ಸೋತ ಯೋಗೇಶ್ವರ್ ಗೆ ಮಂತ್ರಿಗಿರಿ 'ಬಹುಮಾನ'?: ಚುನಾವಣೆ ಗೆದ್ದವರ ಗತಿಯೇನು?
ಬೆಂಗಳೂರು, ಫೆಬ್ರವರಿ 03: ಸಂಪುಟ ವಿಸ್ತರಣೆಗೆ ದಿನಾಂಕ ಈಗಾಗಲೇ ನಿಗದಿಯಾಗಿದೆ. ಸಂಪುಟಕ್ಕೆ ಸೇರಲಿರುವವರ ಪಟ್ಟಿಯೂ ಅಂತಿಮವಾಗಿದೆ. ಆದರೆ ಪಟ್ಟಿಯಲ್ಲಿರುವ ಕಲೆವು ಹೆಸರುಗಳು ಹಲವು ಬಿಜೆಪಿ ಶಾಸಕರಿಗೆ ಅಸಮಾಧಾನ ತಂದಿದೆ.
ಬಿಜೆಪಿ ಮುಖಂಡ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚನ್ನಪಟ್ಟಣದಿಂದ ಸ್ಪರ್ಧಿಸಿ ಸೋಲನುಭವಿಸಿದ್ದ ಸಿ.ಪಿ.ಯೋಗೇಶ್ವರ್ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆ ದಟ್ಟವಾಗಿದ್ದು, ಇದಕ್ಕೆ ಹಲವು ಬಿಜೆಪಿ ಹಿರಿಯ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿ.ಪಿ.ಯೋಗೇಶ್ವರ್ ಅವರು ಯಡಿಯೂರಪ್ಪ ಆಪ್ತರಾಗಿದ್ದು, ಯಡಿಯೂರಪ್ಪ ಸರ್ಕಾರ ರಚನೆಯಲ್ಲಿ ಅವರ ಪಾತ್ರ ಮಹತ್ವದ್ದಾಗಿತ್ತು. ಹಾಗಾಗಿ ಸಿ.ಪಿ.ಯೋಗೇಶ್ವರ್ ಗೆ ಮಂತ್ರಿಗಿರಿ 'ಬಹುಮಾನ'ವನ್ನು ಯಡಿಯೂರಪ್ಪ ಕೊಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಆದರೆ ಚುನಾವಣೆಯಲ್ಲಿ ಸೋತಿರುವ ಯೋಗೇಶ್ವರ್ ಗೆ ಮಂತ್ರಿ ಸ್ಥಾನ ನೀಡುತ್ತಿರುವುದು ಬಿಜೆಪಿಯ ಹಲವು ಶಾಸಕರಿಗೆ ಅಸಮಾಧಾನ ತಂದಿದೆ. ಈಗಾಗಲೇ ಹಲವು ಬಾರಿ ಗೆದ್ದು ಹಿಂದೆ ಸಚಿವರೂ ಆಗಿ ಈಗ ಮತ್ತೊಮ್ಮೆ ಸಚಿವ ಸ್ಥಾನಕ್ಕಾಗಿ ಕಾಯುತ್ತಿದ್ದವರಿಗೆ ಯೋಗೇಶ್ವರ್ ಹೆಸರು ಪಟ್ಟಿಯಲ್ಲಿ ನೋಡಿ ತೀವ್ರ ನಿರಾಸೆ ಆಗಿದೆ.

ಮಂತ್ರಿಗಿರಿಗೆ ಸಾಲಿನಲ್ಲಿ ನಿಂತಿರುವವರ ಶಾಸಕರು
ಆರು ಬಾರಿ ಗೆದ್ದಿರುವ ಬಿಜೆಪಿ ಶಾಸಕ ಎಸ್.ಅಂಗಾರ, 5 ಬಾರಿ ಗೆದ್ದಿರುವ ತಿಪ್ಪಾರೆಡ್ಡಿ, 4 ಬಾರಿ ಗೆದ್ದಿರುವ ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಕೆ.ಜೆ.ಬೋಪಯ್ಯ, ನೆಹರು ಓಲೇಕಾರ್, ಎಂ.ಪಿ. ರೇಣುಕಾಚಾರ್ಯ, ಎಸ್.ಎ.ರವೀಂದ್ರನಾಥ್, ಕರುಣಾಕರ ರೆಡ್ಡಿ, ಅರವಿಂದ ಲಿಂಬಾವಳಿ, ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಇನ್ನೂ ಹಲವರು ಮಂತ್ರಿಗಿರಿಗಾಗಿ ಕಾದು ಕೂತಿದ್ದಾರೆ. ಇವರಿಗೆ ಯೋಗೇಶ್ವರ್ಗೆ ಮಂತ್ರಿ ಸ್ಥಾನ ನೀಡಿರುವುದು ಅಸಮಾಧಾನ ಉಂಟುಮಾಡಿದೆ.

ಸೋತಿದ್ದ ಲಕ್ಷ್ಮಣ ಸವದಿಗೆ ಉಪಮುಖ್ಯಮಂತ್ರಿ ಸ್ಥಾನ
ಚುನಾವಣೆಯಲ್ಲಿ ಸೋತಿರುವ ಲಕ್ಷ್ಮಣ ಸವದಿಗೆ ಈಗಾಗಲೇ ಉಪಮುಖ್ಯಮಂತ್ರಿ ಸ್ಥಾನವನ್ನೇ ನೀಡಲಾಗಿದೆ. ಎಚ್.ವಿಶ್ವನಾಥ್ಗೂ ಸ್ಥಾನ ನೀಡುವ ಸಾಧ್ಯತೆ ಇದೆ. ಈಗ ಯೋಗೇಶ್ವರ್ಗೂ ಮಂತ್ರಿ ಸ್ಥಾನ ನೀಡಿದರೆ ಹೇಗೆ ಎಂದು ಕೆಲವರು ಈಗಾಗಲೇ ಬಿಜೆಪಿ ನಾಯಕರನ್ನು ಗುಟ್ಟಾಗಿ ಪ್ರಶ್ನೆ ಮಾಡಿಯಾಗಿದೆ.

ಡಿಕೆಶಿ-ಎಚ್ಡಿಕೆ ಪ್ರಭಾವ ತಗ್ಗಿಸುವ ತಂತ್ರ
ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡುವ ಹಿಂದೆ ಪಕ್ಷ ಸಂಘಟನೆಯ ಉದ್ದೇಶವಿದೆ ಎಂದು ಬಿಜೆಪಿ ರಾಜ್ಯ ನಾಯಕರು ಹೇಳುತ್ತಿದ್ದು, ಕನಕಪುರ-ರಾಮನಗರ-ಚನ್ನಪಟ್ಟಣ ಭಾಗಗಳಲ್ಲಿ ಬಿಜೆಪಿಯನ್ನು ಬಲಪಡಿಸಲು, ಒಕ್ಕಲಿಗರ ಪ್ರಾಬಲ್ಯದ ಈ ಪ್ರದೇಶದಲ್ಲಿ ಕುಮಾರಸ್ವಾಮಿ-ಡಿ.ಕೆ.ಶಿವಕುಮಾರ್ ಸಹೋದರರ ಪ್ರಭಾವ ತಗ್ಗಿಸಲೆಂದು ಈ ನಿರ್ಣಯ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ.

ನಗರ ವ್ಯಾಪ್ತಿಗೆ ಸೀಮಿತವಾಗಿರುವ ಒಕ್ಕಲಿಗ ನಾಯಕರು
ಬೆಂಗಳೂರಿನ ಹೊರಗೆ ಒಕ್ಕಲಿಗ ನಾಯಕರನ್ನು ಬೆಳೆಸುವ ಉದ್ದೇಶ ಪಕ್ಷಕ್ಕೆ ಇರುವ ಕಾರಣ ಯೋಗೇಶ್ವರ್ ಗೆ ಅವಕಾಶ ದೊರಕಿರುವ ಸಾಧ್ಯತೆ ಇದೆ. ಪಕ್ಷದ ಒಕ್ಕಲಿಗ ನಾಯಕರಾಗಿರುವ ಆರ್.ಅಶೋಕ್, ಡಿಸಿಎಂ ಅಶ್ವತ್ಥನಾರಾಯಣ್ ಬೆಂಗಳೂರಿಗೆ ಸೀಮಿತವಾಗಿರುವ ಕಾರಣ, ಬೆಂಗಳೂರಿನ ಹೊರಗೆ ಒಕ್ಕಲಿಗ ನಾಯರನ್ನಾಗಿ ಯೋಗೇಶ್ವರ್ ಅನ್ನು ಬಿಂಬಿಸುವ ಪ್ರಯತ್ನವಾಗಿ ಯೋಗೇಶ್ವರ್ ಗೆ ಸಂಪುಟದಲ್ಲಿ ಮಣೆ ಹಾಕಲಾಗಿದೆ.

ಕೆಲವರಿಂದ ಬಹಿರಂಗ ಅಸಮಾಧಾನ
ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡುವ ನಿರ್ಣಯಕ್ಕೆ ಈಗಾಗಲೇ ಹಲವು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಚ್.ವಿಶ್ವನಾಥ್ ಅಂತೂ ಯೋಗೇಶ್ವರ್ ವಿರುದ್ಧ ಭಾರಿ ವಾಗ್ದಾಳಿಗಳನ್ನೇ ನಡೆಸಿದ್ದಾರೆ. ತಿಪ್ಪಾರೆಡ್ಡಿ ಅವರೂ ಸಹ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.












Click it and Unblock the Notifications