ನ. 26ರಂದು ಶಾಲೆಗಳಲ್ಲಿ ಸಂವಿಧಾನ ದಿನಾಚರಣೆಗೆ ಸರ್ಕಾರ ಸುತ್ತೋಲೆ: ಶಿಕ್ಷಣ ತಜ್ಞರು ಹೇಳಿದ್ದೇನು?
ಬೆಂಗಳೂರು, ನವೆಂಬರ್ 22: ರಾಜ್ಯದ ಎಲ್ಲ ಶಾಲೆಗಳಲ್ಲಿ ನವೆಂಬರ್ 26ರಂದು 'ಸಂವಿಧಾನ ದಿನ' ಆಚರಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆ ಸ್ವಾಗತಾರ್ಹ. ಆದರೆ ಇಲಾಖೆಯ ಈ ನಿರ್ಧಾರ ಪರಿಣಾಮಕಾರಿಯಾಗಿ ಜಾರಿಯಾಗಬೇಕು ಎಂದು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಮನವಿ ಮಾಡಿದೆ.
ವೇದಿಕೆಯ ಸಂಸ್ಥಾಪಕ ಮಹಾಪೋಷಕರು ಹಾಗೂ ಶಿಕ್ಷಣ ತಜ್ಞರು ಆದ ನಿರಂಜನಾರಾಧ್ಯ.ವಿ.ಪಿ. ಅವರು, ಶಾಲೆಗಳಲ್ಲಿ 'ಸಂವಿಧಾನ ದಿನ' ಆಚರಣೆ ನಡೆದರೆ ಮಕ್ಕಳ ಚಿಕ್ಕವಯಸ್ಸಿನಲ್ಲೇ ಸಂವಿಧಾನದ ಬಗ್ಗೆ ತಿಳಿದುಕೊಳ್ಳುತ್ತವೆ. ಸಂವಿಧಾನದ ಮೂಲ ತತ್ವಗಳನ್ನು ಅರ್ಥಮಾಡಿಕೊಂಡು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲು ನೆರವಾಗುತ್ತದೆ.
ಸರ್ಕಾರಿ ಶಾಲೆ ಅವ್ಯವಸ್ಥೆ ಕುರಿತು ವಿಡಿಯೋ ಬಿಡುಗಡೆ ಮಾಡಿದ ಡಿಕೆಶಿ
ಈ ರೀತಿಯಲ್ಲಿ ಯುವಪೀಳಿಗೆಗೆ ಸಹಕಾರಿಯಗಬಲ್ಲ ಈ ಸಂವಿಧಾನ ದಿನ ಅರ್ಥಪೂರ್ಣವಾಗಿ ಆಚರಿಸಬೇಕು. ಪರಿಣಾಮಕಾರಿಯಾಗಿ ಜಾರಿ ಬರಬೇಕು ಎಂದು ಅವರು ಮನವಿ ಮಾಡಿದ್ದಾರೆ. ಅದಕ್ಕಾಗಿ ಶಿಕ್ಷಣ ಇಲಾಖೆ ವೇದಿಕೆ ತಿಳಿಸುವ ಕೆಲವು ಕ್ರಮಗಳನ್ನು ಅನುಸರಿಸಬೇಕು ಎಂದು ಅವರು ವೇದಿಕೆಯಿಂದ ಸಲಹೆ ನೀಡಿದ್ದು, ಅವು ಹೀಗಿವೆ.
'ಸಂವಿಧಾನ ದಿನಾಚರಣೆ' ವೇದಿಕೆ ಸಲಹೆಗಳು
1. ನವೆಂಬರ್ 26ರಂದು 'ಸಂವಿಧಾನ ದಿನ'ವನ್ನಾಗಿ ಶಾಲೆಗಳಲ್ಲಿ ಆಚರಿಸುವಾಗ ಸಂವಿಧಾನದ ಮೂಲ ತಿರುಳಾದ ಪ್ರಸ್ತಾವನೆಯನ್ನು ಓದುವುದು ಜತೆಗೆ ಭಾರತದ ಪ್ರಜೆಯಾಗಿ ಅದನ್ನು ಪೂರ್ಣವಾಗಿ ಜಾರಿಗೊಳಿಸುವ ಪ್ರತಿಜ್ಞೆ ಮಾಡಿಸಬೇಕು.
2. ಸಂವಿಧಾನದ ಪ್ರಸ್ತಾವನೆಯ ಜೊತೆಗೆ ನೇರವಾಗಿ ಮಕ್ಕಳಿಗೆ ಬದುಕಿಗೆ ಸಂಬಂಧಿಸಿದ ಪರಿಚ್ಛೇಧಗಳಾದ 15, 21, 21ಎ, 24, 39 ಇ ಮತ್ತು ಎಫ್, 46 ಹಾಗೂ 47 ಅನ್ನು ಶಿಕ್ಷಕರು ಓದಿ ವಿವರಿಸಲು ಕ್ರಮ ವಹಿಸುವುದು.
3. ಮಕ್ಕಳು ಸಂವಿಧಾನದ ಪ್ರಸ್ತಾವನೆಯನ್ನು ತಮ್ಮ ಕೈ ಬರಹದಲ್ಲಿಯೇ ಬರೆದುಕೊಳ್ಳಲು ಮತ್ತು ಅದನ್ನು ನವೆಂಬರ್ 26 ರಂದು ಗಟ್ಟಿಯಾಗಿ ಓದಬೇಕು. ಓದಿ ಮನನ ಮಾಡಿಕೊಳ್ಳಲು ಶಿಕ್ಷಕರು ಪೂರ್ವಭಾವಿಯಾಗಿ ಸಂವಿಧಾನದ ಪ್ರಸ್ತಾವನೆಯನ್ನು ತರಗತಿ ಕೋಣೆಗಳ ಕಪ್ಪು ಹಲಗೆಯ ಮೇಲೆ ದುಂಡಾಗಿ ಮತ್ತು ಸ್ಪಷ್ಟವಾಗಿ ಬರೆಯಬೇಕು. ಮಕ್ಕಳಿಗೆ ಅದನ್ನು ನಕಲು ಮಾಡುವಂತೆ ಕ್ರಮ ಕೈಗೊಳ್ಳಬೇಕು.
ಮನೆಯಲ್ಲಿ ಸಂವಿಧಾನ ಪ್ರಸ್ತಾವನೆ ಫೋಟೊ ಹಾಕಲು ಕ್ರಮ
4. ಮಕ್ಕಳು ಕೈಯಾರೆ ಬರೆದ ಸಂವಿಧಾನದ ಪ್ರಸ್ತಾವನೆಯನ್ನು ಶಾಲೆ ಮುಗಿದ ನಂತರ ಮನೆಯಲ್ಲಿ ಕುಟುಂಬದ ಎಲ್ಲ ಸದಸ್ಯರ ಮುಂದೆ ಜೋರಾಗಿ ಓದಿ ಹೇಳುವಂತೆ ಮಕ್ಕಳನ್ನು ಪ್ರೋತ್ಸಾಹಿಸುವುದು. ಇದು ಚಿಕ್ಕ ಮಕ್ಕಳಿಗೆ ಕಷ್ಟವೆನಿಸಿದರೆ, ಅವರಿಂದ ವಯಸ್ಸಿನಲ್ಲಿ ದೊಡ್ಡವರಿರುವ ಮಕ್ಕಳಿಂದ ಮಾಡಿಸಬೇಕು. ಅವರನ್ನು ಉತ್ತೇಜಿಸಬೇಕು.
5. ಸಾಧ್ಯವಾದರೆ ಮಕ್ಕಳು ತಾವೆ ಕೈಯಿಂದ ಬರೆದು ಓದಿದ ಸಂವಿಧಾನದ ಪ್ರಸ್ತಾವನೆಗೆ ಒಂದು ಫೋಟೊ ಫ್ರೇಂ ಹಾಕಿಸಿ ಪ್ರತಿ ಮನೆಯಲ್ಲೂ ಹಾಕಲು ವಿದ್ಯಾರ್ಥಿಗಳನ್ನು ಉತ್ತೇಜಿಸಬೇಕು.
ಶಾಲಾ ಕೊಠಡಿಗಳಲ್ಲಿ ದಪ್ಪಕ್ಷರದ ಪ್ರಸ್ತಾವನೆ ಚಾರ್ಟ್ ಹಾಕಿ
6. ಸಂವಿಧಾನ ದಿನಾಚರಣೆ ಬಳಿಕವು ಮಕ್ಕಳು ನಿತ್ಯ ಸಂವಿಧಾನದ ಪ್ರಸ್ತಾವನೆಯನ್ನು ಓದಿ ಅರ್ಥೈಸಿಕೊಳ್ಳುವಂತಾಗಬೇಕು. ಅದಕ್ಕಾಗಿ ಶಾಲೆಗಳ ಎಲ್ಲ ತರಗತಿ ಕೊಠಡಿಗಳಲ್ಲಿ ದಪ್ಪ ಅಕ್ಷರಗಳಲ್ಲಿ ಮುದ್ರಿತವಾದ ಹಾಗೂ ಎಲ್ಲರಿಗೂ ಸುಲಭವಾಗಿ ಕಾಣುವಂತೆ ಪ್ರಸ್ತಾವನೆಯ ಚಾರ್ಟ್ ಸಿದ್ಧಪಡಿಸಿ ಹಾಕಬೇಕು. ಅದನ್ನು ನಿತ್ಯ ಓದುವಂತೆ ಕ್ರಮ ವಹಿಸಬೇಕು.
7. ಸಂವಿಧಾನದ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯಲು ಬಯಸುವ ಮಕ್ಕಳಿಗೆ ಸಹಾಯ ಮಾಡಬೇಕು. ಸಂವಿಧಾನದ ದಿನಾಚರಣೆ ಸಂದರ್ಭದಲ್ಲಿ ಎಲ್ಲ ಶಾಲೆಗಳ ಗ್ರಂಥಾಲಯಕ್ಕೆ ಸಂವಿಧಾನದ ಕನಿಷ್ಠ ಐದು ಕನ್ನಡ ಪ್ರತಿ ಇಡಲು ಕ್ರಮ ವಹಿಸಬೇಕು.
ಯೋಜನೆ ಖಾತರಿಗೆ ಅಧಿಕಾರಿಗಳನ್ನು ನೇಮಿಸಿ
8. ಈ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ರೂಪಿಸಿ ಜಾರಿಗೊಳಿಸಿದ್ದರೆ ಖಾತರಿಪಡಿಸಿಕೊಳ್ಳಲು ಅಗತ್ಯ ಅಧಿಕಾರಿಗಳನ್ನು ನಿಯೋಜಿಸಬೇಕು. ಅಂದರೆ ಮೇಲುಸ್ತುವಾರಿ ಮತ್ತು ಮಾರ್ಗದರ್ಶನಕ್ಕಾಗಿ ಶಿಕ್ಷಕೇತರ ಸಿಬ್ಬಂದಿಯಾದ ಶಿಕ್ಷಣ ಸಂಯೋಜಕರು , ಸಿಆರ್ಪಿ, ಬಿಆರ್ಪಿ, ಬಿಇಒ, ಬಿಆರ್ಸಿ , ಉಪ ನಿರ್ದೇಶಕರು, ಸಿಟಿಇ ಯ ಎಲ್ಲಾ ಬೋಧಕ ಸಿಬ್ಬಂದಿ ಹಾಗು ಇಲಾಖೆಯ ಎಲ್ಲಾ ಹಿರಿಯ ಅಧಿಕಾರಿಗಳನ್ನು ಅಂದು ಶಾಲೆಗಳಿಗೆ ನಿಯೋಜಿಸಲು ಕ್ರಮವಹಿಸಬೇಕು.
ಹೀಗೆ ಮೇಲಿನ ಎಲ್ಲ ಕ್ರಮಗಳನ್ನು ಕೈಗೊಳ್ಳುವ ಮೂಲಕ ನವೆಂಬರ್ 26ರಂದು ಶಾಲೆಗಳಲ್ಲಿ ಸಂವಿಧಾನ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ವಹಿಸಬೇಕು ಎಂದು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಮನವಿ ಮಾಡುತ್ತದೆ ಎಂದು ಅವರು ತಿಳಿಸಿದರು.