿನ ವಿಚಾರ ಇವತ್ತು ಪ್ರಸ್ತಾಪಿಸುವ ಅಗತ್ಯವಿತ್ತಾ?
ಮೇಕೆದಾಟು ಪಾದಯಾತ್ರೆಯಿಂದ ನಮ್ಮ ರಾಜ್ಯಕ್ಕೆ, ನಮ್ಮ ರೈತರಿಗೆ ಎಷ್ಟರ ಮಟ್ಟಿಗೆ ಲಾಭವಾಯಿತೋ ಗೊತ್ತಿಲ್ಲ. ಆದರೆ ಕಾಂಗ್ರೆಸ್ ಗೆ ಸಹಕಾರಿಯಾಯಿತು ಎನ್ನುವುದಕ್ಕೆ ಇವತ್ತು ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿಯಾಗಿರುವುದು ಮತ್ತು ಮುಖ್ಯಮಂತ್ರಿಯಾಗುವ ಆಕಾಂಕ್ಷೆಯಲ್ಲಿರುವುದು ಸಾಕ್ಷಿಯಾಗಿದೆ. ಅವತ್ತಿನ ಪಾದಯಾತ್ರೆ ಪಕ್ಷಾತೀತವಾಗಿರಲಿಲ್ಲ. ಅದು ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ನಡೆದಿತ್ತು ಹೀಗಿರುವಾಗ ಅವತ್ತಿನ ಪಾದಯಾತ್ರೆಗೆ ಸಿನಿಮಾ ನಟ, ನಟಿಯರು, ಕಲಾವಿದರು ಪಾಲ್ಗೊಳ್ಳಲು ಸಾಧ್ಯ? ಎಂಬುದು ಚರ್ಚೆಯಲ್ಲಿರುವ ವಿಚಾರವಾಗಿದೆ.
ಅವತ್ತಿನ ಆ ವಿಚಾರವನ್ನು ಮುಂದಿಟ್ಟುಕೊಂಡು ಇವತ್ತೇಕೆ? ಡಿ.ಕೆ.ಶಿವಕುಮಾರ್ ಅವರು ಸ್ಯಾಂಡಲ್ವುಡ್ ಬಗ್ಗೆ ಮಾತನಾಡಿದರೋ ಗೊತ್ತಿಲ್ಲ. ಒಂದು ವೇಳೆ ಕಲಾವಿದರು ಕಾರ್ಯಕ್ರಮಕ್ಕೆ ಬಾರದೆ ಹೋದುದನ್ನು ವಿರೋಧಿಸುವುದಕ್ಕೆ ಬೇರೆಯದ್ದೇ ಧಾಟಿಯಿತ್ತು. ಆದರೆ ಎಚ್ಚರಿಕೆ ನೀಡುವಂತಹ ಹೇಳಿಕೆ ಮತ್ತು ಅದನ್ನು ಸಮರ್ಥಿಸಿಕೊಂಡು ತೊಡೆ ತಟ್ಟಿ ನಿಂತಿರುವುದು ಅಚ್ಚರಿ ಮೂಡಿಸುತ್ತಿದೆ. ಆದರೆ ಈ ನಡವಳಿಕೆ ತಮ್ಮ ಸುತ್ತಲೂ ಸುತ್ತಿಕೊಂಡಿದ್ದ ರಾಜಕೀಯದ ಚರ್ಚೆಗಳಿಂದ ಆಚೆಗೆ ಬರಲು ಇಂತಹದೊಂದು ತಂತ್ರವನ್ನು ಮಾಡಿರಬಹುದಾ? ಅಂತಹದೊಂದು ಸಂಶಯ ಮೂಡುತ್ತಿದೆ. ಮುಂದೇನಾಗುತ್ತದೆ ಕಾದು ನೋಡೋಣ.












Click it and Unblock the Notifications