ಕರ್ನಾಟಕದಲ್ಲಿ ಇಂದು 3,649 ಕೊರೊನಾ ಕೇಸ್; ಐದು ಜಿಲ್ಲೆಗಳ ಅಪ್ಡೇಟ್
ಬೆಂಗಳೂರು, ಜುಲೈ 21: ಇಂದು ರಾಜ್ಯದಲ್ಲಿ 3,649 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಸೋಂಕಿನಿಂದಾಗಿ 61 ಮಂದಿ ಸಾವನ್ನಪ್ಪಿದ್ದು, ರಾಜ್ಯದಲ್ಲಿ ಸದ್ಯಕ್ಕೆ ಸೋಂಕಿತರ ಸಂಖ್ಯೆ 71,069ಕ್ಕೆ ಏರಿಕೆಯಾಗಿದೆ.
Recommended Video
ಜೊತೆಗೆ 1664 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ನಡುವೆ ಕೆಲವು ಜಿಲ್ಲೆಗಳಲ್ಲಿ ಸೋಂಕಿನ ಪ್ರಕರಣಗಳಲ್ಲಿ ಏರಿಕೆಯೂ ಕಂಡಿದೆ. ಕೆಲವು ಕಡೆ ಸಕ್ರಿಯ ಸೋಂಕಿತರ ಸಂಖ್ಯೆ ಕಡಿಮೆಯಾಗಿರುವುದು ಸಮಾಧಾನವನ್ನೂ ತಂದಿದೆ. ಚಿತ್ರದುರ್ಗ, ಬಳ್ಳಾರಿ, ಶಿವಮೊಗ್ಗ, ಚಿಕ್ಕಮಗಳೂರು, ರಾಮನಗರ ಜಿಲ್ಲೆಗಳ ಕೊರೊನಾ ಸೋಂಕಿನ ಪ್ರಕರಣಗಳ ವರದಿಯನ್ನು ಇಲ್ಲಿ ನೀಡಲಾಗಿದೆ...

ಚಿತ್ರದುರ್ಗ ಜಿಲ್ಲೆಯಲ್ಲಿ 23 ಕೊರೊನಾ ವೈರಸ್ ಪ್ರಕರಣ
ಇಂದು ಚಿತ್ರದುರ್ಗ ಜಿಲ್ಲೆಯಲ್ಲಿ 23 ಜನರಿಗೆ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 270ಕ್ಕೆ ಏರಿಕೆಯಾಗಿದೆ. ಸೋಂಕಿನಿಂದಾಗಿ ಹಿರಿಯೂರಿನ ವೃದ್ಧರೊಬ್ಬರು ಮೃತಪಟ್ಟಿರುವ ವರದಿಯಾಗಿದೆ. ಇದುವರೆಗೆ 6 ಜನ ಜಿಲ್ಲೆಯಲ್ಲಿ ಮೃತಪಟ್ಟಿದ್ದಾರೆ. ಸೋಂಕಿತರ ಪೈಕಿ ಈಗಾಗಲೆ 125 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಜಿಲ್ಲೆಯಲ್ಲಿ ಸದ್ಯ 139 ಸಕ್ರಿಯ ಪ್ರಕರಣಗಳು ಇವೆ. ಸದ್ಯ ಜಿಲ್ಲೆಯಲ್ಲಿ ಒಟ್ಟು 69 ಕಂಟೈನ್ಮೆಂಟ್ ವಲಯಗಳಿವೆ.

ಬಳ್ಳಾರಿಯಲ್ಲಿ 142 ಕೊರೊನಾ ಸೋಂಕಿನ ಪ್ರಕರಣ
ಬಳ್ಳಾರಿ ಜಿಲ್ಲೆಯಲ್ಲಿ ಇಂದು ಕೂಡ ಕೊರೊನಾ ಸೋಂಕು ಶತಕ ಬಾರಿಸಿದೆ. ಜಿಲ್ಲೆಯಲ್ಲಿ ಇಂದು 142 ಜನರಿಗೆ ಸೋಂಕು ದೃಢವಾಗಿದೆ. ಬಳ್ಳಾರಿ-31, ಸಂಡೂರು-18, ಸಿರುಗುಪ್ಪ-6, ಕೂಡ್ಲಿಗಿ-12, ಹೂವಿನಹಡಗಲಿ-11, ಹೊಸಪೇಟೆ-52, ಹಗರಿಬೊಮ್ಮನಹಳ್ಳಿ-6, ಹರಪನಹಳ್ಳಿ-6 ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯಲ್ಲಿ ಇದುವರೆಗೆ ಕೊರೊನಾ ಸೋಂಕಿತರ ಸಂಖ್ಯೆ 2810 ಆಗಿದೆ. ಜೊತೆಗೆ ಬಳ್ಳಾರಿ ಡಿಸಿ ಮನೆಯ ಕೆಲಸದ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಡಿಸಿ ಕೂಡ ಹೋಂ ಕ್ವಾರಂಟೈನ್ ನಲ್ಲಿದ್ದಾರೆ.

ರಾಮನಗರದಲ್ಲಿ ಇಂದು 32 ಪ್ರಕರಣ
ರಾಮನಗರ ಜಿಲ್ಲೆಯಲ್ಲಿ ಇಂದು 32 ಕೊರೊನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಇದೀಗ ಕೊರೊನಾ ಪ್ರಕರಣಗಳ ಸಂಖ್ಯೆ 561ಕ್ಕೆ ಏರಿಕೆಯಾಗಿದ. ಚನ್ನಪಟ್ಟಣ ತಾಲ್ಲೂಕಿನಲ್ಲಿ 13, ಮಾಗಡಿಯಲ್ಲಿ 6 ಪ್ರಕರಣ, ಕನಕಪುರದಲ್ಲಿ 8, ರಾಮನಗರ ತಾಲ್ಲೂಕಿನಲ್ಲಿ 5 ಪ್ರಕರಣಗಳು ಕಂಡುಬಂದಿವೆ. ಇಂದು 9 ಜನರು ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 303 ಜನರು ಗುಣಮುಖರಾಗಿದ್ದಾರೆ. ಸದ್ಯ 247 ಸಕ್ರಿಯ ಪ್ರಕರಣಗಳಿದ್ದು, ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಇದುವರೆಗೆ 11 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ಕಾಫಿನಾಡಿನಲ್ಲಿ 400 ಗಡಿ ದಾಟಿದ ಸೋಂಕಿತರ ಸಂಖ್ಯೆ
ಇಂದು ಒಂದೇ ದಿನ ಚಿಕ್ಕಮಗಳೂರಿನಲ್ಲಿ 68 ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಕಡೂರು 18, ಚಿಕ್ಕಮಗಳೂರು 17, ಶೃಂಗೇರಿ 8, ಕೊಪ್ಪ 7, ತರೀಕೆರೆ 2, ಎನ್.ಆರ್ ಪುರದಲ್ಲಿ 7, ಅಜ್ಜಂಪುರ 3, ಮೂಡಿಗೆರೆಯಲ್ಲಿ 6 ಪ್ರಕರಣ ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 402ಕ್ಕೆ ಏರಿಕೆಯಾಗಿದೆ. 227 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಇಲ್ಲಿಯವರೆಗೂ 10 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
ಜೊತೆಗೆ ಕಳಸ ಪೊಲೀಸ್ ಠಾಣೆಯ ನಾಲ್ವರು ಪೊಲೀಸರಿಗೂ ಸೋಂಕು ದೃಢಪಟ್ಟಿದ್ದು, ಕಳಸ ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ.

ಶಿವಮೊಗ್ಗದಲ್ಲಿ ಸತ್ತ ಮಹಿಳೆಗೆ ಸೋಂಕು
ಶಿವಮೊಗ್ಗ ಜಿಲ್ಲೆಯಲ್ಲಿ ಇಂದು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಇವರಿಗೆ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ. 45 ವರ್ಷದ ಮಹಿಳೆಯೊಬ್ಬರು ನಾಲ್ಕು ದಿನಗಳ ಹಿಂದೆ ಹೃದಯ ಸಂಬಂಧಿ ಕಾಯಿಲೆಯಿಂದ ಮೆಗ್ಗಾನ್ ಗೆ ದಾಖಲಾಗಿದ್ದರು. ಇವರು ಸಾವನ್ನಪ್ಪಿದ್ದು, ಅವರಿಗೆ ಸೋಂಕು ಇದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ಇವರ ಅಂತ್ಯ ಸಂಸ್ಕಾರ ರಾಜೀವ್ ಗಾಂಧಿ ಬಡಾವಣೆಯ ಹತ್ತಿರದ ರೋಟರಿ ಚಿತಾಗಾರದಲ್ಲಿ ಕೋವಿಡ್-19 ನಿಯಮಾವಳಿಯ ಅಡಿಯಲ್ಲಿ ನಡೆಸಲಾಯಿತು.
ಜಿಲ್ಲೆಯಲ್ಲಿ ಇಂದು 64 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.












Click it and Unblock the Notifications