ಮಾರ್ಚ್ 31ರ ತನಕ ಯಾವುದೇ ಪರೀಕ್ಷೆ ನಡೆಸಲ್ಲ: ಸುರೇಶ್ ಕುಮಾರ್
ಬೆಂಗಳೂರು, ಮಾರ್ಚ್ 15: ಕರ್ನಾಟಕದಲ್ಲಿ ಕೊರೊನಾವೈರಸ್ ಭೀತಿ ಹೆಚ್ಚಾಗಿರುವುದರಿಂದ ಶಾಲಾ, ಕಾಲೇಜುಗಳ ಅವಧಿ, ಪರೀಕ್ಷೆ ಕುರಿತಂತೆ ಸರ್ಕಾರ ಸೂಕ್ತ ನಿರ್ಧಾರವನ್ನು ಕೈಗೊಳ್ಳುತ್ತಿದೆ. ಒಂದು ವಾರಗಳ ಕಾಲ ಕರ್ನಾಟಕದಲ್ಲಿ ಹೆಚ್ಚಿನ ಜನಸಂದಣಿ ಸೇರಿದಂತೆ ನಿರ್ಬಂಧ, ನಿಷೇಧ ಹೇರುವ ಮೂಲಕ ರಾಜ್ಯ ಸರ್ಕಾರ ಕಠಿಣ ಕ್ರಮ ಜರುಗಿಸಿದೆ.
ಈಗ ಕೊರೊನಾವೈರಸ್ ಸೋಂಕು ವ್ಯಾಪಿಸದಂತೆ ತಡೆಗಟ್ಟಲು ಪರೀಕ್ಷೆಗಳನ್ನು ಮುಂದೂಡಲಾಗಿದೆ. 7, 8 ಹಾಗೂ 9ನೇ ತರಗತಿ ಪರೀಕ್ಷೆಗಳನ್ನು ಮಾರ್ಚ್ 31ರ ತನಕ ಮುಂದೂಡುವಂತೆ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಆದೇಶಿಸಿದ್ದಾರೆ. ಮಾರ್ಚ್ 31ರ ತನಕ ಯಾವುದೇ ಪರೀಕ್ಷೆ ನಡೆಸುವುದು ಬೇಡ, ಪರೀಕ್ಷೆ ದಿನಾಂಕದಲ್ಲಿ ಬದಲಾವಣೆ ಬಗ್ಗೆ ಮುಂದಿನ ಆದೇಶದಲ್ಲಿ ತಿಳಿಸಲಾಗುವುದು ಎಂದಿದ್ದಾರೆ.

ಈ ಹಿಂದೆ ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಿದಂತೆ ಬಿಬಿಎಂಪಿ, ಬೆಂಗಳೂರುನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಎಲ್ಲಾ ಪ್ರಾಥಮಿಕ ಶಾಲೆಗಳಿಗೆ ಮುಂದಿನ ಆದೇಶದವರೆಗೆ ರಜೆ ಘೋಷಿಸಲಾಗಿದೆ.
ಈ ನಡುವೆ ಸರ್ಕಾರದ ಆದೇಶದ ನಡುವೆಯೂ ಶಾಲೆ ನಡೆಸುತ್ತಿರುವ ಬಗ್ಗೆ ಸುದ್ದಿ ಬಂದಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್, ''ಸರ್ಕಾರದ ಆದೇಶ ಪಾಲಿಸುವುದು ಶಾಲೆಗಳ ಕರ್ತವ್ಯ. ಆದರೆ, ಕೆಲವು ಖಾಸಗಿ ಶಾಲೆಗಳು ಸರ್ಕಾರಿ ಆದೇಶಕ್ಕೆ ಗೌರವ ನೀಡದೆ, ತಮ್ಮದೆ ಸಾಮ್ರಾಜ್ಯ ಕಟ್ಟಿಕೊಂಡಿವೆ.'' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.












Click it and Unblock the Notifications