ಬಹಿರಂಗವಾದ ಅತೃಪ್ತ ಶಾಸಕ ಮಹೇಶ್ ಕುಮಟಳ್ಳಿ ಆಡಿಯೋ ಕ್ಲಿಪ್ನಲ್ಲಿ ಏನಿದೆ?
ಬೆಂಗಳೂರು, ಫೆಬ್ರವರಿ 9: ರಾಜ್ಯ ರಾಜಕಾರಣದಲ್ಲಿ ಆಪರೇಷನ್ ಕಮಲ, ಅತೃಪ್ತ ಶಾಸಕರ ಕೋಪ, ರೆಸಾರ್ಟ್ ರಾಜಕೀಯದ ಸದ್ದುಗಳ ನಡುವೆ ಈಗ ಆಡಿಯೋ ಕ್ಲಿಪ್ ಸುದ್ದಿಯಾಗುತ್ತಿದೆ.
ಯಡಿಯೂರಪ್ಪ ನೇತೃತ್ವದಲ್ಲಿ ಆಪರೇಷನಲ್ ಕಮಲದ ಪ್ರಯತ್ನಗಳು ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆಡಿಯೋ ಕ್ಲಿಪ್ ಒಂದನ್ನು ಬಿಡುಗಡೆ ಮಾಡಿ ಆರೋಪಿಸಿದ್ದರು. ಈಗ ಮತ್ತೊಂದು ಆಡಿಯೋ ಕ್ಲಿಪ್ ಮಾಧ್ಯಮ ವಲಯದಲ್ಲಿ ಹರಿದಾಡುತ್ತಿದೆ. ಇದು ಆಪರೇಷನಲ್ ಕಮಲದ ಆಡಿಯೋ ಅಲ್ಲ. ಅಥಣಿ ಶಾಸಕ ಮಹೇಶ್ ಕುಮಟಳ್ಳಿ, ತಮ್ಮ ಸ್ವಾಮಿ ನಿಷ್ಠೆಯನ್ನು ಹೇಳಿಕೊಂಡಿರುವ ಆಡಿಯೋ ಇದು.
ಕಾಂಗ್ರೆಸ್ನ ಅತೃಪ್ತ ಶಾಸಕರಲ್ಲಿ ಒಬ್ಬರಾದ ಮಹೇಶ್ ಕುಮಟಳ್ಳಿ ತಮ್ಮ ಆಪ್ತರೊಬ್ಬರೊಂದಿಗೆ ನಡೆಸಿದ ಸಂಭಾಷಣೆ ಬಹಿರಂಗವಾಗಿದೆ. ಇದರಲ್ಲಿ ಅವರು ಪಕ್ಷಕ್ಕಿಂತಲೂ ತಮ್ಮ ನಾಯಕ ರಮೇಶ್ ಜಾರಕಿಹೊಳಿ ಅವರೆಡೆಗಿನ ನಿಷ್ಠೆಯೇ ಮುಖ್ಯ ಎಂದಿದ್ದಾರೆ.

ತಾವು ಶಾಸಕರಾಗಲು ರಮೇಶ್ ಜಾರಕಿಹೊಳಿ ಅವರೇ ಕಾರಣ. ಅವರು ಒಳ್ಳೆಯ ವ್ಯಕ್ತಿ. ನನ್ನನ್ನು ಗೆಲ್ಲಿಸಿದ್ದಾರೆ. ಅವರಿಗೆ ಮೋಸ ಮಾಡಲು ಸಾಧ್ಯವಿಲ್ಲ ಎಂದು ಮಹೇಶ್ ಹೇಳಿದ್ದಾರೆ.
ದೂರವಾಣಿಯಲ್ಲಿ ಮಾತನಾಡುವ ಸಂದರ್ಭದಲ್ಲಿ, 'ನೀವು ಅಣ್ಣನ (ರಮೇಶ್ ಜಾರಕಿಹೊಳಿ) ಜತೆ ಇದ್ದೀರಾ?' ಎಂದು ಆಪ್ತರು ಪ್ರಶ್ನಿಸುತ್ತಾರೆ. ಅದಕ್ಕೆ ಮಹೇಶ್ 'ಇಲ್ಲ ನಾನು ಬೇರೆ ಇದ್ದೀನಿ' ಎಂದು ಉತ್ತರಿಸುತ್ತಾರೆ. ಬಳಿಕ, 'ಅಣ್ಣ ಬಂದು ಪ್ರಚಾರ ಮಾಡಿ ನನ್ನನ್ನು ಗೆಲ್ಲಿಸಿದ್ದಾರೆ. ಅಥಣಿ ಕ್ಷೇತ್ರಕ್ಕೆ ತಂದು ನನ್ನನ್ನು ಗೆಲ್ಲಿಸಿದ್ದಾರೆ. ಸಪೋರ್ಟ್ ಮಾಡಿದ್ದಾರೆ. ಅವರು ತುಂಬಾ ಒಳ್ಳೆಯವರು. ನಾನು ಮುಂಬೈ ಬಿಟ್ಟು ಬಂದರೆ ಸರಿ ಇರೊಲ್ಲ' ಎಂದು ಮಹೇಶ್ ಹೇಳಿದ್ದಾರೆ.
'ಎಲೆಕ್ಷನ್ ನಿಂತರೆ ಖರ್ಚು ಮಾಡ್ತಾರೆ. ಮೋಸ ಮಾಡೊಲ್ಲ. ಅವರಿಗೆ ಬೇಕಾದವರು ಮಾಡ್ತಾರೆ ಎಂದು ಹೇಳ್ತಾರೆ. ಅಂಥಹವರಿಗೆ ಕೈಕೊಟ್ರೆ ಸರಿಯಾಗಿರೊಲ್ಲ. ಜನರು ನನ್ನನ್ನು ನಂಬುವುದಿಲ್ಲ' ಎಂದು ಮಹೇಶ್ ಹೇಳಿರುವುದು ಬಹಿರಂಗವಾಗಿದೆ.












Click it and Unblock the Notifications