Siddeshwara Swamiji: ಶ್ರೇಷ್ಠ ಚಿಂತಕ, ಮಹಾತ್ಮನನ್ನು ಕಳೆದುಕೊಂಡಿದ್ದೇವೆ: ಡಿ.ವಿರೇಂದ್ರ ಹೆಗ್ಗಡೆ ಸಂತಾಪ
ಬೆಂಗಳೂರು, ಜನವರಿ 03: ಖ್ಯಾತ ಪ್ರವಚನಕಾರರು, ನಡೆದಾಡುವ ದೇವರು ವಿಜಯಪುರದ ಶ್ರೀ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಅಗಲಿಕೆಯಿಂದ ಶ್ರೇಷ್ಠ ಮಹಾತ್ಮರೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಸಿದ್ದೇಶ್ವರ ಶ್ರೀಗಳು ಭಾವಚಿತ್ರ ಸಹಿತ ಮಂಗಳವಾರ ಟ್ವಿಟ್ಟರ್ನಲ್ಲಿ ಬರೆದುಕೊಂಡಿರುವ ಧರ್ಮಾಧಿಕಾರಿಗಳು, ಪೂಜ್ಯ ಸಿದ್ದೇಶ್ವರ ಶ್ರೀಗಳು ಸರಳವಾಗಿ ಜೀವಿಸಿ ಅತ್ಯಂತ ಎತ್ತರಕ್ಕೇರಿದ ಧೀಮಂತರು. ಪೂಜ್ಯರ ನಿಧನದಿಂದಾಗಿ ಜ್ಯೇಷ್ಠ ಚಿಂತಕರೊಬ್ಬರನ್ನು ಕಳೆದುಕೊಂಡಂತಾಗಿದೆ. ವ್ಯಕ್ತಿ ಶಾಶ್ವತವಲ್ಲ ಆದರೆ ಚಿಂತನೆಗಳು ಶಾಶ್ವತ ಎಂಬಂತೆ ಪೂಜ್ಯ ಶ್ರೀಗಳ ಚಿಂತನೆಗಳು ಸದಾ ನಮ್ಮೊಂದಿಗೆ ಇರಲೆಂದು ಆಶಿಸುತ್ತೇನೆ ಎಂದು ಹೇಳಿದರು.
ಮಹಾನ್ ಚಿಂತಕರು, ತತ್ವಜ್ಞಾನಿಗಳು ಶ್ರೀ ಸಾಮಾನ್ಯರಿಗೆ ಜೀವನಾದರ್ಶಗಳನ್ನು ತಿಳಿಸಿಕೊಟ್ಟು, ಮಾರ್ಗದರ್ಶನಗಳನ್ನು ಕೊಟ್ಟವರು. ಜನಜೀವನನ್ನು ಅತ್ಯಂತ ಹತ್ತಿರದಿಂದ ಕಂಡವರು. ಅದೇ ಮನಸ್ಸಿನಿಂದ ಜನಸಾಮಾನ್ಯರಲ್ಲಿ ಬದಲಾವಣೆ ತರಲು ಪ್ರಯತ್ನಿಸಿದರು. ಅದಕ್ಕಾಗಿ ಮಾರ್ಗದರ್ಶನ ನೀಡಿದವರು. ತಮ್ಮ ಪ್ರವಚನಗಳ ಮೂಲಕ ಸಮಾಜದ ಓರೆ ಕೋರೆಗಳನ್ನು ತಿದ್ದಿದವರು.
ಅವರ ಪ್ರವಚನಗಳಲ್ಲಿ ನಾನು ಕಂಡಂತಹ ವಿಶೇಷತೆ ಏನೆಂದರೆ ಭಾಷಣ ಭೀಕರತೆಯನ್ನು ತೋರದ ಎಲ್ಲಾ ಧರ್ಮದ ಸಾರಸ್ವತವನ್ನು ಆಳವಾಗಿ ತಿಳಿದುಕೊಂಡು ತಮ್ಮ ಪ್ರವಚನಗಳನ್ನು ಅತ್ಯಂತ ಸರಳ ರೀತಿಯಲ್ಲಿ ಪ್ರಸ್ತುತಪಡಿಸಿ ಚಿತ್ತಾಕರ್ಷಿಸಿ ತಮ್ಮ ಪ್ರಭಾವವನ್ನು ಬೀರುತ್ತಿದ್ದರು ಎಂದರು.
ಪೂಜ್ಯರು ಜೈನ್ ಧರ್ಮದ ಸಲ್ಲೇಖನ ವ್ರತಗಳನ್ನು ಅರಿತುಕೊಂಡಿದ್ದರಿಂದ ಬಹುತೇಕ ತಮ್ಮ ಕೊನೆಯ ಭಾಗದಲ್ಲಿ ಆಹಾರ, ನೀರು ತ್ಯಾಗ ಮಾಡಿ ದೇಹ ತ್ಯಾಗವನ್ನೂ ಮಾಡಿದರು. ಅತ್ಯಂತ ಸರಳವಾಗಿ ಜೀವಿಸಿ ಅತ್ಯಂತ ಎತ್ತರಕ್ಕೇರಿದ ಧೀಮಂತ ವ್ಯಕ್ತಿತ್ವದ ಪೂಜ್ಯ ಸಿದ್ದೇಶ್ವರ ಶ್ರೀಗಳ ನಿಧನದಿಂದಾಗಿ ಶ್ರೇಷ್ಠ ಮಹಾತ್ಮರನ್ನು ಕಳೆದುಕೊಂಡಿದ್ದೇವೆ. ಆದರೆ ಅವರ ಚಿಂತನಗಳು ಸದಾ ನಮ್ಮೊಂದಿಗೆ ಇರಲಿ ಎಂದು ಆಶಿಸುವುದಾಗಿ ಅವರು ತಿಳಿಸಿದರು.