ಸಚಿವರು, ಅಧಿಕಾರಿಗಳು ಹಳೆಯ ಕಾರುಗಳಲ್ಲೇ ಓಡಾಡಬೇಕು
ಬೆಂಗಳೂರು, ಜೂನ್ 23: ಅಗತ್ಯಕ್ಕಿಂತ ಹೆಚ್ಚು ವೆಚ್ಚಕ್ಕೆ ಕಡಿವಾಣ ಹಾಕುವಂತೆ ಎಚ್ಡಿ ಕುಮಾರಸ್ವಾಮಿ ಅವರ ನಿರ್ದೇಶನ ಆಧರಿಸಿ, ಹೊಸ ಕಾರು ಖರೀದಿಗಾಗಿ ಸಚಿವರು ಹಾಗೂ ಅಧಿಕಾರಿಗಳಿಂದ ಬಂದಿದ್ದ ಪ್ರಸ್ತಾವನೆಗಳಿಗೆ ರಾಜ್ಯ ಮುಖ್ಯ ಕಾರ್ಯದರ್ಶಿ ತಡೆ ಹಾಕಿದ್ದಾರೆ.
ಸಚಿವರಿಗೆ ಹಂಚಿಕೆಯಾಗುವ ಸರ್ಕಾರಿ ಬಂಗಲೆಗಳು, ಕಚೇರಿಗಳ ನವೀಕರಣ , ಹೊಸ ಕಾರುಗಳ ಖರೀದಿಗೆ ಕಡಿವಾಣ ಹಾಕುವಂತೆ ಸಿಎಂ ಮೌಖಿಕ ನಿರ್ದೇಶನ ನೀಡಿದ್ದರು. ಈ ಹಿನ್ನೆಲೆಯಲ್ಲಿ ಹೊಸ ಕಾರುಗಳಿಗಾಗಿ ಸಚಿವರು ಮತ್ತು ಅಧಿಕಾರಿಗಳು ಸಲ್ಲಿಸಿದ್ದ 11 ಅರ್ಜಿಗಳನ್ನು ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ವಾಪಸ್ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೆಲವು ಸಚಿವರಿಂದ ಹೊಸ ಐಷಾರಾಮಿ ಕಾರುಗಳ ಖರೀದಿಗೆ ಬೇಡಿಕೆ ಬಂದಿದೆ. ಆದರೆ, ಹಿಂದಿನ ಸಚಿವರು ಬಳಸುತ್ತಿದ್ದ ಕಾರುಗಳೇ ಸುಸ್ಥಿಯಲ್ಲಿದ್ದು, ಅವುಗಳನ್ನೇ ಬಳಸುವುದರಿಂದ ಕೋಟ್ಯಂತರ ಹಣ ಉಳಿತಾಯವಾಗಲಿದೆ ಎಂಬ ಸಿಎಂ ಅಭಿಪ್ರಾಯದ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿ ಈ ತೀರ್ಮಾನ ಕೈಗೊಂಡಿದ್ದಾರೆ.

ಸಚಿವರಾದ, ಯು.ಟಿ. ಖಾದರ್, ಕೆ.ಜೆ. ಜಾರ್ಜ್, ಡಿ.ಕೆ. ಶಿವಕುಮಾರ್, ಜಯಮಾಲಾ, ಪ್ರಿಯಾಂಕ್ ಖರ್ಗೆ ಸೇರಿ ಹಲವು ಸಚಿವರು ಹೊಸ ಕಾರುಗಳಿಗೆ ಬೇಡಿಕೆ ಸಲ್ಲಿಸಿದ್ದರು. ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರು ಹೊಸ ಕಾರಿಗೆ ಬೇಡಿಕೆ ಸಲ್ಲಿಸಿದ್ದರು ಮತ್ತು 11 ಹೊಸ ಕಾರುಗಳ ಬೇಡಿಕೆ ಇದೂ ಸೇರಿತ್ತು ಎನ್ನಲಾಗಿದೆ. ಒಟ್ಟಿನಲ್ಲಿ ಎಲ್ಲಾ ಸಚಿವರು ಹಳೆಯ ಕಾರಿನಲ್ಲೇ ತೆರಳಬೇಕಾಗುತ್ತದೆ. ಹೊಸ ಕಾರುಗಳನ್ನು ನೀಡುವುದನ್ನು ನಿರಾಕರಿಸಿದ್ದಾರೆ ಎನ್ನಲಾಗಿದೆ.












Click it and Unblock the Notifications