ಲೋಕಾಯುಕ್ತದಲ್ಲಿ ಭ್ರಷ್ಟಾಚಾರ, ಮೊಬೈಲ್ ಕರೆಗಳ ಸಾಕ್ಷಿ ನಾಶ
ಬೆಂಗಳೂರು, ಆಗಸ್ಟ್ 4 : ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಅಶೋಕ್ ಕುಮಾರ್ ಮತ್ತು ಶಂಕರೇಗೌಡರಿಗೆ ಜಾಮೀನು ನೀಡಬಾರದು ಎಂದು ಲೋಕಾಯುಕ್ತ ಕೋರ್ಟ್ಗೆ ಆಕ್ಷೇಪಣೆ ಸಲ್ಲಿಸಿದೆ. ಅಶೋಕ್ ಕುಮಾರ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶ ನೀಡಿದೆ.
ಎಸ್ಐಟಿ ವಶದಲ್ಲಿದ್ದ ಅಶೋಕ್ ಕುಮಾರ್ ಅವರನ್ನು ಸೋಮವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಅಶೋಕ್ ಕುಮಾರ್ ಪರ ವಕೀಲರು ಜಾಮೀನು ಅರ್ಜಿಯನ್ನು ಕೋರ್ಟ್ಗೆ ಸಲ್ಲಿಸಿದರು. ಆದರೆ, ಎಸ್ಐಟಿ ಆಕ್ಷೇಪಣೆ ಸಲ್ಲಿಸಿದ್ದರಿಂದ ನ್ಯಾಯಾಧೀಶ ಜಿ.ವಿ.ಬೋಪಯ್ಯ ಅವರು ವಿಚಾರಣೆಯನ್ನು ಆ.14ಕ್ಕೆ ಮುಂದೂಡಿದರು. [ಲೋಕಾ ಹಗರಣ: ಪೊಲೀಸರೆದುರು ಆರೋಪಿ ಬಾಯ್ಬಿಟ್ಟ ಸತ್ಯ]

ನ್ಯಾಯಾಂಗ ಬಂಧನದಲ್ಲಿರುವ ಅಶೋಕ್ ಕುಮಾರ್, ಶ್ರೀನಿವಾಸಗೌಡ ಹಾಗೂ ಶಂಕರೇಗೌಡ ಅವರನ್ನು ಆ.14ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಅಂದೇ ಎಲ್ಲರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಲೋಕಾಯುಕ್ತ ಜಂಟಿ ಆಯುಕ್ತ ಸೈಯದ್ ರಿಯಾಜ್ ಜಾಮೀನು ಅರ್ಜಿಯ ವಿಚಾರಣೆ ಆ.5ರಂದು ನಡೆಯಲಿದೆ.[9 ದಿನಗಳ ಕಾಲ ಅಶ್ವಿನ್ ರಾವ್ SIT ವಶಕ್ಕೆ]
ಲೋಕಾಯುಕ್ತ ನ್ಯಾ.ಭಾಸ್ಕರರಾವ್ ಪುತ್ರ ಅಶ್ವಿನ್ ರಾವ್ ಎಸ್ಐಟಿ ವಶದಲ್ಲಿದ್ದು, ಅವಧಿ ಆ.6ರಂದು ಮುಕ್ತಾಯವಾಗಲಿದೆ. ಅಂದು ಅವರನ್ನು ಕೋರ್ಟ್ಗೆ ಹಾಜರುಪಡಿಸಿದಾಗ ಜಾಮೀನು ಅರ್ಜಿಯ ವಿಚಾರಣೆಯನ್ನು ನಡೆಸಲಾಗುತ್ತದೆ. [ಲೋಕಾಯುಕ್ತದಲ್ಲಿ ಇದೇನಿದು ಹಗರಣ?]
50 ಪುಟಗಳ ಆಕ್ಷೇಪಣೆ : ಭ್ರಷ್ಟಾಚಾರ ಪ್ರಕರಣದ ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ಎಸ್ಐಟಿ ಕೋರ್ಟ್ಗೆ 50 ಪುಟಗಳ ಆಕ್ಷೇಪಣೆಯನ್ನು ಸಲ್ಲಿಸಿದೆ. ಅಶೋಕ್ ಕುಮಾರ್ ಮತ್ತು ಶಂಕರೇಗೌಡ ಅವರು ಮೊಬೈಲ್ ಕರೆಗಳ ಸಾಕ್ಷಿ ನಾಶಪಡಿಸಿದ್ದಾರೆ ಎಂದು ಎಸ್ಐಟಿ ಹೇಳಿದೆ.
ಮೂವರು ಆರೋಪಿಗಳಾದ ಅಶೋಕ್ ಕುಮಾರ್, ಶಂಕರೇಗೌಡ, ರಿಯಾಜ್ ಲೋಕೋಪಯೋಗಿ ಇಂಜಿನಿಯರ್ ಕೃಷ್ಣಮೂರ್ತಿ ಅವರ ಜೊತೆ ಮೇ 4ರತನಕ ಸಂಪರ್ಕದಲ್ಲಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಕುಮಾರ್ ನಿವಾಸದಲ್ಲಿ ಎಸ್ಐಟಿಗೆ 5 ಮೊಬೈಲ್ ಫೋನ್ಗಳು ಸಿಕ್ಕಿವೆ. ಇವುಗಳಲ್ಲಿ ಕರೆಗಳು ರೆಕಾರ್ಡ್ ಆಗಿದ್ದು, ಅವುಗಳನ್ನು ಧ್ವನಿ ಪರೀಕ್ಷೆಗೆ ಕಳುಹಿಸಲಾಗುತ್ತದೆ ಎಂದು ಆಕ್ಷೇಪಣೆಯಲ್ಲಿ ಹೇಳಿದೆ.












Click it and Unblock the Notifications