ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದ ಭಾರತೀಯ ರೈಲ್ವೆ
ಹುಬ್ಬಳ್ಳಿ, ಮೇ 11 : ವಲಸೆ ಕಾರ್ಮಿಕರು ಸೇರಿದಂತೆ ಜನರು ರೈಲ್ವೆ ಹಳಿಯ ಮೇಲೆ ಸಂಚಾರ ನಡೆಸಬಾರದು ಎಂದು ಭಾರತೀಯ ರೈಲ್ವೆ ಪ್ರಕಟಣೆಯಲ್ಲಿ ಮನವಿ ಮಾಡಿದೆ. ಲಾಕ್ ಡೌನ್ ಹಿನ್ನಲೆಯಲ್ಲಿ ಪ್ರಯಾಣಿಕ ರೈಲುಗಳ ಸಂಚಾರ ಸಂಪೂರ್ಣ ಬಂದ್ ಆಗಿದೆ.
ಪ್ರಯಾಣಿಕ ರೈಲುಗಳ ಸಂಚಾರ ರದ್ದಾಗಿದೆ. ಆದರೆ, ಅಗತ್ಯ ವಸ್ತುಗಳನ್ನು ಸಾಗಣೆ ಮಾಡಲು ಗೂಡ್ಸ್ ರೈಲು, ವಿಶೇಷ ಪಾರ್ಸೆಲ್ ರೈಲು, ಶ್ರಮಿಕ್ ರೈಲುಗಳು ಸಂಚಾರ ನಡೆಸುತ್ತಿವೆ. ಆದ್ದರಿಂದ, ಹಳಿಗಳ ಮೇಲೆ ಜನರ ಸಂಚಾರ ನಡೆಸಬಾರದು ಎಂದು ತಿಳಿಸಲಾಗಿದೆ.
ಕಳೆದ ವಾರ ಮಹಾರಾಷ್ಟ್ರದಲ್ಲಿ ವಲಸೆ ಕಾರ್ಮಿಕರು ರೈಲು ಹಳಿಯ ಮೇಲೆ ಮಲಗಿದ್ದರು. ಗೂಡ್ಸ್ ರೈಲು ಡಿಕ್ಕಿ ಹೊಡೆದು 14 ಜನರು ಮೃತಪಟ್ಟಿದ್ದರು. ಈ ಹಿನ್ನಲೆಯಲ್ಲಿ ಪ್ರಕಟಣೆಯ ಮೂಲಕ ಜನರಿಗೆ ಮನವಿಯನ್ನು ಮಾಡಲಾಗಿದೆ.

ರೈಲ್ವೆ ಸುರಕ್ಷತಾ ಕಾಯ್ದೆ 147ರ ಪ್ರಕಾರ ಅನುಮತಿ ಇಲ್ಲದೇ ರೈಲು ಹಳಿಗಳನ್ನು ದಾಟುವುದು, ಹಳಿಯ ಮೇಲೆ ನಡೆಯುವುದು ನಿಷೇಧಿಸಲಾಗಿದೆ. ಈ ನಿಯಮವನ್ನು ಉಲ್ಲಂಘನೆ ಮಾಡುವುದು ಶಿಕ್ಷಾರ್ಹ ಅಪರಾಧವೂ ಆಗಿದೆ ಎಂದು ರೈಲ್ವೆ ಹೇಳಿದೆ.
ನಿಯಮ ಉಲ್ಲಂಘನೆ ಮಾಡಿ ರೈಲು ಹಳಿಯ ಮೇಲೆ ನಡೆಯುವುದು, ಹಳಿ ದಾಟುವುದು ಮಾಡಿದರೆ ಆರು ತಿಂಗಳ ಜೈಲು, 1000 ರೂ. ದಂಡ ವಿಧಿಸಲಾಗುತ್ತದೆ ಎಂದು ರೈಲ್ವೆ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದೆ. ಆದ್ದರಿಂದ, ಹಳಿಗಳಿಂದ ದೂರವಿರಿ ಎಂದು ಮನವಿ ಮಾಡಿದೆ.
ರೈಲ್ವೆ ಹಳಿಯ ಮೇಲೆ ಸಂಚಾರ ನಡೆಸದಂತೆ, ಹಳಿಗಳನ್ನು ದಾಟದಂತೆ ಜನರಲ್ಲಿ ಅರಿವು ಮೂಡಿಸಲು ಹಲವು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಪ್ರಯಾಣದ ಸಂದರ್ಭದಲ್ಲಿ ಮೇಲ್ಸೇತುವೆ, ಸಬ್ ವೇ ಬಳಸಿ ಎಂದು ರೈಲ್ವೆ ತಿಳಿಸಿದೆ.
ಟ್ರಾಕ್ ಮನ್, ಸೇತುವೆ ರಿಪೇರಿ ಸಿಬ್ಬಂದಿ, ಸ್ಟೇಷನ್ ಮಾಸ್ಟರ್, ಆರ್ಪಿಎಫ್ ಸಿಬ್ಭಂದಿಗೆ ಈ ಕುರಿತು ಮಾಹಿತಿ ನೀಡಲಾಗಿದೆ. ಈ ರೀತಿಯ ಚಟುವಟಿಕೆ ಕಂಡುಬಂದರೆ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ.












Click it and Unblock the Notifications