ಕೊರೊನಾ ಭೀತಿ; ಯಡಿಯೂರಪ್ಪ ಭೇಟಿಗೆ ಮಾರ್ಗಸೂಚಿಗಳು
ಬೆಂಗಳೂರು, ಮಾರ್ಚ್ 15 : ಕೊರೊನಾ ಭೀತಿ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಭೇಟಿಗೆ ಬರುವವರಿಗೆ ಕೆಲವು ಮಾರ್ಗಸೂಚಿಗಳನ್ನು ರೂಪಿಸಲಾಗಿದೆ. ಮುಖ್ಯಮಂತ್ರಿಗಳ ನಿವಾಸದಲ್ಲಿ ಕೆಲಸ ಮಾಡುವ ಸಿಬ್ಬಂದಿಗೂ ಸೂಚನೆಗಳನ್ನು ನೀಡಲಾಗಿದೆ.
ದೇಶದಲ್ಲೇ ಕೊರೊನಾಗೆ ಮೊದಲ ಬಲಿಯಾಗಿರುವುದು ಕರ್ನಾಟಕದಲ್ಲಿ. ಕೊರೊನಾ ಹರಡದಂತೆ ತಡೆಯಲು ಕರ್ನಾಟಕ ಸರ್ಕಾರ ಮಾರ್ಚ್ 14ರಿಂದ ಒಂದು ವಾರಗಳ ಕಾಲ ಚಿತ್ರಮಂದಿರ, ಮಾಲ್ ಬಂದ್ ಮಾಡುವಂತೆ ಸೂಚನೆ ನೀಡಿದೆ.
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಭೇಟಿಗೆ ಬರುವವರಿಗೂ ಮಾರ್ಗಸೂಚಿಗಳನ್ನು ರಚನೆ ಮಾಡಲಾಗಿದೆ. ವಿಧಾನಸಭೆ ಅಧಿವೇಶನ ನಡೆಯುತ್ತಿದ್ದು, ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿಯೇ ಇರುತ್ತಾರೆ. ಭಾನುವಾರ ಅವರು ಬೆಳಗಾವಿ ಪ್ರವಾಸದಲ್ಲಿದ್ದಾರೆ.
ಯಾವುದೇ ವ್ಯಕ್ತಿ, ರಾಜಕೀಯ ಪಕ್ಷಗಳ ಮುಖಂಡರು, ಪಕ್ಷದ ಕಾರ್ಯಕರ್ತರು ಯಾರಿಗಾದರು ಶೀತ, ಜ್ವರ ಕೆಮ್ಮು ಮತ್ತು ಉಸಿರಾಟದ ತೊಂದರೆ ಇದ್ದರೆ ಅವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಅವಕಾಶ ನೀಡುವುದಿಲ್ಲ ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ.

ಸಿಬ್ಬಂದಿಗಳಿಗೆ ರಜೆ ನೀಡಬೇಕು
ಮುಖ್ಯಮಂತ್ರಿಗಳ ನಿವಾಸ, ಗೃಹ ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಶೀತ, ಜ್ವರ, ಕೆಮ್ಮು, ಉಸಿರಾಟದ ಸಮಸ್ಯೆ ಕಂಡು ಬಂದರೆ ಅವರನ್ನು ರಜೆ ಮೇಲೆ ಕಳಿಸಬೇಕು. ಅವರ ಜಾಗಕ್ಕೆ ಬೇರೆಯವರನ್ನು ನಿಯೋಜನೆ ಮಾಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಸ್ಯಾನಿಟೈಸರ್ ಇಡುವುದು
ಮುಖ್ಯಮಂತ್ರಿಗಳ ನಿವಾಸ, ಗೃಹ ಕಚೇರಿಯ ಪ್ರವೇಶ ದ್ವಾರ ಮತ್ತು ಜನ ಸಂದಣಿ ಇರುವ ಪ್ರದೇಶದಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಇಡಬೇಕು. ಮನೆವೊಳಗೆ ಹೋಗುವ ಪ್ರತಿಯೊಬ್ಬರೂ ತಮ್ಮ ಕೈಗಳನ್ನು ಹ್ಯಾಂಡ್ ಸ್ಯಾನಿಟೈಸರ್ ಮೂಲಕ ಸ್ವಚ್ಛ ಮಾಡಿಕೊಂಡು ಒಳಗೆ ಹೋಗಬೇಕು.

ಹೆಚ್ಚು ಜನ ಸಂದಣಿ ಆಗದಂತೆ ಕ್ರಮ
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮನೆಯೊಳಗೆ ಹೆಚ್ಚು ಜನಸಂದಣಿ ಆಗದಂತೆ ನೋಡಿಕೊಳ್ಳುವುದು. ಭೇಟಿ ಅನಿವಾರ್ಯ ಆದಲ್ಲಿ ಒಬ್ಬರಿಗೆ ಮಾತ್ರ ಅವಕಾಶವನ್ನು ನೀಡುವುದು. ಮನೆಯ ಆವರಣದಲ್ಲಿಯೂ ಹೆಚ್ಚಿ ಜನಸಂದಣಿ ಇರದಂತೆ ನೋಡಿಕೊಳ್ಳುವುದು.

ಮನೆಯನ್ನು ಸ್ವಚ್ಛ ಗೊಳಿಸುವುದು
ಯಡಿಯೂರಪ್ಪ ನಿವಾಸದ ಫ್ಲೋರ್ಗಳನ್ನು ಆಗಿಂದಾಗಲೇ ಡಿಟರ್ಜೆಂಟ್ ಮೂಲಕ ಸ್ವಚ್ಛ ಗೊಳಿಸುವುದು. ಮನೆ ಪೀಠೋಪಕರಣಗಳನ್ನು ಆಗಾಗ ಶೇ 1ರ ಸೋಡಿಯಂ ಹೈಪೊಕ್ಲೋರೈಡ್ನಿಂದ ಸ್ವಚ್ಛ ಮಾಡುವುದು.
ಯಾವುದೇ ವಿದೇಶದ ಅತಿಥಿಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಬಂದರೆ ಮಾಸ್ಕ್ ಧರಿಸಿದ ನಂತರವೇ ಭೇಟಿಗೆ ಅವಕಾಶ ನೀಡಬೇಕು ಎಂದು ತಿಳಿಸಲಾಗಿದೆ.












Click it and Unblock the Notifications