ಪಕ್ಷವನ್ನು ಬಲಪಡಿಸಿದವರ ಜೊತೆ ಕಾಂಗ್ರೆಸ್ ನಿಲ್ಲುತ್ತದೆ: ಡಿಕೆ ಶಿವಕುಮಾರ್
ಬೆಂಗಳೂರು, ಮೇ 31: ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ಗೆ ಸೇರ್ಪಡೆಗೊಂಡು ಪಕ್ಷವನ್ನು ಬಲಪಡಿಸಿದ ಎಲ್ಲ ನಾಯಕರನ್ನು ಭೇಟಿಯಾಗುತ್ತಿದ್ದೇನೆ. ಪಕ್ಷದ ಜೊತೆ ನಿಂತವರ ಜೊತೆ ನಾವು ನಿಲ್ಲುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ಸರ್ಕಾರ ರಚನೆ, ಸಚಿವ ಸಂಪುಟ ರಚನೆ, ಪರಿಶೀಲನಾ ಸಭೆಗಳ ಕಾರಣದಿಂದ ಚುನಾವಣೆ ನಂತರ ಬ್ಯುಸಿಯಾಗಿದ್ದ ಕಾರಣ ಅವರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ನಮ್ಮ ನಾಯಕರೇ ಹೊರತು ಪಕ್ಷದ ಸಾಮಾನ್ಯ ಕಾರ್ಯಕರ್ತರಲ್ಲ, ನಾನು ಈಗಾಗಲೇ ಸವದಿ ಅವರನ್ನು ಭೇಟಿ ಮಾಡಿದ್ದೇನೆ ಮತ್ತು ನಂತರ ಶೆಟ್ಟರ್ ಅವರನ್ನು ಭೇಟಿ ಮಾಡುತ್ತೇನೆ ಎಂದು ಹೇಳಿದರು.

ಚುನಾವಣೆ ಸಂದರ್ಭದಲ್ಲಿ ಪಕ್ಷವನ್ನು ಬಲಪಡಿಸಿದ ತುಮಕೂರು ವಾಸು, ಶಿವಲಿಂಗೇಗೌಡ, ಬಾಬುರಾವ್ ಚಿಂಚನಸೂರ್, ಪುಟ್ಟಣ್ಣ ಮತ್ತಿತರರ ಜತೆಯೂ ಸಭೆ ನಡೆಸಲಾಗುವುದು. ನಾಯಕರ ಜತೆಗಿನ ಸಭೆಯಲ್ಲಿ ಕಾಂಗ್ರೆಸ್ ಬಲವರ್ಧನೆ ಹಾಗೂ ಏನು ಮಾಡಬೇಕು ಎಂಬುದಕ್ಕೆ ಮಾತುಕತೆ ನಡೆಸಿದ್ದೇವೆ. ಅವರಾರೂ ಷರತ್ತುಬದ್ಧವಾಗಿ ಕಾಂಗ್ರೆಸ್ ಸೇರಿಲ್ಲ ಮತ್ತು ಚೌಕಾಸಿಯೂ ಇರಲಿಲ್ಲ. ಎಲ್ಲಾ ಕ್ಯಾಬಿನೆಟ್ ಸ್ಥಾನಗಳು ಭರ್ತಿಯಾಗಿದ್ದರೂ, ನಾಯಕರಿಗೆ ಏನು ಮಾಡಬೇಕೆಂದು ನಮಗೆ ತಿಳಿದಿದೆ. ಅವರು ನಮ್ಮ ನಾಯಕರು ಎಂದು ಕಾಂಗ್ರೆಸ್ ಅವರ ಕೈ ಬಿಡುವುದಿಲ್ಲ ಎಂದು ಹೇಳಿದರು.
ಘೋಷಿಸಿರುವ ಐದು ಭರವಸೆಗಳನ್ನು ಈಡೇರಿಸಬೇಕಿರುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಾಹ್ನ 12 ಗಂಟೆಗೆ ಎಲ್ಲ ಸಚಿವರ ಸಭೆ ಕರೆದಿದ್ದಾರೆ. ಗುರುವಾರ ಸಚಿವ ಸಂಪುಟ ಸಭೆ ನಡೆಯಲಿದ್ದು, ಭರವಸೆ ನೀಡುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಶಿವಕುಮಾರ್ ಮಾಹಿತಿ ನೀಡಿದರು.

ರಾಜ್ಯದಲ್ಲಿ ಜವಾಬ್ದಾರಿಯುತ ಸರ್ಕಾರವಿದ್ದು, ವಿಧಾನಸಭೆ ಚುನಾವಣೆಗೂ ಮುನ್ನ ಜನತೆಗೆ ನೀಡಿರುವ ಎಲ್ಲ ಭರವಸೆಗಳನ್ನು ಈಡೇರಿಸಲಿದ್ದು, ಆತಂಕ ಪಡುವ ಅಗತ್ಯವಿಲ್ಲ. ಜೂನ್ 1 ರಂದು ನಡೆಯಲಿರುವ ಕ್ಯಾಬಿನೆಟ್ ಸಭೆಯಲ್ಲಿ ಅವುಗಳನ್ನು ಪೂರೈಸುವ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು.
ಜೂನ್ 1ರಂದು ಸಚಿವ ಸಂಪುಟ ಸಭೆ ಇದೆ, ಮುಖ್ಯಮಂತ್ರಿಗೆ ಹಣಕಾಸು ಇಲಾಖೆ ಜವಾಬ್ದಾರಿ ಇದೆ, ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಮಾಹಿತಿ ಸಚಿವ ಸಂಪುಟಕ್ಕೆ ತರುತ್ತೇನೆ, ಕೊಟ್ಟ ಮಾತು ಉಳಿಸಿಕೊಳ್ಳುತ್ತೇವೆ, ವ್ಯವಸ್ಥಿತವಾಗಿ ಮಾಡಬೇಕು ಮತ್ತು ಸಿದ್ಧತೆಗಳು ನಡೆಯುತ್ತಿವೆ ಎಂದು ಶಿವಕುಮಾರ್ ತಿಳಿಸಿದರು.
ಶನಿವಾರ 24 ಹೊಸ ಸಚಿವರನ್ನು ಸೇರ್ಪಡೆಗೊಳಿಸುವ ಮೂಲಕ ತಮ್ಮ ಸಂಪುಟವನ್ನು ವಿಸ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ತಡರಾತ್ರಿ ತಮ್ಮ ಸಂಪುಟದ ಎಲ್ಲಾ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. ತನ್ನ ಐದು ಚುನಾವಣಾ ಭರವಸೆಗಳನ್ನು ಈಡೇರಿಸುವಂತೆ ಹೊಸ ಕಾಂಗ್ರೆಸ್ ಸರ್ಕಾರದ ಮೇಲೆ ವಿರೋಧ ಪಕ್ಷಗಳು ಮತ್ತು ರಾಜ್ಯಾದ್ಯಂತದ ವಿವಿಧ ವರ್ಗಗಳ ಜನರ ಒತ್ತಡ ಹೆಚ್ಚುತ್ತಿದೆ. ನಿನ್ನೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಘೋಷಿಸಿ ಮೊದಲ ಗ್ಯಾರಂಟಿ ಈಡೇರಿಸಲಾಗಿದೆ.












Click it and Unblock the Notifications