ಕರ್ನಾಟಕದ ಜಲಾಶಯಗಳ ನೀರಿನಮಟ್ಟ ಮತ್ತು ಮಳೆ ವಿವರ
ಬೆಂಗಳೂರು, ಜುಲೈ 10 : ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಮುಂಗಾರು ದುರ್ಬಲವಾಗಿದ್ದು, ರಾಜ್ಯದ ಕರಾವಳಿ ಮತ್ತು ಕೆಲ ಮಲೆನಾಡು ಪ್ರದೇಶಗಳಲ್ಲಿ ಮಾತ್ರ ಮಳೆಯಾಗುತ್ತಿದೆ.
ಮುಂಗಾರು ದುರ್ಬಲ, ಮೋಡ ಬಿತ್ತನೆಗೆ ಸಚಿವ ಸಂಪುಟ ಗ್ರೀನ್ ಸಿಗ್ನಲ್
ಬೆಂಗಳೂರಿನಲ್ಲಂತೂ ಮಳೆ ಮೋಡಗಳು ಆಗಾಗ ಕಾಣಿಸಿಕೊಳ್ಳುತ್ತಿದ್ದರೂ, ಕೇವಲ ಥಳಿ ಹೊಡೆದಂತೆ ಮಾಡಿ ಹೊರಟುಹೋಗುತ್ತಿವೆ. ಕಳೆದ ಒಂದು ತಿಂಗಳಲ್ಲಿ ಹೇಳಿಕೊಳ್ಳುವಂಥ ಒಂದು ಮಳೆಯೂ ಆಗದಿರುವುದು ಭಾರೀ ಚಿಂತೆಗೆ ಕಾರಣವಾಗಿದೆ.
ಉತ್ತರಕನ್ನಡ, ದಕ್ಷಿಣಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಕಳೆದ 24 ಗಂಟೆಗಳಲ್ಲಿ ಸಾಕಷ್ಟು ಮಳೆ ಸುರಿದಿದೆ. ಉತ್ತರ ಕರ್ನಾಟಕದ ಗದಗ, ಬೀದರ, ವಿಜಯಪುರ ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆಯಾಗಿರುವುದರಿಂದ ಕೃಷಿ ಚಟುವಟಿಕೆ ಚುರುಕಿನಿಂದ ನಡೆದಿದೆ.
ಅತಿ ಹೆಚ್ಚು ಮಳೆಯೆಂದರೆ, 10 ಸೆಂ.ಮೀ. ಉತ್ತರ ಕನ್ನಡದ ಮಂಕಿಯಲ್ಲಿ ಬಿದ್ದಿದೆ. ಶಿರಾಲಿಯಲ್ಲಿ 6, ಮಂಗಳೂರಿನಲ್ಲಿ 5, ಹೊನ್ನಾವರ, ಗೇರುಸೊಪ್ಪ, ಗದಗ, ಮುಂಡರಗಿಯಲ್ಲಿ 3 ಸೆಂ.ಮೀ., ಬಸವನ ಬಾಗೇವಾಡಿ, ಬಬಲೇಶ್ವರ, ಕಾರವಾರ, ಕುಮಟಾ, ಅಂಕೋಲಾದಲ್ಲಿ 2 ಸೆಂ.ಮೀ. ಮಳೆ ಸುರಿದಿದೆ. ಇದು ವಾಡಿಕೆಗೆ ಹೋಲಿಸಿದರೆ ಅಂತಹ ಮಳೆಯೇನು ಅಲ್ಲ.
ವಾಣಿ ವಿಲಾಸ ಸಾಗರವನ್ನು ತುಂಬಿಸಿಕೊಡುವಂತೆ ಪ್ರಧಾನಿಗೆ ಮನವಿ
ಇನ್ನು, ಬೆಂಗಳೂರಿಗೆ ನೀರು ಒದಗಿಸುವ ಕೃಷ್ಣರಾಜ ಸಾಗರ ಅಣೆಕಟ್ಟೆಯಲ್ಲಿ ನೀರು ಎಂದು ತುಂಬಿಕೊಳ್ಳುವುದೋ ಎಂದು ಕಾದು ಕುಳಿತುಕೊಳ್ಳಬೇಕಾಗಿದೆ. ಮಡಿಕೇರಿಯಲ್ಲಿ ಈ ವರ್ಷವೂ ಮಳೆ ಕೈಕೊಟ್ಟಿರುವುದರಿಂದ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆಯಾಗದಿದ್ದರಿಂದ ಕೆಆರ್ಎಸ್ ಭಣಗುಟ್ಟುತ್ತಿದೆ. ಪ್ರಸ್ತುತ ಕೆಆರ್ಎಸ್ ನಲ್ಲಿರುವುದು 77.65 ಅಡಿಗಳು ಮಾತ್ರ. ಕಳೆದ ವರ್ಷ ಬರಗಾಲವಿದ್ದರು ಇದೇ ಸಮಯದಲ್ಲಿ 90.10 ಅಡಿಗಳಷ್ಟು ನೀರಿತ್ತು. ಈ ಅಣೆಕಟ್ಟಿನ ಗರಿಷ್ಠಮಟ್ಟ 124.80 ಅಡಿಗಳು.
ಉಳಿದ ಅಣೆಕಟ್ಟುಗಳ ಇಂದಿನ ನೀರಿನ ಮಟ್ಟ (ಅಡಿಗಳಲ್ಲಿ) ಕೆಳಗಿನಂತಿದೆ.
ಅಣೆಕಟ್ಟುಗಳು | ಗರಿಷ್ಠ ಮಟ್ಟ | ಇಂದಿನ ಮಟ್ಟ |
ಲಿಂಗನಮಕ್ಕಿ | 1819.00 | 1762.35 |
ಸುಪಾ | 1849.92 | 1750.80 |
ವಾರಾಹಿ | 1949.50 | 1892.69 |
ಹಾರಂಗಿ | 2859.00 | 2831.33 |
ಹೇಮಾವತಿ | 2922.00 | 2870.25 |
ಕೆಆರ್ಎಸ್ | 124.80 | 77.65 |
ಕಬಿನಿ | 2284.00 | 2263.33 |
ಭದ್ರಾ | 2158.00 | 2096.75 |
ತುಂಗಭದ್ರಾ | 1633.00 | 1590.95 |
ಘಟಪ್ರಭಾ | 2175.00 | 2105.08 |
ಮಲಪ್ರಭಾ | 2079.50 | 2038.35 |
ಆಲಮಟ್ಟಿ | 1704.81 | 1678.00 |
ನಾರಾಯಣಪುರ | 1615.00 | 1594.01 |