ಕೊರೊನಾ: ಕರ್ನಾಟಕದಲ್ಲಿ ಒಂಬತ್ತು ಮದ್ಯ ವ್ಯಸನಿಗಳ ಆತ್ಮಹತ್ಯೆ
ಬೆಂಗಳೂರು, ಉಡುಪಿ, ಮಾರ್ಚ್ 30: ಮದ್ಯ ಮಾರಾಟ ನಿಷೇಧಗೊಂಡ ನಂತರ, ಕೇರಳದ ರೀತಿಯಲ್ಲೇ ಮದ್ಯ ವ್ಯಸನಿಗಳ ಆತ್ಮಹತ್ಯೆ ಕರ್ನಾಟಕದಲ್ಲೂ ಹೆಚ್ಚಾಗುತ್ತಿದೆ.
ಕಳೆದ ಕೆಲವು ದಿನಗಳಲ್ಲಿ ಉಡುಪಿ ಜಿಲ್ಲೆಯೊಂದರಲ್ಲೇ ಆರು ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊರೊನಾ ಸೋಂಕು ಹರಡುತ್ತಿರುವುದರಿಂದ, ಕಳೆದ ಒಂದು ವಾರದಿಂದ ಎಲ್ಲಾ ರೀತಿಯ ಮದ್ಯ ಮಾರಾಟವನ್ನು ಬಂದ್ ಮಾಡಲಾಗಿತ್ತು.
ಭಾಲ್ಕಿ, ಧಾರವಾಡ, ಉಡುಪಿ ಮತ್ತು ತುಮಕೂರಿನಿಂದ, ನಾಲ್ಕು ಮದ್ಯ ವ್ಯಸನಿಗಳು ಆತ್ಮಹತ್ಯೆ ಮಾಡಿಕೊಂಡ ವರದಿ ಭಾನುವಾರ (ಮಾ 29) ಬಂದಿತ್ತು. ಇದಕ್ಕೆ ಮತ್ತೆ, ಐವರ ಸೇರ್ಪಡೆಯಾಗಿದೆ.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಿಂದ ಮೂವರು, ಕುಂದಾಪುರ ಮತ್ತು ಉಡುಪಿ ತಾಲೂಕಿನ ಒಬ್ಬರು ಮದ್ಯ ವ್ಯಸನಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮದ್ಯ ಮಾರಾಟ ನಿಷೇಧದಿಂದ ರಾಜಸ್ವಕ್ಕೆ ಹೆಚ್ಚಿನ ಆದಾಯ ತಂದು ಕೊಡುವ ಅಬಕಾರಿ ಇಲಾಖೆಗೆ ಇದುವರೆಗೆ 1,250 ಕೋಟಿಗೂ ಅಧಿಕ ನಷ್ಟವಾಗಿದೆ.
ಮದ್ಯ ವ್ಯಸನಿಗಳನ್ನು ಕೌನ್ಸಿಲಿಂಗ್ ಮಾಡಲು ನಿರ್ಧರಿಸಿದ್ದು, ಜಿಲ್ಲಾ ಆರೋಗ್ಯ ಇಲಾಖೆಯ ವೈದ್ಯರನ್ನು ಸಂಪರ್ಕಿಸಬಹುದು ಎಂದು ಉಡುಪಿ ಜಿಲ್ಲಾಡಳಿತ ಹೇಳಿದೆ.
ಮನೋತಜ್ಞ ಡಾ. ಪಿವಿ ಭಂಡಾರಿ ಜೊತೆ ಮಾತನಾಡಿದ್ದೇವೆ, ಜಿಲ್ಲಾಡಳಿತದ ಬಳಿ ಕೌನ್ಸಿಲಿಂಗ್ ವಿಭಾಗ ಇದೆ, ಮಾಹಿತಿ ಸಿಕ್ಕರೆ ಸಾರ್ವಜನಿಕರು ನಮ್ಮ ಗಮನಕ್ಕೆ ತನ್ನಿ ಎಂದು ಉಡುಪಿ ಡಿಸಿ ಜಿ.ಜಗದೀಶ್ ಹೇಳಿದ್ದಾರೆ.
ವ್ಯಸನಿಗಳನ್ನು ಸರಿಪಡಿಸಲು ನಾವು ಕ್ರಮ ಕೈಗೊಳ್ಳುತ್ತೇವೆ. ಕುಟುಂಬಸ್ಥರು ಯಾರೂ ಜಿಲ್ಲಾಡಳಿತಕ್ಕೆ ಈವರೆಗೆ ಮಾಹಿತಿ ಕೊಟ್ಟಿಲ್ಲ, ಜನ ಜೀವ ಕಳೆದುಕೊಳ್ಳುವ ಸ್ಥಿತಿ ಯಲ್ಲಿ ಸರಕಾರ ಮದ್ಯಪ್ರವೇಶ ಮಾಡಬೇಕಾಗುತ್ತದೆ ಎಂದು ಉಡುಪಿ ಜಿಲ್ಲಾಧಿಕಾರಿಗಳು ಹೇಳಿದ್ದಾರೆ.












Click it and Unblock the Notifications