ಇಟಲಿಯಲ್ಲಿ ಸಿಲುಕಿರುವ 400 ಕನ್ನಡಿಗರ ರಕ್ಷಣೆಯತ್ತ ಸರ್ಕಾರ ಚಿತ್ತ
ಮಾರಣಾಂತಿಕ ಕೊರೊನಾ ವೈರಸ್ ನಿಂದಾಗಿ ಇಟಲಿ ತತ್ತರಿಸಿದೆ. ಕೊರೊನಾ ವೈರಸ್ ಹೊಡೆತದಿಂದಾಗಿ ನಲುಗಿ ಹೋಗಿರುವ ಇಟಲಿಯಲ್ಲಿ ಸಿಲುಕಿರುವ ಕನ್ನಡಿಗರನ್ನು ತಾಯ್ನಾಡಿಗೆ ವಾಪಸ್ ಕರೆತರಲು ಕೇಂದ್ರ ಸರ್ಕಾರದ ಜೊತೆಗೆ ಸಂಪರ್ಕದಲ್ಲಿದ್ದೇವೆ ಎಂದು ಉಪ ಮುಖ್ಯಮಂತ್ರಿ ಸಿ.ಎನ್.ಅಶ್ವತ್ಥ ನಾರಾಯಣ್ ವಿಧಾನ ಸಭೆಯಲ್ಲಿ ಹೇಳಿದ್ದಾರೆ.
ವಿಶ್ವದ ಸಾಂಕ್ರಾಮಿಕ ಪಿಡುಗು ಕೊರೊನಾ ವೈರಸ್ ನ ಕೇಂದ್ರ ಸ್ಥಾನ ಇದೀಗ ಯೂರೋಪ್ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ. ಕೊರೊನಾ ವೈರಸ್ ನಿಂದಾಗಿ ದಿನೇ ದಿನೇ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ, ಇಟಲಿ ಸಂಪೂರ್ಣವಾಗಿ ಸ್ತಬ್ಧಗೊಂಡಿದೆ. ಹೀಗಾಗಿ, ಇಟಲಿಯಿಂದ ಭಾರತಕ್ಕೆ ಬರುವವರ ಮೇಲೆ ಸರ್ಕಾರ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಿದೆ.
ಇದೇ ವಿಚಾರದ ಕುರಿತು ನಿನ್ನೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಸದನದ ಗಮನ ಸೆಳೆದಿದ್ದರು.

ಪ್ರಿಯಾಂಕ್ ಖರ್ಗೆ ಹೇಳಿದ್ದೇನು.?
''ಕರ್ನಾಟಕದ 150 ವಿದ್ಯಾರ್ಥಿಗಳು ಸೇರಿದಂತೆ 445 ಜನರು ಇಟಲಿಯಲ್ಲಿ ಸಿಲುಕಿಕೊಂಡಿದ್ದಾರೆ. ಕೊರೊನಾ ಪರೀಕ್ಷೆಯ ನೆಗೆಟಿವ್ ಸರ್ಟಿಫಿಕೇಟ್ ಕೊಡದೇ ಇದ್ದರೆ ಏರ್ ಇಂಡಿಯಾದವರು ವಿಮಾನ ಹತ್ತಿಸಿಕೊಳ್ಳಲು ಬಿಡುತ್ತಿಲ್ಲ'' ಎಂದು ಪ್ರಿಯಾಂಕ್ ಖರ್ಗೆ ಸದನದಲ್ಲಿ ಹೇಳಿದ್ದರು.

ಫ್ಲೈಟ್ಸ್ ಕ್ಯಾನ್ಸಲ್ ಆಗಿವೆ
ಇದಕ್ಕೆ ಉತ್ತರಿಸಿದ ಡಿಸಿಎಂ ಸಿ.ಎನ್.ಅಶ್ವತ್ಥ ನಾರಾಯಣ್, ''400 ಕನ್ನಡಿಗರೂ ಸೇರಿದಂತೆ 1000 ಭಾರತೀಯರು ಮಿಲಾನ್ ಮತ್ತು ರೋಮ್ ಏರ್ ಪೋರ್ಟ್ ನಲ್ಲಿ ಸಿಲುಕಿದ್ದಾರೆ. ಎಲ್ಲರೂ ಭಾರತಕ್ಕೆ ವಾಪಸ್ ಆಗುತ್ತಿದ್ದರು. ಆದ್ರೆ, ಫ್ಲೈಟ್ ಗಳು ಕ್ಯಾನ್ಸಲ್ ಆಗಿವೆ. ಅವರೆಲ್ಲರನ್ನೂ ಭಾರತಕ್ಕೆ ಕರೆತರಲು ಯಾವ ಏರ್ ಲೈನ್ಸ್ ಕೂಡ ರೆಡಿ ಇಲ್ಲ'' ಎಂದರು.

ಶೀಘ್ರದಲ್ಲಿ ಏರ್ ಲಿಫ್ಟ್
''ಕೇಂದ್ರ ಸರ್ಕಾರದ ಸಹಾಯದೊಂದಿಗೆ ಇಟಲಿಯಲ್ಲಿ ಸಿಲುಕಿರುವ ಕನ್ನಡಿಗರನ್ನು ವಾಪಸ್ ಕರೆತರುತ್ತೇವೆ. ಮಿಲಾನ್ ಏರ್ ಪೋರ್ಟ್ ನಲ್ಲಿ ವೈದ್ಯಕೀಯ ತಪಾಸಣೆ ಮುಗಿದಿದೆ. ರೋಮ್ ಏರ್ ಪೋರ್ಟ್ ನಲ್ಲಿ ಇರುವವರಿಗೆ ರಕ್ತ ಪರೀಕ್ಷೆ ಮಾಡಲಾಗಿದೆ. ಬ್ಲಡ್ ರಿಪೋರ್ಟ್ ನಲ್ಲಿ ಕೋವಿಡ್-19 ಪಾಸಿಟಿವ್ ಬಂದವರನ್ನು ಪ್ರತ್ಯೇಕವಾಗಿ ಇರಿಸಲಾಗುತ್ತದೆ. ಉಳಿದವರನ್ನು ಶೀಘ್ರದಲ್ಲಿ ಏರ್ ಲಿಫ್ಟ್ ಮಾಡಲಾಗುವುದು'' ಎಂದಿದ್ದಾರೆ ಡಿಸಿಎಂ ಸಿ.ಎನ್.ಅಶ್ವತ್ಥ ನಾರಾಯಣ್.

ಕೆಲಸ ಚುರುಕಾಗಲಿ
''ಇಟಲಿಯಿಂದ ಭಾರತೀಯರನ್ನು ಕರೆತರುವ ಕೆಲಸ ಚುರುಕಾಗಬೇಕು. ಅದರಲ್ಲೂ ಕೈಯಲ್ಲಿ ಸೂಕ್ತ ಹಣಕಾಸಿನ ವ್ಯವಸ್ಥೆ ಇಲ್ಲದ ವಿದ್ಯಾರ್ಥಿಗಳನ್ನು ಬೇಗ ವಾಪಸ್ ಕರೆತರಬೇಕು'' ಎಂದು ಇದೇ ವೇಳೆ ಪ್ರಿಯಾಂಕ್ ಖರ್ಗೆ ಒತ್ತಾಯಿಸಿದ್ದರು. ಅಂದ್ಹಾಗೆ, ಸಚಿವ ಆನಂದ್ ಸಿಂಗ್ ಪುತ್ರಿ ಕೂಡ ಇಟಲಿಯಲ್ಲಿ ಸಿಲುಕಿಕೊಂಡಿದ್ದಾರೆ.

2500 ಗಡಿ ದಾಟಿದ ಸಾವಿನ ಸಂಖ್ಯೆ
ಇಟಲಿಯಲ್ಲಿ ಇಲ್ಲಿಯವರೆಗೂ 31,506 ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದಾಖಲಾಗಿವೆ. ಈಗಾಗಲೇ 2503 ಮಂದಿ ಸಾವನ್ನಪ್ಪಿದ್ದಾರೆ. 2941 ಮಂದಿ ಕೊರೊನಾ ವೈರಸ್ ವಿರುದ್ಧ ಹೋರಾಡಿ ಸಾವನ್ನೇ ಗೆದ್ದು ಬಂದಿದ್ದಾರೆ.












Click it and Unblock the Notifications