C.T Ravi: ಧನ್ಯವಾದ ತಿಳಿಸಿದ ಸಿ.ಟಿ ರವಿ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದ ಬಳಕೆ ಮಾಡಿರುವ ಪ್ರಕರಣದಲ್ಲಿ ವಿಧಾನಪರಿಷತ್ ಸದಸ್ಯ, ಬಿಜೆಪಿ ನಾಯಕ ಸಿ.ಟಿ ರವಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಬಂಧಿಸಿದ್ದಾರೆ. ಗುರುವಾರ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಅಧಿವೇಶನದ ಸಂದರ್ಭದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಶಾಸಕರು, ಸಚಿವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಸಿಟಿ ರವಿಯವರನ್ನು ವಶಕ್ಕೆ ಪಡೆದಿದ್ದರು. ನನ್ನ ಮೇಲೆ ಹಲ್ಲೆ ಮಾಡಲಾಗಿದೆ, ಪೊಲೀಸರು ನನ್ನನ್ನು ಕೊಲೆ ಮಾಡಲು ಸಂಚು ಮಾಡಿದ್ದರು ಎನ್ನುವ ಗಂಭೀರ ಆರೋಪವನ್ನು ಬಳಿಕ ಸಿಟಿ ರವಿ ಮಾಡಿದ್ದರು.

ಸಿ.ಟಿ ರವಿ ವಿರುದ್ಧವಾಗಿ ಕಾಂಗ್ರೆಸ್ ರಾಜ್ಯಾದ್ಯಂತ ಹಲವು ಕಡೆಗಳಲ್ಲಿ ಪ್ರತಿಭಟನೆ ನಡೆಸುತ್ತಿದೆ. ಸಿ.ಟಿ ರವಿ ಹೇಳಿಕೆ ನೀಡಿರುವ ಪ್ರಕರಣದ ಬಗ್ಗೆ ತನಿಖೆ ನಡೆಸುವುದು ಬಿಟ್ಟು ಗೂಂಡಾಗಿರಿ ಮಾಡುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಕೂಡ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ಧನ್ಯವಾದ ಎಂದ ಸಿ.ಟಿ ರವಿ
ತಮಗೆ ಬಿಜೆಪಿ ನಾಯಕರು, ಕಾರ್ಯಕರ್ತರು ನೀಡಿದ ಬೆಂಬಲಕ್ಕೆ ಸಿ.ಟಿ ರವಿ ಧನ್ಯವಾದ ತಿಳಿಸಿದ್ದಾರೆ. ಎಕ್ಸ್ನಲ್ಲಿ ಪೋಸ್ಟ ಹಂಚಿಕೊಂಡಿರುವ ಅವರು ಇಂದು ನನ್ನ ಮೇಲೆ ದಾಖಲಾದ ಸುಳ್ಳು ಮೊಕದ್ದಮೆಯ ವಿಚಾರಣೆಯ ಸಂದರ್ಭದಲ್ಲಿ ನನ್ನ ಜೊತೆಗಿದ್ದು ಧೈರ್ಯ ತುಂಬಿದ ನನ್ನ ನೆಚ್ಚಿನ ಕರ್ನಾಟಕ ಬಿಜೆಪಿ ಕಾರ್ಯಕರ್ತರು ಮತ್ತು ರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ಧನ್ಯವಾದಗಳು ಎಂದಿದ್ದಾರೆ.
ಬಿಜೆಪಿಯ ಎಲ್ಲಾ ರಾಷ್ಟೀಯ ನಾಯಕರು, ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ, ವಿಧಾನ ಪರಿಷತ್ ಸದಸ್ಯರು, ಶಾಸಕರು, ಸಂಸದರು, ಮಾಜಿ ಸಚಿವರು, ಹಿರಿಯ ನಾಯಕರು, ಸ್ನೇಹಿತರು, ಮಾಧ್ಯಮದ ಮಿತ್ರರಿಗೆ ಧನ್ಯವಾದ ತಿಳಿಸಿರುವ ಅವರು ಹೋರಾಟ ಮುಂದುವರೆಸುತ್ತೇನೆ ಎಂದಿದ್ದಾರೆ.
ರಾಜ್ಯಾದ್ಯಂತ ತುಘಲಕ್ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ ನನ್ನ ಕಾರ್ಯಕರ್ತ ಬಂಧುಗಳೆ, ನಿಮ್ಮೆಲ್ಲರ ಬೆಂಬಲ ನನ್ನ ಶಕ್ತಿಯನ್ನು ಮತ್ತಷ್ಟು ಇಮ್ಮುಡಿಗೊಳಿಸಿದೆ, ದುಷ್ಟ ಶಕ್ತಿಗಳ ವಿರುದ್ಧ ಇನ್ನೂ ಹೆಚ್ಚಾಗಿ ಹೋರಾಡಲು ಶಕ್ತಿ ತುಂಬಿದೆ. ಭಾರತೀಯ ಜನತಾ ಪಾರ್ಟಿಯ ನಾವೆಲ್ಲರೂ ಒಂದಾಗಿ ಕರ್ನಾಟಕವನ್ನು "ಗೂಂಡಾ ರಿಪಬ್ಲಿಕ್" ಮಾಡಲು ಅವಕಾಶ ಕೊಡುವುದಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.












Click it and Unblock the Notifications