ಬಂಗಾಳ ಕೊಲ್ಲಿ ಚಂಡಮಾರುತ: ಕರ್ನಾಟಕದಲ್ಲೂ ಭಾರೀ ಮಳೆ ಸಾಧ್ಯತೆ
ಬೆಂಗಳೂರು, ಮೇ 06: ನಿರೀಕ್ಷಿಸಿದಂತೆ ಅಂಡಮಾನ್ ಸಮುದ್ರ ಪ್ರದೇಶದಲ್ಲಿ ಚಂಡಮಾರುತ ನಿರ್ಮಾಣವಾಗಿದ್ದು ನಿಕೋಬಾರ್ ದ್ವೀಪಗಳಲ್ಲಿ ಈಗಾಗಲೇ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಮುಂದಿನ ದಿನಗಳಲ್ಲಿ ಚಂಡಮಾರುತ ತೀವ್ರವಾಗಲಿದ್ದು, ಒಂದೆರಡು ದಿನದಲ್ಲಿ ಚಂಡಮಾರು ವಾಯವ್ಯ ದಿಕ್ಕಿನತ್ತ ಸಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕೆಲ ದಿನಗಳಲ್ಲಿ ಚಂಡಮಾರುತ ಒಡಿಶಾದಲ್ಲಿರುವ ಕಡಲತೀರವನ್ನು ಅಪ್ಪಳಿಸಬಹುದು ಎಂದು ನಿರೀಕ್ಷಿಸಲಾಗಿದೆ.
ಒಡಿಶಾದ 18 ಜಿಲ್ಲೆಗಳಲ್ಲಿ ಈಗಾಗಲೇ ಹೈ ಅಲರ್ಟ್ ಘೋಷಿಲಾಗಿದೆ. ಬಂಗಾಳ ಕೊಲ್ಲಿಯ ಕಡಲ ತೀರದಲ್ಲಿ ಮುಂದಿನ 5 ದಿನ ಯಾರೂ ಕೂಡ ಸಮುದ್ರಕ್ಕಿಳಿಯಬಾರದು. ಮೀನುಗಾರಿಕೆಗೆ ಹೋಗಬಾರದು ಎಂದು ಎಚ್ಚರಿಕೆ ಕೊಡಲಾಗಿದೆ.
ಈಗ ದಕ್ಷಿಣ ಅಂಡಮಾನ್ ಸಮುದ್ರದಲ್ಲಿ ಚಂಡಮಾರುತ ನಿರ್ಮಾಣ ಆಗಿರುವುದರಿಂದ ಇನ್ನಷ್ಟು ಕಟ್ಟೆಚ್ಚರಿಕೆ ವಹಿಸಲಾಗುತ್ತಿದೆ. ಸದ್ಯ ಚಂಡಮಾರುತ ಒಡಿಶಾ, ಪಶ್ಚಿಮ ಬಂಗಾಳದತ್ತ ಸಾಗಬಹುದು ಎಂದು ನಿರೀಕ್ಷಿಸಲಾಗಿದೆಯಾದರೂ ಶನಿವಾರ ಚಂಡಮಾರುತದ ನಿಖರವಾಗಿ ಯಾವ ಕಡೆ ಸಾಗುತ್ತದೆ? ಎಂಬುದು ಸ್ಪಷ್ಟವಾಗಲಿದೆ.

ಭಾರೀ ಮಳೆ ಕಾಣುವ ರಾಜ್ಯಗಳು
ಒಡಿಶಾ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್ ಹಾಗೂ ಈಶಾನ್ಯದ ಬಹುತೇಕ ರಾಜ್ಯಗಳಲ್ಲಿ ಚಂಡಮಾರುತದ ಪರಿಣಾಮವಾಗಿ ಭಾರೀ ಮಳೆ ಆಗುವ ಮುನ್ಸೂಚನೆ ಇದೆ. ಚಂಡಮಾರುತ ಪರಿಣಾಮ ಗಂಟೆಗೆ 40 ರಿಂದ 50 ಕಿ. ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ.

ಕರ್ನಾಟಕಕ್ಕೂ ಸೈಕ್ಲೋನ್ ಎಫೆಕ್ಟ್
ಬಂಗಾಳ ಕೊಲ್ಲಿಯಲ್ಲಿನ ಚಂಡಮಾರುತದಿಂದ ಕರ್ನಾಟಕ, ತಮಿಳುನಾಡು, ಪುದುಚೇರಿ ಮತ್ತು ಕೇರಳ ರಾಜ್ಯಗಳ ಕೆಲ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಂಭವ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಈಗಾಗಲೇ ಮಳೆಯಾಗುತ್ತಿದೆ.

ಒಡಿಶಾದಲ್ಲಿ ಹೈ ಅಲರ್ಟ್, ಮುಂಜಾಗ್ರತಾ ಕ್ರಮ
ಒಡಿಶಾ ರಾಜ್ಯದ ಗಂಜಾಂ, ಗಜಪತಿ, ಪುರಿ, ಖುರ್ದಾ, ಜಗತ್ಸಿಂಗ್ಪುರ್, ಕೇಂದ್ರಪಾರ, ಜಾಜಪುರ್, ಭದ್ರಕ್, ಬಲಾಸೋರ್, ನಯಾಗಡ್, ಕಟಕ್, ಮಯೂರ್ ಬಂಜ್, ಕೇವೋಂಜರ್, ಧೇನಕನಲ್, ಮಲ್ಕಾಂಗಿರಿ, ಕೋರಾಪುಟ್, ರಾಯಗಡ ಮತ್ತು ಕಂಧಮಾಲ್ ಈ 18 ಜಿಲ್ಲೆಗಳಲ್ಲಿ ಚಂಡಮಾರುತದ ಪರಿಣಾಮ ಹೆಚ್ಚು ಇರಲಿದೆ. ಈ ಜಿಲ್ಲೆಗಳ ಡಿಸಿಗಳಿಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಒಡಿಶಾ ಸರಕಾರ ಸೂಚಿಸಿದೆ.

ಸುರಕ್ಷಿತ ಸ್ಥಳಗಳಿಗೆ ಕಳುಹಿಸಲು ಸೂಚನೆ
ಚಂಡಮಾರುತದಿಂದ ಅಪಾಯಕ್ಕೀಡಾಗಬಹುದಾದ ಜನರನ್ನು ಗುರುತಿಸಲು ಮತ್ತು ಅವರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ಸಲಹೆ ನೀಡಲಾಗಿದೆ. ಕಚ್ಚಾ ಮನೆಗಳಲ್ಲಿ ವಾಸಿಸುವ ಅಥವಾ ಕರಾವಳಿಯ ಸಮೀಪ ಅಥವಾ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು, ವೃದ್ಧರು, ಅಂಗವಿಕಲರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಇತರ ದುರ್ಬಲ ವ್ಯಕ್ತಿಗಳು ಗೊತ್ತುಪಡಿಸಿದ ಜಿಯೋ ಟ್ಯಾಗ್ಡ್ ಆಶ್ರಯ ಕಟ್ಟಡಗಳಿಗೆ ಸ್ಥಳಾಂತರಿಸುವ ಯೋಜನೆಯನ್ನು ಸಿದ್ಧಪಡಿಸಲು ಸೂಚಿಸಲಾಗಿದೆ.

ಆಶ್ರಯ ತಾಣಗಳ ಮಾಹಿತಿ
ಒಂದು ಸುರಕ್ಷಿತ ಆಶ್ರಯದಾಣದಲ್ಲಿ ಲೇಡಿ ಟೀಚರ್, ಲೇಡಿ ಕಾನ್ಸ್ಟೆಬಲ್, ಹೋಮ್ ಗಾರ್ಡ್ ಇತ್ಯಾದಿ ಸೇರಿದಂತೆ ಇಬ್ಬರು ಪುರುಷ ಮತ್ತು ಒಬ್ಬ ಮಹಿಳೆಯನ್ನೊಳಗೊಂಡ ಮೂರು ಸ್ಥಳೀಯ ಅಧಿಕಾರಿಗಳ ತಂಡವನ್ನು ನಿಯೋಜಿಸಲಾಗಲಿದೆ. ಅಕ್ಷಾಂಶ ಮತ್ತು ರೇಖಾಂಶವನ್ನು ಸೂಚಿಸುವುದಕ್ಕೆ ಗುರುತಿಸಲಾದ ಸುರಕ್ಷಿತ ಆಶ್ರಯ ಕಟ್ಟಡದ ಮಾಹಿತಿಯನ್ನು, ಉಸ್ತುವಾರಿ ವಹಿಸಿರುವ ಅಧಿಕಾರಿಗಳ ಹೆಸರು ಮತ್ತು ಅಂತಹ ತಂಡಗಳು, ಅಧಿಕಾರಿಗಳ ಮೊಬೈಲ್ ಸಂಖ್ಯೆಯನ್ನು ಒದಗಿಸಬೇಕು. ಎಲ್ಲಾ ಚಂಡಮಾರುತ ಮತ್ತು ಪ್ರವಾಹ ಶೆಲ್ಟರ್ಗಳನ್ನು ತಕ್ಷಣವೇ ಸ್ಥಳೀಯ ಬ್ಲಾಕ್ ಡೆವಲಪ್ಮೆಂಟ್ ಅಧಿಕಾರಿ (ಬಿಡಿಒ)/ ತಹಶೀಲ್ದಾರ್ ಅವರು ಪರಿಶೀಲಿಸಬೇಕು ಮತ್ತು ಅವರು ನೀರು ಸರಬರಾಜು, ಶೌಚಾಲಯಗಳು, ಜನರೇಟರ್, ಗಾಳಿ ತುಂಬಬಹುದಾದ ಟವರ್ ಲೈಟ್, ಮೆಕ್ಯಾನಿಕಲ್ ಕಟರ್ಗಳು ಮತ್ತು ಇತರ ಉಪಕರಣಗಳ ಮೇಲೆ ಪರಿಶೀಲನೆ ನಡೆಸಬೇಕು ಎಂದು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ವಿಪತ್ತು ನಿರ್ವಹಣೆ) ಪ್ರದೀಪ್ ಕುಮಾರ್ ಜೆನಾ ಎಲ್ಲಾ 18 ಜಿಲ್ಲಾಧಿಕಾರಿಗಳಿಗೂ ಆದೇಶ ಮಾಡಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications