ಕೊರೊನಾ; ವ್ಯಾಪಾರ ವಹಿವಾಟಿಗೆ ಕತ್ತರಿ ಹಾಕಿದ ಬಂದ್
ಬೆಂಗಳೂರು, ಮಾರ್ಚ್ 15 : ಕೊರೊನಾ ಹಬ್ಬುವ ಭೀತಿಯಲ್ಲಿ ಕರ್ನಾಟಕ ಸರ್ಕಾರ ಒಂದು ವಾರಗಳ ಮಾಲ್, ಚಿತ್ರಮಂದಿರ ಬಂದ್ ಮಾಡುವಂತೆ ಸೂಚನೆ ನೀಡಿದೆ. ರಾಜ್ಯದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದ್ದು ವ್ಯಾಪಾರ ವಹಿವಾಟಿಗೆ ಹೊಡೆತ ಬಿದ್ದಿದೆ.
ಮಾಲ್ಗಳು ಮುಚ್ಚಿರುವುದರಿಂದ ವ್ಯಾಪಾರ ವಹಿವಾಟು ಸ್ಥಗಿತವಾಗಿದೆ. ಸರ್ಕಾರಿ ಮತ್ತು ಖಾಸಗಿ ಬಸ್, ರೈಲುಗಳು ಪ್ರಯಾಣಿಕರ ಕೊರತೆ ಎದುರಿಸುತ್ತಿವೆ. ಹೋಟೆಲ್ಗಳು ಜನರಿಲ್ಲದೆ ಖಾಲಿ ಹೊಡೆಯುತ್ತಿದ್ದು, ಎಲ್ಲಾ ಬಗೆಯ ವ್ಯಾಪಾರವೂ ನಷ್ಟ ಅನುಭವಿಸಲಿದೆ.
ಕೊರೊನಾ; ಕರ್ನಾಟಕ ಬಂದ್; ಏನಿರುತ್ತೆ, ಏನಿರಲ್ಲ?
ಒಂದು ವಾರದ ಕರ್ನಾಟಕದ ಬಂದ್ನಿಂದಾಗಿ ಜಿಎಸ್ಟಿ ಮತ್ತು ಮಾರಾಟ ತೆರೆಗೆ ವರಮಾನದಲ್ಲಿ ಸುಮಾರು 2 ಸಾವಿರ ಕೋಟಿ ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ. ರೈಲು, ಬಸ್ ಸಹ ಸಾಕಷ್ಟು ನಷ್ಟವನ್ನು ಅನುಭವಿಸಲಿದೆ.
ಸರಕು ಸಾಗಣೆ ಉದ್ಯಮಕ್ಕೆ ಬಂದ್ನಿಂದಾಗಿ ಸಾಕಷ್ಟು ನಷ್ಟ ಉಂಟಾಗಲಿದೆ. ಲಾರಿ ಮಾಲೀಕರಿಗೆ, ಸಣ್ಣ-ಪುಟ್ಟ ವ್ಯಾಪಾರಸ್ಥರಿಗೆ ಅಪಾರ ನಷ್ಟವಾಗಲಿದೆ. ಮಾಲ್, ಸಿನಿಮಾ ಮಂದಿರ ಮುಚ್ಚಿರುವುದರಿಂದ ಸಿನಿಮಾ ನಿರ್ಮಾಪಕರಿಗೆ ಬಾಕ್ಸ್ ಆಫೀಸ್ ಕಲೆಕ್ಷನ್ ಕೋತಾ ಆಗಲಿದೆ.
ಬೆಂಗಳೂರು ನಗರದಲ್ಲಿ 24 ಮಾಲ್ಗಳಿವೆ. ಇವುಗಳಲ್ಲಿ 21ರಲ್ಲಿ ಸಿನಿಫೆಕ್ಸ್ಗಳಿವೆ. ಇಡೀ ರಾಜ್ಯದಲ್ಲಿ 38 ಮಲ್ಟಿಫ್ಲೆಕ್ಸ್, 40 ಮಾಲ್ಗಳಿವೆ. ರಾಜ್ಯದಲ್ಲಿರುವ 600ಕ್ಕೂ ಅಧಿಕ ಚಿತ್ರಮಂದಿರಗಳು ಮುಚ್ಚಿವೆ. ಇದರಿಂದಾಗಿ ಅಪಾರ ನಷ್ಟವಾಗಲಿದೆ.
ಮಾರ್ಚ್ 31ರ ತನಕ ಯಾವುದೇ ಪರೀಕ್ಷೆ ನಡೆಸಲ್ಲ: ಸುರೇಶ್ ಕುಮಾರ್
ಶುಕ್ರವಾರ ಮತ್ತು ಶನಿವಾರ ಬೆಂಗಳೂರಿನಿಂದ ಹೊರ ಜಿಲ್ಲೆ ಮತ್ತು ರಾಜ್ಯಗಳಿಗೆ ನಿಗದಿಗಿಂತ 200 ಹೆಚ್ಚುವರಿ ಬಸ್ಗಳು ಸಂಚಾರ ನಡೆಸುತ್ತಿದ್ದವು. ಆದರೆ, ಈ ಐಷಾರಾಮಿ ಬಸ್ಗಳು ಖಾಲಿ ಹೊಡೆಯುತ್ತಿವೆ. ಪ್ರತಿದಿನ ಸಂಚಾರ ನಡೆಸುವ 50ಕ್ಕೂ ಹೆಚ್ಚು ಬಸ್ಗಳನ್ನು ಕೆಎಸ್ಆರ್ಟಿಸಿ ಸ್ಥಗಿತಗೊಳಿಸಿದೆ.
ಪ್ರತಿನಿತ್ಯ 30 ಲಕ್ಷಕ್ಕೂ ಅಧಿಕ ಜನರು ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣ ಮಾಡುತ್ತಾರೆ. ಆದರೆ, ಈಗ ವಿವಿಧ ಜಿಲ್ಲೆಗಳಲ್ಲಿಯೂ ಪ್ರಯಾಣಿಕರ ಕೊರತೆ ಎದುರಾಗಿದೆ. ಬಿಎಂಟಿಸಿ ಬೆಂಗಳೂರಿನಲ್ಲಿ ಶೇ 10ರಷ್ಟು ಬಸ್ ಸಂಚಾರವನ್ನು ಕಡಿತಗೊಳಿಸಿದೆ.