HD Kumaraswamy: ಬೀದರ್ನಲ್ಲಿ ಯುವ ಗುತ್ತಿಗೆದಾರ ಆತ್ಮಹತ್ಯೆ: ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದೇನು?
ಮಂಡ್ಯ, ಡಿಸೆಂಬರ್ 27: ಬೀದರ್ನಲ್ಲಿ ಯುವ ಗುತ್ತಿಗೆದಾರ ಸಚಿನ್ (26 ವರ್ಷ) ಅತ್ಮಹತ್ಯೆಗೆ ಶರಣಾಗಿದ್ದಾರೆ. 27 ಪುಟಗಳ ಡೆತ್ ನೋಟ್ ಬರೆದಿಟ್ಟು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷ ಮಹಾತ್ಮ ಗಾಂಧೀಜಿ ಸ್ಮರಣೆ ಮಾಡುತ್ತಿದೆ. ಇನ್ನೊಂದೆಡೆ ಬೀದರ್ ನಲ್ಲಿ ಯುವ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಅರಾಜಕತೆಗೆ ಸಾಕ್ಷಿ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಅವರು ಪ್ರತಿಯೊಂದು ವಿಚಾರದಲ್ಲಿ ರಾಜ್ಯದಲ್ಲಿ ನನ್ನನ್ನು ಬಿಟ್ಟರೆ ಸಚ್ಚಾರಿತ್ರ್ಯ ಇರುವ ವ್ಯಕ್ತಿ ಬೇರೆ ಇಲ್ಲ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಈಗ ನೋಡಿದರೆ ಅವರ ಆಪ್ತ ಸಹಾಯಕನ ಹೆಸರೇ ಬಂದಿದೆ. ಈ ಸರಕಾರ ಈಗಾಗಲೇ ಗುತ್ತಿಗೆದಾರರ ವಿಷಯದಲ್ಲಿ ಚೆಲ್ಲಾಟ ಆಡಿದೆ. ಈಗಲೂ ಅದನ್ನೇ ಮುಂದುವರಿಸುತ್ತಿದೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಕಿಡಿಕಾರಿದರು.

ರಾಜ್ಯದಲ್ಲಿ ಜನರ ಸಂಕಷ್ಟದಲ್ಲಿದ್ದಾರೆ. ಅನೇಕ ಸಮಸ್ಯೆಗಳು ರಾಜ್ಯವನ್ನು ಕಾಡುತ್ತಿದ್ದರೂ ಸರಕಾರ ಜವಾಬ್ದಾರಿ ನಿರ್ವಹಣೆ ಮಾಡದೇ ಅರಾಜಕತೆಯನ್ನು ಸೃಷ್ಟಿಸಿದೆ. ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವುಗಳು ನಡೆಯುತ್ತಲೇ ಇವೆ. ಹುಟ್ಟುವ ಮುನ್ನವೇ ಹಸುಗೂಸುಗಳು ಸಾವನ್ನಪ್ಪುತ್ತಿವೆ. ಅವರ ಬಗ್ಗೆ ಈ ಸರಕಾರ ಸಣ್ಣ ಕನಿಕರವನ್ನೂ ತೋರಿಸುತ್ತಿಲ್ಲ. ಸತ್ತ ಹೆಣ್ಣುಮಕ್ಕಳ ಬಗ್ಗೆ ಸರಕಾರ ಸೌಜನ್ಯದ ಮಾತುಗಳನ್ನು ಆಡಿದ್ದನ್ನು ನಾನು ಕೇಳಿಲ್ಲ. ಸತ್ಯಾಂಶ ಇಲ್ಲಿಯವರೆಗೂ ಹೊರಗೆ ತಂದಿಲ್ಲ. ಎಂತೆಂಥ ವಿಷಯಗಳಿಗೆ ಆಯೋಗಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಯಾಕೆ ಆಯೋಗ ಮಾಡಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎಂದು ಅವರು ಪದೇ ಪದೆ ಹೇಳುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ನಿರಂತರವಾಗಿ ಅಧಿಕಾರದಲ್ಲಿ ಇದ್ದಾರೆ. ಈಗ ಅವರ ಮಗ ಮಂತ್ರಿ. ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯ ಅನ್ಯಾಯ ಅಂತಾರೆ. ನಿಮ್ಮನ್ನು ಹಿಡಿದುಕೊಂಡವರು ಯಾರು? ಉತ್ತರ ಕರ್ನಾಟಕಕ್ಕೆ ನಿಮ್ಮ ಕೊಡುಗೆ ಏನು? ಎಂದು ಕುಮಾರಸ್ವಾಮಿ ಅವರು ಪ್ರಶ್ನೆ ಮಾಡಿದರು.
ಈ ಸರಕಾರದಲ್ಲಿ ನಡೆಯುತ್ತಿರುವ ಪರ್ಸೆಂಟೆಜ್ ಬಗ್ಗೆ ಯಾವ ಆಯೋಗ ಮಾಡುತ್ತೀರಾ? ಮುಂದೆ ಬರುವ ಸರಕಾರಗಳು ಆಡಳಿತ ನಡೆಸುವ ಅವಶ್ಯಕತೆ ಇಲ್ಲ. ಯಾವ ಪುರುಷಾರ್ಥಕ್ಕೆ ಮಹಾತ್ಮ ಗಾಂಧಿಜೀ ಹೆಸರು ತರುತ್ತಿದ್ದಾರೆ ಇವರು? ಯಾವ ನೈತಿಕತೆ ಇಟ್ಟುಕೊಂಡು ಇವರು ಗಾಂಧೀಜಿ ಸ್ಮರಣೆ ಕಾರ್ಯಕ್ರಮ ಮಾಡುತ್ತಿದ್ದಾರೆ? ದೇಶಕ್ಕೆ ಏನು ಸಂದೇಶ ಕೊಡಬೇಕು ಎಂದು ಹೊರಟಿದ್ದಾರೆ ಇವರು? ಗಾಂಧಿ ನಡಿಗೆ ಬೇರೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಸರಕಾರ ಇದೆಯಾ ಎಂಬ ಭಾವನೆ ಜನರಲ್ಲಿ ನಶಿಸಿ ಹೋಗುತ್ತಿದೆ ಎಂದು ಹೇಳಿದರು.
ನಾನು ಎಂದು ಗ್ಯಾರಂಟಿ ಯೋಜನೆಗಳನ್ನು ವಿರೋಧ ಮಾಡಿಲ್ಲ. ರಾಜ್ಯದ ಖಜಾನೆ ಬರಿದಾಗುತ್ತದೆ ಎಂದು ಹೇಳಿಲ್ಲ ನಾನು. ಗ್ಯಾರಂಟಿಗಳನ್ನು ಕೊಟ್ಟು ಕೂಡ ಅಭಿವೃದ್ಧಿ ಮಾಡಬಹುದು. ಇದು ಸರಕಾರಕ್ಕೆ ಬೇಕಿಲ್ಲ. ಗ್ಯಾರಂಟಿಗಳ ಮೂಲಕ ಒಂದು ವರ್ಗದ ಜನರನ್ನು ಓಲೈಕೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಅವರು ವಾಗ್ದಾಳಿ ನಡೆಸಿದರು.
ಕುಮಾರಸ್ವಾಮಿ ಸುಳ್ಳುಗಾರ ಎಂದು ಅವರು ಹೇಳಬಹುದು, ಹೇಳಿಕೊಳ್ಳಲಿ. ಜನ ಸಾಮಾನ್ಯರ ಮೇಲೆ ಹೊರೆ ಹೊರಿಸಿದ್ದೀರಿ? ಪೆಟ್ರೋಲ್ - ಡಿಸೆಲ್ ಮೇಲೆ ಸೆಸ್ ವಿಧಿಸಿದ್ದಾರೆ. ಸ್ಟಾಂಪ್ ಡ್ಯೂಟಿ ಹೇರಿದ್ದಾರೆ. ಮದ್ಯದ ದರ ಏರಿಕೆ ಮಾಡಿದ್ದಾರೆ. ಇದು ದೊಡ್ಡ ಸಾಧನೆಯಾ? ಎಂದು ಪ್ರಶ್ನಿಸಿದರು.
ಆಂಧ್ರ ಪ್ರದೇಶ ಸರಕಾರದ ನಡವಳಿಕೆ ನೋಡಿ ಇವರು ಕಲಿಯಬೇಕು. ವೈಜಾಗ್ ಸ್ಟೀಲ್ ಕಾರ್ಖಾನೆ ಪುನಚ್ಚೇತನಕ್ಕೆ ಸಂಬಂಧಿಸಿ ಈವರೆಗೂ ನನ್ನ ಜತೆ ಹತ್ತಕ್ಕೂ ಹೆಚ್ಚು ಬಾರಿ ಚರ್ಚೆ ಮಾಡಿದ್ದಾರೆ. ಹಲವಾರು ಸಲ ಭೇಟಿಯಾಗಿ ಚರ್ಚೆ ಮಾಡಿದ್ದಾರೆ. ಇದು ಮಾದರಿ ನಡವಳಿಕೆ. ಅಭಿವೃದ್ದಿ ಬಗ್ಗೆ ಅವರ ಬದ್ಧತೆಯನ್ನು ನೋಡಿ ಕಲಿಯಿರಿ. ದಿನ ಕಾಲು ಕೆರೆದುಕೊಂಡು ಜಗಳ ಆಡುವುದಲ್ಲ, ಬೀದರ್ ಪ್ರಕರಣ ಒಂದೇ ಅಲ್ಲ. ಇಂಥ ಎಷ್ಟೋ ಪ್ರಕರಣಗಳು ಈ ಸರಕಾರದ ಕಾಲದಲ್ಲಿ ನಡೆದಿವೆ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications