ಕಂದಾಯ ಇಲಾಖೆ ಭ್ರಷ್ಟಾಚಾರ; 104 ಕೆಎಎಸ್ ಅಧಿಕಾರಿಗಳ ವಿರುದ್ಧ ಆರೋಪ
ಬೆಂಗಳೂರು, ಅಕ್ಟೋಬರ್ 09 : ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ಮಾಮೂಲಿ ಎಂದರೂ ತಪ್ಪಿಲ್ಲ. ಆದರೆ, ಹಲವಾರು ವರ್ಷಗಳಿಂದ ಇಲಾಖೆಯಲ್ಲಿಯೇ ಇರುವ ಅಧಿಕಾರಿಗಳು ಇದಕ್ಕೆ ಹೇಗೆ ಸಹಕಾರ ನೀಡುತ್ತಾರೆ ಎಂಬುದು ಬೆಚ್ಚಿ ಬೀಳಿಸುವ ಅಂಶ.
ಅಕ್ರಮವಾಗಿ ಖಾತೆ ಬದಲಾವಣೆ, ಭೂ ಸುಧಾರಣಾ ಕಾಯ್ದೆ ನಿಯಮ ಉಲ್ಲಂಘನೆ, ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸದಿರುವುದು, ಸರ್ಕಾರಿ ಜಮೀನು ಕಡಿಮೆ ತೋರಿಸುವುದು ಸೇರಿದಂತೆ ವಿವಿಧ ರೀತಿಯಲ್ಲಿ ವಂಚನೆ ಮಾಡಲಾಗುತ್ತದೆ.
ಇಲಾಖೆಯಲ್ಲಿ ಇಂತಹ ಆರೋಪಗಳನ್ನು ಹಲವು ಅಧಿಕಾರಿಗಳು ಎದುರಿಸುತ್ತಿದ್ದಾರೆ. 104 ಕೆಎಎಸ್ ಅಧಿಕಾರಿಗಳ ವಿರುದ್ಧ ಇಂತಹ ಆರೋಪಗಳಿವೆ. ಆರೋಪಿತ ಅಧಿಕಾರಿಗಳ ಕುರಿತು ಪ್ರಕರಣಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸರಿಯಾಗಿ ನೀಡದೆ ದಾರಿ ತಪ್ಪಿಸುವ ಕೆಲಸ ಸಹ ನಡೆಯುತ್ತಿದೆ.

'ದಿ ಫೈಲ್' ಇಂತಹ ಅಧಿಕಾರಿಗಳ ಪಟ್ಟಿಯನ್ನು ತನ್ನ ವರದಿಯಲ್ಲಿ ದಾಖಲು ಮಾಡಿದೆ. ಅಧಿಕಾರಿಗಳ ಕುರಿತು ಸರಿಯಾದ ಮಾಹಿತಿ ನೀಡದ ಕಾರಣ ಇಲಾಖಾ ವಿಚಾರಣೆ ಸಹ ಆಮೆಗತಿಯಲ್ಲಿ ನಡೆಯುತ್ತಿದೆ. ಕಂದಾಯ ಸಚಿವ ಆರ್. ಅಶೋಕ್ ಗಮನಕ್ಕೆ ಇವುಗಳು ಬಂದಿಲ್ಲವೇ? ಎಂಬುದು ಸದ್ಯದ ಪ್ರಶ್ನೆಯಾಗಿದೆ.
ಆರೋಪ ಕೇಳಿ ಬಂದಿರುವ ಅಧಿಕಾರಿಗಳ ಬಗ್ಗೆ ಮಾಹಿತಿ ನೀಡಬೇಕಾದ ಇಲಾಖೆ ಹಲವು ವರ್ಷಗಳಿಂದ ಕಡತಗಳನ್ನು ಮುಂದಕ್ಕೆ ಕಳಿಸಿಲ್ಲ. ಹೀಗಾಗಿ ಬಹುತೇಕ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದು ಸಹ ಸಾಧ್ಯವಿಲ್ಲ.
ಕೆಲವು ಅಧಿಕಾರಿಗಳ ವಿರುದ್ಧದ ಪ್ರಕರಣಗಳು ಲೋಕಾಯುಕ್ತಕ್ಕೆ ತಲುಪಿವೆ. ಆದರೆ, ಸ್ವೀಕಾರವಾಗಿರುವ 5 ಪ್ರಕರಣಗಳಲ್ಲಿ ಸಿಸಿಎ ನಿಯಮಾವಳಿಗಳ 14(ಎ) ಅಡಿ ಇಲಾಖಾ ವಿಚಾರಣೆಗೆ ವಹಿಸುವ ಪ್ರಕರಣಗಳ ಬಗ್ಗೆಯೂ ಕಂದಾಯ ಇಲಾಖೆ ಸರಿಯಾಗಿ ಮಾಹಿತಿಯನ್ನು ನೀಡುತ್ತಿಲ್ಲ.












Click it and Unblock the Notifications