ಶಾಸಕರ ಸರಣಿ ರಾಜೀನಾಮೆ? ಸ್ಪೀಕರ್ ರಮೇಶ್ ಕುಮಾರ್ ಮುಂದಿನ ಆಯ್ಕೆಗಳು?
Recommended Video

ಅತೃಪ್ತ ಶಾಸಕರನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಉರುಳಿಸಲು ಮುಂದಾಗಿರುವ ಬಿಜೆಪಿಯ ಆಪರೇಷನ್ ಕಮಲ ಪ್ರಯತ್ನ ಇಂದು ಕೂಡಾ ಮುಂದುವರಿದಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ತನ್ನ ತಂತ್ರವನ್ನು ಹೆಣೆಯುತ್ತಿದೆ. ಆಪರೇಷನ್ ಕಮಲ, ಇಬ್ಬರು ಪಕ್ಷೇತರ ಶಾಸಕರಿಂದ ಸರ್ಕಾರಕ್ಕೆ ನೀಡಿದ ಬೆಂಬಲ ವಾಪಸ್ ಪಡೆದ ಬಳಿಕ ಆಪರೇಷನ್ ಕಮಲದ ಮುಂದಿನ ಹಂತವನ್ನು ಬಿಜೆಪಿ ಮುಂದುವರೆಸಿತ್ತು. ಸತತ ಎರಡು ಬಾರಿ ವಿಫಲವಾದ ಬಳಿಕ ಈಗ ಬಜೆಟ್ ಅಧಿವೇಶನದಲ್ಲಿ ತನ್ನ ತಂತ್ರಗಾರಿಕೆಯನ್ನು ಹಂತ ಹಂತವಾಗಿ ತೋರುತ್ತಾ ಬಂದಿದೆ.
ವಿಧಾನಮಂಡಲದ ಜಂಟಿ ಹಾಗೂ ಬಜೆಟ್ ಅಧಿವೇಶನದ ಎರಡನೇ ದಿನವೂ ಹೈ ಡ್ರಾಮಾ ಮುಂದುವರೆದಿದೆ. ಮೈತ್ರಿ ಸರ್ಕಾರವು ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಸರ್ಕಸ್ ಮಾಡುತ್ತಿದ್ದರೆ, ಸರಣಿ ಸುದ್ದಿಗೋಷ್ಠಿಗಳ ಮೂಲಕ ಕುಮಾರಸ್ವಾಮಿ ಅವರ ಸರ್ಕಾರ ಅಸ್ತಿತ್ವ ಕಳೆದುಕೊಂಡಿದೆ ಎಂದು ಬಿಜೆಪಿ ಪ್ರತಿಪಾದಿಸಿದೆ.
ಸುಮಾರು 12ಕ್ಕೂ ಅಧಿಕ ಶಾಸಕರು ಗೈರಾಗುವ ನಿರೀಕ್ಷೆಯಲ್ಲಿ ಬಿಜೆಪಿಗೆ ಸರಿಯಾದ ಸಂಖ್ಯಾಬಲ ಸಿಕ್ಕಿಲ್ಲ. ಹೆಚ್ಚಿನ ಶಾಸಕರ ಬಲ ಸಿಕ್ಕರೆ, ಜೆಡಿಎಸ್ -ಕಾಂಗ್ರೆಸ್ ಪಕ್ಷದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಕಾದಿದ್ದಾರೆ.
ಸರ್ಕಾರ ಅಭದ್ರಗೊಳಿಸಲು ಬಿಜೆಪಿ ಏನೇ ಹರಸಾಹಸ ಪಟ್ಟರೂ, ರಾಜ್ಯಪಾಲರು ಶಾಸಕರುಗಳ ಸರಣಿ ರಾಜೀನಾಮೆ ಅಂಗೀಕರಿಸಿದರೂ, ಬಿಜೆಪಿಯ ಸರ್ಕಾರ ರಚನೆ ಕನಸನ್ನು ಭಂಗಗೊಳಿಸುವ ಅಧಿಕಾರ ಸ್ಪೀಕರ್ ಕೈಲಿದೆ ಎಂಬ ಆಭಯದೊಂದಿಗೆ ಕಾಂಗ್ರೆಸ್ ನೆಮ್ಮದಿ ಸ್ಥಿತಿಯಲ್ಲಿದೆ.

ರಾಜೀನಾಮೆ ಅಂಗೀಕಾರ ಸ್ಪೀಕರ್ ಕೈಲಿದೆ
ಯಾವುದೇ ಅತೃಪ್ತ ಶಾಸಕರು ರಾಜೀನಾಮೆ ನೀಡಿದರೂ ಅದನ್ನು ತಕ್ಷಣ ಅಂಗೀಕರಿಸಬೇಕೆಂದಿಲ್ಲ. ಅದು ಸ್ಪೀಕರ್ ವಿವೇಚನೆಗೆ ಬಿಟ್ಟ ವಿಚಾರ. ವೈಎಸ್ಆರ್ ಕಾಂಗ್ರೆಸ್ ಸಂಸದರು ರಾಜೀನಾಮೆ ನೀಡಿದ ಸಂದರ್ಭ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ತಕ್ಷಣ ಅಂಗೀಕರಿಸಿರಲಿಲ್ಲ. ಐದಾರು ತಿಂಗಳು ಕಳೆದರೂ ಈ ಬಗ್ಗೆ ಮುಂದಿನ ಕ್ರಮ ಜರುಗಿಸಿರಲಿಲ್ಲ.

ರಮೇಶ್ ಕುಮಾರ್ ನೀಡಿರುವ ಪ್ರತಿಕ್ರಿಯೆ
"ನಾಲ್ಕಲ್ಲರೀ, ನಲವತ್ತು ಶಾಸಕರು ರಾಜೀನಾಮೆ ಕೊಟ್ಟರೂ ನಾನು ಸ್ವೀಕರಿಸುತ್ತೇನೆ" ಎಂದು ಕರ್ನಾಟಕ ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ಶ್ರೀನಿವಾಸಪುರದ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್, ''ನಾವು ಆತಂಕ ಪಡುವಂಥ ಬೆಳವಣಿಗೆಯೇನೂ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿಲ್ಲ. ರಾಜ್ಯದಲ್ಲಿ ಮಳೆಯಾಗಿಲ್ಲ, ನೀರಿನ ಸಮಸ್ಯೆ ಇದೆ. ಅದರ ಬಗ್ಗೆ ನಾವು ಯೋಚಿಸುತ್ತಿದ್ದೇವೆ" ಎಂದು ರಮೇಶ್ ಕುಮಾರ್ ಪತ್ರಕರ್ತರ ಪ್ರಶ್ನೆಗೆ ಜಾಣತನದ ಉತ್ತರ ನೀಡುತ್ತಿದ್ದರು.

ರಾಜ್ಯಪಾಲರ ಮುಂದಿರುವ ಆಯ್ಕೆ
ಶಾಸಕರ ರಾಜೀನಾಮೆ ಅಂಗೀಕಾರ ಆಗದಿದ್ದಲ್ಲಿ ರಾಜ್ಯಪಾಲರಿಗೆ ಅಥವಾ ನ್ಯಾಯಾಲಯದ ಮೊರೆ ಹೋದರೂ ಸ್ಪೀಕರ್ ಮೇಲೆ ಒತ್ತಡ ತರಲು ಬರುವುದಿಲ್ಲ. ರಾಜ್ಯಪಾಲರು ಸದನದಲ್ಲಿ ಬಹುಮತ ಸಾಬೀತಿಗೆ ಸೂಚನೆ ನೀಡಬಹುದು. ಆ ಸಂದರ್ಭದಲ್ಲಿ ರಾಜೀನಾಮೆ ಅಂಗೀಕಾರ ಆಗದೆ ಇರುವ ಶಾಸಕರಿಗೂ ವಿಪ್ ಜಾರಿ ಮಾಡಬಹುದು. ಸದನದಲ್ಲಿ ವಿಪ್ ಉಲ್ಲಂಘನೆ ಮಾಡಿದರೆ ರಾಜಕೀಯ ಭವಿಷ್ಯಕ್ಕೆ ಸಂಚಕಾರ ತರುವ ಅವಕಾಶ ಸ್ಪೀಕರ್ಗೆ ಇದೆ.

ವಿಶ್ವಾಸಮತ ಯಾಚನೆ ಸಂದರ್ಭ ಬಂದರೆ
ಸದನದಲ್ಲಿ ವಿಶ್ವಾಸಮತ ಯಾಚನೆ ಸಂದರ್ಭ ಬಂದರೆ, ಕಾಂಗ್ರೆಸ್ -ಜೆಡಿಎಸ್ ಶಾಸಕರು ಗದ್ದಲ ಎಬ್ಬಿಸಿ, ವಿರೋಧ ಪಕ್ಷದ ಶಾಸಕರನ್ನು ಸದನದಿಂದ ಕೆಲ ತಿಂಗಳ ಕಾಲ ಅಮಾನತು ಮಾಡಿಸಬಹುದು. ಇದೆಲ್ಲವೂ ತೀರ ವಿಕೋಪದ ಹೆಜ್ಜೆಯಾಗಿದೆ. ತಮಿಳುನಾಡಿನಲ್ಲಿ ಶಶಿಕಲಾ ಬಣದ ಎಐಎಡಿಎಂಕೆ ಸದಸ್ಯರನ್ನು ಅಮಾನತು ಮಾಡಿರುವ ಉದಾಹರಣೆ ಉಲ್ಲೇಖಿಸಬಹುದು.












Click it and Unblock the Notifications