ಭಾರತದ ಅತೀ ದೊಡ್ಡ ಹಬ್ಬಕ್ಕೆ ಕೌಂಟ್ಡೌನ್: ಮತದಾರರ ತೀರ್ಮಾನಕ್ಕೆ ತಲೆಬಾಗುವ ಕಾಲ ಸಮೀಪ
ಬೆಂಗಳೂರು, ಮಾರ್ಚ್ 28: ಲೋಕಸಭಾ ಚುನಾವಣೆ ಎನ್ನುವುದು ಪ್ರಜಾಪ್ರಭುತ್ವದ ರಾಷ್ಟ್ರವಾದ ಭಾರತಕ್ಕೆ ದೊಡ್ಡದೊಂದು ಹಬ್ಬದಂತಾಗಿದೆ. ಇಲ್ಲಿ ಪ್ರಜೆಗಳೇ ಪ್ರಭುಗಳನ್ನು ಆರಿಸುವ ಅವಕಾಶವಿರುವುದರಿಂದ ಎಲ್ಲರೂ ಚುನಾವಣೆಯಲ್ಲಿ ಭಾಗವಹಿಸಿ ಮತದಾರರ ಕರ್ತವ್ಯವನ್ನು ಪಾಲಿಸಬೇಕಾಗಿದೆ. ಜತೆಗೆ ಬದಲಾದ ಕಾಲಘಟ್ಟದಲ್ಲಿ ಮತದಾರರು ಪ್ರಬುದ್ಧರಾಗುತ್ತಿದ್ದು, ಮತದಾರರ ತಾಕತ್ ಅಂದ್ರೆ ಏನು ಎಂಬುದನ್ನು ತೋರಿಸಿಕೊಡಲೇ ಬೇಕಾಗಿದೆ.
ಐದು ವರ್ಷಗಳಿಗೊಮ್ಮೆ ಬರುವ ಈ ಮಹಾಚುನಾವಣೆ ಕೇವಲ ಒಬ್ಬ ಸಂಸದನ ಆಯ್ಕೆಗಷ್ಟೆ ಸೀಮಿತವಾಗಿ ಉಳಿಯದೆ ಹತ್ತು ಹಲವು ವಿಶೇಷತೆಗಳಿಗೂ ಕಾರಣವಾಗಿ ಬಿಡುತ್ತದೆ. ಇಲ್ಲಿ ಪಕ್ಷವೊಂದರ ಅಳಿವು ಉಳಿವಿನ ಜೊತೆಗೆ ನಾಯಕರ ಶಕ್ತಿ ಸಾಮರ್ಥ್ಯಗಳು ಕೂಡ ಬೆಳಕಿಗೆ ಬರುತ್ತದೆ. ಯಾರು ಹೇಗೆ ಪಕ್ಷಕ್ಕಾಗಿ ದುಡಿದರು? ಎಷ್ಟರ ಮಟ್ಟಿಗೆ ಅವರ ಶ್ರಮವಿತ್ತು? ಹೀಗೆ ಹಲವು ವಿಷಯಗಳು ಚುನಾವಣೆಯಲ್ಲಿ ಹೊರಬರಲಿದೆ. ಅದರಾಚೆಗೆ ಮತದಾರರ ಶಕ್ತಿಯೇನೆಂಬುದು ಅನಾವರಣಗೊಳ್ಳುತ್ತದೆ.

ಚುನಾವಣೆಯಿಂದ ಚುನಾವಣೆಗೆ ಮತದಾರರು ಆಯ್ಕೆ ಮಾಡಿಕೊಳ್ಳುವ ವಿಷಯಗಳು ಬದಲಾಗುತ್ತಿವೆ. ಅವರು ಮತವನ್ನು ಯಾವ ದೃಷ್ಠಿಕೋನದಲ್ಲಿ ನೀಡುತ್ತಾರೆ ಎಂಬುದು ಕೂಡ ಇಲ್ಲಿ ಬಹು ಮುಖ್ಯವಾಗುತ್ತದೆ. ಇಲ್ಲಿ ಕೆಲವರು ಪಕ್ಷನೋಡಿ, ಇನ್ನು ಕೆಲವರು ಜಾತಿ, ಸಮುದಾಯದವನು ಎಂಬ ಕಾರಣಕ್ಕೆ ಮತ ನೀಡಿದರೆ ಮತ್ತೆ ಕೆಲವರು ಆಡಳಿತ ನೋಡಿ, ಇದೆಲ್ಲದರ ನಡುವೆ ಆಡಳಿತ ವಿರೋಧಿ ಅಲೆಯಲ್ಲಿ ಮತಗಳು ತೇಲಿ ಹೋಗುವ ಸಾಧ್ಯತೆಯಿಲ್ಲದಿಲ್ಲ.
ಮತದಾರರು ಪ್ರಬುದ್ಧರಾಗುತ್ತಿದ್ದಾರೆ
ಸಮಾವೇಶ, ಪ್ರಚಾರ ಸಭೆ, ಮನೆ ಮನೆಗೆ ತೆರಳಿ ಮತ ಕೇಳಿದರೂ ಮತದಾರರ ಮಾತ್ರ ತಾನೇನು ಅಂದುಕೊಂಡಿದ್ದಾನೋ ಅದನ್ನೇ ಮಾಡುತ್ತಾನೆ. ಈ ಪೈಕಿ ಹಣ, ಇನ್ನಿತರ ಆಮಿಷಗಳಿಗೆ ಬಲಿಯಾಗಿ ಮತಚಲಾಯಿಸುವವರು ಇರಬಹುದಾದರೂ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ಮಾಡಿ ಯಾರನ್ನು ಆಯ್ಕೆ ಮಾಡಿದರೆ ಒಳಿತು ಎಂಬುದನ್ನು ಅರಿತು ಮತಚಲಾಯಿಸುವ ಪ್ರಬುದ್ಧ ಮತದಾರರು ಇದ್ದೇ ಇದ್ದಾರೆ. ಹೀಗಾಗಿಯೇ ರಾಜಕಾರಣಿಗಳು ಏನೇ ಬಡಬಡಾಯಿಸಿದರೂ ಅಂತಿಮವಾಗಿ ಮತದಾರರ ತೀರ್ಮಾನಕ್ಕೆ ತಲೆಬಾಗಲೇ ಬೇಕಾಗಿದೆ.
ಅನಕ್ಷರಸ್ಥರಿದ್ದ ಕಾಲದಲ್ಲಿ ಸುಲಭವಾಗಿ ಮತದಾರರನ್ನು ದಿಕ್ಕುತಪ್ಪಿಸಿ ಗೆಲುವು ಪಡೆದುಕೊಳ್ಳುವುದಲ್ಲದೆ, ಮತ ಬ್ಯಾಂಕ್ ಗಳನ್ನು ಭದ್ರ ಮಾಡಿಕೊಳ್ಳಬಹುದಾಗಿತ್ತು. ಆದರೆ ಈಗ ಅದು ಅಸಾಧ್ಯವಾಗಿದೆ. ಹಾಗಾಗಿ ಪ್ರತಿ ಚುನಾವಣೆ ಬಂದಾಗಲೂ ನಮ್ಮ ನಾಯಕರಿಗೆ ಭಯವಂತು ಇದ್ದೇ ಇದೆ. ಜತೆಗೆ ಒಮ್ಮೆ ಆರಿಸಿ ಕಳಿಸಿದ ಜನಪ್ರತಿನಿಧಿ ಕ್ಷೇತ್ರಕ್ಕಾಗಿ ಏನು ಕೆಲಸ ಮಾಡಿದ್ದಾನೆ ಎಂದು ಪ್ರಶ್ನಿುಸುವ ಮನೋಭಾವ ಮತದಾರರಲ್ಲಿ ಬೆಳೆಯುತ್ತಿದೆ. ಇಂತಹ ಬೆಳವಣಿಗೆ ಅತಿದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರ ಎಂದು ಕರೆಯಿಸಿಕೊಳ್ಳುತ್ತಿರುವ ಭಾರತಕ್ಕೆ ಅಗತ್ಯವಾಗಿದೆ. ಎನ್ನುವುದರಲ್ಲಿ ಎರಡು ಮಾತಿಲ್ಲ.

ಯುವ ಮತದಾರರು ಹೆಚ್ಚಾಗುತ್ತಿದ್ದಾರೆ
ಮತದಾರರು ಪ್ರಜ್ಞಾವಂತರಿದ್ದಾರೆ. ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಯಾಗಿದ್ದಾರೆ. ಹೀಗಿರುವಾಗ ಯಾವತ್ತೋ ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಗಂಟೆಗಟ್ಟಲೆ ಭಾಷಣ ಮಾಡಿದರೆ ಏನು ಪ್ರಯೋಜನವಾಗಲಾರದು. ಇವತ್ತು ಅವರ ಬದುಕಿಗೆ ಅನುಕೂಲವಾಗುವಂತಹದ್ದು ಏನು ಮಾಡಿದ್ದೀರಾ ಎಂಬುದು ಬಹುಮುಖ್ಯವಾಗುತ್ತದೆ. ಜತೆಗೆ ಅವರನ್ನು ಅಷ್ಟು ಸುಲಭವಾಗಿ ಯಾಮಾರಿಸಲು ಸಾಧ್ಯವಾಗದ ಕೆಲಸವಾಗಿದೆ. ಯುವ ಶಕ್ತಿಯ ಮನಸ್ಸನ್ನು ಗೆಲ್ಲದ ಹೊರತು ಯಾವುದೇ ರಾಜಕೀಯ ಪಕ್ಷದ ನಾಯಕರಿಗೆ ಗೆಲುವು ಅಸಾಧ್ಯವಾಗಿದೆ.
ಇದುವರೆಗೆ ರಾಜಕೀಯ ಮಾಡಿಕೊಂಡು ಬಂದಿರುವ ರಾಜಕೀಯ ಪಕ್ಷಗಳೆಲ್ಲವೂ ಮತದಾರರ ಮುಂದೆ ಸಾವಿರಾರು ಭರವಸೆಗಳನ್ನು ನೀಡಿಯೇ ಅಧಿಕಾರಕ್ಕೆ ಬಂದಿದ್ದು, ಹೀಗೆ ನೀಡಿದ ಭರವಸೆಗಳಲ್ಲಿ ಅದೆಷ್ಟೋ ಭರವಸೆಗಳು ಈಡೇರಲೇ ಇಲ್ಲ. ಆ ಬಗ್ಗೆ ರಾಜಕೀಯ ನಾಯಕರೇ ಮರೆತು ಬಿಟ್ಟಿದ್ದಾರೆ. ಭರವಸೆಗಳ ಗಾಳಿಗೋಪುರ ಕಟ್ಟುವುದರ ಮೇಲೆ ಚುನಾವಣಾ ಆಯೋಗ ನಿಗಾ ವಹಿಸಬೇಕಾಗಿದೆ. ಇದು ಕೂಡ ಒಂದು ರೀತಿಯಲ್ಲಿ ಮತದಾರರಿಗೆ ಮಾಡುವ ವಂಚನೆಯಂತೆ ಗೋಚರಿಸುತ್ತಿದೆ.

ನಾಯಕರಿಗೆ ಸವಾಲುಗಳು ಹೆಚ್ಚಾಗಿವೆ
ಆಡಳಿತ ನಡೆಸುವ ಸರ್ಕಾರಗಳ ಫ್ಲಸ್ ಮತ್ತು ಮೈನಸ್ ಬಗ್ಗೆ ಪಟ್ಟಿ ಮಾಡಿ ಹೇಳುವಷ್ಟರ ಮಟ್ಟಿಗೆ ಮತದಾರರು ಕೂಡ ಪ್ರಚಲಿತ ವಿದ್ಯಮಾನಗಳನ್ನು ಗಮನಿಸುತ್ತಿದ್ದಾರೆ. ಎಲ್ಲವನ್ನು ವಿಮರ್ಶಿಸುವ ಬುದ್ದಿವಂತಿಕೆಯೂ ಬೆಳೆದಿದೆ. ಇಂತಹ ಕಾಲದಲ್ಲಿ ಚುನಾವಣೆಯನ್ನು ಎದುರಿಸಿ ಗೆಲುವು ಪಡೆಯುವುದು ನಮ್ಮ ನಾಯಕರಿಗೆ ಸವಾಲ್ ಆಗಿದೆ. ಇಲ್ಲಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಪಾಲ್ಗೊಳ್ಳುವಂತಾದರೆ ಅದಕ್ಕಿಂತ ಸಂತೋಷ ಬೇರೊಂದಿಲ್ಲ.












Click it and Unblock the Notifications