ಕೋಲಾರದ ದಲಿತ ಕುಟುಂಬವನ್ನು ಕೈ ಬೀಸಿ ಕರೆದ ರಾಹುಲ್ ಗಾಂಧಿ; ಇದರ ಹಿಂದೊಂದು ಕಣ್ಣೀರ ಕಥೆ
ಕೋಲಾರ, ಅಕ್ಟೋಬರ್ 11: ಕನ್ಯಾಕುಮಾರಿಯಿಂದ ಶುರುವಾಗಿರುವ ಭಾರತ್ ಜೋಡೋ ಯಾತ್ರೆಯು ಹಲವು ವಿಶೇಷತೆಗಳಿಂದ ಸುದ್ದಿ ಮಾಡುತ್ತಿದೆ. ಇಡೀ ಗ್ರಾಮವೇ ದೂರ ತಳ್ಳಿದ ಕುಟುಂಬವನ್ನು ಸನ್ನಿಹಿತಕ್ಕೆ ಸೆಳೆದುಕೊಂಡ ರಾಹುಲ್ ಗಾಂಧಿ ಮಾನವೀಯತೆ ತೋರಿದ್ದಾರೆ. ಅಸಲಿಗೆ ಇದು ಯಾವುದೇ ಈಶಾನ್ಯ ರಾಜ್ಯಗಳ ಕಥೆಯಲ್ಲ, ಬದಲಿಗೆ ನಮ್ಮದೇ ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿ ನಡೆದಿರುವ ಘಟನೆಯ ಹಿಂದಿನ ಕಹಾನಿ.
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಉಲ್ಲೇರಹಳ್ಳಿ ಗ್ರಾಮದಲ್ಲಿ ಬಾಲಕನೊಬ್ಬ ದೇವರ ಉತ್ಸವದಲ್ಲಿ ಗುಜ್ಜು ಕೋಲು ಮುಟ್ಟಿದ ಎಂಬ ಕಾರಣಕ್ಕೆ ಇಡೀ ಕುಟುಂಬಕ್ಕೆ ಬರೋಬ್ಬರಿ 60 ಸಾವಿರ ರೂಪಾಯಿ ದಂಡ ಪಾವತಿಸುವಂತೆ ಆವಾಜ್ ಹಾಕಲಾಗಿತ್ತು. ಇಲ್ಲದಿದ್ದರೆ ಗ್ರಾಮದಿಂದಲೇ ಬಹಿಷ್ಕರಿಸುವುದಾಗಿ ಬೆದರಿಕೆವೊಡ್ಡಲಾಗಿತ್ತು. ಇದೇ ಘಟನೆಗೆ ಸಂಬಂಧಿಸಿದಂತೆ ಗ್ರಾಮದಲ್ಲಿ ಮುಂದುವರಿದ ಬೆಳವಣಿಗೆಗಳು ನಡೆದಿವೆ.
ಮೇಲ್ಜಾತಿಯ ಜನರಿಂದ ನಿಂದನೆ ಎದುರಿಸಿದ ದಲಿತ ಕುಟುಂಬವೀಗ ರಾಹುಲ್ ಗಾಂಧಿ ಜೊತೆಗೆ ಭಾರತ್ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕಿದೆ. ಗ್ರಾಮವೇ ದೂರ ತಳ್ಳಿದ ದಲಿತ ಕುಟುಂಬವು ರಾಹುಲ್ ಗಾಂಧಿಯವರಿಗೆ ಸನ್ನಿಹಿತವಾಗಿದೆ. ಕಾಂಗ್ರೆಸ್ ನಾಯಕ ತೋರಿದ ಮಾನವೀಯತೆ ಹಾಗೂ ಕೋಲಾರದಲ್ಲಿ ಕುಟುಂಬದ ಮೇಲೆ ತೋರಿದ ಕ್ರೌರ್ಯತೆ ಹೇಗಿತ್ತು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಭಾರತ್ ಜೋಡೋ ಯಾತ್ರೆಯಲ್ಲಿ ದಲಿತ ಕುಟುಂಬ
ಕೋಲಾರದಲ್ಲಿ ಮೇಲ್ಜಾತಿ ಜನರಿಂದ ತೀವ್ರ ದೌರ್ಜನ್ಯವನ್ನು ಎದುರಿಸಿದ 14 ವರ್ಷದ ದಲಿತ ಬಾಲಕ ಹಾಗೂ ರಮೇಶ್ ಮತ್ತು ಶೋಭಾ ದಂಪತಿಯು ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜೊತೆಗೆ ಹೋರಾಟದ ಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ಇಡೀ ಗ್ರಾಮವೇ ದೂರ ತಳ್ಳಿದ ಕುಟುಂಬವನ್ನು ರಾಹುಲ್ ಗಾಂಧಿ ಆತ್ಮೀಯವಾಗಿ ಸನ್ನಿಹಿತಕ್ಕೆ ಸೆಳೆದರು. ಜಾತಿ ಬೇಧವನ್ನು ತೊರೆದು ಮಾನವೀಯತೆ ಮೌಲ್ಯವನ್ನು ಮೆರೆದರು. ಜಾತಿ ಜಾತಿ ಎಂದು ಬಡಿದಾಡಿಕೊಳ್ಳುವ ಮಂದಿಯ ನಡುವೆ ಮನುಷ್ಯ ಜಾತಿಯೇ ಮೇಲು ಎಂಬ ಸಂದೇಶವನ್ನು ಸಾರಿ ಹೇಳಿದರು.

ಮೇಲ್ಜಾತಿ ದೇವರ ಶುಚಿಗೆ 60,000 ರೂಪಾಯಿ!
ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಉಲ್ಲೇರಹಳ್ಳಿ ಗ್ರಾಮದಲ್ಲಿ 14 ವರ್ಷದ ದಲಿತ ಬಾಲಕನೊಬ್ಬ ಮೇಲ್ಜಾತಿ ದೇವರ ಉತ್ಸವದ ಸಂದರ್ಭದಲ್ಲಿ ಗುಜ್ಜು ಕೋಲನ್ನು ಮುಟ್ಟಿದ ಎಂಬ ಕಾರಣಕ್ಕೆ ದುಬಾರಿ ದಂಡವನ್ನು ವಿಧಿಸಲಾಗಿತ್ತು. ಮೇಲ್ಜಾತಿಯ ದೇವರನ್ನು ಶುಚಿಗೊಳಿಸುವುದಕ್ಕಾಗಿ ಬರೋಬ್ಬರಿ 60,000 ರೂಪಾಯಿ ದಂಡ ಪಾವತಿರುವಂತೆ ದಲಿತ ಕುಟುಂಬಕ್ಕೆ ಬೆದರಿಕೆ ಹಾಕಲಾಗಿತ್ತು.

ಕೋಲಾರದಲ್ಲಿ ನಡೆದಿರುವ ಬಹಿಷ್ಕಾರ ಘಟನೆ ಹಿನ್ನೆಲೆ?
ಕಳೆದ ಸೆಪ್ಟೆಂಬರ್ 19ರಂದು ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಉಲ್ಲೇರಹಳ್ಳಿ ಗ್ರಾಮದಲ್ಲಿ ದೇವರ ಉತ್ಸವ ನಡೆಯುತ್ತಿತ್ತು. ಈ ವೇಳೆ ಉತ್ಸವಕ್ಕೆ ತೆರಳಿದ್ದ 14 ವರ್ಷದ ದಲಿತ ಬಾಲಕನು ಗುಜ್ಜುಕೋಲನ್ನು ಮುಟ್ಟಿದ್ದನು. ಇದಕ್ಕೆ ನಾರಾಯಣಸ್ವಾಮಿ ಎಂಬ ಮೇಲ್ಜಾತಿಯ ನಾಯಕನೊಬ್ಬ ಬಾಲಕನಿಗೆ ಬೆದರಿಕೆ ಹಾಕಿ ಅಲ್ಲಿಂದ ಓಡಿಸಿದ್ದನು. ದಲಿತ ಜಾತಿಯ ನೀವು ಈ ಉತ್ಸವಕ್ಕೆ ಏಕೆ ಬಂದೆ, ದೇವರನ್ನು ಮುಟ್ಟಿದ್ದಕ್ಕಾಗಿ ನೀವು 60,000 ರೂಪಾಯಿ ದಂಡವನ್ನು ಪಾವತಿಸಬೇಕು. ಇಲ್ಲದಿದ್ದರೆ ಇಡೀ ಗ್ರಾಮದಿಂದಲೇ ನಿಮ್ಮ ಕುಟುಂಬವನ್ನು ಹೊರಗೆ ಹಾಕಲಾಗುವುದು. ಗ್ರಾಮದಲ್ಲಿ ನಿಮ್ಮನ್ನು ಬಹಿಷ್ಕರಿಸಲಾಗುವುದು ಎಂದು ಬೆದರಿಕೆ ಹಾಕಲಾಗಿತ್ತು. ಈ ಘಟನೆಗೆ ಸಂಬಂಧಸಿದಂತೆ ದಲಿತ ಕುಟುಂಬವು ಮಾಸ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿತ್ತು.

ದಲಿತ ಕುಟುಂಬಕ್ಕೆ ಪರಿಹಾರದ ಜೊತೆಗೆ ನಿವೇಶನ
ದಲಿತ ಕುಟುಂಬಕ್ಕೆ ದಂಡ ಹಾಗೂ ಬಹಿಷ್ಕಾರ ಹಾಕಿರುವುದಕ್ಕೆ ಸಂಬಂಧಿಸಿದಂತೆ ಮಾಸ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಅಧಿಕಾರಿಗಳು ಅಲರ್ಟ್ ಆದರು. ಕೋಲಾರ ಸಂಸದ ಎಸ್ ಮುನಿಸ್ವಾಮಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ರಾಜ್ಯ ಆಯುಕ್ತ ರಾಕೇಶ್ ಕುಮಾರ್, ಕೋಲಾರ ಜಿಲ್ಲಾಧಿಕಾರಿ ವೆಂಕಟರಾಜಾ, ಜಿಲ್ಲಾ ಎಸ್ಪಿ ಡಿ ದೇವರಾಜ್, ಸಿಇಓ ಉಮೇಶ್ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಚನ್ನಬಸಪ್ಪ ಗ್ರಾಮಕ್ಕೆ ಭೇಟಿ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯ ರಾಜ್ಯ ಆಯುಕ್ತ ರಾಕೇಶ್ ಕುಮಾರ್ ಸಮ್ಮುಖದಲ್ಲಿಯೇ ಗ್ರಾಮದ ಭೂತಮ್ಮ ದೇವಾಲಯದ ಬಾಗಿಲು ತೆಗೆಸಿ ಸಾಮೂಹಿಕ ಪೂಜೆಗೆ ಅವಕಾಶ ಕಲ್ಪಿಸಿ ಕೊಡಲಾಗಿತ್ತು. ಇದರ ಬೆನ್ನಲ್ಲೇ ಎಲ್ಲರೂ ದೇವಸ್ಥಾನದೊಳಗೆ ಹೋಗಿ ಪೂಜೆ ಸಲ್ಲಿಸುವುದಕ್ಕೆ ಅನುಕೂಲವಾಗುವಂತೆ ನಾಮಫಲಕ ಹಾಕಲು ತಹಸೀಲ್ಡಾರ್ ಸೂಚನೆ ನೀಡಿದರು.
ಗ್ರಾಮದಲ್ಲಿ ನಿಂದನೆಯನ್ನು ಎದುರಿಸಿದ ಕುಟುಂಬಕ್ಕೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ 25,000 ರೂಪಾಯಿ ಹಾಗೂ ಸಂಸದರ ವೈಯಕ್ತಿಕ ನಿಧಿಯಿಂದ 50,000 ರೂಪಾಯಿ ಜೊತೆಗೆ ಗ್ರಾಮ ಪಂಚಾಯಿತಿ ವತಿಯಿಂದ ನಿವೇಶನವನ್ನು ಮಂಜೂರು ಮಾಡಲಾಯಿತು. ಅಲ್ಲದೇ ಈ ನಿವೇಶನದಲ್ಲಿ ಮನೆ ನಿರ್ಮಿಸಿಕೊಳ್ಳುವುದಕ್ಕೆ ಸಾಲ ಸೌಲಭ್ಯದ ಭರವಸೆ ಅನ್ನು ನೀಡಲಾಗಿತ್ತು.












Click it and Unblock the Notifications