ವಿವಾದಾತ್ಮಕ ಹೇಳಿಕೆ: ಎಸ್.ಟಿ. ಸೋಮಶೇಖರ್ಗೆ ನೋಟಿಸ್
ಬೆಂಗಳೂರು, ಜನವರಿ 28: ಕಾಂಗ್ರೆಸ್ ಶಾಸಕರ ವಿರುದ್ಧ ಸಿಡಿಮಿಡಿಗೊಂಡು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯಲು ಸಿದ್ಧ ಎಂದಿರುವ ಎಚ್ ಡಿ ಕುಮಾರಸ್ವಾಮಿ ಅವರನ್ನು ಸಮಾಧಾನಪಡಿಸಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ.
ಮುಖ್ಯಮಂತ್ರಿ ಸ್ಥಾನದಲ್ಲಿ ಮತ್ತೆ ಸಿದ್ದರಾಮಯ್ಯ ಅವರನ್ನೇ ನೋಡಲು ಬಯಸಿರುವುದಾಗಿ ಕಾಂಗ್ರೆಸ್ನ ಕೆಲವು ಶಾಸಕರು ನೀಡಿರುವ ಹೇಳಿಕೆ ಕುಮಾರಸ್ವಾಮಿ ಅವರಿಗೆ ಮುಜುಗರ ಉಂಟುಮಾಡಿತ್ತು.
ರಾಜೀನಾಮೆಗೆ ಸಿದ್ಧ: ಎಚ್ಡಿಕೆ ಶಾಕಿಂಗ್ ಹೇಳಿಕೆಗೆ ಕಾರಣವೇನು?
ಇದರಿಂದ ಕೋಪಗೊಂಡಿದ್ದ ಅವರು, 'ಕಾಂಗ್ರೆಸ್ ಶಾಸಕರು ಮೈತ್ರಿ ಧರ್ಮದ ಸೀಮೆಯನ್ನು ಮೀರುತ್ತಿದ್ದಾರೆ. ಇದು ಹೀಗೆಯೇ ಮುಂದುವರಿದರೆ ನಾನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯಲು ಸಿದ್ಧ' ಎಂದು ಹೇಳಿದ್ದರು.
ಎಸ್ ಟಿ ಸೋಮಶೇಖರ್ ಅವರ ಹೇಳಿಕೆ ಈ ವಿವಾದಕ್ಕೆ ಕಾರಣವಾಗಿದ್ದು, ಇದಕ್ಕೆ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಸೇರಿದಂತೆ ಪಕ್ಷದ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಎಸ್ ಟಿ ಸೋಮಶೇಖರ್ ಹೇಳಿದ್ದೇನು?
'ಸಿದ್ದರಾಮಯ್ಯ ಅವರು ಮಾತ್ರವೇ ಎಂದಿಗೂ ನಮ್ಮ ನಾಯಕರು. ಬೆಂಗಳೂರಿನ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಅಪಾರ. ಈಗಿನ ಮೈತ್ರಿ ಸರ್ಕಾರ ಏಳು ತಿಂಗಳು ಪೂರೈಸಿದರೂ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಅವರು ಸೋಲಲು ಕೆಲವರ ಪಿತೂರಿಯೇ ಕಾರಣ' ಎಂದು ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಟಿ ಸೋಮಶೇಖರ್ ಹೇಳಿದ್ದರು.
|
ಗೊಂದಲ ಉಂಟುಮಾಡುತ್ತದೆ: ಖರ್ಗೆ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ 'ಅವರು (ಕಾಂಗ್ರೆಸ್ ಶಾಸಕರು) ಮಾಧ್ಯಮದ ಎದುರು ಹೀಗೆ ಬಹಿರಂಗವಾಗಿ ಪ್ರತಿಕ್ರಿಯಿಸಬಾರದು. ಬಿಜೆಪಿ-ಆರೆಸ್ಸೆಸ್ ವಿರುದ್ಧ ಹೋರಾಡಲು ನಾವೆಲ್ಲ ಒಂದಾಗಿ ಬಂದಿದ್ದೇವೆ. ಪಕ್ಷದ ಹೈಕಮಾಂಡ್ನ ಆಶಯಗಳಿಗೆ ವಿರುದ್ಧವಾಗಿ ಮಾತನಾಡಬಾರದು ಎಂದು ಯಾವುದೇ ಸದಸ್ಯರಿಗೆ ಸಲಹೆ ನೀಡುವಂತಾಗಬಾರದು. ಇಂತಹ ಘಟನೆಗಳು ಸಮ್ಮಿಶ್ರ ಸರ್ಕಾರದಲ್ಲಿ ಗೊಂದಲ ಉಂಟುಮಾಡುತ್ತದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.
|
ಶೋಕಾಸ್ ನೋಟಿಸ್ ನೀಡಲು ಸೂಚನೆ
ತಮ್ಮ ವಿವಾದಾತ್ಮಕ ಹೇಳಿಕೆಗೆ ಸ್ಪಷ್ಟೀಕರಣ ನೀಡುವಂತೆ ಶಾಸಕ ಸೋಮಶೇಖರ್ ಅವರಿಗೆ ಶೋಕಾಸ್ ನೋಟಿಸ್ ನೀಡಲು ಸೂಚಿಸಲಾಗಿದೆ. ಅವರು ನೀಡುವ ವಿವರಣೆ ತೃಪ್ತಿದಾಯಕವಾಗಿಲ್ಲದೆ ಇದ್ದರೆ ಅವರ ವಿರುದ್ಧ ಪಕ್ಷ ಕಠಿಣ ಶಿಸ್ತುಕ್ರಮ ತೆಗೆದುಕೊಳ್ಳಲಿದೆ. ಅಂತಹ ಯಾವುದೇ ಅಶಿಸ್ತಿನ ಹೇಳಿಕೆಗಳನ್ನು ಮತ್ತು ವರ್ತನೆಗಳನ್ನು ಕಾಂಗ್ರೆಸ್ ಸಹಿಸುವುದಿಲ್ಲ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ.
ಮುನಿಸಿಕೊಂಡ ಕುಮಾರಸ್ವಾಮಿ: ಸಂತೈಸುತ್ತೇನೆಂದ ಸಿದ್ದರಾಮಯ್ಯ!
ಶೋಕಾಸ್ ನೋಟಿಸ್ ಜಾರಿ: ದಿನೇಶ್
ಎಸ್ ಟಿ ಸೋಮಶೇಖರ್ ಅವರಿಗೆ ಕಾರಣ ಕೇಳಿ ಶೋಕಾಸ್ ನೋಟಿಸ್. ಇಂತಹ ಹೇಳಿಕೆಗಳನ್ನು ಬಹಿರಂಗವಾಗಿ ನೀಡಬಾರದು. ಅತ್ಯಂತ ಆಕ್ಷೇಪಕ್ಕೆ ಒಳಗಾಗುವ ಹೇಳಿಕೆ. ಶಿಸ್ತನ್ನು ಮೀರುವ ಹೇಳಿಕೆ. ಮೈತ್ರಿ ಸರ್ಕಾರ ಬೆಂಗಳೂರಿನ ವಿಚಾರದಲ್ಲಿ ಸಾಕಷ್ಟು ಕೆಲಸ ಮಾಡುತ್ತಿದೆ. ಸಿದ್ದರಾಮಯ್ಯ ಅವರ ಸರ್ಕಾರದ ಯೋಜನೆಗಳೂ ಮುಂದುವರಿಯುತ್ತಿವೆ. ಸೋಮಶೇಖರ್ ಬಿಡಿಎ ಅಧ್ಯಕ್ಷರು. ಈ ರೀತಿ ಸಾರ್ವಜನಿಕವಾಗಿ ಹೇಳಿಕೆ ನೀಡುವುದು ಸರಿಯಲ್ಲ. ಖಂಡಿಸುತ್ತೇನೆ. ಏನೇ ಸಮಸ್ಯೆಗಳಿದ್ದರೂ ಪಕ್ಷದ ನಾಯಕರೊಂದಿಗೆ ಮತ್ತು ಮುಖ್ಯಮಂತ್ರಿ ಅವರೊಂದಿಗೆ ನೇರವಾಗಿ ಹೇಳಿಕೊಳ್ಳಬೇಕು.
|
ಅಂಗಪಕ್ಷಗಳಿಗೆ ಎಚ್ಚರಿಕೆ
ಮಾನ್ಯ ಹೆಚ್ ಡಿ. ಕುಮಾರಸ್ವಾಮಿಯವರ ಇಂದಿನ ಪರಿಸ್ಥಿತಿ. ಕಾಂಗ್ರೆಸ್ ಸಹವಾಸ ಮಾಡಹೊರಟಿರುವ ಮಹಾಘಟಬಂಧನ್ ಅಂಗಪಕ್ಷಗಳಿಗೆಲ್ಲ ಒಂದು ಎಚ್ಚರಿಕೆಯ ಸಂದೇಶ ಎಂದು ಬಿಜೆಪಿ ಶಾಸಕ ಸುರೇಶ್ ಕುಮಾರ್ ಹೇಳಿದ್ದಾರೆ.
|
ಸೋಮಶೇಖರ್ ಹೇಳಿಕೆಯೇ ಸಾಕ್ಷಿ
ಸಿದ್ದರಾಮಯ್ಯ ಅವರ ಜಂಗಲ್ ರಾಜ್ ಅನ್ನು ಮರಳಿ ತರಲು ಮತ್ತು ಕೆಲವು ಶಾಸಕರು ಈ ಅಪವಿತ್ರ ಮೈತ್ರಿ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ಹೊಂದಿದ್ದಾರೆ ಎನ್ನಲು ಸೋಮಶೇಖರ್ ಅವರ ಹೇಳಿಕೆಯೇ ಸಾಕ್ಷಿ. ಈ ಸರ್ಕಾರದ ಅಸ್ತಿತ್ವದ ಮೇಲೆ ಕತ್ತಿ ತೂರಾಡುತ್ತಿರುವುದರಲ್ಲಿ ಅಚ್ಚರಿ ಇಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.