ಪೂರ್ಣ ಪ್ರಮಾಣದಲ್ಲಿ ಶಾಲೆ ಆರಂಭಿಸುವ ಕುರಿತು ಸುರೇಶ್ ಕುಮಾರ್ ಸ್ಪಷ್ಟನೆ!
ಬೆಂಗಳೂರು, ಫೆ. 16: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಮುಚ್ಚಿರುವ ಶಾಲೆಗಳನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಜನವರಿ 1 ರಿಂದ ರಾಜ್ಯದಲ್ಲಿ ಎಸ್ಎಸ್ಎಲ್ಸಿ ಹಾಗೂ ದ್ವೀತಿಯ ಪಿಯುಸಿ ತಗರಗತಿಗಳನ್ನು ಆರಂಭಿಸಲಾಗಿತ್ತು. ನಂತರ ಫೆಬ್ರುವರಿ 1 ರಿಂದ 9 ಹಾಗೂ 11 ನೇ ತರಗತಿಗಳಿಗೆ ಆಫ್ಲೈನ್ ತರಗತಿಗಳು ಆರಂಭವಾಗಿವೆ. ಪೂರ್ಣ ಪ್ರಮಾಣದಲ್ಲಿ ಉಳಿದ ತರಗತಿಗಳನ್ನು ಆರಂಭಿಸಲು ಶಿಕ್ಷಣ ಇಲಾಖೆಯು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಮೊರೆ ಹೋಗಿತ್ತು. ಇದೀಗ ಸಮಿತಿ ಸಲಹೆಯಂತೆ ಉಳಿದ ತರಗತಿಗಳನ್ನು ಆರಂಭಿಸಲು ತೀರ್ಮಾನ ಕೈಗೊಳ್ಳಲಾಗಿದೆ.
ಪೂರ್ಣ ಪ್ರಮಾಣದಲ್ಲಿ ಶಾಲೆಗಳನ್ನು ಆರಂಭಿಸಲು ಪೋಷಕರು ಕೂಡ ಸರ್ಕಾರದ ಮೇಲೆ ಒತ್ತಡ ಹಾಕಿದ್ದಾರೆ. ಜೊತೆಗೆ ಶೈಕ್ಷಣಿಕ ಚಟುವಟಿಕೆಗಳು ಕುಂಠಿತವಾಗಿರುವುದು ಮಕ್ಕಳ ಮನಸ್ಸಿನ ಮೇಲೂ ಕೂಡ ಪರಿಣಾಮವನ್ನುಂಟು ಮಾಡಿದೆ. ಮಕ್ಕಳು ಶಾಲೆಯಿಂದ ದೂರ ಉಳಿಯುವುದರಿಂದ ದೂರಗಾಮಿ ಪರಿಣಾಮ ಬೀರಲಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಹೀಗಾಗಿ ಪೂರ್ಣ ಪ್ರಮಾಣದಲ್ಲಿ ಶಾಲಾ ತರಗತಿಗಳನ್ನು ಆರಂಭಿಸುವ ಕುರಿತು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಮಹತ್ವದ ಹೇಳಿಕೆ ನೀಡಿದ್ದಾರೆ.
ಫೆ. 22ರಿಂದ ಶಾಲೆ ಆರಂಭ
ಕೋವಿಡ್ ತಾಂತ್ರಿಕ ಸಲಹಾ ಸಮಿತಿ 5ನೇ ಬಾರಿ ಸಭೆ ನಡೆಸಿ ಪೂರ್ಣ ಪ್ರಮಾಣದಲ್ಲಿ ಶಾಲೆಗಳನ್ನು ಆರಂಭಿಸುವ ಕುರಿತು ಮಹತ್ವದ ಸಲಹೆ ನೀಡಿದ್ದು, ಅದರಂತೆ ಇದೇ ಫೆಬ್ರುವರಿ 22, 2021ರಿಂದ ರಾಜ್ಯದಲ್ಲಿ 6, 7, 8 ಪೂರ್ಣ ಪ್ರಮಾಣದಲ್ಲಿ ಆರಂಭವಾಗುತ್ತವೆ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.
ಆಫ್ಲೈನ್ ತರಗತಿಗಳು ಆರಂಭವಾದರೂ ಆನ್ಲೈನ್ನಲ್ಲೂ ವಿದ್ಯಾಭ್ಯಾಸ ಮುಂದುವರೆಸಬಹುದು. ಹಿಂದುಳಿದ ವರ್ಗ ಮತ್ತು ಸಮಾಜ ಕಲ್ಯಾಣ ಇಲಾಖೆಯ ಹಾಸ್ಟಲ್ಗಳ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳಿಗಾಗಿ ಹೆಚ್ಚು ಬಸ್ಗಳನ್ನು ಓಡಿಸಲು ಸಾರಿಗೆ ಇಲಾಖೆಗೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಸುರೇಶ್ ಕುಮಾರ್ ಹೇಳಿದರು.
ಉತ್ತಮ ಹಾಜರಾತಿ ಬಂದಿದೆ
ಶಾಲೆಗಳನ್ನು ಆರಂಭಿಸುವ ಕುರಿತು ಕಳೆದ ನವೆಂಬರ್ನಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸಲಹೆ ಕೇಳಲಾಗಿತ್ತು. ಆದರೆ ಡಿಸೆಂಬರ್ ತಿಂಗಳಿನಲ್ಲಿ ಚಳಿ ಹೆಚ್ಚಾಗಿರುತ್ತದೆ, ಹೀಗಾಗಿ ಬೇಡ ಎಂದು ಸಮಿತಿ ಸಲಹೆ ಕೊಟ್ಟಿತ್ತು. ಆದ್ದರಿಂದ ಜನವರಿಯಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ತರಗತಿಗಳನ್ನು ಆರಂಭಿಸಲಾಗಿತ್ತು. ನಂತರ 9, 10, 11, 12ನೇ ತರಗತಿಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾದವು. 6, 7, 8ನೇ ತರಗತಿಗಳಿಗೆ ವಿದ್ಯಾಗಮ ಪ್ರಾರಂಭ ಮಾಡಿದ್ದೆವು. ಇಲ್ಲಿಯವರೆಗೆ ಒಳ್ಳೆಯ ಹಾಜರಾತಿ ಬಂದಿದೆ ಎಂದು ಇದೇ ಸಂದರ್ಭದಲ್ಲಿ ಸುರೇಶ್ ಕುಮಾರ್ ಹೇಳಿದರು.
ಕೇರಳ ಗಡಿ ಭಾಗ, ಬೆಂಗಳೂರಿನಲ್ಲಿ ಇಲ್ಲ!
ಕೊರೊನಾ ವೈರಸ್ 2ನೇ ಅಲೆಯ ಹಿನ್ನೆಲೆಯಲ್ಲಿ ಕೇರಳ ಗಡಿಭಾಗದಲ್ಲಿ ಹಾಗೂ ಬೆಂಗಳೂರಿನಲ್ಲಿ 6 ಹಾಗೂ 7ನೇ ತರಗತಿಗಳನ್ನು ಫೆಬ್ರುವರಿ 22ರಿಂದ ಆರಂಭಿಸುತ್ತಿಲ್ಲ, ಬದಲಿಗೆ 8ನೇ ತರಗತಿಯನ್ನು ಮಾತ್ರ ಆರಂಭಿಸಲಾಗುತ್ತಿದೆ. ಕೆರಳದಿಂದ ಬರುವ ಎಲ್ಲಾ ವಿಧ್ಯಾರ್ಥಿ ಮತ್ತು ಶಿಕ್ಷಕರು ಕೊವಿಡ್ ನೆಗೆಟಿವ್ ವರದಿ ಇದ್ದಲ್ಲಿ ಮಾತ್ರ ಶಾಲೆಗೆ ಬರಲು ಅವಕಾಶವಿದೆ. ಹಾಜರಾತಿ ಯಾವುದೇ ಕಾರಣಕ್ಕೂ ಕಡ್ಡಾಯವಲ್ಲ ಎಂದು ಸಚಿವ ಸುರೇಶ್ ಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ.
ಶಾಲೆ ಬಂದ್ ಕುರಿತು ಅಧ್ಯಯನ
ಒಂದನೇ ತರಗತಿಯಿಂದ ಶಾಲಾ ಚಟುವಟಿಕೆ ಆರಂಭಿಸಲು ಒತ್ತಾಯವಿದೆ. ಜೊತೆಗೆ ಅಜೀಂ ಪ್ರೇಮ್ ಜಿ ವಿಶ್ವವಿದ್ಯಾನಿಲಯದವರು ಆರು ರಾಜ್ಯಗಳಲ್ಲಿ ಶಾಲೆ ಬಂದ್ ಇರುವ ಕುರಿತು ಸಮೀಕ್ಷೆ ಮಾಡಿದ್ದಾರೆ. ಶೈಕ್ಷಣಿಕ ಚಟುವಟಿಕೆ ಇಲ್ಲದೆ ಇರುವುದು ಮಕ್ಕಳ ಮೇಲೆ ಯಾವ ಪರಿಣಾಮ ಬೀರಿದೆ ಎಂದಿ ಅಧ್ಯಯನ ಮಾಡಿದ್ದಾರೆ. ಶೇಕಡಾ 80ರಷ್ಟು ಮಕ್ಕಳ ಅಕ್ಷರ ಮರೆತಿದ್ದಾರೆ ಎಂದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ಜೊತೆಗೆ ಶೇಕಡಾ 92 ರಷ್ಟು ಮಕ್ಕಳು ಗಣಿತ ವಿಷಯವನ್ನು ಮಕ್ಕಳು ಮರೆತಿದ್ದಾರೆ ಎಂದು ಅಧ್ಯಯನ ತಿಳಿಸಿದೆ. ಇದು ಅತ್ಯಂತ ಆತಂಕ ತರುವ ವಿಷಯವಾಗಿದೆ.
ಹೀಗಾಗಿ ದೂರಗಾಮಿ ಪರಿಣಾಮ ತಡೆಯಲು ಪೂರ್ಣ ಪ್ರಮಾಣದಲ್ಲಿ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗಬೇಕಿದೆ. ಸಿಬಿಎಸ್ಸಿ ಬರುವ ಎಪ್ರಿಲ್ 1 ರಿಂದ ಶೈಕ್ಷಣಿಕ ವರ್ಷ ಆರಂಭದ ಬಗ್ಗೆ ಸುತ್ತೋಲೆ ಹೊರಡಿಸಿದ್ದಾರೆ. ಈ ಎಲ್ಲದರ ಹಿನ್ನೆಲೆಯಲ್ಲಿ ನಾವೂ ಕೂಡ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ವರದಿಯಂತೆ ನಡೆದುಕೊಳ್ಳುತ್ತೇವೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
Recommended Video