ದುರ್ಬಲಗೊಂಡ 'ನಿವಾರ್' ಚಂಡಮಾರುತ: ಆದರೂ ರಾಜ್ಯದಲ್ಲಿ ಎರಡು ದಿನ ಮಳೆ
ಬೆಂಗಳೂರು, ನವೆಂಬರ್ 27: ಭಾರಿ ಆತಂಕ ಸೃಷ್ಟಿಸಿದ್ದ ನಿವಾರ್ ಚಂಡಮಾರುತದ ಪ್ರಭಾವ ಕಡಿಮೆಯಾಗಿದೆ. ಗಂಟೆಗೆ 110-130 ಕಿಮೀ ವೇಗದಲ್ಲಿ ಆರಂಭದಲ್ಲಿ ಬೀಸುತ್ತಿದ್ದ ಚಂಡಮಾರುತ ತಮಿಳು ನಾಡು ಮತ್ತು ಪುದುಚೆರಿ ಕರಾವಳಿಗಳ ಮಧ್ಯೆ ಅಪ್ಪಳಿಸುವ ವೇಳೆ ತನ್ನ ರಭಸವನ್ನು ಕಳೆದುಕೊಂಡಿತ್ತು. ಕ್ರಮೇಣ ಅದರ ತೀವ್ರತೆ ಕಡಿಮೆಯಾಗಿದೆ. ಹೀಗಾಗಿ ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿ ಹಾನಿ ಸಂಭವಿಸಿಲ್ಲ.
ನಿವಾರ್ ಚಂಡಮಾರುತದ ಪರಿಣಾಮವಾಗಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುವ ಎಚ್ಚರಿಕೆ ನೀಡಲಾಗಿತ್ತು. ಆದರೆ ಚಂಡಮಾರುತ ಶಕ್ತಿ ಕಳೆದುಕೊಂಡು ದುರ್ಬಲವಾದ ಹಿನ್ನೆಲೆಯಲ್ಲಿ ಗುರುವಾರ ಇಡೀ ದಿನ ಮೋಡ ಕವಿದ ಥಂಡಿ ವಾತಾವರಣ ಇದ್ದರೂ ಸಣ್ಣ ಮಳೆ ಸುರಿದಿತ್ತೇ ವಿನಾ ವರುಣ ಆರ್ಭಟಿಸಿರಲಿಲ್ಲ. ಶುಕ್ರವಾರ ಬೆಳಿಗ್ಗೆ ಬೆಂಗಳೂರಿನ ಜನತೆಗೆ ಸೂರ್ಯನ ದರ್ಶನವಾಗಿದೆ.
ತಮಿಳುನಾಡು ಮತ್ತು ಪುದುಚೆರಿಗಳು ನಿವಾರ್ ಬೆದರಿಕೆಯನ್ನು ಯಶಸ್ವಿಯಾಗಿ ಎದುರಿಸಿವೆ. ಆದರೆ ಮರಗಳು ಧರೆಗುರುಳಿದಿರುವುದು, ಗೋಡೆ ಕುಸಿತ, ಚಾವಣಿ ಹಾರಿಹೋಗಿರುವುದು, ಮನೆಗಳು ಜಲಾವೃತಗೊಂಡಿರುವುದು ಮುಂತಾದ ವಿಪತ್ತುಗಳು ಉಂಟಾಗಿವೆ. ಚಂಡಮಾರುತ ಈಗ ಆಂಧ್ರಪ್ರದೇಶದ ಕರಾವಳಿಯತ್ತ ಬೀಸುತ್ತಿದೆ. ಆದರೆ ಚಂಡಮಾರುತ ತನ್ನ ಪ್ರಭಾವ ಕಳೆದುಕೊಂಡಿದ್ದರೂ ರಾಜ್ಯದ ಜನತೆ ಮೈಮರೆಯುವಂತಿಲ್ಲ. ಕರ್ನಾಟಕದಲ್ಲಿ ಇನ್ನೂ ಎರಡು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ನಿವಾರ್ ಚಂಡಮಾರುತ ಈಗ ವಾಯವ್ಯ ದಿಕ್ಕಿನೆಡೆಗೆ ಸಾಗುತ್ತಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಅನೇಕ ಕಡೆ ಗುರುವಾರ ತುಂತುರು ಮಳೆಯಾಗಿದೆ. ತುಮಕೂರು, ಬಳ್ಳಾರಿ ಮತ್ತು ಉತ್ತರ ಕರ್ನಾಟಕದ ಕೆಲವು ಕಡೆ ಸಹ ಮಳೆಯಾಗಿದೆ. ಶುಕ್ರವಾರ ಮತ್ತು ಶನಿವಾರವೂ ಮಳೆಯಾಗಲಿದೆ. ಇನ್ನು ಎರಡು ದಿನ ಮಳೆ ತೀವ್ರವಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದ್ದು, ದಕ್ಷಿಣ ಒಳನಾಡಿನ ಎಂಟು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಶುಕ್ರವಾರದವರೆಗೆ ಮುಂದುವರಿದಿದೆ. ನವೆಂಬರ್ 28ರವರೆಗೂ ಮೋಡ ಕವಿದ ವಾತಾವರಣ ಮುಂದುವರಿಯಲಿದೆ.












Click it and Unblock the Notifications