ಅಶ್ವಿನ್ ರಾವ್ ಬಂಧನ : ಲೋಕಾಯುಕ್ತರ ಮುಂದಿನ ನಡೆಯೇನು?
ಬೆಂಗಳೂರು, ಜುಲೈ 27 : ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (ಎಸ್ಐಟಿ) ಲೋಕಾಯುಕ್ತ ನ್ಯಾ.ವೈ.ಭಾಸ್ಕರರಾವ್ ಪುತ್ರ ಅಶ್ವಿನ್ ರಾವ್ ಅವರನ್ನು ಬಂಧಿಸಿದೆ. ಈ ಪ್ರಕರಣದಲ್ಲಿ ಅಶ್ವಿನ್ ರಾವ್ ಪ್ರಮುಖ ಆರೋಪಿಯಾಗಿದ್ದಾನೆ.
ಜುಲೈ 25ರೊಳಗೆ ವಿಚಾರಣೆಗೆ ಹಾಜರಾಗುವಂತೆ ಅಶ್ವಿನ್ ರಾವ್ ಅವರಿಗೆ ಎಸ್ಐಟಿ ನೋಟಿಸ್ ಜಾರಿಗೊಳಿಸಿತ್ತು. ಆದರೆ, ಅಶ್ವಿನ್ ರಾವ್ ಹಾಜರಾಗಿರಲಿಲ್ಲ. ಭಾನುವಾರದಿಂದ ಮೂರು ತಂಡಗಳನ್ನು ರಚಿಸಿ ಹೈದರಾಬಾದ್, ಬೆಂಗಳೂರು, ಚೆನ್ನೈನಲ್ಲಿ ಅಶ್ವಿನ್ ರಾವ್ಗಾಗಿ ಹುಟುಕಾಟ ನಡೆಸಲಾಗುತ್ತಿತ್ತು.

ಬೆಂಗಳೂರು ಪಶ್ಚಿಮ ವಲಯ ಡಿಸಿಪಿ ಲಾಬೂರಾಮ್ ಅವರ ನೇತೃತ್ವದ ಎಸ್ಐಟಿ ತಂಡ ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯಲ್ಲಿರುವ ಅಶ್ವಿನ್ ರಾವ್ ಅವರ ನಿವಾಸದಲ್ಲಿ ಅವರನ್ನು ಬಂಧಿಸಿದೆ. ಅವರ ಜೊತೆಗೆ ಅಶ್ವಿನ್ ರಾವ್ ಆಪ್ತ ಮನೋಜ್ ಅವರನ್ನು ಬಂಧಿಸಲಾಗಿದೆ. [ಸಯ್ಯದ್ ರಿಯಾಜ್ ಬಂಧನ]
ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (ಎಸ್ಐಟಿ) ಲೋಕಾಯುಕ್ತ ಜಂಟಿ ಆಯುಕ್ತ ಸಯ್ಯದ್ ರಿಯಾಜ್ ಅವರನ್ನು ಭಾನುವಾರ ಬಂಧಿಸಿತ್ತು. ಇಂದು ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯುವ ಸಾಧ್ಯತೆ ಇದೆ. [ಲೋಕಾಯುಕ್ತದಲ್ಲಿ ಇದೇನಿದು ಹಗರಣ?]
ಕಮಲ್ ಪಂಥ್ ನೇತೃತ್ವದ ಎಸ್ಐಟಿ ತಂಡ ಇದುವರೆಗೂ ಸಯ್ಯದ್ ರಿಯಾಜ್, ಅಶೋಕ್, ಶ್ರೀನಿವಾಸಗೌಡ ಮತ್ತು ಶಂಕರೇಗೌಡ ಅವರನ್ನು ಬಂಧಿಸಿದೆ. ಬಂಧಿತರೆಲ್ಲರೂ ಎಸ್ಐಟಿ ವಶದಲ್ಲಿದ್ದು, ಸಯ್ಯದ್ ಅವರನ್ನು ಇಂದು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.
ರಾಜ್ಯಪಾಲರ ಭೇಟಿಗೆ ಸಮಯ ನಿಗದಿ : ಇತ್ತ ಲೋಕಾಯುಕ್ತ ನ್ಯಾ.ವೈಭಾಸ್ಕರರಾವ್ ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಭೇಟಿ ಮಾಡಲು ಸಮಯಾವಕಾಶ ಕೇಳಿದ್ದು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಆದರೆ, ಇಂದು ಮತ್ತು ನಾಳೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ರಾಜಭವನದಲ್ಲಿ ವಾಸ್ತವ್ಯ ಹೂಡಲಿದ್ದು, ಲೋಕಾಯುಕ್ತರು ಫ್ಯಾಕ್ಸ್ ಮೂಲಕವೇ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ.












Click it and Unblock the Notifications