ಕಾವೇರಿ ವಿವಾದ : ಪಕ್ಷ, ಸರ್ಕಾರದ ನಡುವೆ ಹೊಂದಾಣಿಕೆ ಇಲ್ಲ?
ಬೆಂಗಳೂರು, ಸೆಪ್ಟೆಂಬರ್ 14 : 'ಸುಪ್ರೀಂಕೋರ್ಟ್ ನೀಡಿದ ಆದೇಶ ಪಾಲನೆ ಮಾಡುವುದು ಅಸಾಧ್ಯ. ಆದರೂ ಕಾನೂನಿಗೆ ಗೌರವ ಕೊಟ್ಟು, ಆದೇಶವನ್ನು ಪಾಲನೆ ಮಾಡಲು ಸರ್ಕಾರ ತೀರ್ಮಾನ ಕೈಗೊಂಡಿದೆ. ಸೆ.20ರ ತನಕ ತಮಿಳುನಾಡಿಗೆ ನೀರು ಹರಿಸುತ್ತೇವೆ'.
ಮಂಗಳವಾರ ಮಹತ್ವದ ಸಭೆಯ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ ಮಾತಿದು. ತಮಿಳುನಾಡಿಗೆ ನೀರು ಹರಿಸುವ ಬಗ್ಗೆ ಸಿದ್ದರಾಮಯ್ಯ, ಅವರ ಸಂಪುಟದ ಸಚಿವರು ಮತ್ತು ಪಕ್ಷ ಒಮ್ಮತದ ನಿರ್ಧಾರವನ್ನು ತೆಗೆದುಕೊಂಡಿದೆಯೇ? ಎಂಬುದು ಈಗಿನ ಪ್ರಶ್ನೆ.[ಕಾವೇರಿ ಕಿಚ್ಚು : ಸಿದ್ದರಾಮಯ್ಯ ಪತ್ರಿಕಾಗೋಷ್ಠಿ ವಿವರ]
ಸಿದ್ದರಾಮಯ್ಯ ಅವರು ಮಂತ್ರಿ ಪರಿಷತ್ ಸಭೆ ನಡೆಸುವ ಮೊದಲು ಪಕ್ಷದ ಹಿರಿಯ ನಾಯಕರ ಜೊತೆ ಸಮಾಲೋಚನೆ ನಡೆಸಿದ್ದರು. ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸದೇ ನೀರು ಹರಿಸುವುದನ್ನು ನಿಲ್ಲಿಸುತ್ತೇವೆ ಎಂದು ಅಭಿಪ್ರಾಯ ಮುಂದಿಟ್ಟಿದ್ದರು. ಆದರೆ, ಹಿರಿಯ ನಾಯಕರಯ ಹೈಕಮಾಂಡ್ ಕಡೆ ಕೈ ತೋರಿಸಿ ಮೌನಕ್ಕೆ ಶರಣಾದರು.[ಕಾವೇರಿ ವಿವಾದ : ಕರ್ನಾಟಕಕ್ಕೆ ಮತ್ತೆ ಅನ್ಯಾಯ]

ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸಿ, ನೀರು ಹರಿಸುವುದನ್ನು ನಿಲ್ಲಿಸಬೇಡಿ ಎಂದು ಹೈಕಮಾಂಡ್ ಸೂಚನೆ ನೀಡಿತು. ಬಳಿಕ ನಡೆದ ಮಂತ್ರಿ ಪರಿಷತ್ ಸಭೆಯಲ್ಲಿ ಸೋಮವಾರ ಕೋರ್ಟ್ ನೀಡಿದ ತೀರ್ಪಿನಂತೆ ಸೆ.20ರ ತನಕ ಪ್ರತಿದಿನ 12 ಸಾವಿರ ಕ್ಯೂಸೆಕ್ ನೀರು ಹರಿಸುವ ಆದೇಶವನ್ನು ಪಾಲಿಸಲು ನಿರ್ಧಾರ ಕೈಗೊಳ್ಳಲಾಯಿತು.['ಕಾನೂನು ತಂತ್ರಗಾರಿಕೆಯಲ್ಲಿ ದಾರಿ ತಪ್ಪಿತು ರಾಜ್ಯ ಸರ್ಕಾರ']
ವೈಯಕ್ತಿಕವಾಗಿ ಒಪ್ಪಿಗೆ, ಸಭೆಯಲ್ಲಿ ಭಿನ್ನರಾಗ : ಪಕ್ಷದ ಮೂಲಗಳು ಒನ್ ಇಂಡಿಯಾಕ್ಕೆ ನೀಡಿರುವ ಮಾಹಿತಿಯಂತೆ, ಹಿರಿಯ ನಾಯಕರ ಸಭೆಯಲ್ಲಿ ಸಿದ್ದರಾಮಯ್ಯ ಅವರು ಸುಪ್ರೀಂ ಆದೇಶ ಪಾಲನೆ ಮಾಡದೇ ನೀರು ನಿಲ್ಲಿಸಿ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಅಭಿಪ್ರಾಯವನ್ನು ಮಂಡಿಸಿದರು.
ಸಿದ್ದರಾಮಯ್ಯ ಅವರ ಕೆಲವು ಸಂಪುಟದ ಕೆಲವು ಸಚಿವರೂ ಮುಖ್ಯಮಂತ್ರಿಗಳ ನಿರ್ಧಾರಕ್ಕೆ ಒಪ್ಪಿಗೆ ಕೊಟ್ಟರು. ಈ ನಿರ್ಧಾರದ ಬಗ್ಗೆ ಪಕ್ಷದ ಹೈಕಮಾಂಡ್ಗೆ ಮಾಹಿತಿ ನೀಡಲಾಯಿತು. ಆದರೆ, ನೀರು ನಿಲ್ಲಿಸುವಂತಹ ನಿರ್ಧಾರ ಕೈಗೊಳ್ಳುವುದು ಬೇಡ ಎಂಬ ಸಂದೇಶ ಬಂದಿತು.
ಮಲ್ಲಿಕಾರ್ಜುನ ಖರ್ಗೆ, ಆಸ್ಕರ್ ಫರ್ನಾಂಡೀಸ್, ವೀರಪ್ಪ ಮೊಯ್ಲಿ, ಮಾರ್ಗೆಟ್ ಆಳ್ವಾ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು. ಹೈಕಮಾಂಡ್ ಆದೇಶವನ್ನು ಪಾಲಿಸೋಣ ಎಂದು ಸಲಹೆ ನೀಡಿದರು. ರಾಜ್ಯದಲ್ಲಿ ಪರಿಸ್ಥಿತಿ ಕೈ ಮೀರಿ ಹೋಗಿದೆ. ಕೋರ್ಟ್ ಆದೇಶ ಧಿಕ್ಕರಿಸಿದರೇ ಜನರ ಬೆಂಬಲವೂ ಸಿಗಲಿದೆ ಎಂಬ ಸಿದ್ದರಾಮಯ್ಯ ಮತ್ತು ಇತರ ಸಚಿವರು ವಾದಕ್ಕೆ ಸಭೆಯಲ್ಲಿ ಬೆಂಬಲ ಸಿಗಲಿಲ್ಲ.
ಸುಪ್ರೀಂಕೋರ್ಟ್ ಆದೇಶವನ್ನು ಧಿಕ್ಕರಿಸಿದರೆ ಮುಂದಿನ ಚುನಾವಣೆಯಲ್ಲಿ ಕಾವೇರಿ ಕಣಿವೆ ಭಾಗದಲ್ಲಿ ಅಪಾರವಾದ ಬೆಂಬಲ ಸಿಗಲಿದೆ ಎಂದು ಕರ್ನಾಟಕದ ನಾಯಕರು ಅಭಿಪ್ರಾಯಪಟ್ಟರು. ಹಿರಿಯ ಕಾಂಗ್ರೆಸ್ ನಾಯಕರು ಇದಕ್ಕೆ ಒಪ್ಪಿಗೆ ನೀಡಿದರೂ, ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಬಿಟ್ಟರು.
ಒಂದು ಹಂತದಲ್ಲಿ ಹೈಕಮಾಂಡ್ ಈ ಅಭಿಪ್ರಾಯವನ್ನು ಒಪ್ಪಿದರೂ ಅಂತಿಮವಾಗಿ ಕಾಂಗ್ರೆಸ್ ರಾಷ್ಟ್ರೀಯ ಪಕ್ಷ. ಕರ್ನಾಟಕದ ಈ ನಿರ್ಧಾರ ಇತರ ರಾಜ್ಯಗಳ ಮೇಲೆ ಪರಿಣಾಮ ಬೀರುತ್ತದೆ. ಕೋರ್ಟ್ ಆದೇಶವನ್ನು ಧಿಕ್ಕರಿಸಿದರೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬರುವ ಸಾಧ್ಯತೆ ಇದೆ ಎಂಬ ಬಗ್ಗೆಯೂ ಹೈಕಮಾಂಡ್ ಚಿಂತನೆ ನಡೆಸಿತು.
ಸುಮಾರು ಒಂದು ಗಂಟೆಗಳ ಚರ್ಚೆ ಬಳಿಕ ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಯಿತು ಮತ್ತು ಕಾನೂನು ಹೋರಾಟ ಮುಂದುವರೆಸಲು ನಿರ್ಧರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಧ್ಯಪ್ರವೇಶಕ್ಕೆ ಒತ್ತಾಯಿಸುವಂತೆ ತೀರ್ಮಾನ ಕೈಗೊಳ್ಳಲಾಯಿತು.
ಮಂತ್ರಿ ಪರಿಷತ್ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು, ಸಭೆಯ ಬಳಿಕ ಸಿದ್ದರಾಮಯ್ಯ ಅವರು, 'ಸುಪ್ರೀಂಕೋರ್ಟ್ ನೀಡಿದ ಆದೇಶ ಪಾಲನೆ ಮಾಡುವುದು ಅಸಾಧ್ಯ. ಆದರೂ ಕಾನೂನಿಗೆ ಗೌರವ ಕೊಟ್ಟು, ಆದೇಶವನ್ನು ಪಾಲನೆ ಮಾಡಲು ಸರ್ಕಾರ ತೀರ್ಮಾನಿಸಿದೆ' ಎಂದರು.












Click it and Unblock the Notifications