ಮೂಗಿಗೆ ನಿಂಬೆರಸದಿಂದ ಕೊರೊನಾ ಮಾಯ? ಡಾ.ಸಿ.ಎನ್.ಮಂಜುನಾಥ್ ಏನಂತಾರೆ
ಸಾಮಾನ್ಯವಾಗಿ ಬೇಸಿಗೆಯಲ್ಲಿ ನಿಂಬೆಹಣ್ಣಿಗೆ ಎಲ್ಲಿಲ್ಲದ ಬೇಡಿಕೆ ಇರುತ್ತದೆ. ಜೊತೆಗೆ, ಉದ್ಯಮಿ ವಿಜಯ ಸಂಕೇಶ್ವರ ಅವರು ನಿಂಬೆ ಹಣ್ಣಿನ ರಸ ಮತ್ತು ತೆಂಗಿನ ಎಣ್ಣೆಯ ಮಹತ್ವವನ್ನು ವಿವರಿಸಿದ ನಂತರವಂತೂ ಇದರ ಬೇಡಿಕೆ ದುಪ್ಪಟ್ಟಾಗಿದೆ.
ಸಾಮಾಜಿಕ ಮತ್ತು ವೈದ್ಯಕೀಯ ವಲಯದಲ್ಲಿ ಭಾರೀ ಪರ, ವಿರೋಧ ಚರ್ಚೆಗೆ ಕಾರಣವಾದ ಈ ವಿಚಾರದ ಬಗ್ಗೆ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ವಿವರಣೆಯನ್ನು ನೀಡಿದ್ದಾರೆ.
"ನನಗೆ ವಿಜಯ ಸಂಕೇಶ್ವರ ಅವರ ಬಗ್ಗೆ ವೈಯಕ್ತಿಕವಾಗಿ ಗೊತ್ತಿದೆ. ಅವರು ಏನಾದರೂ ಹೇಳಿದರೆ, ವೈಜ್ಞಾನಿಕ ನೆಲೆಗಟ್ಟಿನಲ್ಲೇ ಹೇಳಿರುತ್ತಾರೆ. ಸಿ.ಟಿ.ರವಿಯವರು ತಮ್ಮ ಪತ್ನಿಗೂ ನಿಂಬೆಹಣ್ಣಿನ ಪ್ರಯೋಗವನ್ನು ಮಾಡಿದ್ದರು, ಅದರಿಂದ ಕಫ ಕರಗಿದೆ ಎಂದು ರವಿಯವರು ಹೇಳಿದ್ದಾರೆ"ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಕೂಡಾ ಹೇಳಿಕೆಯನ್ನು ನೀಡಿದ್ದರು.
"ಮೂಗಿನೊಳಗೆ ನಾಲ್ಕು ಹನಿ ನಿಂಬೆರಸ ಹಾಕಿಕೊಂಡರೆ ಕೊರೊನಾ ರಿಲೀಫ್ ಆಗುತ್ತೆ. ಕೊರೊನಾ ನನಗೆ ಇಲ್ಲದಿದ್ದರೂ ನಾನು ಹಾಕಿಕೊಂಡು ನೋಡಿದೆ, ನನಗೇನು ತೊಂದರೆಯಾಗಲಿಲ್ಲ. ನನ್ನ ಆಪ್ತವಲಯದವರೂ ಇದನ್ನು ಪ್ರಯತ್ನಿಸಿದ್ದಾರೆ. ಬಿ.ಎಂ.ಹೆಗಡೆಯವರು ಹೇಳಿದಂತೆ ತೆಂಗಿನ ಎಣ್ಣೆಯನ್ನು ಬಳಸಿ"ಎಂದು ಸಂಕೇಶ್ವರ ಹೇಳಿಕೆಯನ್ನು ನೀಡಿದ್ದರು. ಡಾ. ಸಿ.ಎನ್.ಮಂಜುನಾಥ್ ಏನಂತಾರೆ?

ಮೂಗಿನ ಹೊಳ್ಳೆಗೆ ನಿಂಬೆರಸ ಬಿಟ್ಟುಕೊಳ್ಳುವುದರ ಬಗ್ಗೆ ಡಾ. ಮಂಜುನಾಥ್
ಮೂಗಿನ ಹೊಳ್ಳೆಗೆ ನಿಂಬೆರಸ ಬಿಟ್ಟುಕೊಳ್ಳುವುದರ ಬಗ್ಗೆ ಮಾತನಾಡಿದ ಡಾ. ಮಂಜುನಾಥ್, "ಇದೆಲ್ಲವನ್ನು ಬಿಟ್ಟು ಬಿಡಿ. ಜನರು ಇಂಥ ಮೂಢನಂಬಿಕೆಗೆ ಒಳಗಾಗಬಾರದು. ಇವೆಲ್ಲಾ ಜನರನ್ನು ತಪ್ಪುದಾರಿಗೆ ಎಳೆಯುತ್ತವೆ. ಮೊದಲು ಜನರು ಕೊರೊನಾದಿಂದ ಹೊರಬರುವ ಬಗ್ಗೆ ಯೋಚಿಸಬೇಕು"ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಕೊರೊನಾದ ಸಣ್ಣ ಲಕ್ಷಣಗಳಿದ್ದರೆ ರೆಮ್ ಡಿಸಿವರ್ ಅವಶ್ಯಕತೆಯಿಲ್ಲ
ಕೊರೊನಾ ಮೊದಲನೇ ಅಲೆಯಿಂದಲೇ ಸರಕಾರಕ್ಕೆ ಕಾಲಕಾಲಕ್ಕೆ ಸೂಕ್ತ ಸಲಹೆಯನ್ನು ನೀಡುತ್ತಾ ಬರುತ್ತಿರುವ ಡಾ.ಮಂಜುನಾಥ್, "ಕೊರೊನಾದ ಸಣ್ಣ ಲಕ್ಷಣಗಳಿದ್ದರೆ ರೆಮ್ಡೆಸಿವಿರ್ ಅವಶ್ಯಕತೆಯಿಲ್ಲ. ಉಸಿರಾಟದ ತೊಂದರೆಯಾದರೂ ಭಯ ಪಡಬೇಕಾಗಿಲ್ಲ, ಹತ್ತು ದಿನ ಕ್ವಾರಂಟೈನ್ನಲ್ಲಿದ್ದರೆ ಸಾಕು"ಎಂದು ಇವರು ಅಭಿಪ್ರಾಯ ಪಟ್ಟಿದ್ದಾರೆ.

ಸಾಮಾಜಿಕ ತಾಣದಲ್ಲಿ ಬಹಳಷ್ಟು ತಪ್ಪು ಮಾಹಿತಿ ಹರಡುತ್ತಿದೆ
"ಒಂದು ವೇಳೆ ಆಸ್ಪತ್ರೆಯಲ್ಲಿ ಬೆಡ್ ಸಿಗದೇ ಇದ್ದ ಪಕ್ಷದಲ್ಲಿ ಮಕಾಡೆ ಮಲಗಿಕೊಂಡರೆ ಒಳ್ಲೆಯದು. ಆಗ ಶೇ. ನಾಲ್ಕರಷ್ಟು ಆಕ್ಸಿಜನ್ ಲೆವೆಲ್ ಹೆಚ್ಚಾಗುತ್ತದೆ. ತೂಕ ಜಾಸ್ತಿ, ಹೊಟ್ಟೆ ಜಾಸ್ತಿ ಇರುವವರಿಗೆ ಇದು ಇನ್ನೂ ಅನುಕೂಲವಾಗಲಿದೆ. ಸಾಮಾಜಿಕ ತಾಣದಲ್ಲಿ ಬಹಳಷ್ಟು ತಪ್ಪು ಮಾಹಿತಿ ಹರಡುತ್ತಿದೆ. ಜನ ಇದನ್ನು ಗಂಭೀರವಾಗಿ ಪರಿಗಣಿಸಬಾರದು" ಎಂದು ಡಾ.ಮಂಜುನಾಥ್ ಹೇಳಿದ್ದಾರೆ.
Recommended Video

ಜಯದೇವ ಸಂಸ್ಥೆಯ ಡಾ. ಸಿ.ಎನ್.ಮಂಜುನಾಥ್ ಸಲಹೆ
"ಈಗ ಇರುವ ಎರಡೂ ವ್ಯಾಕ್ಸಿನ್ಗಳೂ ಉತ್ತಮವಾಗಿವೆ. ಮೇ ಕೊನೆಯ ವಾರ ಅಥವಾ ಜೂನ್ ಮೊದಲನೇ ವಾರದಲ್ಲಿ ಕೊರೊನಾ ಎರಡನೇ ಅಲೆಯ ಪ್ರಭಾವ ಕಮ್ಮಿಯಾಗಬಹುದು. ಮೂಗಿಗೆ ನಿಂಬೆರಸ ಪ್ರಯೋಗ ಮಾಡಲು ಹೋಗಬೇಡಿ" ಎನ್ನುವ ಸಲಹೆಯನ್ನು ಜಯದೇವ ಸಂಸ್ಥೆಯ ಡಾ. ಸಿ.ಎನ್.ಮಂಜುನಾಥ್ ನೀಡಿದ್ದಾರೆ.












Click it and Unblock the Notifications