Breaking; ಮಗಳ ಹೆರಿಗೆ, ಬಳ್ಳಾರಿಗೆ ಹೋಗಲು ಅನುಮತಿ ಕೇಳಿದ ರೆಡ್ಡಿ
ಬೆಂಗಳೂರು, ಸೆಪ್ಟೆಂಬರ್ 29: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಬಳ್ಳಾರಿಗೆ ಭೇಟಿ ನೀಡಲು ಅವಕಾಶ ನೀಡುವಂತೆ ಕೋರಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಶುಕ್ರವಾರ ಅರ್ಜಿಯ ತೀರ್ಪನ್ನು ಕೋರ್ಟ್ ಪ್ರಕಟಿಸಲಿದೆ.
ಪುತ್ರಿಯ ಹೆರಿಗೆಗಾಗಿ ಎರಡು ತಿಂಗಳ ಕಾಲ ಬಳ್ಳಾರಿಯಲ್ಲಿರಲು ಅವಕಾಶ ನೀಡುವಂತೆ ಜನಾರ್ದನ ರೆಡ್ಡಿ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ ಸಿಬಿಐ ಎರಡು ತಿಂಗಳ ಕಾಲ ಜನಾರ್ದನ ರೆಡ್ಡಿ ಬಳ್ಳಾರಿಯಲ್ಲಿ ವಾಸ್ತವ್ಯ ಹೂಡಲು ಆಕ್ಷೇಪ ವ್ಯಕ್ತಪಡಿಸಿತ್ತು.
ವಕೀಲರ ಮೂಲಕ ಜನಾರ್ದನ ರೆಡ್ಡಿ ಮತ್ತೊಂದು ಅರ್ಜಿ ಸಲ್ಲಿಕೆ ಮಾಡಿದ್ದು, ಕನಿಷ್ಠ ಒಂದು ತಿಂಗಳಾದರೂ ಬಳ್ಳಾರಿಯಲ್ಲಿರಲು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಶುಕ್ರವಾರ ಈ ಅರ್ಜಿಯ ವಿಚಾರಣೆ ನಡೆದು, ತೀರ್ಪು ಪ್ರಕಟಿಸಲಾಗುತ್ತದೆ.

ನ್ಯಾಯಮೂರ್ತಿ ಎಂ. ಆರ್. ಶಾ ನೇತೃತ್ವದ ದ್ವಿ ಸದಸ್ಯ ಪೀಠದಲ್ಲಿ ಅರ್ಜಿಯ ವಿಚಾರಣೆ ನಡೆಯಲಿದೆ. ಶುಕ್ರವಾರ ನ್ಯಾಯಪೀಠ ಮೊದಲ ಪ್ರಕರಣವಾಗಿ ಜನಾರ್ದನ ರೆಡ್ಡಿ ಅರ್ಜಿಯನ್ನು ಕೈಗೊತ್ತಿಕೊಳ್ಳಲಿದ್ದು, ತೀರ್ಪು ನೀಡಲಿದೆ.
ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಸಕ್ರಿಯರಾಗಿರುವ ಜನಾರ್ದನ ರೆಡ್ಡಿ ಆಗಸ್ಟ್ನಲ್ಲಿ ಪೋಸ್ಟ್ವೊಂದನ್ನು ಹಾಕಿದ್ದರು. ಜೀವನದ ಮತ್ತೊಂದು ಘಟ್ಟಕ್ಕೆ ...ಎರಡನೇ ಬಾರಿ ತಾತನಾಗುತ್ತಿರುವ ಸಂಭ್ರಮ ಇಂದು ನಾನು ಮಗಳು ಬ್ರಹ್ಮಣಿ, ಅಳಿಯ ರಾಜೀವ್, ಮೊಮ್ಮಗಳು ಬ್ರಮರ ಹಾಗೂ ಧರ್ಮಪತ್ನಿ ಶ್ರೀಮತಿ ಲಕ್ಷ್ಮಿ ಅರುಣಾ ಅವರೊಂದಿಗೆ ವಿಶ್ವ ವಿಖ್ಯಾತ ಹಂಪೆಯ, ದಕ್ಷಿಣ ಭಾರತದ ಕಾಶಿ ಎಂದೇ ಪ್ರಸಿದ್ಧವಾಗಿರುವ ಶ್ರೀ ವಿರೂಪಾಕ್ಷೇಶ್ವರನ ದರ್ಶನ ಪಡೆದು ಕೃತಾರ್ಥರಾದೆವು.
ಮಗಳು ಬ್ರಹ್ಮಣಿ ಎರಡನೇ ಮಗುವಿನ ನೀರಿಕ್ಷೆಯಲ್ಲಿದ್ದು ಅದರ ಸಂಭ್ರಮವನ್ನು ಐತಿಹಾಸಿಕ ಹಂಪೆಯ ಪ್ರಮುಖ ಸ್ಥಳಗಳಲ್ಲಿ ತೆಗೆದುಕೊಂಡ ಛಾಯಾ ಚಿತ್ರಗಳನ್ನು ತಮ್ಮೊಂದಿಗೆ ಹಂಚಿಕೊಳ್ಳಲು ಅತೀವ ಸಂತೋಷವಾಗುತ್ತಿದೆ. ನಿಮ್ಮೆಲ್ಲರ ಶುಭ ಹಾರೈಕೆ ಸದಾ ನಮ್ಮ ಕುಟುಂಬದ ಮೇಲಿರಲಿ ಎಂದು ಹೇಳಿದ್ದರು.
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಸೇರಿದ್ದ ಜನಾರ್ದನ ರೆಡ್ಡಿಗೆ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಆಗ ಬಳ್ಳಾರಿಗೆ ಭೇಟಿ ನೀಡುವಂತಿಲ್ಲ ಎಂದು ಷರತ್ತು ಹಾಕಿದೆ. ಆದ್ದರಿಂದ ಬಳ್ಳಾರಿಗೆ ಭೇಟಿ ನೀಡುವ ಮೊದಲು ಜನಾರ್ದನ ರೆಡ್ಡಿ ಸುಪ್ರೀಂಕೋರ್ಟ್ ಅನುಮತಿ ಪಡೆಯಬೇಕಿದೆ.












Click it and Unblock the Notifications